ಪಾಕ್ ನಟನ ಜತೆ ಭಾರತದ ಸಿನಿಮಾ; ಉಗ್ರರ ದಾಳಿ ನಂತರ ಬ್ಯಾನ್ಗೆ ಒತ್ತಾಯ
ಭಾರತದಲ್ಲಿ ನಿರ್ಮಾಣ ಆಗಿರುವ ‘ಅಬೀರ್ ಗುಲಾಲ್’ ಹಿಂದಿ ಸಿನಿಮಾದಲ್ಲಿ ಪಾಕ್ ನಟ ಫವಾದ್ ಖಾನ್ ನಟಿಸಿದ್ದಾರೆ. ಪಾಕಿಸ್ತಾನಿ ನಟನಿಗೆ ಅವಕಾಶ ನೀಡಿರುವ ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಮೇ 9ರಂದು ಬಿಡುಗಡೆ ಆಗಲು ಸಜ್ಜಾಗಿರುವ ಈ ಸಿನಿಮಾಗೆ ಸೋಶಿಯಲ್ ಮೀಡಿಯಾದಲ್ಲಿ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.

ಭಾರತದಲ್ಲಿ ನಡೆಯುವ ಭಯೋತ್ಪಾದಕ ಕೃತ್ಯಗಳ ಹಿಂದೆ ಪಾಕಿಸ್ತಾನದ ಕೈವಾಡ ಇರುತ್ತದೆ. ಈಗ ಪಹಲ್ಗಾಮ್ (Pahalgam) ಹತ್ಯಾಕಾಂಡದಲ್ಲಿ ಅಮಾಯಕರು ಜೀವ ಕಳೆದುಕೊಂಡಿದ್ದಾರೆ. ಈ ಮೊದಲು ಉರಿ ದಾಳಿ ನಡೆದ ಬಳಿಕ ಭಾರತದಲ್ಲಿ ಪಾಕ್ ಕಲಾವಿದರಿಗೆ ನಿಷೇಧ ಹೇರಲಾಗಿತ್ತು. ಭಾರತೀಯ ಚಿತ್ರರಂಗದಲ್ಲಿ ಪಾಕಿಸ್ತಾನದ ನಟ-ನಟಿಯರು, ಗಾಯಕರು ಮುಂತಾದವರು ಕೆಲಸ ಮಾಡುವಂತಿಲ್ಲ ಎಂದು ಹೇಳಲಾಗಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಮತ್ತೆ ಪಾಕ್ ಕಲಾವಿದರಿಗೆ ನಿಧಾನವಾಗಿ ಅವಕಾಶ ನೀಡುವ ಪ್ರಯತ್ನ ನಡೆಯಿತು. ಈಗ ಪಹಲ್ಗಾಮ್ ದಾಳಿಯ ಪರಿಣಾಮದಿಂದ ಮತ್ತೆ ಪಾಕ್ ಕಲಾವಿದರನ್ನು ಬ್ಯಾನ್ ಮಾಡುವ ನಿರ್ಧಾರಕ್ಕೆ ಬರಲಾಗುತ್ತಿದೆ. ಪಾಕಿಸ್ತಾನಿ ನಟ ಫವಾದ್ ಖಾನ್ (Fawad Khan) ನಟಿಸಿರುವ ‘ಅಬೀರ್ ಗುಲಾಲ್’ (Abir Gulaal) ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂಬ ಒತ್ತಾಯ ಕೇಳಿಬಂದಿದೆ.
ಪಾಕಿಸ್ತಾನಿ ನಟ ಫವಾದ್ ಖಾನ್ ಅವರು ಭಾರತದ ಸಿನಿಮಾಗಳಲ್ಲೂ ಅಭಿನಯಿಸಿ ಹೆಸರು ಮಾಡಿದ್ದಾರೆ. ‘ಕೂಬ್ಸೂರತ್’, ‘ಕಪೂರ್ ಆ್ಯಂಡ್ ಸನ್ಸ್’, ‘ಯೇ ದಿಲ್ ಹೈ ಮುಷ್ಕಿಲ್’ ಸಿನಿಮಾಗಳಲ್ಲಿ ಅವರು ನಟಿಸಿದ್ದರು. ಉರಿ ದಾಳಿ ಬಳಿಕ ಅವರು ಭಾರತದ ಸಿನಿಮಾಗಳಲ್ಲಿ ನಟಿಸದಂತೆ ನಿಷೇಧ ಹೇರಲಾಗಿತ್ತು. ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಸ್ಥಿತಿ ತಿಳಿಗೊಂಡಿದ್ದರಿಂದ ಮತ್ತೆ ಅವರಿಗೆ ಅವಕಾಶ ನೀಡಲಾಯಿತು. ‘ಅಬೀರ್ ಗುಲಾಲ್’ ಸಿನಿಮಾದಲ್ಲಿ ಮತ್ತೆ ಅವರು ಹೀರೋ ಆಗಿ ನಟಿಸಿದ್ದಾರೆ.
