Sign In

By signing in or creating an account, you agree with Associated Broadcasting Company's Terms & Conditions and Privacy Policy.

ರಾಜಮೌಳಿ ಮನೆಯಲ್ಲಿದೆ ಅಂಬೇಡ್ಕರ್ ಅವರ ದೊಡ್ಡ ಚಿತ್ರ: ಹಿಂದಿದೆ ಆಸಕ್ತಿಕರ ಕಾರಣ

SS Rajamouli: ವಿಶ್ವಮಾನ್ಯ ನಾಯಕ ಅಂಬೇಡ್ಕರ್ ಅವರನ್ನು ಕೆಲವು ಸಮುದಾಯ, ವರ್ಗಗಳಿಗೆ ಸೀಮಿತ ಮಾಡಿರುವುದು ಗುಟ್ಟೇನೂ ಅಲ್ಲ. ಅಂಬೇಡ್ಕರ್ ಅವರ ಚಿತ್ರಗಳನ್ನು ಕೆಲವು ಸಮುದಾಯದವರು ಮಾತ್ರವೇ ಮನೆಯಲ್ಲಿ ಇರಿಸಿಕೊಂಡಿರುವುದು ಕಾಣಸಿಗುತ್ತದೆ. ಆದರೆ ಭಾರತದ ನಂಬರ್ 1 ನಿರ್ದೇಶಕ ಎಸ್​ಎಸ್ ರಾಜಮೌಳಿ ಅವರ ಮನೆಯ ಹಾಲ್​ನಲ್ಲಿ ಬೃಹತ್ ಆಗಿರುವ ಅಂಬೇಡ್ಕರ್ ಚಿತ್ರವನ್ನು ತೂಗು ಹಾಕಲಾಗಿದೆ.

ರಾಜಮೌಳಿ ಮನೆಯಲ್ಲಿದೆ ಅಂಬೇಡ್ಕರ್ ಅವರ ದೊಡ್ಡ ಚಿತ್ರ: ಹಿಂದಿದೆ ಆಸಕ್ತಿಕರ ಕಾರಣ
Ss Rajamouli Ambedkar
Follow us
ಮಂಜುನಾಥ ಸಿ.
|

Updated on:Jan 01, 2025 | 4:13 PM

ಡಾ ಬಿಆರ್ ಅಂಬೇಡ್ಕರ್ ವಿಶ್ವದ ಮಹಾನ್ ನಾಯಕರಲ್ಲಿ ಒಬ್ಬರು. ಸಂವಿಧಾನ ರಚಿಸಿ, ಕೋಟ್ಯಂತರ ದಮನಿತರ ಜೀವನಕ್ಕೆ ಶಕ್ತಿ ತುಂಬಿದ ಮಹನೀಯರು. ಇಷ್ಟಾಗಿಯೂ ಅಂಬೇಡ್ಕರ್ ಅವರನ್ನು ಕೆಲವು ಸಮುದಾಯ, ವರ್ಗಕ್ಕೆ ಸೀಮಿತ ಮಾಡಲಾಗಿದೆ. ಭಾರತದಲ್ಲಿ ಹಲವು ಕಡೆಗಳಲ್ಲಿ ಅಂಬೇಡ್ಕರ್ ಅವರ ಪುತ್ಥಳಿಗಳು, ಸರ್ಕಾರಿ ಕಚೇರಿಗಳಲ್ಲಿ, ಶಾಲಾ-ಕಾಲೇಜುಗಳಲ್ಲಿ ಚಿತ್ರಗಳು ನೋಡಲು ಸಿಗುತ್ತವೆ. ಆದರೆ ಅಂಬೇಡ್ಕರ್ ಅವರ ಚಿತ್ರಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವವರ ಸಂಖ್ಯೆ ತೀರ ವಿರಳ. ಅದಕ್ಕೆ ಕೆಲವು ‘ಸಾಮಾಜಿಕ ಕಾರಣ’ಗಳು ಇರಬಹುದು. ಆದರೆ ಭಾರತದ ಖ್ಯಾತ ನಿರ್ದೇಶಕ ಎಸ್​ಎಸ್ ರಾಜಮೌಳಿ ಅವರ ಮನೆಯಲ್ಲಿ ಅಂಬೇಡ್ಕರ್ ಅವರ ಬಹು ದೊಡ್ಡ ಚಿತ್ರ ಹಾಕಲಾಗಿದೆ.

ಬಹುತೇಕರಿಗೆ ಗೊತ್ತಿರುವಂತೆ ರಾಜಮೌಳಿ ಅವರ ಕುಟುಂಬ ಒಟ್ಟಿಗೆ ಒಂದೇ ಮನೆಯಲ್ಲಿ ವಾಸಿಸುತ್ತಿದ್ದಾರೆ. ತಂದೆ, ಸಹೊದರರು ಎಲ್ಲರೂ ಬಹುತೇಕ ಒಂದೇ ಮನೆಯಲ್ಲಿ ವಾಸವಿದ್ದಾರೆ. ಆ ಮನೆಯ ಹಾಲ್​ನಲ್ಲಿ ಬಾಗಿಲಿಗೆ ಎದುರಾಗಿರುವ ಗೋಡೆಯ ಮೇಲೆ ಬೃಹತ್ ಆದ ಅಂಬೇಡ್ಕರ್ ಅವರ ಚಿತ್ರವನ್ನು ಹಾಕಲಾಗಿದೆ. ಪುತ್ಥಳಿಗಳಲ್ಲಿ ಇರುವಂತೆ ಒಂದು ಕೈಯಲ್ಲಿ ಪುಸ್ತಕ ಹಿಡಿದು, ಕೈಯೊಂದನ್ನು ಮೇಲಕ್ಕೆತ್ತಿ ದಿಕ್ಕು ತೋರಿಸುವ ಭಂಗಿಯಲ್ಲಿರುವ ಚಿತ್ರ ಅದು.

