AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Dollu Movie Review: ಜನಪದ ಕಲೆಗಳ ಅಳಿವು-ಉಳಿವಿಗೆ ಕನ್ನಡಿ ಹಿಡಿದ ‘ಡೊಳ್ಳು’ ಸಿನಿಮಾ

Dollu Kannada Film: ‘ಡೊಳ್ಳು’ ಸಿನಿಮಾ ಒಂದು ವಿಶೇಷ ಪ್ರಯತ್ನವಾಗಿ ಗಮನ ಸೆಳೆಯುತ್ತದೆ. ಮಾಮೂಲಿ ಕಮರ್ಷಿಯಲ್​ ಚಿತ್ರಗಳ ಅಬ್ಬರದ ನಡುವೆ ಜನಪದ ಕಲೆಯ ಬಗ್ಗೆ ಕಾಳಜಿ ಇರುವ ಒಂದು ಉತ್ತಮ ಸಿನಿಮಾವಾಗಿ ಇದು ಗುರುತಿಸಿಕೊಳ್ಳುತ್ತದೆ.

Dollu Movie Review: ಜನಪದ ಕಲೆಗಳ ಅಳಿವು-ಉಳಿವಿಗೆ ಕನ್ನಡಿ ಹಿಡಿದ ‘ಡೊಳ್ಳು’ ಸಿನಿಮಾ
ಡೊಳ್ಳು ಸಿನಿಮಾ ಪೋಸ್ಟರ್​
Follow us
ಮದನ್​ ಕುಮಾರ್​
|

Updated on: Aug 26, 2022 | 4:06 PM

ಚಿತ್ರ: ಡೊಳ್ಳು

ನಿರ್ಮಾಣ: ಅಪೇಕ್ಷಾ ಪುರೋಹಿತ್​, ಪವನ್​ ಒಡೆಯರ್​

ನಿರ್ದೇಶನ: ಸಾಗರ್​ ಪುರಾಣಿಕ್​

ಇದನ್ನೂ ಓದಿ
Image
Dollu Movie: ರಾಷ್ಟ್ರ ಪ್ರಶಸ್ತಿ ಪುರಸ್ಕೃತ ‘ಡೊಳ್ಳು’ ಚಿತ್ರ ವೀಕ್ಷಿಸಿ, ಮೆಚ್ಚುಗೆ ಸೂಚಿಸಿದ ವಿಪಕ್ಷ ನಾಯಕ ಸಿದ್ದರಾಮಯ್ಯ
Image
Dollu Movie: ‘ಡೊಳ್ಳು’ ಚಿತ್ರ ವೀಕ್ಷಿಸಲು ರಾಜ್ಯಪಾಲರಿಗೆ ವಿಶೇಷ ಆಹ್ವಾನ ನೀಡಿದ ಚಿತ್ರತಂಡ
Image
‘ರಾಷ್ಟ್ರ ಪ್ರಶಸ್ತಿ’ ಪುರಸ್ಕೃತ ‘ಡೊಳ್ಳು’ ಚಿತ್ರದ ಮೊದಲ ಹಾಡು ರಿಲೀಸ್​ ಮಾಡಿದ ಡಾಲಿ ಧನಂಜಯ್​
Image
68th National Film Awards: 68ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ; ‘ಡೊಳ್ಳು’ ಕನ್ನಡದ ಅತ್ಯುತ್ತಮ ಚಿತ್ರ

ಪಾತ್ರವರ್ಗ: ಕಾರ್ತಿಕ್​ ಮಹೇ​ಶ್​, ನಿಧಿ ಹೆಗಡೆ, ಬಾಬು ಹಿರಣ್ಣಯ್ಯ, ಶರಣ್ಯ ಸುರೇಶ್​ ಮುಂತಾದವರು.

