ಆ ಸ್ಟಾರ್ ನಟನಿಗಾಗಿ ಕತೆ ರೆಡಿ ಮಾಡಿಟ್ಟುಕೊಂಡಿದ್ದಾರೆ ಕ್ರಿಕೆಟಿಗ ವರುಣ್ ಚಕ್ರವರ್ತಿ
Varun Chakravarthy: ಚಾಂಪಿಯನ್ಸ್ ಟ್ರೋಫಿ ಗೆಲುವಿನ ಬಳಿಕ ಕ್ರಿಕೆಟಿಗ ವರುಣ್ ಚಕ್ರವರ್ತಿ ಹೀರೋ ಆಗಿದ್ದಾರೆ. ಅವರ ಅದ್ಭುತ ಬೌಲಿಂಗ್ ಅನ್ನು ಕ್ರಿಕೆಟ್ ಪ್ರೇಮಿಗಳು ಬಹುವಾಗಿ ಮೆಚ್ಚಿಕೊಂಡಿದ್ದಾರೆ. ಅಸಲಿಗೆ ವರುಣ್ ಚಕ್ರವರ್ತಿ ಕ್ರಿಕೆಟಿಗರಾಗುವುದಕ್ಕೂ ಮೊದಲು ನಟರಾಗಿದ್ದರು ಎಂಬುದು ಗೊತ್ತೆ? ವರುಣ್ ಚಕ್ರವರ್ತಿ, ಸ್ಟಾರ್ ನಟನ ಸಿನಿಮಾ ನಿರ್ದೇಶನ ಮಾಡಲೆಂದು ಅವರಿಗಾಗಿ ಕತೆಗಳನ್ನು ಬರೆದು ಇರಿಸಿಕೊಂಡಿದ್ದಾರಂತೆ. ಯಾರು ಆ ನಟ?

ವರುಣ್ ಚಕ್ರವರ್ತಿ (Varun Chakravarthy), ಭಾರತ ಕ್ರಿಕೆಟ್ ತಂಡದ ಭರವಸೆಯ ಆಟಗಾರನಾಗಿ ಹೊರಹೊಮ್ಮಿದ್ದಾರೆ. ಚಾಂಪಿಯನ್ಸ್ ಟ್ರೋಫಿಯನ್ನು ಅವರು ನೀಡಿದ ಬೌಲಿಂಗ್ ಪ್ರದರ್ಶನ ಕ್ರಿಕೆಟ್ ಪ್ರಿಯರ ಮೆಚ್ಚುಗೆಗೆ ಪಾತ್ರವಾಗಿದೆ. ಚಾಂಪಿಯನ್ಸ್ ಟ್ರೋಫಿ ಮುಗಿದ ಬೆನ್ನಲ್ಲೆ ವರುಣ್ ಚಕ್ರವರ್ತಿ ಬಗ್ಗೆ ಹಲವು ಕುತೂಹಲಕಾರಿ ವಿಷಯಗಳು ಹೊರಗೆ ಬರುತ್ತಿವೆ. ಅಸಲಿಗೆ ವರುಣ್ ಚಕ್ರವರ್ತಿಗೆ ಸಿನಿಮಾ ರಂಗದಲ್ಲಿ ಮಿಂಚುವ ಆಸೆಯಿತ್ತಂತೆ. ಒಂದು ಸಿನಿಮಾದಲ್ಲಿಯೂ ವರುಣ್ ಚಕ್ರವರ್ತಿ ನಟಿಸಿದ್ದಾರೆ. ಸಹಾಯಕ ನಿರ್ದೇಶಕನಾಗಿಯೂ ಅವರು ಕೆಲಸ ಮಾಡಿದ್ದಾರೆ. ಆದರೆ ಅವರ ಕೈ ಹಿಡಿದಿದ್ದು ಕ್ರಿಕೆಟ್ ಪ್ರೀತಿ.
ಆರ್ಟಿಟೆಕ್ಟ್ ಎಂಜಿನಿಯರ್ ಆಗಿದ್ದ ವರುಣ್, ಕೆಲ ವರ್ಷ ಉದ್ಯೋಗ ಮಾಡಿದ ಬಳಿಕ ಉದ್ಯೋಗದಲ್ಲಿ ತೃಪ್ತಿ ಸಿಗುತ್ತಿಲ್ಲವೆಂದು ಕೆಲಸ ಬಿಟ್ಟರಂತೆ. ಅದಾದ ಬಳಿಕ ಸಿನಿಮಾದಲ್ಲಿ ಅವಕಾಶ ಹುಡುಕಿಕೊಂಡು ಹೋಗಿ, ‘ಜೀವ’ ಹೆಸರಿನ ಸಿನಿಮಾದಲ್ಲಿ ಕ್ರಿಕೆಟ್ ಆಟಗಾರನ ಸಣ್ಣ ಪಾತ್ರದಲ್ಲಿ ನಟಿಸಿದರು. ಆಗ ವರುಣ್ಗೆ ಸಿನಿಮಾ ನಿರ್ದೇಶಕ ಆಗಬೇಕು ಎಂಬ ಆಸೆ ಚಿಗುರಿತಂತೆ. ಕೆಲವು ಕತೆ, ಚಿತ್ರಕತೆಗಳನ್ನು ಸಹ ಬರೆದುಕೊಂಡಿದ್ದರಂತೆ ವರುಣ್. ಸಹಾಯಕ ನಿರ್ದೇಶಕರಾಗಿಯೂ ಸಹ ಕೆಲಸ ಮಾಡಿದ್ದಾರೆ. ಆದರೆ ವರುಣ್ ಅವರೇ ಹೇಳಿಕೊಂಡಿರುವಂತೆ ಅವರ ಕಮ್ಯುನಿಕೇಷನ್ ಸ್ಕಿಲ್ ಚೆನ್ನಾಗಿರಲಿಲ್ಲವಾದ್ದರಿಂದ ಸಹಾಯಕ ನಿರ್ದೇಶಕನಾಗಿ ಉಳಿದುಕೊಳ್ಳಲು ಆಗಲಿಲ್ಲವಂತೆ.
