AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಂದ್ರಬಾಬು ನಾಯ್ಡು ಬಂಧನ: ಪುತ್ರನಿಗೆ ಧೈರ್ಯ ತುಂಬಿದ ರಜನೀಕಾಂತ್

Rajinikanth: ಚಂದ್ರಬಾಬು ನಾಯ್ಡು ಅವರನ್ನು ಹಗರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿದ್ದು 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಚಂದ್ರಬಾಬು ನಾಯ್ಡು ಅವರ ಹಳೆಯ ಮಿತ್ರ, ನಟ ರಜನೀಕಾಂತ್, ಚಂದ್ರಬಾಬು ನಾಯ್ಡು ಪುತ್ರ ನಾರಾ ಲೋಕೇಶ್​ಗೆ ಕರೆ ಮಾಡಿ ಧೈರ್ಯ ತುಂಬಿದ್ದಾರೆ.

ಚಂದ್ರಬಾಬು ನಾಯ್ಡು ಬಂಧನ: ಪುತ್ರನಿಗೆ ಧೈರ್ಯ ತುಂಬಿದ ರಜನೀಕಾಂತ್
ರಜನೀಕಾಂತ್-ನಾಯ್ಡು
ಮಂಜುನಾಥ ಸಿ.
|

Updated on:Sep 13, 2023 | 6:31 PM

Share

ಆಂಧ್ರ ಪ್ರದೇಶದಲ್ಲಿ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ಮಾಜಿ ಸಿಎಂ ಚಂದ್ರಬಾಬು ನಾಯ್ಡು ಅನ್ನು ಭ್ರಷ್ಟಾಚಾರ ಪ್ರಕರಣದಲ್ಲಿ ಬಂಧಿಸಲಾಗಿದೆ. ತನ್ನ ನಾಯಕನ ಬಂಧನ ಖಂಡಿಸಿ ಟಿಡಿಪಿ ಪಕ್ಷದ ಮುಖಂಡರು, ಸದಸ್ಯರು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. ಈ ನಡುವೆ ಚಂದ್ರಬಾಬು ನಾಯ್ಡು ಗೆಳೆಯರಾಗಿರುವ ನಟ ರಜನೀಕಾಂತ್ (Rajinikanth), ಚಂದ್ರಬಾಬು ನಾಯ್ಡು (Chandrababu Naidu) ಪುತ್ರ ನಾರಾ ಲೋಕೇಶ್​ಗೆ ಕರೆ ಮಾಡಿ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ. ‘ಸುಳ್ಳು ಪ್ರಕರಗಳಿಂದ ಚಂದ್ರಬಾಬು ನಾಯ್ಡು ಶೀಘ್ರವೇ ಹೊರಬರಲಿದ್ದಾರೆ’ ಎಂದು ರಜನೀಕಾಂತ್ ಹೇಳಿರುವುದಾಗಿ ವರದಿಯಾಗಿದೆ.

ನಾರಾ ಲೋಕೇಶ್​ಗೆ ಕರೆ ಮಾಡಿದ್ದ ರಜನೀಕಾಂತ್, ”ನನ್ನ ಗೆಳೆಯ ಚಂದ್ರಬಾಬು ನಾಯ್ಡು ತಪ್ಪು ಮಾಡುವವನಲ್ಲ. ಆತನ ಗುರಿ ಏನಿದ್ದರು ಅಭಿವೃದ್ಧಿ ಮತ್ತು ಜನ ಕಲ್ಯಾಣವಷ್ಟೆ. ಸುಳ್ಳು ಆರೋಪಗಳು, ದುರುದ್ದೇಶಪೂರಿತ ಪ್ರಕರಣಗಳು ಚಂದ್ರಬಾಬು ನಾಯ್ಡುಗೆ ಯಾವುದೇ ಹಾನಿ ಮಾಡಲಾರವು. ಅವರು ಮಾಡಿರುವ ಸತ್​ಕಾರ್ಯಗಳು ಹಾಗೂ ಜನರಿಗೆ ಅವರಿಗೆ ಅವರ ಮೇಲಿರುವ ಪ್ರೀತಿಯೇ ಅವರನ್ನು ಹೊರಗೆ ಕರೆತರಲಿದೆ” ಎಂದಿದ್ದಾರೆ ಎಂದು ತೆಲುಗು ಮಾಧ್ಯಮಗಳು ವರದಿ ಮಾಡಿವೆ.