ಸ್ಟಾರ್​: 3.5 / 5

ನಿರ್ದೇಶಕ ಪವನ್​ ಒಡೆಯರ್​ (Pawan Odeyar) ಅವರು ಪಕ್ಕಾ ಕಮರ್ಷಿಯಲ್​ ಸಿನಿಮಾಗಳ ಮೂಲಕ ಹೆಸರಾದವರು. ಆದರೆ ನಿರ್ಮಾಪಕನಾಗಿ ಅವರ ಚೊಚ್ಚಲ ನಿರ್ಮಾಣದಲ್ಲಿ ಮೂಡಿಬಂದಿರುವ ‘ಡೊಳ್ಳು’ ಸಿನಿಮಾ (Dollu Kannada Film) ಬೇರೆಯದೇ ಪ್ರಕಾರದಲ್ಲಿದೆ. ಈ ಸಿನಿಮಾದಲ್ಲಿ ಮಾಮೂಲಿ ಸಿದ್ಧ ಸೂತ್ರಗಳಿಲ್ಲ. ಪ್ರೇಕ್ಷಕರನ್ನು ಆಹಾ ಓಹೋ ಎನ್ನುವಂತೆ ಮಾಡಬೇಕು ಎಂಬ ಕಮರ್ಷಿಯಲ್​ ಉದ್ದೇಶವೂ ಇಲ್ಲ. ಈ ಸಿನಿಮಾದಲ್ಲಿ ಇರುವುದು ಜನಪದ ಕಲೆಯ ಬಗ್ಗೆ ಇರುವ ಅಪ್ಪಟ ಕಾಳಜಿ. ಅದನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ ನಿರ್ದೇಶಕ ಸಾಗರ್​ ಪುರಾಣಿಕ್ (Sagar Puranik)​. ಮಲೆನಾಡಿನ ಜನಪದ ಕಲೆಯಾದ ಡೊಳ್ಳು ಕುಣಿತದ ಬಗ್ಗೆ ಈ ಸಿನಿಮಾ ಮೂಡಿಬಂದಿದೆ. ಇಂಥ ಕಲೆಯನ್ನು ಉಳಿಸಬೇಕು ಎಂದು ಹಂಬಲಿಸುವ ಜನರ ತಲ್ಲಣ ಈ ಸಿನಿಮಾದಲ್ಲಿ ಅಡಕವಾಗಿದೆ.

ಗ್ರಾಮೀಣ ಜನರ ಜೀವನದಲ್ಲಿ ಜನಪದ ಕಲೆಗಳು ಹಾಸುಹೊಕ್ಕಾಗಿವೆ. ಆದರೆ ಇಂದಿನ ಆಧುನಿಕ ಜೀವನ ಶೈಲಿಯಲ್ಲಿ ಅವುಗಳನ್ನು ಮುಂದುವರಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಕಲೆಯನ್ನೇ ಜೀವನ ಎಂದುಕೊಂಡಿದ್ದ ವ್ಯಕ್ತಿಯೊಬ್ಬನ ಬದುಕಿನಲ್ಲಿ ಆಧುನಿಕತೆ ಮತ್ತು ನಗರ ಸಂಸ್ಕೃತಿಯ ಪ್ರಭಾವ ಹೆಚ್ಚಾದಾಗ ಏನಾಗುತ್ತದೆ ಎಂಬುದನ್ನು ಈ ಸಿನಿಮಾ ವಿವರಿಸುತ್ತದೆ. ಡೊಳ್ಳು ಕುಣಿತವನ್ನೇ ಪರಂಪರಾಗತವಾಗಿ ಕಲಿತು, ಈಗ ಅದನ್ನು ಇಟ್ಟುಕೊಳ್ಳಲೂ ಆಗದೇ, ಸಂಪೂರ್ಣ ಬಿಡಲೂ ಆಗದೆ ಒದ್ದಾಡುವ ಯುವಕನೊಬ್ಬನ ಕಥೆಯನ್ನು ಈ ಸಿನಿಮಾ ವಿವರಿಸುತ್ತದೆ.

ಈ ಸಿನಿಮಾದಲ್ಲಿ ಡೊಳ್ಳು ಕುಣಿತದ ಬಗ್ಗೆ ಮುಖ್ಯವಾಗಿ ಹೇಳಲಾಗಿದೆ ಎಂಬುದು ನಿಜ. ಆದರೆ ಕೇವಲ ಡೊಳ್ಳು ಕುಣಿತಕ್ಕೆ ಮಾತ್ರ ಸೀಮಿತವಾಗದೇ ಯಾವುದೇ ಜಾನಪದ ಕಲೆಗೂ ಈ ಸಿನಿಮಾದಲ್ಲಿ ಹೇಳಿರುವ ವಿಷಯಗಳು ಅನ್ವಯ ಆಗುತ್ತವೆ. ಕಂಸಾಳೆ, ಹುಲಿ ಕುಣಿತ, ಯಕ್ಷಗಾನ, ವೀರಗಾಸೆ, ಸುಗ್ಗಿ ಕುಣಿತ ಸೇರಿದಂತೆ ಎಲ್ಲ ಜನಪದ ಪ್ರಕಾರಗಳಿಗೂ ಈ ಸಿನಿಮಾವನ್ನು ಹೋಲಿಸಿ ನೋಡಬಹುದು. ಜನಪದ ಕಲೆಗಳನ್ನು ಉಳಿಸಿಕೊಳ್ಳಲು ಏನು ಮಾಡಬೇಕು ಎಂಬುದನ್ನು ತಿಳಿಸುವ ಮೂಲಕ ಯುವ ಜನರಲ್ಲಿ ಒಂದು ಬಗೆಯ ಜಾಗೃತಿ ಮೂಡಿಸುವ ಕೆಲಸವನ್ನು ‘ಡೊಳ್ಳು’ ಸಿನಿಮಾ ಮಾಡಿದೆ.

