‘ಜನ ನಾಯಗನ್’ ಸಿನಿಮಾದ ಟಿಕೆಟ್ ದರಕ್ಕೆ ನಟ, ಸಿಎಂ ವಿಜಯ್ ಖಡಕ್ ರೂಲ್ಸ್
ದಳಪತಿ ವಿಜಯ್ ನಟನೆಯ ‘ಜನ ನಾಯಗನ್’ ಸಿನಿಮಾ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಈ ಸಿನಿಮಾದ ಟಿಕೆಟ್ ದರ ಎಷ್ಟು ಇರಲಿದೆ ಎಂಬ ಪ್ರಶ್ನೆ ಎಲ್ಲರ ಮನದಲ್ಲೂ ಮೂಡಿದೆ. ಈ ವಿಚಾರದಲ್ಲಿ ವಿಜಯ್ ಅವರು ಎಲ್ಲ ಚಿತ್ರಮಂದಿರಗಳಿಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ..

ಮುಖ್ಯಾಂಶಗಳು
- ಈಗಾಗಲೇ ಸಾಕಷ್ಟು ವಿಳಂಬ ಎದುರಿಸಿರುವ ‘ಜನ ನಾಯಗನ್’ ಚಿತ್ರ.
- ವಿಜಯ್ ಅಭಿನಯಿಸಿದ ಕೊನೇ ಸಿನಿಮಾ ಎಂಬ ಕಾರಣಕ್ಕೆ ಭಾರಿ ನಿರೀಕ್ಷೆ.
- ‘ಜನ ನಾಯಗನ್’ ಚಿತ್ರದ ಟಿಕೆಟ್ ಬೆಲೆ ಮೇಲೆ ನೆಟ್ಟಿದೆ ಎಲ್ಲರ ಕಣ್ಣು.
ತಮಿಳುನಾಡಿನ ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ (Thalapathy Vijay) ಅವರು ಸದ್ಯ ಉತ್ತಮ ಆಡಳಿತ ನೀಡುತ್ತಿದ್ದಾರೆ. ರಾಜಕೀಯ ಜೀವನದಲ್ಲಿ ವಿಜಯ್ ಯಶಸ್ಸಿನ ಹಾದಿಯಲ್ಲಿದ್ದರೂ, ಅವರ ಕೊನೆಯ ಸಿನಿಮಾ ಮಾತ್ರ ಸದ್ಯ ಏರಿಳಿತಗಳನ್ನು ಕಾಣುತ್ತಿದೆ. ಅವರು ನಟಿಸಿದ ಕೊನೆಯ ಚಿತ್ರ ‘ಜನ ನಾಯಗನ್’ (Jana Nayagan) ಇದೇ ತಿಂಗಳು ತೆರೆಕಾಣಲು ಸಜ್ಜಾಗಿದ್ದು, ಅದಕ್ಕಾಗಿ ಭರ್ಜರಿ ಸಿದ್ಧತೆಗಳು ನಡೆಯುತ್ತಿವೆ. ಈ ಸಿನಿಮಾ ನೋಡಲು ಅಭಿಮಾನಿಗಳು ಎಷ್ಟು ಕಾತುರರಾಗಿದ್ದಾರೋ, ಅದೇ ರೀತಿ ವಿಜಯ್ (CM Vijay) ಅವರನ್ನು ರಾಜಕೀಯವಾಗಿ ಟಾರ್ಗೆಟ್ ಮಾಡಲು ಅವರ ಎದುರಾಳಿಗಳು ಕೂಡ ಅಷ್ಟೇ ಕಾಯುತ್ತಿದ್ದಾರೆ.
