AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನನ್ನ ಯಶಸ್ಸಿಗೆ ದಾವುದ್ ಇಬ್ರಾಹಿಂ ಕಾರಣ: ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಹೇಳಿಕೆ

ಭೂಗತ ಪಾತಕಿ ದಾವುದ್ ಇಬ್ರಾಹಿಂ ಬಗ್ಗೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಅಚ್ಚರಿಯ ಕೇಳಿಕೆ ನೀಡಿದ್ದಾರೆ. ತಾವು ಬದುಕು ಕಟ್ಟಿಕೊಳ್ಳಲು ದಾವುದ್ ಇಬ್ರಾಹಿಂ ಕಾರಣ ಎಂದು ಅವರು ಹೇಳಿದ್ದಾರೆ. ಆರ್​ಜಿವಿ ನೀಡಿದ ಈ ವಿವಾದಾತ್ಮಕ ಹೇಳಿಕೆಯು ಚರ್ಚೆಗೆ ಕಾರಣ ಆಗಿದೆ.

ನನ್ನ ಯಶಸ್ಸಿಗೆ ದಾವುದ್ ಇಬ್ರಾಹಿಂ ಕಾರಣ: ರಾಮ್ ಗೋಪಾಲ್ ವರ್ಮಾ ವಿವಾದಾತ್ಮಕ ಹೇಳಿಕೆ
Dawood Ibrahim, Ram Gopal Varma
ಮದನ್​ ಕುಮಾರ್​
|

Updated on: Apr 12, 2026 | 9:53 AM

Share

ವಿವಾದಾತ್ಮಕ ಮತ್ತು ಪ್ರತಿಭಾವಂತ ನಿರ್ದೇಶಕ ರಾಮ್ ಗೋಪಾಲ್ ವರ್ಮಾ (RGV) ಮತ್ತೆ ಸುದ್ದಿಯಲ್ಲಿದ್ದಾರೆ. ಭೂಗತ ಜಗತ್ತಿನ ಕಥೆಗಳನ್ನು ತೆರೆಯ ಮೇಲೆ ಅಚ್ಚುಕಟ್ಟಾಗಿ ಚಿತ್ರಿಸುವ ವರ್ಮಾ, ಈಗ ಭೂಗತ ಪಾತಕಿ ದಾವುದ್ ಇಬ್ರಾಹಿಂ (Dawood Ibrahim) ಬಗ್ಗೆ ನೀಡಿರುವ ಹೇಳಿಕೆ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದೆ. ಇತ್ತೀಚೆಗೆ ಫಿಲ್ಮ್‌ಫೇರ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಆರ್‌ಜಿವಿ, ತಮ್ಮ ಆತ್ಮಚರಿತ್ರೆಯಾದ ‘ಗನ್ಸ್ ಆ್ಯಂಡ್ ಥೈಸ್’ ಪುಸ್ತಕವನ್ನು ಭೂಗತ ಪಾತಕಿ ದಾವುದ್ ಇಬ್ರಾಹಿಂಗೆ ಅರ್ಪಿಸಲು ಬಯಸಿದ್ದಾಗಿ ಬಹಿರಂಗಪಡಿಸಿದ್ದಾರೆ.

‘ನಾನು ನನ್ನ ಪುಸ್ತಕವನ್ನು ದಾವುದ್ ಇಬ್ರಾಹಿಂಗೆ ಅರ್ಪಿಸಿದ್ದೆ. ಆದರೆ ಪ್ರಕಾಶಕರು ಅವನ ಹೆಸರನ್ನು ತೆಗೆದುಹಾಕಿದರು. ಒಂದು ವೇಳೆ ದಾವುದ್ ಇಬ್ರಾಹಿಂ ಇಲ್ಲದಿದ್ದರೆ, ನಾನು ‘ಸತ್ಯ’ ಮತ್ತು ‘ಕಂಪನಿ’ ರೀತಿಯ ಐಕಾನಿಕ್ ಚಿತ್ರಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಅವನಿಲ್ಲದೇ ನಾನು ಜೀವನೋಪಾಯವನ್ನು ಕಂಡುಕೊಳ್ಳಲು ಸಾಧ್ಯವಿರಲಿಲ್ಲ. ಹಾಗಾಗಿ ನಾನು ಅವನಿಗೆ ಪುಸ್ತಕವನ್ನು ಯಾಕೆ ಅರ್ಪಿಸಬಾರದು’ ಎಂದು ಅವರು ಪ್ರಶ್ನಿಸಿದ್ದಾರೆ.

