ನಿರ್ಮಾಣ ಸಂಸ್ಥೆಯ ಪಾಲುದಾರಿಕೆ ಮಾರಿದ್ದೇಕೆ: ಕರಣ್ ಜೋಹರ್ ಕೊಟ್ಟರು ಕಾರಣ
Karan Johar: ನಿರ್ದೇಶಕ, ನಿರ್ಮಾಪಕ ಕರಣ್ ಜೋಹರ್ ಅವರ ತಂದೆ ಯಶ್ ಜೋಹರ್ ಕಟ್ಟಿ ಬೆಳೆಸಿದ್ದ ಬಾಲಿವುಡ್ನ ಟಾಪ್ ನಿರ್ಮಾಣ ಸಂಸ್ಥೆಗಳಲ್ಲಿ ಪ್ರಮುಖವಾದ ಧರ್ಮಾ ಪ್ರೊಡಕ್ಷನ್ಸ್ನ 50% ಪಾಲುದಾರಿಕೆಯನ್ನು ಉದ್ಯಮಿಯೊಬ್ಬರಿಗೆ ಮಾರಾಟ ಮಾಡಿದರು. ಹಾಗೆ ಮಾರಾಟ ಮಾಡಿದ್ದು ಏಕೆ ಎಂದು ಕರಣ್ ಜೋಹರ್ ವಿವರಿಸಿದ್ದಾರೆ.

ಧರ್ಮಾ ಪ್ರೊಡಕ್ಷನ್ಸ್ (Dharma Productions), ಬಾಲಿವುಡ್ನ ಹಳೆಯ ನಿರ್ಮಾಣ ಸಂಸ್ಥೆ. ಬಾಲಿವುಡ್ ಅನ್ನು ಕಟ್ಟಿ ಬೆಳೆಸಿದ ನಿರ್ಮಾಣ ಸಂಸ್ಥೆಗಳಲ್ಲಿ ಧರ್ಮಾ ಪ್ರೊಡಕ್ಷನ್ ಸಹ ಒಂದು. ಅದರ ಮೂಲ ಸಂಸ್ಥಾಪಕರು ಯಶ್ ಜೋಹರ್. ಈಗಿನ ನಿರ್ಮಾಪಕ, ನಿರ್ದೇಶಕ ಕರಣ್ ಜೋಹರ್ ಅವರ ತಂದೆ. ಬಾಲಿವುಡ್ನ ಬಹುತೇಕ ಎಲ್ಲ ಸೂಪರ್ ಸ್ಟಾರ್ ನಟರುಗಳು ಧರ್ಮಾ ಪ್ರೊಡಕ್ಷನ್ಸ್ನ ಸಿನಿಮಾಗಳಲ್ಲಿ ಕೆಲಸ ಮಾಡಿದ್ದಾರೆ. ಅಂದಹಾಗೆ ಇತ್ತೀಚೆಗಷ್ಟೆ ಕರಣ್ ಜೋಹರ್, ಧರ್ಮಾ ಪ್ರೊಡಕ್ಷನ್ಸ್ನ 50% ಭಾಗವನ್ನು ಉದ್ಯಮಿ ಆಧಾರ್ ಪೂನಾವಾಲಗೆ ಮಾರಾಟ ಮಾಡಿದರು. ಇದು ದೊಡ್ಡ ಸುದ್ದಿಯಾಯ್ತು.
ತಂದೆ ಕಟ್ಟಿದ ನಿರ್ಮಾಣ ಸಂಸ್ಥೆಯನ್ನು ಕರಣ್ ಜೋಹರ್ ಸರಿಯಾಗಿ ನಿಭಾಯಿಸಲಿಲ್ಲ. ಈಗ ಅದರ ಅರ್ಧ ಭಾಗ ಮಾರಾಟ ಮಾಡಿದ್ದಾರೆ ಎಂಬೆಲ್ಲ ಋಣಾತ್ಮಕ ಮಾತುಗಳು ಸಹ ಬಾಲಿವುಡ್ನಲ್ಲಿ ಹರಿದಾಡಲು ಆರಂಭವಾಯ್ತು. ಆದರೆ ಇದ್ಯಾವುದರ ಬಗ್ಗೆಯೂ ಕರಣ್ ಜೋಹರ್ ಮಾತನಾಡಿರಲಿಲ್ಲ. ಆದರೆ ಈಗ ಕರಣ್ ಜೋಹರ್ ಈ ಬಗ್ಗೆ ಬಾಯ್ಬಿಟ್ಟಿದ್ದಾರೆ. ತಾವು ತಮ್ಮ ತಂದೆ ಕಟ್ಟಿದ ನಿರ್ಮಾಣ ಸಂಸ್ಥೆಯ ಅರ್ಧ ಭಾಗ ಮಾರಾಟ ಮಾಡಿದ್ದೇಕೆ ಎಂಬುದನ್ನು ವಿವರಿಸಿದ್ದಾರೆ.
