KGF: ಕಬಾಲಿ ನಿರ್ದೇಶಕನ ಮಾಸ್ಟರ್​ ಪ್ಲ್ಯಾನ್​: ಬರಲಿದೆ ಮತ್ತೊಂದು ಕೆಜಿಎಫ್..!

| Updated By: ಝಾಹಿರ್ ಯೂಸುಫ್

Updated on: Jun 21, 2022 | 7:59 PM

Pa Ranjith: ಇದೇ ಕಥೆಯನ್ನು ತೆರೆ ಮೇಲೆ ತರಬೇಕೆಂದು ಬಯಸಿದ್ದೆ. ಅಷ್ಟೊತ್ತಿಗೆ ಪ್ರಶಾಂತ್ ನೀಲ್ ಅವರ ಕೆಜಿಎಫ್ ಬಂತು. ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದರೂ, ಅದು ಕೆಜಿಎಫ್ ಕಥೆಯಾಗಿರಲಿಲ್ಲ.

KGF: ಕಬಾಲಿ ನಿರ್ದೇಶಕನ ಮಾಸ್ಟರ್​ ಪ್ಲ್ಯಾನ್​: ಬರಲಿದೆ ಮತ್ತೊಂದು ಕೆಜಿಎಫ್..!
KGF
Follow us on

ಕೆಜಿಎಫ್​...ಈ ಹೆಸರು ಕೇಳಿದ್ರೆ ಸಪ್ತ ಸಾಗರದಾಚೆ ಸಖತ್ ಸೌಂಡ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್ ಚಿತ್ರ ಕಣ್ಮುಂದೆ ಬರುತ್ತೆ. ಈ ಚಿತ್ರದ ಮೂಲಕ ರಾಕಿ ಭಾಯ್​ಗೆ ಹೊಸ ಇಮೇಜ್ ತಂದುಕೊಡುವುದರೊಂದಿಗೆ ನಿರ್ದೇಶಕ ಪ್ರಶಾಂತ್ ನೀಲ್ ಕನ್ನಡ ಚಿತ್ರರಂಗವನ್ನು ಇಡೀ ವಿಶ್ವಕ್ಕೆ ಪರಿಚಯಿಸಿದ್ದರು. ಅಷ್ಟೇ ಅಲ್ಲದೆ ಕೆಜಿಎಫ್ ಚಾಪ್ಟರ್-2 ಮೂಲಕ ವಿಶ್ವ ಬಾಕ್ಸಾಫೀಸ್​ ಅನ್ನು ಕೊಳ್ಳೆ ಹೊಡೆದು ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದಿದ್ದರು. ಇದೀಗ ಕೆಜಿಎಫ್ ಚಿತ್ರಕ್ಕೆ ತನ್ನದೇಯಾದ ಫ್ಯಾನ್ ಫಾಲೋವರ್ಸ್​ ಹುಟ್ಟಿಕೊಂಡಿದೆ. ಅಲ್ಲದೆ ಈ ಚಿತ್ರದ ಮೂರನೇ ಭಾಗವನ್ನು ಎದುರು ನೋಡುತ್ತಿದ್ದಾರೆ. ಈ ನಿರೀಕ್ಷೆಗೆ ಕಿಚ್ಚು ಹಚ್ಚುವಂತೆ ಕೆಜಿಎಫ್ ಚಾಪ್ಟರ್-3 ಚಿತ್ರವನ್ನು ಕೂಡ ಅಭಿಮಾನಿಗಳ ಮುಂದಿಡುವುದಾಗಿ ಹೊಂಬಾಳೆ ಪ್ರೊಡಕ್ಷನ್ ಕೂಡ ತಿಳಿಸಿದೆ. ಇವೆಲ್ಲದರ ನಡುವೆ ಮತ್ತೊಂದು ಕೆಜಿಎಫ್ ಬರಲಿದೆ ಎಂಬ ಸುದ್ದಿಯೊಂದು ಕಾಲಿವುಡ್ ಕಡಲ ಕಿನಾರೆಯಿಂದ ಅಪ್ಪಳಿಸಿದೆ.

