ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮೌನ ವಹಿಸಿದ್ದೇಕೆ? ಕೊನೆಗೂ ಕಾರಣ ತಿಳಿಸಿದ ಸೋನು ನಿಗಮ್

ಖ್ಯಾತ ಗಾಯಕ ಸೋನು ನಿಗಮ್ ಅವರು ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮಾತನಾಡಲು ಹಿಂದೇಟು ಹಾಕಿದ್ದರು. ಹಾಗಾಗಿ ಅವರನ್ನು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಮಾಡಲಾಗಿತ್ತು. ಅಷ್ಟಕ್ಕೂ ಸೋನು ನಿಗಮ್ ಅವರು ಮೌನ ವಹಿಸಿದ್ದಕ್ಕೆ ಕಾರಣ ಏನು ಎಂಬುದು ಈಗ ಗೊತ್ತಾಗಿದೆ. ಆ ಕುರಿತು ಮಾಹಿತಿ ಇಲ್ಲಿದೆ..

ವಿದ್ಯಾರ್ಥಿಗಳ ಪ್ರತಿಭಟನೆ ಬಗ್ಗೆ ಮೌನ ವಹಿಸಿದ್ದೇಕೆ? ಕೊನೆಗೂ ಕಾರಣ ತಿಳಿಸಿದ ಸೋನು ನಿಗಮ್
Sonu Nigam
Image Credit source: PTI

Updated on: Aug 13, 2026 | 7:04 PM

ನೀಟ್ (NEET) ಪತ್ರಿಕೆ ಸೋರಿಕೆ ಮತ್ತು ವಿದ್ಯಾರ್ಥಿಗಳ ಪ್ರತಿಭಟನೆ ಕುರಿತು ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದ ಖ್ಯಾತ ಗಾಯಕ ಸೋನು ನಿಗಮ್ (Sonu Nigam) ಅವರು ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗಿದ್ದ ಟೀಕೆಗಳಿಗೆ ಕೊನೆಗೂ ಸ್ಪಷ್ಟನೆ ನೀಡಿದ್ದಾರೆ. ‘ಕ್ಲಿಷ್ಟಕರ ಪ್ರಶ್ನೆಯಿಂದ ತಪ್ಪಿಸಿಕೊಳ್ಳುವುದು ನನ್ನ ಉದ್ದೇಶವಾಗಿರಲಿಲ್ಲ. ಬದಲಿಗೆ ಯಾವಾಗ ಮತ್ತು ಎಲ್ಲಿ ಮಾತನಾಡಬೇಕು ಎಂಬ ವಿವೇಚನೆ ನನ್ನದಾಗಿತ್ತು’ ಎಂದು ಅವರು ಹೇಳಿದ್ದಾರೆ.

‘ಬಾಂಬೆ ಟೈಮ್ಸ್’ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸೋನು ನಿಗಮ್, ಮಾಧ್ಯಮಗೋಷ್ಠಿಯ ಕನಿಷ್ಠ ಶಿಷ್ಟಾಚಾರದ ಬಗ್ಗೆ ಬೆಳಕು ಚೆಲ್ಲಿದ್ದಾರೆ. ‘ಮುಂಬೈನಲ್ಲಿ ಕಳೆದ ಮೂರು ದಶಕಗಳಿಗಿಂತಲೂ ಹೆಚ್ಚು ಕಾಲ ನೆಲೆಸಿರುವ ನನಗೆ ಮಾಧ್ಯಮಗೋಷ್ಠಿಯ ಮೂಲಭೂತ ನಿಯಮ ಗೊತ್ತಿದೆ. ನಾವು ಭಾಗವಹಿಸಿದ ಕಾರ್ಯಕ್ರಮದ ಮುಖ್ಯ ವಿಷಯಕ್ಕೆ ಮಾತ್ರ ಬದ್ಧವಾಗಿರಬೇಕು’ ಎಂದು ಹೇಳಿದ್ದಾರೆ.