ಬ್ಲ್ಯಾಕ್ ಟಿಕೆಟ್ ದರಕ್ಕೆ ಬ್ರೇಕ್; ವಿಜಯ್ ಖಡಕ್ ಎಚ್ಚರಿಕೆ:
ಒಂದು ವೇಳೆ ‘ಜನ ನಾಯಗನ್’ ಸಿನಿಮಾದ ಟಿಕೆಟ್ಗಳು ಬ್ಲ್ಯಾಕ್ನಲ್ಲಿ ಮಾರಾಟವಾದರೆ ಅಥವಾ ಥಿಯೇಟರ್ಗಳಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟವಾದರೆ, ವಿಜಯ್ ಅವರು ಅಧಿಕಾರ ದುರುಪಯೋಗ ಮತ್ತು ಭ್ರಷ್ಟಾಚಾರದ ಆರೋಪಗಳನ್ನು ಎದುರಿಸಬೇಕಾಗುತ್ತದೆ. ಈ ಸೂಕ್ಷ್ಮ ಪರಿಸ್ಥಿತಿಯನ್ನು ಮೊದಲೇ ಅರಿತಿರುವ ಸಿಎಂ ವಿಜಯ್, ಈಗಿನಿಂದಲೇ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ತಪ್ಪು ಮಾಡಿದರೆ ಥಿಯೇಟರ್ಗಳ ಪರವಾನಗಿ ರದ್ದು:
ಚಿತ್ರಮಂದಿರಗಳ ಮೇಲೆ ನಿರಂತರ ದಾಳಿ ನಡೆಸುವಂತೆ ತಮಿಳುನಾಡು ಸರ್ಕಾರವು ಈಗಾಗಲೇ ಅಧಿಕಾರಿಗಳಿಗೆ ಸೂಚನೆ ನೀಡಿದೆ ಎನ್ನಲಾಗಿದೆ. ಒಂದು ವೇಳೆ ಯಾವುದೇ ಚಿತ್ರಮಂದಿರದಲ್ಲಿ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಟಿಕೆಟ್ ಮಾರಾಟ ಮಾಡುವುದು ಕಂಡುಬಂದರೆ, ಅಂತಹ ಥಿಯೇಟರ್ಗಳ ಪರವಾನಗಿ ರದ್ದುಗೊಳಿಸಲು ಆದೇಶಿಸಲಾಗಿದೆ.
ಎದುರಾಳಿಗಳ ಕಣ್ಣು ದಳಪತಿ ವಿಜಯ್ ಮೇಲೆ:
ವಿಜಯ್ ಅವರ ರಾಜಕೀಯ ವಿರೋಧಿಗಳು ಹಾಗೂ ಡಿಎಂಕೆ ಬೆಂಬಲಿಗರು ಅವರು ಮಾಡುವ ಒಂದು ಸಣ್ಣ ತಪ್ಪಿಗಾಗಿ ಕಾಯುತ್ತಿದ್ದಾರೆ. ಸಿನಿಮಾದ ಯಶಸ್ಸು-ಅಪಜಯಗಳ ಮಾತು ಹಾಗಿರಲಿ, ಟಿಕೆಟ್ ದರದ ವಿಚಾರದಲ್ಲಿ ಏನಾದರೂ ಎಡವಟ್ಟಾದರೆ ಅದು ನೇರವಾಗಿ ಸಿಎಂ ವಿಜಯ್ ಅವರ ರಾಜಕೀಯ ಇಮೇಜ್ಗೆ ಧಕ್ಕೆ ತರಲಿದೆ. ಹೀಗಾಗಿ ಅವರು ತೀವ್ರ ಜಾಗರೂಕರಾಗಿದ್ದಾರೆ.
ಇದನ್ನೂ ಓದಿ: ‘ಜನ ನಾಯಗನ್’ ನಿರ್ಮಾಪಕರಿಗೆ ಪ್ರಮುಖ ಜವಾಬ್ದಾರಿ ವಹಿಸಿದ ಸಿಎಂ ವಿಜಯ್
ಚಿತ್ರದ ಬಿಡುಗಡೆಯ ಪ್ರತಿಯೊಂದು ಜವಾಬ್ದಾರಿಯನ್ನು ಈ ಸಿನಿಮಾದ ನಿರ್ಮಾಣ ಸಂಸ್ಥೆಯಾದ ಪ್ರಖ್ಯಾತ ‘ಕೆವಿಎನ್ ಪ್ರೊಡಕ್ಷನ್ಸ್’ ಹೊತ್ತುಕೊಂಡಿದೆ. ಬಿಡುಗಡೆಯ ಸಂದರ್ಭದಲ್ಲಿ ಯಾವುದೇ ನೆಗೆಟಿವ್ ಪ್ರಚಾರ ಸಿಗದಂತೆ ಮತ್ತು ವಿಜಯ್ ಹೆಸರಿಗೆ ಮಸಿ ಬಳಿಯದಂತೆ ನೋಡಿಕೊಳ್ಳುವ ದೊಡ್ಡ ಜವಾಬ್ದಾರಿ ಈಗ ಕೆವಿಎನ್ ಪ್ರೊಡಕ್ಷನ್ಸ್ ಹೆಗಲ ಮೇಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