ಹೌದು, ಕೆಜಿಎಫ್​ನ ನೈಜ ಕಥೆಯನ್ನು ತಿಳಿಸಲು ಕಾಲಿವುಡ್​ನ ಖ್ಯಾತ ನಿರ್ದೇಶಕ ಪಾ ರಂಜಿತ್ ಟೊಂಕ ಕಟ್ಟಿ ನಿಂತಿದ್ದಾರೆ. ಅದು ಕೂಡ ಬಹುಭಾಷೆಯಲ್ಲಿ ಎಂಬುದು ವಿಶೇಷ. ಯಾರು ಈ ಪಾ ರಂಜಿತ್ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ರಜನಿಕಾಂತ್ ಅಭಿನಯದ ಕಾಲಾ, ಕಬಾಲಿ ಚಿತ್ರಗಳ ನಿರ್ದೇಶಕ. ಸೂಪರ್ ಸ್ಟಾರ್ ರಜನಿಗೆ ಹೊಸ ಇಮೇಜ್ ನೀಡಿದ್ದ ರಂಜಿತ್ ಇದೀಗ ಕೆಜಿಎಫ್ ಮೇಲೆ ಕಣ್ಣಿಟ್ಟಿದ್ದಾರೆ.

ಈ ಹಿಂದೆಯೇ ಕೆಜಿಎಫ್ ಕಥೆಯ ಮೇಲೆ ಪಾ ರಂಜಿತ್ ಚಿತ್ರ ಮಾಡಬೇಕೆಂದು ಬಯಸಿದ್ದರು. ಆ ಬಗ್ಗೆ ಒಂದಷ್ಟು ಮಾಹಿತಿಯನ್ನೂ ಕೂಡ ಕಲೆಹಾಕಿದ್ರಂತೆ. ಕಬಾಲಿ ಚಿತ್ರದ ಬಳಿಕ ಕೆಜಿಎಫ್​ ಚಿತ್ರದ ಚಿತ್ರಕಥೆಯನ್ನೂ ಶುರು ಮಾಡಿದ್ದರು. ಆದರೆ ಆ ಬಳಿಕ ಅದನ್ನು ಕೈಬಿಟ್ಟಿದ್ದರು. ಏಕೆಂದರೆ ಅವರಿಗೆ ಕೆಜಿಎಫ್​ ಒಳಗಿನ ಅಸಲಿ ಕಹಾನಿ ಸಂಪೂರ್ಣವಾಗಿ ತಿಳಿದಿರಲಿಲ್ಲವಂತೆ. ಇದಾದ ಬಳಿಕ ಕೋಲಾರ್ ತಂಗವಯಲ್ ಎನ್ನುವ ಪುಸ್ತಕವನ್ನು ಓದಿದ್ದಾರೆ. ಅವಾಗಲೇ ಗೊತ್ತಾಗಿದ್ದು ಕೆಜಿಎಫ್ ಎನ್ನುವ ಗಣಿಯೊಳಗಿನ ಕತ್ತಲ ಕಹಾನಿ. ಇಡೀ ಕಥೆಯನ್ನು ಓದಿದಾಗ ನನ್ನ ಮೈಜುಮ್ಮೆನಿಸಿಬಿಟ್ಟಿತು ಎಂದು ಪಾ ರಂಜಿತ್ ಅವರೇ ತಿಳಿಸಿದ್ದಾರೆ.