ಈ ರೀತಿಯ ಒಂದು ವಿಶೇಷ ವಸ್ತುವಿಷಯವನ್ನು ಆಯ್ಕೆ ಮಾಡಿಕೊಂಡಿದ್ದರಿಂದಲೇ ‘ಡೊಳ್ಳು’ ಚಿತ್ರಕ್ಕೆ ಮೊದಲ ಮೆಚ್ಚುಗೆ ಸಲ್ಲಬೇಕು. ತಾಂತ್ರಿಕವಾಗಿಯೂ ಸಿನಿಮಾ ಬಹಳ ಅಚ್ಚುಕಟ್ಟಾಗಿ ಮೂಡಿಬಂದಿದೆ. ಡೊಳ್ಳು ಕುಣಿತ ಎಷ್ಟು ಚಂದ ಎಂಬುದನ್ನು ತೋರಿಸುವಂತಹ ಒಂದಷ್ಟು ದೃಶ್ಯಗಳು ಈ ಸಿನಿಮಾದಲ್ಲಿ ಹೈಲೈಟ್​ ಆಗಿವೆ. ಹಳ್ಳಿಯನ್ನು ಬಿಟ್ಟು ನಗರದ ಜೀವನವನ್ನು ಹಂಬಲಿಸುವ ಜನರ ಮನ ಪರಿವರ್ತನೆ ಆಗಬಹುದಾದ ದೃಶ್ಯಗಳನ್ನು ಕೂಡ ನಿರ್ದೇಶಕ ಸಾಗರ್​ ಪುರಾಣಿಕ್​ ಅವರು ತೀವ್ರವಾಗಿ ಕಟ್ಟಿಕೊಡಲು ಪ್ರಯತ್ನಿಸಿದ್ದಾರೆ.

ಮುಖ್ಯ ಪಾತ್ರದಲ್ಲಿ ನಟಿಸಿರುವ ಕಾರ್ತಿಕ್ ಮಹೇಶ್​ ಅವರು ಆ ಪಾತ್ರವನ್ನು ಜೀವಿಸಿದ್ದಾರೆ. ಇನ್ನುಳಿದ ಪಾತ್ರಧಾರಿಗಳು ಕೂಡ ಸಹಜಾಭಿನಯ ನೀಡಿದ್ದಾರೆ. ಅನಂತ್​ ಕಾಮತ್​ ಅವರ ಸಂಗೀತ, ಅಭಿಲಾಷ್​ ಕಲಾಥಿ ಅವರ ಛಾಯಾಗ್ರಹಣದಿಂದ ಚಿತ್ರದ ಮೆರುಗು ಹೆಚ್ಚಿದೆ.

ಇನ್ನು, ಈ ಸಿನಿಮಾದಲ್ಲಿ ಮೈನಸ್​ ಅಂಶಗಳು ಇಲ್ಲವೇ ಇಲ್ಲ ಅಂತ ಹೇಳೋಕಾಗಲ್ಲ. ಕಥಾನಾಯಕನ ಪ್ರೀತಿ-ಪ್ರೇಮದ ದೃಶ್ಯಗಳು ಚಿತ್ರದ ಒಟ್ಟಾರೆ ಆಶಯಕ್ಕೆ ಹೆಚ್ಚೇನೂ ಸಹಕಾರಿ ಆಗಿಲ್ಲ ಎನಿಸುತ್ತದೆ. ಗ್ರಾಮೀಣ ಭಾಗದ ಆಡುಮಾತಿನ ಭಾಷೆಯನ್ನು ಬಳಸಿಕೊಳ್ಳಬಹುದಾಗಿದ್ದ ಅವಕಾಶವನ್ನು ನಿರ್ದೇಶಕರು ಕೈ ಚೆಲ್ಲಿದಂತಿದೆ. ಆ ಬಗ್ಗೆ ಗಮನ ಹರಿಸಿದ್ದರೆ ಸಿನಿಮಾದ ತೂಕ ಇನ್ನಷ್ಟು ಹೆಚ್ಚುತ್ತಿತ್ತು. ಜನಪದ ಕಲೆ ಅಳಿದು ಹೋಗುತ್ತಿದೆ ಎಂಬುದನ್ನು ತೋರಿಸಲು ನಿರ್ದೇಶಕರು ಎಷ್ಟು ಒತ್ತು ನೀಡಿದ್ದಾರೋ ಅಷ್ಟೇ ಮಹತ್ವನ್ನು ಅದರ ಉಳಿವಿಗೆ ಏನು ಪರಿಹಾರ ಎಂಬುನ್ನು ತೋರಿಸಲು ಪ್ರಯತ್ನಿಸಿದ್ದರೆ ಪ್ರೇಕ್ಷಕರಿಗೆ ಹೆಚ್ಚಿನ ಪ್ರೇರಣೆ ಸಿಗುತ್ತಿತ್ತೇನೋ ಎನಿಸುತ್ತದೆ.