ಪಾಡ್ಕಾಸ್ಟ್ ಒಂದರಲ್ಲಿ ಮಾತನಾಡಿರುವ ಕರಣ್ ಜೋಹರ್, ‘ನನಗೆ ನನ್ನ ನಿರ್ಮಾಣ ಸಂಸ್ಥೆಯನ್ನು ಇನ್ನೂ ಎತ್ತರಕ್ಕೆ ಬೆಳೆಸಬೇಕಿತ್ತು. ನನಗೆ ಅದು ಸಾಧ್ಯವಿತ್ತು ಆದರೆ ಅದಕ್ಕೆ ಸುಮಾರು 6-7 ವರ್ಷಗಳಾದರೂ ಕನಿಷ್ಠ ಬೇಕಾಗಿತ್ತು. ಅಷ್ಟು ವರ್ಷ ಕಾಯುವುದು ಸೂಕ್ತ ಅಲ್ಲ ಎನಿಸಿತು. ಅಲ್ಲದೆ ನಿರ್ಮಾಣ ಸಂಸ್ಥೆಯನ್ನು ಬೆಳೆಸಲು ದೊಡ್ಡ ಮೊತ್ತದ ಹಣವೂ ಅವಶ್ಯಕತೆ ಇತ್ತು. ಹಾಗಾಗಿ ನಾನು ನನ್ನ ನಿರ್ಮಾಣ ಸಂಸ್ಥೆಯ ಅರ್ಧ ಭಾಗವನ್ನು ಭಾರಿ ಮೊತ್ತಕ್ಕೆ ಮಾರಾಟ ಮಾಡಿದೆ’ ಎಂದಿದ್ದಾರೆ ಕರಣ್ ಜೋಹರ್.
ಇದನ್ನೂ ಓದಿ:ಹುಡುಗಿ ರೀತಿ ಮಾತಾಡುತ್ತಿದ್ದ ಕರಣ್ ಜೋಹರ್; ಧ್ವನಿ ಬದಲಾವಣೆಗೆ ಮಾಡಿದ್ದೇನು?
ಧರ್ಮಾ ಪ್ರೊಡಕ್ಷನ್ಸ್ನ 50% ಅನ್ನು ಅವರು 1000 ಕೋಟಿ ಮೊತ್ತಕ್ಕೆ ಆಧಾರ್ ಪೂನಾವಾಲಗೆ ಮಾರಾಟ ಮಾಡಿದ್ದಾರೆ. ಅಷ್ಟೂ ಮೊತ್ತವನ್ನು ಅವರು ಸಿನಿಮಾ ನಿರ್ಮಾಣದಲ್ಲಿ ತೊಡಗಿಸುವುದಾಗಿ ಹೇಳಿಕೊಂಡಿದ್ದಾರೆ. ಕೆಲವು ಅತ್ಯುತ್ತಮ ಗುಣಮಟ್ಟದ ಸಿನಿಮಾಗಳನ್ನು ನಿರ್ಮಾಣ ಮಾಡುವ ಯೋಜನೆಯನ್ನು ಕರಣ್ ಜೋಹರ್ ಹಾಕಿಕೊಂಡಿದ್ದಾರೆ.
ಬಾಲಿವುಡ್ನ ಅನುಭವಿಗಳು ಈ ಹಿಂದೆ ಹೇಳಿರುವಂತೆ, ಕರಣ್ ಜೋಹರ್ ಬಹಳ ಬುದ್ಧಿವಂತ ನಿರ್ಮಾಪಕರಂತೆ. ಹಣವನ್ನು ಯಾವುದೇ ಕಾರಣಕ್ಕೂ ಪೋಲು ಮಾಡುವುದಿಲ್ಲ ಹಾಗೂ ನಷ್ಟ ಆಗುದಂತೆ ಸಿನಿಮಾ ನಿರ್ಮಾಣ ಮಾಡುತ್ತಾರಂತೆ. ಸಿನಿಮಾ ನಿರ್ಮಾಣದಲ್ಲಿ ಖರ್ಚು ಹೆಚ್ಚಾಗಿರುವುದನ್ನು, ನಾಯಕರು ಹೆಚ್ಚಿನ ಸಂಭಾವನೆ ಕೇಳುತ್ತಿರುವುದನ್ನು ಮೊದಲಿಗೆ ಖಂಡಿಸಿದ್ದು, ಪ್ರತಿಭಿಟಿಸಿದ್ದು ಕರಣ್ ಜೋಹರ್. ಮಾರುಕಟ್ಟೆ ಮೌಲ್ಯಕ್ಕಿಂತಲೂ ಹೆಚ್ಚಿಗೆ ಸಂಭಾವನೆ ಕೇಳಿದರೆಂದು ನಟ ಕಾರ್ತಿಕ್ ಆರ್ಯನ್ ಅನ್ನು ತಮ್ಮ ಸಿನಿಮಾದಿಂದಲೇ ಹೊರಗೆ ಹಾಕಿದ್ದರು.
ಇತ್ತೀಚೆಗೆ ಬಿಡುಗಡೆ ಆದ ‘ಕೇಸರಿ 2’ ಸಿನಿಮಾ ಅನ್ನು ಸಹ ನಿರ್ಮಾಣ ಮಾಡಿದ್ದರು ಕರಣ್ ಜೋಹರ್. ಇದರ ಜೊತೆಗೆ ಧರ್ಮಾ ಪ್ರೊಡಕ್ಷನ್ನಿಂದ ‘ದಡಕ್ 2’, ‘ಸನ್ನಿ ಸಂಸ್ಕಾರಿ ಕಿ ತುಳಸಿ ಕುಮಾರಿ’ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದ್ದಾರೆ. ಹೊಸ ಸಿನಿಮಾದ ನಿರ್ದೇಶನವನ್ನು ಸಹ ಅವರು ಆರಂಭಿಸಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