ಸುಶಾಂತ್ ರೀತಿ ಕಾರ್ತಿಕ್ ಆರ್ಯನ್​ಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಬೇಡಿ; ಕರಣ್​​​ಗೆ ಕಂಗನಾ ಛೀಮಾರಿ

ದಯವಿಟ್ಟು ಕಾರ್ತಿಕ್ರನ್ನು ಬಿಟ್ಟುಬಿಡಿ. ಸುಶಾಂತ್ ರೀತಿ ಅವರ ಬೆನ್ನುಹತ್ತಬೇಡಿ. ನೇಣು ಹಾಕಿಕೊಳ್ಳುವಂತೆ ಒತ್ತಾಯ ಮಾಡಬೇಡಿ ಎಂದು ಕಂಗನಾ ರಣಾವತ್ ಅವರು ನೆಪೋಟಿಸಂ ಗ್ಯಾಂಗ್ಗೆ ಛಾಟಿ ಬೀಸಿದ್ದಾರೆ.

ಸುಶಾಂತ್ ರೀತಿ ಕಾರ್ತಿಕ್ ಆರ್ಯನ್​ಗೂ ಆತ್ಮಹತ್ಯೆ ಮಾಡಿಕೊಳ್ಳುವಂತೆ ಒತ್ತಾಯಿಸಬೇಡಿ; ಕರಣ್​​​ಗೆ ಕಂಗನಾ ಛೀಮಾರಿ
ಕಂಗನಾ ರಣಾವತ್​, ಕಾರ್ತಿಕ್​ ಆರ್ಯನ್​, ಕರಣ್​ ಜೋಹರ್​
Edited By:

Updated on: Apr 17, 2021 | 5:30 PM

ಬಾಲಿವುಡ್​ನಲ್ಲಿ ನೆಪೋಟಿಸಂ ಬಿರುಗಾಳಿ ಮತ್ತೆ ಬೀಸುತ್ತಿದೆ. ನಿರ್ಮಾಪಕ ಕರಣ್​ ಜೋಹರ್​ ವಿರುದ್ಧ ನಟಿ ಕಂಗನಾ ರಣಾವತ್ ಮತ್ತೆ ಕಿಡಿಕಾರಲು ಆರಂಭಿಸಿದ್ದಾರೆ. ಇದಕ್ಕೆಲ್ಲ ಕಾರಣ ಆಗಿರುವುದು ನಟ ಕಾರ್ತಿಕ್​ ಆರ್ಯನ್​ ಅವರನ್ನು ದೋಸ್ತಾನಾ 2 ಸಿನಿಮಾದಿಂದ ಹೊರದಬ್ಬಿರುವುದು. ಬಹುನಿರೀಕ್ಷಿತ ದೋಸ್ತಾನಾ 2 ಸಿನಿಮಾಗೆ ಕರಣ್​ ಜೋಹರ್​ ನಿರ್ಮಾಕರು. ಆ ಚಿತ್ರಕ್ಕೆ ಮೊದಲು ಹೀರೋ ಆಗಿ ಕಾರ್ತಿಕ್​ ಆಯ್ಕೆ ಆಗಿದ್ದರು. ಆದರೆ ಕೆಲವೇ ದಿನಗಳ ಹಿಂದೆ ಕರಣ್​ ಜೋಹರ್​ ಮತ್ತು ಕಾರ್ತಿಕ್​ ಆರ್ಯನ್​ ನಡುವೆ ಕಿರಿಕ್​ ಆಗಿದೆ. ಅದರ ಪರಿಣಾಮವಾಗಿ ಕಾರ್ತಿಕ್​ ಆರ್ಯನ್​ಗೆ ಕರಣ್​ ಜೋಹರ್​ ಬಹಿಷ್ಕಾರ ಹಾಕಿದ್ದಾರೆ. ಭವಿಷ್ಯದಲ್ಲಿ ಇನ್ನೆಂದೂ ಕಾರ್ತಿಕ್​ಗೆ ಕೆಲಸ ನೀಡುವುದಿಲ್ಲ ಎಂದು ಕರಣ್​ ಹೇಳಿದ್ದಾರೆ ಎಂಬ ಸುದ್ದಿ ಹರಡಿದೆ.

ಈ ಘಟನೆ ನಡೆದ ಬಳಿಕ ನಟಿ ಕಂಗನಾ ರಣಾವತ್​ ಸಿಟ್ಟಾಗಿದ್ದಾರೆ. ಕರಣ್ ಜೋಹರ್​ ವಿರುದ್ಧ ಅವರು ಸರಣಿ ಟ್ವೀಟ್​ ಮೂಲಕ ಗುಡುಗಲು ಆರಂಭಿಸಿದ್ದಾರೆ. ಈ ಹಿಂದೆ ಸುಶಾಂತ್​ ಸಿಂಗ್​ ರಜಪೂತ್​ ಇದೇ ರೀತಿ ಬಹಿಷ್ಕಾರಕ್ಕೆ ಒಳಗಾಗಿದ್ದರು. ನಂತರ ಅವರ ಮೇಲೆ ಅನೇಕ ಆರೋಪಗಳನ್ನು ಹೊರಿಸಲಾಯಿತು. ಅಂತಿಮವಾಗಿ ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡರು. ಈಗ ಕಾರ್ತಿಕ್​ ಆರ್ಯನ್​ ಅವರಿಗೂ ಇದೇ ಪರಿಸ್ಥಿತಿ ಬಾರದಿರಲಿ ಎಂದು ಕಂಗನಾ ಆಶಿಸಿದ್ದಾರೆ.