ಒಟ್ಟಾರೆಯಾಗಿ ‘ಡೊಳ್ಳು’ ಸಿನಿಮಾ ಒಂದು ವಿಶೇಷ ಪ್ರಯತ್ನವಾಗಿ ಗಮನ ಸೆಳೆಯುತ್ತದೆ. ಮಾಮೂಲಿ ಕಮರ್ಷಿಯಲ್​ ಚಿತ್ರಗಳ ಅಬ್ಬರದ ನಡುವೆ ಜನಪದ ಕಲೆಯ ಬಗ್ಗೆ ಕಾಳಜಿ ಇರುವ ಒಂದು ಉತ್ತಮ ಸಿನಿಮಾವಾಗಿ ಇದು ಗುರುತಿಸಿಕೊಳ್ಳುತ್ತದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಹುಬ್ಬಳ್ಳಿ ಜನರ ಸಮಸ್ಯೆಗಳಿಗೆ ಜನಪ್ರತಿನಿಧಿಗಳಿಂದ ನೀರಸ ಪ್ರತಿಕ್ರಿಯೆ
ಮೋದಿ ಸರ್ಕಾರದ ಆಡಳಿತ ವೈಖರಿ, ಜನಾಭಿಪ್ರಾಯ ಸಂಗ್ರಹಕ್ಕೆ ಜನ್ ಮನ್ ಸಮೀಕ್ಷೆ
ಮೋದಿ ಸರ್ಕಾರದ ಆಡಳಿತ ವೈಖರಿ, ಜನಾಭಿಪ್ರಾಯ ಸಂಗ್ರಹಕ್ಕೆ ಜನ್ ಮನ್ ಸಮೀಕ್ಷೆ
ಹುಲಿಯ ನಿರ್ಭೀತ ನಡಿಗೆ, ಗತ್ತು ನೋಡಿ ನೀವೂ ರೋಮಾಂಚಿತರಾಗುತ್ತೀರಿ!
ಹುಲಿಯ ನಿರ್ಭೀತ ನಡಿಗೆ, ಗತ್ತು ನೋಡಿ ನೀವೂ ರೋಮಾಂಚಿತರಾಗುತ್ತೀರಿ!
ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ
ಭಾರಿ ಮಳೆ, ಕಾರವಾರ ಕೆಎಸ್ಆರ್​ಟಿಸಿ ಡಿಪೋ ಜಲಾವೃತ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಮೂಲ ನಕ್ಷತ್ರದಲ್ಲಿ ಚಂದ್ರ ಸಂಚಾರ: ಈ ದಿನದ ರಾಶಿ ಭವಿಷ್ಯ ಇಲ್ಲಿ ನೋಡಿ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ಇಡಿ ದಾಳಿ ಅಂತ್ಯ: ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಸಂಸದ ತುಕಾರಾಂ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
ನಿಧಿಮಾ ಪಾತ್ರದ ಜೊತೆ ಹೋಲಿಕೆ: ‘ಕರ್ಣ’ ಸೀರಿಯಲ್ ನಟಿ ಭವ್ಯಾಗೆ ಸಖತ್ ಖುಷಿ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
10 ಜನರ ಡೆತ್​ ಆಡಿಟ್ ಬಹಿರಂಗ: ಈಗಿರುವ ಕೊವಿಡ್ ಸೌಮ್ಯ ಸ್ವಭಾವದ್ದು: ಸಚಿವ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾರ್ತಿಕ್ ಮಹೇಶ್​ಗೆ ನಾನು ಜೋಡಿ ಅಲ್ಲ: ಗಾಸಿಪ್​ಗಳಿಗೆ ತೆರೆ ಎಳೆದ ನಮ್ರತಾ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ
ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ: ಸೋಮಣ್ಣ