‘ಮುಸ್ಲಿಮರ ಬಳಿ ಮೋಹನ್ಲಾಲ್ ಕ್ಷಮೆ ಕೇಳಬೇಕು’; ಮಾಡಿದ ತಪ್ಪೇನು?
ಮೋಹನ್ಲಾಲ್ ಅವರು ಶಬರಿಮಲೆಯಲ್ಲಿ ತಮ್ಮ ಸ್ನೇಹಿತ ಮಮ್ಮುಟ್ಟಿಗಾಗಿ ಪೂಜೆ ಮಾಡಿಸಿದ್ದು ವಿವಾದಕ್ಕೆ ಕಾರಣವಾಗಿದೆ. ಮಮ್ಮುಟ್ಟಿ ಮುಸ್ಲಿಂ ಆಗಿರುವುದರಿಂದ ಹಿಂದೂ ದೇವಾಲಯದಲ್ಲಿ ಪೂಜೆ ಮಾಡಿಸಿದ್ದು ಸರಿಯಲ್ಲ ಎಂದು ಕೆಲವರು ವಾದಿಸಿದ್ದಾರೆ. ಈ ಬಗ್ಗೆ ಪತ್ರಕರ್ತ ಅಬ್ದುಲ್ಲಾ ಅವರು ಮೋಹನ್ಲಾಲ್ ಕ್ಷಮೆ ಕೇಳಬೇಕೆಂದು ಆಗ್ರಹಿಸಿದ್ದಾರೆ.

ಮಲಯಾಳಂ ಸೂಪರ್ ಸ್ಟಾರ್ ಮೋಹನ್ಲಾಲ್ (Mohanlal) ಅವರು ಈಗ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಅವರು ತಮ್ಮ ಗೆಳೆಯ ಮಮ್ಮುಟ್ಟಿಗಾಗಿ ಶಬರಿಮಲೆಯಲ್ಲಿ ಪೂಜೆ ಮಾಡಿಸಿದ್ದರು. ಈ ಸಂದರ್ಭದ ವಿಡಿಯೋಗಳು ವೈರಲ್ ಆಗಿವೆ. ಅಲ್ಲದೆ, ಮಮ್ಮುಟ್ಟಿ ಹೆಸರಲ್ಲಿ ಪೂಜೆ ಮಾಡಿಸಲು ಬರೆಸಿದಂತಹ ರಶೀದಿ ಕೂಡ ಎಲ್ಲ ಕಡೆ ಹರಿದಾಡುತ್ತಿದೆ. ಈಗ ಇದನ್ನು ಕೆಲವರು ವಿವಾದ ಮಾಡಿದ್ದಾರೆ. ಹಿಂದೂ ದೇವಾಲಯದಲ್ಲಿ ಮುಸ್ಲಿಂ ವ್ಯಕ್ತಿ ಹೆಸರಲ್ಲಿ ಪೂಜೆ ಮಾಡಿಸಿದ್ದು ಎಷ್ಟು ಸರಿ ಎಂದು ಕೆಲವರು ಪ್ರಶ್ನೆ ಮಾಡಿದ್ದಾರೆ. ಇನ್ನೂ ಕೆಲವರು, ಮುಸ್ಲಿಮರಿಗೆ ಅಲ್ಲಾಹ ಮಾತ್ರ ದೇವರು. ಹಿಂದೂ ದೇವಾಲಯದಲ್ಲಿ ಮಮ್ಮುಟ್ಟಿ ಹೆಸರಲ್ಲಿ ಪೂಜೆ ಮಾಡಿಸುವ ಮೂಲಕ ಮುಸ್ಲಿಂ ಭಾವನೆಗೆ ದಕ್ಕೆ ಉಂಟಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ.
