ಸ್ವಂತ ಹಣದಲ್ಲಿ 101 ಜನರಿಗೆ ಕಾಶಿಯಾತ್ರೆ ಮಾಡಿಸುತ್ತಿರುವ ಜಿಮ್ ರವಿ; ಕಾರಣ ಏನು?
ತಂದೆಯನ್ನು ಕಾಶಿಯಾತ್ರೆಗೆ ಕರೆದುಕೊಂಡು ಹೋಗಲು ಜಿಮ್ ರವಿ ಅವರಿಗೆ ಸಾಧ್ಯವಾಗಿರಲಿಲ್ಲ. ಈಗಲೂ ಅವರಿಗೆ ಆ ಕೊರಗು ಇದೆ. ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಜಿಮ್ ರವಿ ಮಾತನಾಡಿದರು. ತಂದೆಯ ಹೆಸರಲ್ಲಿ 101 ಜನರಿಗೆ ಕಾಶಿಯಾತ್ರೆ ಮಾಡಿಲು ಅವರು ತೀರ್ಮಾನಿಸಿದ್ದಾರೆ. ಆ ಕುರಿತು ಅವರು ಮಾಹಿತಿ ಹಂಚಿಕೊಂಡರು.

ಜಿಮ್ ರವಿ ಅವರು ಸಿನಿಮಾ ಕ್ಷೇತ್ರದಲ್ಲಿ ಮೊದಲಿನಿಂದಲೂ ತೊಡಗಿಕೊಂಡಿದ್ದಾರೆ. ಕೋಲಾರ ಮೂಲದ ಅವರು ದೇಹದಾರ್ಢ್ಯ ಪಟುವಾಗಿ ಫೇಮಸ್. ಎ.ಕೆ. ರವಿ ಎಂಬುದು ಅವರು ಪೂರ್ಣ ಹೆಸರು. ಎಲ್ಲರೂ ಅವರನ್ನು ಜಿಮ್ ರವಿ (Gym Ravi) ಎಂದೇ ಕರೆಯುತ್ತಾರೆ. ‘ಪುರುಷೋತ್ತಮ’ ಸಿನಿಮಾದಲ್ಲಿ ಅವರು ಹೀರೋ ಆಗಿ ಕೂಡ ನಟಿಸಿದರು. ಇದರ ಜೊತೆಗೆ ಅವರು ಸಾಮಾಜಿಕ ಕಾರ್ಯಗಳ ಮೂಲಕವೂ ಜನಮನ ಗೆದ್ದಿದ್ದಾರೆ. ಈಗ ಇನ್ನೊಂದು ಕಾರ್ಯಕ್ಕೆ ಅವರು ಸಜ್ಜಾಗಿದ್ದಾರೆ. 101 ಜನರಿಗೆ ಕಾಶಿಯಾತ್ರೆ (Kashiyatra) ಮಾಡಿಸಲು ಅವರು ತಯಾರಿ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಲು ಅವರು ಸುದ್ದಿಗೋಷ್ಠಿ ಆಯೋಜಿಸಿದರು. ‘ನಮ್ಮದು ಮಧ್ಯಮವರ್ಗದ ಕುಟುಂಬ. ನನ್ನ ತಾಯಿ ನನಗೆ ಬಹಳ ಆದರ್ಶ, ಜೀವನ ಪಾಠ ಕಲಿಸಿದರು. ಒಬ್ಬರ ಸುಖಕ್ಕೆ ನೀನು ಆಗದಿದ್ದರೂ ಪರವಾಗಿಲ್ಲ, ಕಷ್ಟದಲ್ಲಿ ಅವರ ಜೊತೆಗಿರು ಅಂತ ಹೇಳಿಕೊಟ್ಟರು. ಒಂದಿನ ಅಮ್ಮ ನಿಧನರಾದರು. ಇದರಿಂದ ಅಪ್ಪನಿಗೆ ಬಹಳ ದುಃಖ ಆಯಿತು. ಹಾಗಾಗಿ ಅವರು ನನ್ನ ಬಳಿ ಬಂದು ಕಾಶಿಯಾತ್ರೆಗೆ ಕರೆದುಕೊಂಡು ಹೋಗು ಎಂದರು. ನನ್ನ ಹತ್ತಿರ ಆಗ ಹಣ ಇರಲಿಲ್ಲ’ ಎಂದು ಆ ದಿನಗಳನ್ನು ಜಿಮ್ ರವಿ ನೆನಪಿಸಿಕೊಂಡರು.
‘ಅದೆಲ್ಲಾ ಆಗಲ್ಲ ಎಂದು ಅಪ್ಪನಿಗೆ ಏರು ದ್ವನಿಯಲ್ಲಿ ಹೇಳಿದೆ. ಕೆಲವು ತಿಂಗಳ ನಂತರ ಮತ್ತೆ ಕೇಳಿದರು. ವಿಮಾನದಲ್ಲಿ ಕರೆದುಕೊಂಡು ಹೋಗುತ್ತೇನೆ ಅಂತ ಹೇಳಿ ಅವರನ್ನು ಸಮಾಧಾನ ಮಾಡಿದೆ. ಕೆಲ ದಿನಗಳ ಬಳಿಕ ಸ್ನೇಹಿತರ ಹತ್ತಿರ ಸಾಲ ಮಾಡಿ ಅಪ್ಪನ ಕಾಶಿಯಾತ್ರೆಗೆ ವಿಮಾನದ ಟಿಕೆಟ್ ಬುಕ್ ಮಾಡಿದೆ. ಈ ವಿಷಯವನ್ನು ಅಪ್ಪನಿಗೆ ಫೋನ್ ಮಾಡಿ ಹೇಳಿದೆ. ಆದರೆ ನಾನು ಈ ವಿಷಯ ತಿಳಿಸಿದ ಕೆಲವೇ ಗಂಟೆಗಳಲ್ಲೇ ಅಪ್ಪ ನಿಧನರಾದರು’ ಎಂದು ಭಾವುಕರಾದರು ಜಿಮ್ ರವಿ.
