Vritta Movie Review: ಹಣದ ಹಿಂದೆ ಬಿದ್ದವರ ಆತ್ಮಾವಲೋಕನವೇ ‘ವೃತ್ತ’

- Time - 112 Minutes
- Released - August 01, 2025
- Language - Kannada
- Genre - Mystery, Thriller
ಕನ್ನಡದಲ್ಲಿ ಸರ್ವೈವಲ್ ಸಿನಿಮಾಗಳ ಸಂಖ್ಯೆ ಕಡಿಮೆ ಎಂದೇ ಹೇಳಬಹುದು. ಪ್ರಮುಖ ಪಾತ್ರಗಳು ಜೀವ ಉಳಿಸಿಕೊಳ್ಳಲು ಕಷ್ಟಪಡುವ ಕಹಾನಿ ಇರುವ ಸಿನಿಮಾಗಳು ಕನ್ನಡದಲ್ಲಿ ಅಲ್ಲೊಂದು ಇಲ್ಲೊಂದು ಬಂದಿವೆ. ಅಂಥ ಸಿನಿಮಾಗಳ ಸಾಲಿಗೆ ‘ವೃತ್ತ’ ಸಿನಿಮಾ (Vritta Kannada Movie) ಕೂಡ ಸೇರ್ಪಡೆ ಆಗುತ್ತದೆ. ಈ ಸಿನಿಮಾದಲ್ಲಿ ಒಂದು ಸರಳವಾದ ಕಥೆ ಇದೆ. ಅದರ ಜೊತೆಗೆ ಒಂದಷ್ಟು ಫಿಲಾಸಫಿಕಲ್ ಅಂಶಗಳನ್ನು ತೋರಿಸಲಾಗಿದೆ. ಸಾಧ್ಯವಾದಷ್ಟು ಥ್ರಿಲ್ಲಿಂಗ್ ಆಗಿಯೂ ನಿರೂಪಣೆ ಮಾಡಲಾಗಿದೆ. ಮುಂದೇನಾಗುತ್ತದೆ ಎಂಬ ಕೌತುಕವನ್ನು ಕೊನೆಯ ತನಕ ಕಾಪಾಡಿಕೊಂಡು ಹೋಗುವ ಗುಣ ‘ವೃತ್ತ’ ಸಿನಿಮಾಗೆ ಇದೆ.
ಲಿಖಿತ್ ಕುಮಾರ್ ಅವರು ‘ವೃತ್ತ’ ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ. ಮಾಹಿರ್ ಮುಹಿಯುದ್ದೀನ್, ಹರಿಣಿ ಸುಂದರರಾಜನ್, ಚೈತ್ರಾ ಆಚಾರ್, ಶ್ರೀನಿವಾಸ್ ಪ್ರಭು, ಶಶಿಕಲಾ, ಮಾಸ್ಟರ್ ಅನುರಾಗ್ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಆದರೆ ಇಡೀ ಸಿನಿಮಾದಲ್ಲಿ ಆವರಿಸಿಕೊಂಡಿರುವುದು ಮಾಹಿರ್ ಒಬ್ಬರೇ. ಇನ್ನುಳಿದ ಪಾತ್ರಗಳು ಅಲ್ಲೊಂದು ಇಲ್ಲೊಂದು ದೃಶ್ಯಗಳಲ್ಲಿ ಮಾತ್ರ ಬಂದು ಹೋಗುತ್ತವೆ.
‘ವೃತ್ತ’ ಸಿನಿಮಾದ ಕಹಾನಿ ಹೀಗಿದೆ.. ಕಥಾನಾಯಕ ಸಿದ್ದಾರ್ಥ್ಗೆ ಹಣದ ಸಮಸ್ಯೆ ಎದುರಾಗುತ್ತದೆ. ಒಂದು ದಿನದೊಳಗೆ 30 ಲಕ್ಷ ರೂಪಾಯಿ ಹೊಂದಿಸಬೇಕಾದ ಪರಿಸ್ಥಿತಿ ಬರುತ್ತದೆ. ಹಣ ತರಲು ಬೆಂಗಳೂರಿನಿಂದ ಪುಷ್ಪಗಿರಿಗೆ ಆತ ಪ್ರಯಾಣ ಬೆಳೆಸುತ್ತಾನೆ. ದಟ್ಟ ಕಾಡಿನ ನಡುವೆ ಇರುವ ರಸ್ತೆಯಲ್ಲಿ ಒಂದು ಅಪಘಾತ ಸಂಭವಿಸುತ್ತದೆ. ಅಪಘಾತ ಆದವರಿಗೆ ಸಹಾಯ ಮಾಡಬೇಕೋ ಅಥವಾ ಹಣ ತರಲು ತಾನು ಮುಂದಕ್ಕೆ ಹೋಗಬೇಕೋ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿ ಸಿದ್ದಾರ್ಥ್ ಸಿಲುಕಿಕೊಳ್ಳುತ್ತಾನೆ. ಮುಂದೇನಾಯ್ತು ಎಂಬುದನ್ನು ಸಿನಿಮಾದಲ್ಲೇ ನೋಡಿ ತಿಳಿಯಬೇಕು.