ಇತ್ತೀಚೆಗೆ ರಾಜಮೌಳಿ ಅವರ ತಂದೆ ಖ್ಯಾತ ಕತೆಗಾರ ವಿಜಯೇಂದ್ರ ಪ್ರಸಾದ್ ಅವರು ‘ಸಿಗ್ನೇಚರ್ ಸ್ಟುಡಿಯೋಸ್’ ಹೆಸರಿನ ತೆಲುಗು ಯೂಟ್ಯೂಬ್ ಚಾನೆಲ್​ ಒಂದಕ್ಕೆ ಸಂದರ್ಶನ ನೀಡಿದ್ದು, ಸಂದರ್ಶನ ಮಾಡಿದ ಸಂದರ್ಶಕಿ ಅಂಬೇಡ್ಕರ್ ಚಿತ್ರ ಹಾಕಿರುವ ಕುರಿತಾಗಿ ಪ್ರಶ್ನೆಯನ್ನು ವಿಜಯೇಂದ್ರ ಅವರಿಗೆ ಕೇಳಿದ್ದಾರೆ. ‘ಸಾಮಾನ್ಯವಾಗಿ ಅಂಬೇಡ್ಕರ್ ಅವರ ಪುತ್ಥಳಿ, ಚಿತ್ರಗಳನ್ನು ಕೆಲವು ಏರಿಯಾ ಅಥವಾ ಕೆಲವು ಸಮುದಾಯದ ಮನೆಗಳಲ್ಲಿ ಮಾತ್ರ ನೋಡಲು ಸಿಗುತ್ತವೆ ಆದರೆ ನೀವು ಹಾಲ್​ ನಲ್ಲಿ ಅಷ್ಟು ದೊಡ್ಡ ಚಿತ್ರವನ್ನು ಹಾಕಿಕೊಂಡಿದ್ದೀರಲ್ಲ ಕಾರಣ ಏನು?’ ಎಂದು ಪ್ರಶ್ನೆ ಮಾಡಿದ್ದಾರೆ.

ಇದನ್ನೂ ಓದಿ:ಎಸ್​ಎಸ್​ ರಾಜಮೌಳಿ ಜನ್ಮದಿನ; ಅವರ ನೆಟ್​ವರ್ತ್​ ಎಷ್ಟು ಕೋಟಿ ರೂಪಾಯಿ?

ಇದಕ್ಕೆ ನೇರವಾಗಿ ಉತ್ತರಿಸಿದ ವಿಜಯೇಂದ್ರ ಪ್ರಸಾದ್, ‘ನನಗೆ ಆ ವ್ಯಕ್ತಿ ಎಂದರೆ ಬಹಳ ಇಷ್ಟ. ಯಾಕೆ ಇಷ್ಟ ಎಂದು ವಿವರಿಸಲಾಗದು ಆದರೆ ಆ ವ್ಯಕ್ತಿ ಎಂದರೆ ನನಗೆ ಬಹಳ ಇಷ್ಟ. ಆ ವ್ಯಕ್ತಿ ಬಹಳ ಅರ್ಹ ಸಹ’ ಎಂದಿದ್ದಾರೆ. ಮುಂದುವರೆದು ಮಾತನಾಡಿ, ‘2012 ರಲ್ಲಿ ಹಿಸ್ಟರಿ ಮತ್ತು ಸಿಎನ್​ಎನ್​ ಚಾನೆಲ್​ನವರು ಸ್ವಾತಂತ್ರ್ಯೋತ್ತರ ಭಾರತದ ಮಹಾನ್ ವ್ಯಕ್ತಿ ಯಾರೆಂದು ಸರ್ವೆ ಮಾಡಿದರು ಅದರಲ್ಲಿ ಮೊದಲ ಸ್ಥಾನ ಅಂಬೇಡ್ಕರ್ ಅವರಿಗೆ ಬಂತು, ಎರಡನೇ ಸ್ಥಾನ ಅಬ್ದುಲ್ ಕಲಾಂ ಅವರಿಗಾಯ್ತು. ನಾನು ಅವರ ಬಗ್ಗೆ ಸಂಶೋಧನೆ ಏನೂ ಮಾಡಿಲ್ಲ. ನನಗೆ ಅವರೆಂದರೆ ಇಷ್ಟ ಹಾಗಾಗಿ ಅವರ ಚಿತ್ರ ಅಲ್ಲಿ ಹಾಕಿದ್ದೇನೆ’ ಎಂದಿದ್ದಾರೆ ವಿಜಯೇಂದ್ರ ಪ್ರಸಾದ್.

ವಿಜಯೇಂದ್ರ ಪ್ರಸಾದ್ ಅವರು ನೀಡಿರುವ ಸಂದರ್ಶನದ ತುಣುಕು ಈಗ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ ವಿಜಯೇಂದ್ರ ಅವರು 2022 ರಲ್ಲಿ ರಾಜ್ಯಸಭಾ ಸದಸ್ಯರಾಗಿಯೂ ಆಯ್ಕೆ ಆಗಿದ್ದಾರೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 4:08 pm, Wed, 1 January 25