1990ರ ದಶಕದಲ್ಲಿ ಬಾಲಿವುಡ್ ಚಿತ್ರರಂಗದ ಮೇಲೆ ಭೂಗತ ಜಗತ್ತಿನ ಪ್ರಭಾವ ಹೆಚ್ಚಾಗಿತ್ತು. ಅನೇಕ ನಟರು ಮತ್ತು ನಿರ್ದೇಶಕರು ಬೆದರಿಕೆ ಕರೆಗಳನ್ನು ಸ್ವೀಕರಿಸುತ್ತಿದ್ದರು. ಆದರೆ ತಮಗೆ ಎಂದಿಗೂ ಅಂತಹ ಕರೆಗಳು ಬರಲಿಲ್ಲ ಎಂದು ವರ್ಮಾ ಹೇಳಿದ್ದಾರೆ. ಇದಕ್ಕೆ ಕಾರಣ ಏನು ಎಂಬುದನ್ನೂ ಅವರು ವಿವರಿಸಿದ್ದಾರೆ.

‘ಗ್ಯಾಂಗ್‌ಸ್ಟರ್‌ಗಳು ನನ್ನ ನಿರ್ದೇಶನದ ‘ಸತ್ಯ’ ಮತ್ತು ‘ಕಂಪನಿ’ ಸಿನಿಮಾಗಳನ್ನು ತುಂಬಾ ಇಷ್ಟಪಟ್ಟಿದ್ದರು. ನಾನು ಅವರ ಜೀವನವನ್ನು ತೆರೆಯ ಮೇಲೆ ತೋರಿಸಿದ ರೀತಿ ಅವರಿಗೆ ಇಷ್ಟವಾಗಿತ್ತು. ಹಾಗಾಗಿ ಅವರು ನನ್ನನ್ನು ಎಂದಿಗೂ ತೊಂದರೆಗೆ ಸಿಲುಕಿಸಲಿಲ್ಲ. ಬದಲಾಗಿ, ನಾನು ಅವರಿಗೆ ಒಬ್ಬ ಆತ್ಮೀಯ ಗೆಳೆಯನಂತೆ ಕಂಡೆ’ ಎಂದು ರಾಮ್ ಗೋಪಾಲ್ ವರ್ಮಾ ಹೇಳಿಕೊಂಡಿದ್ದಾರೆ.

ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ವಿರುದ್ಧ ಮಾಜಿ ಐಪಿಎಸ್ ಅಧಿಕಾರಿ ದೂರು

ರಾಮ್ ಗೋಪಾಲ್ ವರ್ಮಾ ಅವರ ಗ್ಯಾಂಗ್‌ಸ್ಟರ್ ಚಿತ್ರಗಳು ನೈಜ ಘಟನೆಗಳಿಂದ ಪ್ರೇರಿತವಾಗಿದ್ದವು. ಭೂಗತ ಲೋಕದ ಕರಾಳ ಮುಖವನ್ನು ಅತ್ಯಂತ ನೈಜವಾಗಿ ಚಿತ್ರಿಸಿದ್ದರಿಂದ ಪಾತಕಿಗಳೂ ಸಹ ಅವರ ಕಲೆಗೆ ಮಾರುಹೋಗಿದ್ದರು ಎಂಬುದು ಆರ್‌ಜಿವಿ ಅವರ ವಾದ. ಒಟ್ಟಿನಲ್ಲಿ, ದಾವುದ್ ಇಬ್ರಾಹಿಂ ಕುರಿತಾದ ವರ್ಮಾ ಅವರ ಈ ನೇರ ಮತ್ತು ವಿವಾದಾತ್ಮಕ ಮಾತುಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ಪರ-ವಿರೋಧ ಚರ್ಚೆಗೆ ಕಾರಣವಾಗಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us