ನಿರ್ದೇಶಕನಾಗಬೇಕು ಎಂಬ ಆಸೆಯಿಂದ ಕೆಲ ಕತೆಗಳನ್ನು ಸಹ ವರುಣ್ ಬರೆದಿಟ್ಟುಕೊಂಡಿದ್ದಾರಂತೆ. ವಿಶೇಷವಾಗಿ ಅವರಿಗೆ ತಮಿಳಿನ ಖ್ಯಾತ ನಟ ದಳಪತಿ ವಿಜಯ್ ಅವರಿಗಾಗಿ ಸಿನಿಮಾ ಮಾಡುವ ಆಸೆಯಂತೆ. ದಳಪತಿ ವಿಜಯ್ ಅವರಿಗಾಗಿ ಮೂರು ಕತೆ ರೆಡಿ ಮಾಡಿಟ್ಟುಕೊಂಡಿದ್ದಾರಂತೆ ವರುಣ್. ಅದು ಮಾತ್ರವೇ ಅಲ್ಲ, ವರುಣ್, ದಳಪತಿ ವಿಜಯ್ ಅವರ ಮಹಾ ಅಭಿಮಾನಿ, ವಿಜಯ್ ಹೆಸರನ್ನು ಟ್ಯಾಟೂ ಸಹ ಹಾಕಿಸಿಕೊಂಡಿದ್ದಾರೆ. ತಾವು ದಳಪತಿ ವಿಜಯ್ ಅವರ ದೊಡ್ಡ ಅಭಿಮಾನಿ ಎಂಬುದನ್ನು ಸಹ ವರುಣ್ ಹಲವು ಬಾರಿ ಹೇಳಿಕೊಂಡಿದ್ದಾರೆ.
ಇದನ್ನೂ ಓದಿ:ಸಿನಿಮಾದಲ್ಲೂ ನಟಿಸಿದ್ದ ವರುಣ್ ಚಕ್ರವರ್ತಿ; ಯಾವ ಚಿತ್ರ?
ವರುಣ್ ಚಕ್ರವರ್ತಿ, 2014 ರಲ್ಲಿ ಬಿಡುಗಡೆ ಆಗಿದ್ದ ‘ಜೀವ’ ಸಿನಿಮಾದ ಸಣ್ಣ ಪಾತ್ರದಲ್ಲಿ ನಟಿಸಿದ್ದರು. ಆ ಸಿನಿಮಾ ಸಾಧಾರಣ ಯಶಸ್ಸು ಗಳಿಸಿತ್ತು. ಆ ಸಿನಿಮಾದಲ್ಲಿ ವರುಣ್ ಚಕ್ರವರ್ತಿಯ ಪಾತ್ರ ಮಹತ್ವದ್ದೇನೂ ಆಗಿರಲಿಲ್ಲ. ಸಿನಿಮಾದಲ್ಲಿ ಅವರಿಗೆ ಯಶಸ್ಸು ಸಿಗದೇ ಇರುವ ಕಾರಣ ವರುಣ್ ಚಕ್ರವರ್ತಿ ಟೆನ್ನಿಸ್ ಬಾಲ್ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ಆ ನಂತರ ಲೆದರ್ ಬಾಲ್ ಆಡಲು ಆರಂಭಿಸಿದರು. 2018 ರಲ್ಲಿ ನಡೆದ ತಮಿಳುನಾಡು ಪ್ರೀಮಿಯರ್ ಲೀಗ್ ವರುಣ್ ಚಕ್ರವರ್ತಿ ಅವರ ಬಾಳಿಗೆ ತಿರುವು ನೀಡಿತು. ಅಲ್ಲಿ ನೀಡಿದ ಅದ್ಭುತ ಪ್ರದರ್ಶನದಿಂದ ವಿಜಯ್ ಹಜಾರೆ ತಂಡಕ್ಕೆ ಆಯ್ಕೆ ಆದರು. ಆ ನಂತರ 2019 ರಲ್ಲಿ ಮೊದಲ ರಣಜಿ ಪಂದ್ಯ ಆಡಿದರು. ಅಲ್ಲಿಯೂ ಅದ್ಭುತ ಪ್ರದರ್ಶನ ತೋರಿ ಅದೇ ವರ್ಷ ಐಪಿಎಲ್ಗೂ ಆಡಿದರು. ಐಪಿಎಲ್ನಲ್ಲಿ ಚೆನ್ನಾಗಿ ಆಡಿದ ವರುಣ್ ಭಾರತೀಯ ಕ್ರಿಕೆಟ್ ತಂಡಕ್ಕೆ ಸಹ ಆಯ್ಕೆ ಆದರು.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 8:48 pm, Sat, 15 March 25