ಮನುಷ್ಯನ ಜೀವನದಲ್ಲಿ ಬೇರೆ ಎಲ್ಲವೂ ಚೆನ್ನಾಗಿ ಇದ್ದಾಗ ಹಣವೇ ಮುಖ್ಯ ಎನಿಸುತ್ತದೆ. ಹಣದ ಹಿಂದೆ ಎಲ್ಲರೂ ಬೀಳುತ್ತಾರೆ. ದುಡ್ಡು ಗಳಿಸುವ ಸಲುವಾಗಿ ಇತರೆ ಮೌಲ್ಯಗಳನ್ನು ಮರೆಯುತ್ತಾರೆ. ಆದರೆ ಪ್ರಾಣ ಉಳಿಸಿಕೊಳ್ಳಬೇಕು ಎಂಬ ಪರಿಸ್ಥಿತಿ ಬಂದಾಗ ಹಣಕ್ಕಿಂತಲೂ ಬದುಕೇ ಮುಖ್ಯ ಎಂಬ ಸತ್ಯ ಅರಿವಾಗುತ್ತದೆ. ಈ ರೀತಿಯ ಸಂದೇಶವನ್ನು ‘ವೃತ್ತ’ ಸಿನಿಮಾದ ಮೂಲಕ ಹೇಳಲಾಗಿದೆ. ಅದಕ್ಕಾಗಿ ಒಂದು ಅಡ್ವೆಂಚರ್ ಕಥೆಯನ್ನು ಬಳಸಿಕೊಳ್ಳಲಾಗಿದೆ.
ಈ ಸಿನಿಮಾದ ಬಹುಪಾಲು ಕಹಾನಿ ರಾತ್ರಿ ವೇಳೆ ನಡೆಯುತ್ತದೆ. ಗೌತಮ್ ಕೃಷ್ಣ ಅವರ ಛಾಯಾಗ್ರಹಣ ಗಮನ ಸೆಳೆದಿದೆ. ಕಥೆಯ ಥ್ರಿಲ್ ಹೆಚ್ಚಿಸುವ ರೀತಿಯಲ್ಲಿ ಸಂಗೀತ ನೀಡಿದ್ದಾರೆ ಆಂಟನಿ ಎಂ.ಜಿ. ಮತ್ತು ಹರಿ ಕ್ರಿಶಾಂತ್. 1 ಗಂಟೆ 52 ನಿಮಿಷ ಅವಧಿ ಇರುವ ಈ ಸಿನಿಮಾದಲ್ಲಿ ಕೆಲವು ಮುಖ್ಯವಾದ ಸಂದೇಶ ನೀಡಲು ಪ್ರಯತ್ನಿಸಲಾಗಿದೆ.
ಇದನ್ನೂ ಓದಿ: Ekka Movie Review: ಕಮರ್ಷಿಯಲ್ ಚೌಕಟ್ಟಿನೊಳಗೆ ಮನರಂಜನೆ ನೀಡುವ ‘ಎಕ್ಕ’
ಸರ್ವೈವಲ್ ಸಿನಿಮಾಗಳನ್ನು ಇಷ್ಟಪಡುವವರಿಗೆ ‘ವೃತ್ತ’ ಹಿಡಿಸುತ್ತದೆ. ಆದರೆ ಎಲ್ಲ ವರ್ಗದ ಪ್ರೇಕ್ಷಕರನ್ನು ಸೆಳೆಯದೇ ಇರಬಹುದು. ಹೆಚ್ಚು ಪಾತ್ರಗಳಿಲ್ಲದೇ ಕಥಾನಾಯಕನೇ ಬಹುಪಾಲು ಸಿನಿಮಾದಲ್ಲಿ ಕಾಣಿಸಿಕೊಳ್ಳುವುದರಿಂದ ಏಕತಾನತೆ ಕಾಡಬಹುದು. ದೊಡ್ಡ ಟ್ವಿಸ್ಟ್ ಬರುವ ತನಕ ಕಾಯುವ ತಾಳ್ಮೆ ಪ್ರೇಕ್ಷಕರಿಗೆ ಇರಬೇಕು. ಇಂಥ ಒಂದಷ್ಟು ಅಂಶಗಳ ನಡುವೆ ಭಿನ್ನ ಪ್ರಯತ್ನವಾಗಿ ‘ಭಿನ್ನ’ ಸಿನಿಮಾ ಮೂಡಿಬಂದಿದೆ.
ನಾಯಕ ನಟ ಮಾಹಿರ್ ಮುಹಿಯುದ್ದೀನ್ ಅವರು ತಮ್ಮ ಪಾತ್ರಕ್ಕೆ ಜೀವ ತುಂಬಿದ್ದಾರೆ. ಮಾನಸಿಕವಾಗಿ ಗೊಂದಲಕ್ಕೆ ಒಳಗಾದ, ಖಿನ್ನತೆಯಲ್ಲಿ ಮುಳುಗಿರುವ ವ್ಯಕ್ತಿಯಾಗಿ ಅವರು ಚೆನ್ನಾಗಿ ನಟಿಸಿದ್ದಾರೆ. ಇನ್ನುಳಿದ ಪಾತ್ರಗಳಿಗೆ ಹೆಚ್ಚು ಸ್ಕ್ರೀನ್ ಸ್ಪೇಸ್ ಇಲ್ಲ. ತಮಗೆ ಸಿಕ್ಕ ಅವಕಾಶವನ್ನು ಮಾಸ್ಟರ್ ಅನುರಾಗ್ ಉತ್ತಮವಾಗಿ ಬಳಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