‘ಅಪ್ಪನ ಜೊತೆ ಅವರ ಕಾಶಿಯಾತ್ರೆಯ ಆಸೆಯೂ ಅಂತ್ಯವಾಯ್ತು. ಕಾಶಿಯಾತ್ರೆ ಮಾಡಲು ಸಾಧ್ಯವಿಲ್ಲದ ಕೆಲವು ಅಶಕ್ತರಿಗೆ ನಮ್ಮ ತಂದೆಯ ಹೆಸರಿನಲ್ಲಿ ಕಾಶಿಯಾತ್ರೆ ಮಾಡಿಸಬೇಕು ಎಂದು ಆ ದಿನವೇ ನಾನು ನಿರ್ಧಾರ ಮಾಡಿದೆ. ಅಪ್ಪ ನಿಧನರಾಗಿ 14 ವರ್ಷ ಕಳೆಯಿತು. ಅಂದಿನಿಂದ ಇಂದಿನವರೆಗೂ ದುಡ್ಡು ಕೂಡಿ ಹಾಕುತ್ತಿದ್ದ. ಯಾವುದೇ ದುಂದು ವೆಚ್ವ ಮಾಡದೇ ಹುಂಡಿಯಲ್ಲಿ ಹಾಕುತ್ತಿದ್ದೆ. ಈಗ ಅದಕ್ಕೆ ಕಾಲ ಕೂಡಿ ಬಂದಿದೆ’ ಎಂದು ಜಿಮ್ ರವಿ ಹೇಳಿದ್ದಾರೆ.
‘ವಾಣಿಜ್ಯ ತೆರೆಗೆ ಅಧಿಕಾರಿ ಜಗನ್ನಾಥ್ ಮತ್ತು ಕುಟುಂಬದವರ ಮಾರ್ಗದರ್ಶನದಲ್ಲಿ ಜುಲೈ 2ರಂದು ರಾಜ್ಯದ ವಿವಿಧ ಕಡೆಗಳಿಂದ ಸುಮಾರು 80 ಜನ ಅಶಕ್ತರನ್ನು ನಾನೇ ಖುದ್ದಾಗಿ ಭೇಟಿ ಮಾಡಿ ಅವರ ಜೊತೆ 101 ಜನರ ತಂಡ ಪಯಣ ಬೆಳೆಸುತ್ತಿದ್ದೇವೆ. ಅವರ ಊರಿಂದ ಬರುವ ಪ್ರಯಾಣದ ವೆಚ್ಚದಿಂದ ಹಿಡಿದು ಎಲ್ಲ ವ್ಯವಸ್ಥೆಯನ್ನು ನಾವೇ ಮಾಡುತ್ತಿದ್ದೇವೆ’ ಎಂದಿದ್ದಾರೆ ಜಿಮ್ ರವಿ.
ಇದನ್ನೂ ಓದಿ: ಶಾಲಾ ವಿದ್ಯಾರ್ಥಿಗಳಿಂದ ಬಿಡುಗಡೆ ಆಯ್ತು ‘ಅಂದೊಂದಿತ್ತು ಕಾಲ’ ಸಿನಿಮಾದ 2ನೇ ಹಾಡು
‘ಜುಲೈ 2ರಂದು ಬೆಳಗ್ಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ರಾಮ ಜನ್ಮಭೂಮಿ ಅಯೋಧ್ಯೆಗೆ ಹೋಗುತ್ತೇವೆ. ಪ್ರಯಾಗರಾಜ, ಕಾಶಿ ಸೇರಿ ಒಟ್ಟು ಮೂರು ದಿನಗಳ ಯಾತ್ರೆ. ಎಲ್ಲ ಕಡೆ ಎಸಿ ವಾಹನ ಮತ್ತು ಎಸಿ ಕೊಠಡಿ ವ್ಯವಸ್ಥೆ ಮಾಡಲಾಗಿದೆ. ನಮ್ಮೊಂದಿಗೆ ವೈದ್ಯರು ಹಾಗೂ ಸ್ವಯಂ ಸೇವಕರು ಇರುತ್ತಾರೆ. ಯಾವುದೇ ತೊಂದರೆ ಆಗದಂತೆ ನೋಡಿಕೊಳ್ಳುವ ಜವಾಬ್ದಾರಿ ನಮ್ಮದು. ನನಗೆ ಪ್ರಚಾರ ಮಾಡುವ ಉದ್ದೇಶವಿರಲಿಲ್ಲ. ಬೇರೆಯವರಿಗೂ ಇದು ಮಾದರಿಯಾಗಲಿ ಅಂತ ಸ್ನೇಹಿತರು ಹೇಳಿದ್ದರಿಂದ ಸುದ್ದಿಗೋಷ್ಠಿ ಮಾಡಿದ್ದೇನೆ’ ಎಂದು ಜಿಮ್ ರವಿ ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.