‘ಅಬೀರ್ ಗುಲಾಲ್’ ಸಿನಿಮಾದಲ್ಲಿ ಪಾಕ್ ನಟ ಫವಾದ್ ಖಾನ್ ಮತ್ತು ವಾಣಿ ಕಪೂರ್ ಅವರು ಜೋಡಿಯಾಗಿ ನಟಿಸಿದ್ದಾರೆ. ಆರತಿ ಎಸ್ ಬಾಗ್ಡಿ ಅವರು ಈ ಸಿನಿಮಾವನ್ನು ನಿರ್ದೇಶಿಸಿದ್ದಾರೆ. ಮೇ 9ರಂದು ಈ ಸಿನಿಮಾವನ್ನು ರಿಲೀಸ್ ಮಾಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದರೆ ಪಾಕ್ ನಟ ಅಭಿನಯಿಸಿದ ಸಿನಿಮಾ ಎಂಬ ಕಾರಣಕ್ಕೆ ‘ಅಬೀರ್ ಗುಲಾಲ್’ ಚಿತ್ರವನ್ನು ಬ್ಯಾನ್ ಮಾಡಬೇಕು ಎಂದು ನೆಟ್ಟಿಗರು ಒತ್ತಾಯಿಸುತ್ತಿದ್ದಾರೆ.
ಭಾರತದ ಸಿನಿಮಾದಲ್ಲಿ ಪಾಕಿಸ್ತಾನಿ ನಟರಿಗೆ ಅವಕಾಶ ನೀಡುವ ಅನಿವಾರ್ಯತೆ ಏನಿದೆ? ಭಾರತದ ಜನರು ಪಾಕ್ ಕಲಾವಿದರ ಸಿನಿಮಾವನ್ನು ದುಡ್ಡು ಕೊಟ್ಟು ನೋಡಿ ಬೆಳೆಸುವ ಅವಶ್ಯಕತೆ ಇಲ್ಲ. ಈ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಸೋಶಿಯಲ್ ಮೀಡಿಯಾದಲ್ಲಿ ಜನರು ಅಭಿಪ್ರಾಯ ತಿಳಿಸುತ್ತಿದ್ದಾರೆ. ಭಾರತೀಯ ಸಿನಿಮಾ ಮತ್ತು ಕಿರುತೆರೆ ನಿರ್ದೇಶಕರ ಒಕ್ಕೂಟದ ಅಧ್ಯಕ್ಷ ಅಶೋಕ್ ಪಂಡಿತ್ ಕೂಡ ‘ಅಬೀರ್ ಗುಲಾಲ್’ ಸಿನಿಮಾವನ್ನು ಬ್ಯಾನ್ ಮಾಡುವಂತೆ ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ಪಹಲ್ಗಾಮ್ ಉಗ್ರ ದಾಳಿ ಬೆನ್ನಲ್ಲೇ ಪಾಕ್ ಸೇನೆಗೆ ಶುರುವಾಯ್ತು ನಡುಕ: ಉಪಗ್ರಹ ಚಿತ್ರಗಳಿಂದ ಬಹಿರಂಗವಾಯ್ತು ಗಡಿಯಾಚೆಗಿನ ರಹಸ್ಯ
ಪಹಲ್ಗಾಮ್ ಉಗ್ರರ ದಾಳಿಯಲ್ಲಿ 28 ಜನರ ಪ್ರಾಣ ಹೋಗಿದೆ. ಈ ಬಗ್ಗೆ ಚಿತ್ರರಂಗದ ಅನೇಕರು ಖಂಡನೆ ವ್ಯಕ್ತಪಡಿಸಿದ್ದಾರೆ. ಶಾರುಖ್ ಖಾನ್, ಸಲ್ಮಾನ್ ಖಾನ್, ರಶ್ಮಿಕಾ ಮಂದಣ್ಣ, ಯಶ್, ರಾಧಿಕಾ ಪಂಡಿತ್, ಶಿವರಾಜ್ಕುಮಾರ್, ಕಿಯಾರಾ ಅಡ್ವಾಣಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.