ಪತ್ರಕರ್ತ ಹಾಗೂ ಹಿರಿಯ ರಾಜಕೀಯ ವಿಶ್ಲೇಷಕ ಒ ಅಬ್ದುಲ್ಲಾ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ಮುಸ್ಲಿಂ ಸಮುದಾಯಕ್ಕೆ ಮೋಹನ್ಲಾಲ್ ಕ್ಷಮೆ ಕೇಳಬೇಕು, ಅವರು ದೊಡ್ಡ ಅಪರಾಧ ಮಾಡಿದ್ದಾರೆ’ ಎಂದು ಆಗ್ರಹಿಸಿದ್ದಾರೆ. ಕೆಲವರು ಮೋಹನ್ಲಾಲ್ ಪರ ಬ್ಯಾಟ್ ಬೀಸಿದ್ದು, ಅಬ್ದುಲ್ಲಾ ವಾದದಲ್ಲಿ ಹುರುಳಿಲ್ಲ ಎಂದಿದ್ದಾರೆ.
ಕೇರ್ ಮಾಡದ ಮೋಹನ್ಲಾಲ್
ಈ ಹೇಳಿಕೆಗಳಿಗೆ ಮೋಹನ್ಲಾಲ್ ಅವರು ಕೇರ್ ಮಾಡಿಲ್ಲ. ಇತ್ತೀಚೆಗೆ ಈವೆಂಟ್ ಒಂದರಲ್ಲಿ ಮಾತನಾಡಿದ್ದ ಅವರು, ‘ಮಮ್ಮುಟ್ಟಿ ನನ್ನ ಸಹೋದರನಂತೆ. ಅವನಿಗಾಗಿ ಪ್ರಾರ್ಥನೆ ಮಾಡುವುದರಲ್ಲಿ ತಪ್ಪೇನಿದೆ? ಅವನಿಗೆ ಸಣ್ಣ ಪುಟ್ಟ ಆರೋಗ್ಯ ಸಮಸ್ಯೆ ಆಗಿದೆ ಅಷ್ಟೇ. ಅವನು ಆರೋಗ್ಯವಾಗಿದ್ದಾನೆ’ ಎಂದಿದ್ದರು ಮೋಹನ್ಲಾಲ್.
ಘಟನೆ ಏನು?
ಮೋಹನ್ಲಾಲ್ ಅವರು ಮಾರ್ಚ್ 18ರಂದು ಶಬರಿಮಲೆಗೆ ತೆರಳಿದ್ದರು. ಅವರ ನಟನೆಯ ‘ಎಲ್: ಎಂಪರಾನ್’ ಸಿನಿಮಾಗಾಗಿ ಅವರು ಪ್ರಾರ್ಥನೆ ಸಲ್ಲಿಸಿದ್ದರು. ಈ ವೇಳೆ ಮಮ್ಮುಟ್ಟಿ ಹೆಸರಲ್ಲಿ ಅರ್ಚನೆ ಮಾಡಿಸಿದ್ದರು.
ಇದನ್ನೂ ಓದಿ: ಗೀತಾ ಶಿವರಾಜ್ಕುಮಾರ್ಗೆ ಸರ್ಜರಿ; ಆಸ್ಪತ್ರೆಯಲ್ಲಿ ಮುಂದುವರಿದ ಚಿಕಿತ್ಸೆ
ಅನುಮಾನ
ಮಮ್ಮುಟ್ಟಿ ಅವರಿಗೆ ಕ್ಯಾನ್ಸರ್ ಕಾಣಿಸಿಕೊಂಡಿದ್ದು, ಈ ಕಾರಣಕ್ಕೆ ಅವರು ಚಿಕಿತ್ಸೆ ಪಡೆಯುತ್ತಾ ಇದ್ದಾರೆ ಎನ್ನುವ ಮಾತಿದೆ. ಆದರೆ, ಇದನ್ನು ಅವರ ಆಪ್ತ ಮೂಲದವರು ಅಲ್ಲಗಳೆದಿದ್ದಾರೆ. ಹೀಗಿರುವಾಗಲೇ ಮೋಹನ್ಲಾಲ್ ಅವರು ಗೆಳೆಯನಿಗಾಗಿ ಪೂಜೆ ಮಾಡಿಸಿದ್ದು ಸಾಕಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ಮಮ್ಮುಟ್ಟಿಗೆ ಕ್ಯಾನ್ಸರ್ ಎಂಬ ಕಾರಣದಿಂದಲೇ ಅವರು ಪೂಜೆ ಮಾಡಿಸಿದರೇ ಎಂಬ ಪ್ರಶ್ನೆಯನ್ನು ಅನೇಕರು ಕೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.