
ಭಾರತೀಯ ಚಿತ್ರರಂಗದ ಅತ್ಯಂತ ಪ್ರತಿಷ್ಠಿತ ಹಾಗೂ ಬಹುನಿರೀಕ್ಷಿತ ಸಿನಿಮಾಗಳಲ್ಲೊಂದಾದ ‘ರಾಮಾಯಣ’ (Ramayana) ಬಿಡುಗಡೆಗೆ ಸಿದ್ಥತೆ ನಡೆಯುತ್ತಿದೆ. ಇದೀಗ ಪ್ರೇಕ್ಷಕರನ್ನು ತಲುಪಲು ಚಿತ್ರತಂಡ ಅದ್ದೂರಿ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದೆ. ದೇಶಾದ್ಯಂತ ಬೃಹತ್ ಶಾಲಾ ಅಭಿಯಾನವನ್ನು ಮಾಡಲು ನಿರ್ಮಾಪಕರು ಮುಂದಾಗಿದ್ದಾರೆ. ಜುಲೈ 9ರಿಂದಲೇ ಈ ಮಹತ್ವದ ಶಾಲಾ ಅಭಿಯಾನ ಆರಂಭವಾಗಿದೆ. ದೇಶದ 18 ಪ್ರಮುಖ ನಗರಗಳ 400ಕ್ಕೂ ಹೆಚ್ಚು ಶಾಲೆಗಳನ್ನು ತಲುಪುವ ಗುರಿ ಹೊಂದಲಾಗಿದೆ.
ಈ ಕಾರ್ಯಕ್ರಮದ ಮೂಲಕ ಬರೋಬ್ಬರಿ 5 ಲಕ್ಷಕ್ಕೂ ಅಧಿಕ ಶಾಲಾ ವಿದ್ಯಾರ್ಥಿಗಳಿಗೆ ರಾಮಾಯಣದ ಕಥೆ ಹಾಗೂ ಅದರಲ್ಲಿರುವ ಉದಾತ್ತ ಮೌಲ್ಯಗಳನ್ನು ಅತ್ಯಂತ ಆಕರ್ಷಕವಾಗಿ ಪರಿಚಯಿಸಲಾಗುತ್ತದೆ. ಈ ಸಿನಿಮಾದಲ್ಲಿ ಯಶ್, ರಣಬೀರ್ ಕಪೂರ್, ಸಾಯಿ ಪಲ್ಲವಿ, ಸನ್ನಿ ಡಿಯೋಲ್ ಮುಂತಾದವರು ಪ್ರಮುಖ ಪಾತ್ರಗಳನ್ನು ಮಾಡಿದ್ದಾರೆ.
ಚಿತ್ರತಂಡವು ಕೇವಲ ಸಾಂಪ್ರದಾಯಿಕ ಪ್ರಚಾರಕ್ಕೆ ಸೀಮಿತವಾಗದೆ, ಮಕ್ಕಳಲ್ಲಿ ರಾಮಾಯಣದ ನೈಜ ಸಾರವನ್ನು ಮೂಡಿಸಲು ಯೋಜನೆ ರೂಪಿಸಿದೆ. ಇದಕ್ಕಾಗಿ ಶಾಲೆಗಳಲ್ಲಿ ರೇಖಾಚಿತ್ರ ಸ್ಪರ್ಧೆಗಳು, ರಸಪ್ರಶ್ನೆಗಳು ಹಾಗೂ ಸಂವಾದದ ರೀತಿಯ ವಿವಿಧ ಸೃಜನಶೀಲ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ಇದು ಮಕ್ಕಳ ಜೊತೆಗೆ ಅವರ ಕುಟುಂಬದಲ್ಲೂ ರಾಮಾಯಣದ ಸಾಂಸ್ಕೃತಿಕ ಮಹತ್ವದ ಬಗ್ಗೆ ಚರ್ಚೆಗಳು ನಡೆಯಲು ಪ್ರೇರೇಪಿಸಲಿದೆ.
‘ನಮ್ಮ ಸತ್ಯ. ನಮ್ಮ ಇತಿಹಾಸ’ ಎಂಬ ಶೀರ್ಷಿಕೆಯಡಿ ಈ ಕಾರ್ಯಕ್ರಮವನ್ನು ವಿನ್ಯಾಸಗೊಳಿಸಲಾಗಿದೆ. ಯುವ ಪೀಳಿಗೆಯು ಭಾರತದ ಸಾಂಸ್ಕೃತಿಕ ಪರಂಪರೆಯನ್ನು ಸಂಭ್ರಮಿಸುವಂತೆ ಮಾಡುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದು ಚಿತ್ರತಂಡ ಹೇಳಿದೆ. ಚಿತ್ರದ ಬಿಡುಗಡೆಗೆ ಇನ್ನೂ ಸಾಕಷ್ಟು ಸಮಯ ಇದೆ. ಆದರೆ ಮುಂಚಿತವಾಗಿಯೇ ಇಂಥ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ.
‘ರಾಮಾಯಣವು ತಲೆಮಾರುಗಳಿಂದ ಕಥೆಗಳು ಹಾಗೂ ನೈತಿಕ ಮೌಲ್ಯಗಳ ಮೂಲಕ ಜೀವಂತವಾಗಿದೆ. ಈ ಶಾಲಾ ಪ್ರಚಾರದ ಅಭಿಯಾನದಲ್ಲಿ ಮೂಲಕ ಆ ಭವ್ಯ ಪರಂಪರೆಯನ್ನು ಇಂದಿನ ಯುವ ಮನಸ್ಸುಗಳಿಗೆ ಅರ್ಥಪೂರ್ಣವಾಗಿ ತಲುಪಿಸುವುದು ನಮ್ಮ ಪ್ರಯತ್ನ. ಕೇವಲ ಪುರಾಣದ ಕಥೆಯಾಗಿ ಮಾತ್ರವಲ್ಲದೆ ಧೈರ್ಯ, ಕರ್ತವ್ಯ, ಪ್ರೀತಿ ಮತ್ತು ಧರ್ಮದ ಸಂದೇಶವಾಗಿ ಮಕ್ಕಳು ಇದನ್ನು ಗ್ರಹಿಸಬೇಕು’ ಎಂದು ಚಿತ್ರತಂಡ ಹೇಳಿದೆ.
ಇದನ್ನೂ ಓದಿ: ರಾಮಾಯಣ ಚಿತ್ರಕ್ಕೆ ಕರಣ್ ಜೋಹರ್ ಡಿಸ್ಟ್ರಿಬ್ಯೂಟರ್; ಕೇವಲ 250 ಕೋಟಿ ರೂ.ಗೆ ಡೀಲ್
‘ದಂಗಲ್’ ಖ್ಯಾತಿಯ ನಿರ್ದೇಶಕ ನಿತೇಶ್ ತಿವಾರಿ ಅವರು ‘ರಾಮಾಯಣ’ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ನಮಿತ್ ಮಲ್ಹೋತ್ರಾ ಅವರ ‘ಪ್ರೈಮ್ ಫೋಕಸ್ ಸ್ಟುಡಿಯೋಸ್’, ‘DNEG’ ಮತ್ತು ಯಶ್ ಅವರ ‘ಮಾನ್ಸ್ಟರ್ ಮೈಂಡ್ ಕ್ರಿಯೇಷನ್ಸ್’ ಜಂಟಿಯಾಗಿ ಈ ಸಿನಿಮಾವನ್ನು ದೊಡ್ಡ ಬಜೆಟ್ನಲ್ಲಿ ನಿರ್ಮಿಸುತ್ತಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.