‘ನನ್ನ ಗುರು ಪಂಕಜ್ ಉದಾಸ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲು ಬಂದಾಗ ರಾಜಕೀಯ ವಿಷಯಗಳನ್ನು ಮಾತನಾಡುವುದು ನನ್ನ ದೃಷ್ಟಿಯಲ್ಲಿ ಗೌರವವಲ್ಲ. ಮಾಧ್ಯಮಗಳೂ ಅದೇ ಗೌರವವನ್ನು ಕಾಯ್ದುಕೊಳ್ಳುತ್ತವೆ ಎಂದು ಭಾವಿಸುತ್ತೇನೆ. ಜೊತೆಗೆ, ಸಂಪೂರ್ಣ ಮಾಹಿತಿ ಇಲ್ಲದ ಯಾವುದೇ ವಿಷಯದ ಬಗ್ಗೆ ಬಹಿರಂಗವಾಗಿ ಮಾತನಾಡಬಾರದು ಎಂದು ನನ್ನ ತಂದೆಗೆ ಮಾತು ಕೊಟ್ಟಿದ್ದೇನೆ’ ಎಂದು ಸೋನು ನಿಗಮ್ ತಿಳಿಸಿದ್ದಾರೆ.

‘ನನ್ನ ಮೊಬೈಲ್‌ನಲ್ಲಿ ಸೋಶಿಯಲ್ ಮೀಡಿಯಾ ಆ್ಯಪ್‌ಗಳೇ ಇಲ್ಲ. ನನ್ನ ಜೀವನವೇ ಸಂಗೀತ ಮತ್ತು ಭಕ್ತಿ. ಜೀವನದಲ್ಲಿ ಹಲವು ಬಾರಿ ಧೈರ್ಯದಿಂದ ಧ್ವನಿ ಎತ್ತಿದ್ದೇನೆ. ಧಾರ್ಮಿಕ ಸ್ಥಳಗಳಲ್ಲಿ ಮೈಕ್, ಲೌಡ್‌ಸ್ಪೀಕರ್ ಬಳಕೆಯ ವಿರುದ್ಧದ ಹೋರಾಟದಿಂದ ಹಿಡಿದು, ಕಲಾವಿದರಿಗೆ ರಾಯಲ್ಟಿ ಹಕ್ಕಿನವರೆಗೂ ವ್ಯವಸ್ಥೆಯಲ್ಲಿ ದೊಡ್ಡ ಬದಲಾವಣೆ ತರಲು ಒಂಟಿಯಾಗಿ ನಿಂತು ಹೋರಾಡಿದ್ದೇನೆ. ಈಗ ಇತರರು ಧೈರ್ಯದಿಂದ ಮುಂದೆ ಬಂದು ಸಮಾಜಕ್ಕೆ ಏನು ಕೊಡುಗೆ ನೀಡಬಹುದು ಎಂಬುದನ್ನು ತೋರಿಸಲಿ. ಅವರು ಕೇವಲ ಸೋಶಿಯಲ್ ಮೀಡಿಯಾ ಟ್ರೋಲರ್‌ಗಳಾಗದೆ ನಿಜವಾದ ಹೋರಾಟಗಾರರಾಗಲಿ’ ಎಂದು ಸೋನು ನಿಗಮ್ ಸವಾಲು ಎಸೆದಿದ್ದಾರೆ.

ಇದನ್ನೂ ಓದಿ: ‘ನರಗಳು ಬ್ಲಾಕ್ ಆಗಿವೆ’; ಆರೋಗ್ಯದ ಬಗ್ಗೆ ಸೋನು ನಿಗಮ್ ಆತಂಕಕಾರಿ ಮಾಹಿತಿ

ಜಂತರ್ ಮಂತರ್‌ನಲ್ಲಿ ನೀಟ್ ಪರೀಕ್ಷೆಯ ಅಕ್ರಮ ಖಂಡಿಸಿ ನಡೆದ ಪ್ರತಿಭಟನೆಗೆ ಮತ್ತು ಅಂದಿನ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆಗೆ ಆಗ್ರಹಿಸಿ ಹುಮಾ ಖುರೇಷಿ, ಸೋನಾಕ್ಷಿ ಸಿನ್ಹಾ, ಸಲ್ಮಾನ್ ಖಾನ್ ಹಾಗೂ ಆಲಿಯಾ ಭಟ್ ಸೇರಿದಂತೆ ಹಲವು ಬಾಲಿವುಡ್ ಗಣ್ಯರು ಬೆಂಬಲ ವ್ಯಕ್ತಪಡಿಸಿದ್ದರು. ತೀವ್ರ ಪ್ರತಿಭಟನೆಯ ಬೆನ್ನಲ್ಲೇ ಜುಲೈ 25ರಂದು ಧರ್ಮೇಂದ್ರ ಪ್ರಧಾನ್ ಅವರು ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us