‘ಕಾರ್ತಿಕ್​ ಸ್ವಂತವಾಗಿ ಇಲ್ಲಿಯವರಗೆ ಬೆಳೆದುಬಂದಿದ್ದಾರೆ. ಅದೇ ರೀತಿ ಅವರು ಮುಂದುವರಿಯಲಿದ್ದಾರೆ. ಕರಣ್​ ಜೋಹರ್​ ಮತ್ತು ಆತನ ನೆಪೋಟಿಸಂ ಗ್ಯಾಂಗ್​ಗೆ ನನ್ನದೊಂದು ಮನವಿ ಏನೆಂದರೆ, ದಯವಿಟ್ಟು ಕಾರ್ತಿಕ್​ರನ್ನು ಬಿಟ್ಟುಬಿಡಿ. ಸುಶಾಂತ್​ ರೀತಿ ಅವರ ಬೆನ್ನುಹತ್ತಬೇಡಿ. ನೇಣು ಹಾಕಿಕೊಳ್ಳುವಂತೆ ಒತ್ತಾಯ ಮಾಡಬೇಡಿ’ ಎಂದು ಕಂಗನಾ ಟ್ವೀಟ್​ ಮಾಡಿದ್ದಾರೆ.

ಈ ಸಂದರ್ಭದಲ್ಲಿ ನಟ ಕಾರ್ತಿಕ್​​ಗೆ ಕಂಗನಾ ಧೈರ್ಯ ತುಂಬುವ ಪ್ರಯತ್ನ ಮಾಡಿದ್ದಾರೆ. ‘ಕಾರ್ತಿಕ್​ ಅವರೇ ನೀವು ಈ ಚಿಲ್ಲರೆಗಳಿಗೆ ಹೆದರುವ ಅವಶ್ಯಕತೆ ಇಲ್ಲ. ಕೆಟ್ಟ ಲೇಖನಗಳನ್ನು ಮಾಡಿದ ಬಳಿಕ, ನಿಮ್ಮ ಆಟಿಟ್ಯೂಡ್​ನಿಂದಾಗಿ ಇಷ್ಟೆಲ್ಲ ಆಯಿತು ಎಂದು ಪ್ರಕಟಣೆ ಹೊರಡಿಸುತ್ತಾರೆ. ನಂತರ ಈ ಮೂರ್ಖ ಮೌನ ವಹಿಸುತ್ತಾನೆ. ವೃತ್ತಿಪರತೆಯ ಕೊರತೆ ಮತ್ತು ಡ್ರಗ್​ ಅಡಿಕ್ಷನ್​ನ ವದಂತಿ ಹರಡಿಸುತ್ತಾರೆ. ಸುಶಾಂತ್​ಗೆ ಹೀಗೇ ಮಾಡಿದ್ದರು’ ಎಂದು ಕಂಗನಾ ಟ್ವೀಟ್​ ಮಾಡಿದ್ದಾರೆ.

‘ನಾವು ನಿಮ್ಮ ಜೊತೆ ಇದ್ದೇವೆ. ನಿಮ್ಮ ಬೆಳವಣಿಗೆಗೆ ಯಾರು ಕಾರಣ ಆಗುವುದಿಲ್ಲವೋ ಅವರು ನಿಮ್ಮನ್ನು ತುಳಿಯಲು ಕೂಡ ಸಾಧ್ಯವಿಲ್ಲ. ಇಂದು ನಿಮಗೆ ಒಂಟಿತನ ಕಾಡಬಹುದು. ಎಲ್ಲ ಮೂಲೆಗಳಿಂದಲೂ ನಿಮ್ಮನ್ನು ಟಾರ್ಗೆಟ್​ ಮಾಡಬಹುದು. ಆ ರೀತಿ ನೀವು ಅಂದುಕೊಳ್ಳುವುದು ಬೇಡ. ಕರಣ್​ ಜೋಹರ್​ ಡ್ರಾಮಾ ಬಗ್ಗೆ ಎಲ್ಲರಿಗೂ ಗೊತ್ತು. ನೀವು ಚೆನ್ನಾಗಿ ಮುಂದುವರಿಯುತ್ತೀರಿ. ನಿಮ್ಮ ಸಾಮರ್ಥ್ಯದ ಬಗ್ಗೆ ನಂಬಿಕೆ ಇರಲಿ ಮತ್ತು ಶಿಸ್ತಿನಿಂದಿರಿ’ ಎಂದು ಕಾರ್ತಿಕ್​ಗೆ ಕಂಗನಾ ಬುದ್ಧಿಮಾತು ಹೇಳಿದ್ದಾರೆ.

ಇದನ್ನೂ ಓದಿ: ಕಂಗನಾ ರಣಾವತ್​-ತಾಪ್ಸೀ ಪನ್ನು ಈಗ ಫ್ರೆಂಡ್ಸ್​! ಜಗಳ ಅಂತ್ಯ ಆಗಿದ್ದಕ್ಕೆ ಕಾರಣ ಏನು?

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us