ಇದನ್ನೂ ಓದಿ
Yash Next Movie: ಯಶ್ ಮುಂದಿನ ಚಿತ್ರಕ್ಕೆ ಸೌತ್ ಸುಂದರಿ ನಾಯಕಿ..?
Kabza: ಒಂದಲ್ಲ, ಎರಡಲ್ಲ, ಮೂರಲ್ಲ…ವಿದೇಶಿ ಭಾಷೆಗಳಲ್ಲೂ ಬಿಡುಗಡೆಯಾಗಲಿದೆ ಕಬ್ಜ
Rashmika Mandanna: ಮಿಂಚಿಂಗೊ ಮಿಂಚಿಂಗ್…ಸದ್ಯಕ್ಕಂತು ಕನ್ನಡಕ್ಕಿಲ್ಲ ರಶ್ಮಿಕಾ ಮಂದಣ್ಣ..!
Rakshit Shetty: ನಂಗೆ ಲವ್ ಫೈಲ್ಯುರ್ ಆಗಿಲ್ಲ: ರವಿಚಂದ್ರನ್ ಮುಂದೆ ಮನಬಿಚ್ಚಿದ ರಕ್ಷಿತ್ ಶೆಟ್ಟಿ

ಹೀಗಾಗಿಯೇ ಇದೇ ಕಥೆಯನ್ನು ತೆರೆ ಮೇಲೆ ತರಬೇಕೆಂದು ಬಯಸಿದ್ದಾರೆ. ಅಷ್ಟೊತ್ತಿಗೆ ಪ್ರಶಾಂತ್ ನೀಲ್ ಅವರ ಕೆಜಿಎಫ್ ಬಂತು. ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿದ್ದರೂ, ಅದು ಕೆಜಿಎಫ್ ಕಥೆಯಾಗಿರಲಿಲ್ಲ. ಹೀಗಾಗಿ ಕೆಜಿಎಫ್ ಗಣಿಯೊಳಗಿನ ಸತ್ಯಕಥೆಯನ್ನು ಜನರ ಮುಂದಿಡಲು ಪಾ ರಂಜಿತ್ ನಿರ್ಧರಿಸಿದ್ದಾರೆ. ಅದರಂತೆ ಇದೀಗ ಕೆಜಿಎಫ್ ಅಸಲಿ ಕಹಾನಿಯ ಕೆಲಸಗಳನ್ನು  ಕಾಲಿವುಡ್ ನಿರ್ದೇಶಕರ ತಂಡ ಶುರು ಮಾಡಿದೆ.

ಸದ್ಯ ಪಾ ರಂಜಿತ್ ಸಕಲಕಲಾವಲ್ಲಭನ್ ಕಮಲ್ ಹಾಸನ್ ಅವರ ಚಿತ್ರವೊಂದನ್ನು ಕೈಗೆತ್ತಿಕೊಂಡಿದ್ದಾರೆ. ಈ ಸಿನಿಮಾ ಮುಗಿಯುತ್ತಿದ್ದಂತೆ ಪಾ ರಂಜಿತ್ ಕೆಜಿಎಫ್ ಗಣಿಯೊಳಗಿನ ಅಸಲಿ ಕಹಾನಿಯನ್ನು ಇಡೀ ವಿಶ್ವದ ಮುಂದೆ ತೆರೆದಿಡಲಿದ್ದಾರೆ. ಅಲ್ಲದೆ ಈ ಚಿತ್ರದಲ್ಲಿ ಚಿಯಾನ್ ವಿಕ್ರಮ್ ನಾಯಕನಾಗಿ ಕಾಣಿಸಿಕೊಳ್ಳಲಿದ್ದಾರೆ ಎಂಬ ಸುದ್ದಿಗಳು ಈಗಾಗಲೇ ಕಾಲಿವುಡ್​ನಲ್ಲಿ ಹರಿದಾಡುತ್ತಿದೆ.

ಒಟ್ಟಿನಲ್ಲಿ ಫ್ಯಾಂಟಸಿ ಕೆಜಿಎಫ್ ಅನ್ನು ನೆಚ್ಚಿಕೊಂಡಿರುವ ಸಿನಿಪ್ರಿಯರು ಅಸಲಿ ಕೆಜಿಎಫ್ ಕಹಾನಿ ನೋಡಿ ಇದೇನಾ ತೆರೆಹಿಂದಿನ ಸತ್ಯ ಎಂದು ಹುಬ್ಬೇರಿಸಿದರೂ ಅಚ್ಚರಿಪಡಬೇಕಿಲ್ಲ.

 

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

 

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.