ಚಂದ್ರಬಾಬು ನಾಯ್ಡು ಹಾಗೂ ರಜನೀಕಾಂತ್ ಹಳೆಯ ಮಿತ್ರರು. ಕೆಲ ತಿಂಗಳ ಹಿಂದಷ್ಟೆ ಚಂದ್ರಬಾಬು ನಾಯ್ಡು ಹಾಗೂ ನಂದಮೂರಿ ಬಾಲಕೃಷ್ಣ ಆಯೋಜನೆ ಮಾಡಿದ್ದ ‘ಎನ್​ಟಿಆರ್ ಶತಮಾನೋತ್ಸವ’ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ರಜನೀಕಾಂತ್ ಚಂದ್ರಬಾಬು ನಾಯ್ಡು ಅನ್ನು ಕೊಂಡಾಡಿದ್ದರು. ಜನರಿಗಾಗಿ ಕೆಲಸ ಮಾಡುತ್ತಾರೆ, 50 ವರ್ಷ ಮುಂದಿನದ್ದು ಈಗಲೇ ಯೋಚನೆ ಮಾಡುತ್ತಾರೆ, ಹೈದರಾಬಾದ್ ಅನ್ನು ಐಟಿ ನಗರವನ್ನಾಗಿ ಮಾಡಿದರು, ಮೊದಲಿನಿಂದಲೂ ಚಂದ್ರಬಾಬು ನಾಯ್ಡು ಜನಾಭಿವೃದ್ಧಿ ಬಗ್ಗೆಯೇ ಮಾತನಾಡುತ್ತಿದ್ದರು, ಈ ಬಾರಿ ಇವರ ಜೊತೆ ನಿಲ್ಲಿರಿ ಎಂದು ಪರೋಕ್ಷವಾಗಿ ನಾಯ್ಡು ಪರವಾಗಿ ಮತ ಚಲಾಯಿಸಿ ಎಂದು ಸಹ ಹೇಳಿದ್ದರು.

ಇದನ್ನೂ ಓದಿ: ಚಂದ್ರಮುಖಿ ಚಿತ್ರೀಕರಣದ ವೇಳೆ, ರಜನೀಕಾಂತ್ ನಟನೆಗೆ ದಂಗಾಗಿದ್ದ ನಿರ್ದೇಶಕ

ಸ್ಕಿಲ್ ಡೆವೆಲೆಪ್​ಮೆಂಟ್ ಕಾರ್ಪೊರೇಷನ್ ಹಗರಣದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಸಿಸಿಡಿಯ ವಿಶೇಷ ತನಿಖಾ ತಂಡ ಬಂಧಿಸಿದೆ. 14 ದಿನಗಳ ಕಾಲ ಚಂದ್ರಬಾಬು ನಾಯ್ಡು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶ ನೀಡಲಾಗಿದೆ. ಹೌಸ್ ಕಸ್ಟಡಿಗೆ ನಾಯ್ಡು ಸಲ್ಲಿಸಿದ್ದ ಅರ್ಜಿಯು ವಜಾ ಆಗಿದ್ದು, ಮುಂದಿನ ಹದಿನಾಲ್ಕು ದಿನಗಳ ಕಾಲ ಚಂದ್ರಬಾಬು ನಾಯ್ಡು ಜೈಲಿನಲ್ಲಿಯೇ ಕಾಲ ಕಳೆಯಬೇಕಿದೆ. ಇನ್ನು ಕೆಲವೇ ತಿಂಗಳಲ್ಲಿ ಆಂಧ್ರ ಪ್ರದೇಶದಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಈ ಸಮಯದಲ್ಲಿ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿರುವುದು ರಾಜಕೀಯ ಬಿರುಗಾಳಿಯನ್ನು ಆಂಧ್ರ ಪ್ರದೇಶದಲ್ಲಿ ಎಬ್ಬಿಸಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 6:19 pm, Wed, 13 September 23