ರಾಮ್ ಚರಣ್ ಶರ್ಟ್ ಹರಿದ ಅಭಿಮಾನಿಗಳು, ಭಾರಿ ನೂಕಾಟ
ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್ ಪರವಾಗಿ ಚುನಾವಣೆ ಪ್ರಚಾರ ಮಾಡಲು ಹೋಗಿದ್ದ ರಾಮ್ ಚರಣ್ ಅಭಿಮಾನಿಗಳ ಕೈಗೆ ಸಿಕ್ಕು ಹೈರಾಣಾಗಿದ್ದಾರೆ. ಅಭಿಮಾನಿಗಳಿಂದ ಮುತ್ತಿಗೆಗೆ ಒಳಗಾಗಿರುವ ರಾಮ್ ಚರಣ್ರ ವಿಡಿಯೋ ವೈರಲ್ ಆಗಿದೆ.

ಸೆಲೆಬ್ರಿಟಿ ಆಗುವುದು ಖುಷಿಯ ವಿಚಾರ, ಸಾಮಾನ್ಯ ಜನರಿಗೆ ಇಲ್ಲದ ಪ್ರಿವಲೆಜ್, ಆಕರ್ಷಣೆ, ಸವಲತ್ತುಗಳು ಸೆಲೆಬ್ರಿಟಿಗಳಿಗೆ ಇರುತ್ತದೆ. ಅದರ ಜೊತೆಗೆ ಸಾಕಷ್ಟು ಸಮಸ್ಯೆಗಳು ಸಹ ಸೆಲೆಬ್ರಿಟಿಗಳಿಗೆ ಇರುತ್ತವೆ. ಸೆಲೆಬ್ರಿಟಿ ಆದ ಬಳಿಕ ಆ ಸ್ಟೇಟಸ್ ಅನ್ನು ಕಾಪಾಡಿಕೊಳ್ಳಲು ಸಾಕಷ್ಟು ತ್ಯಾಗ ಮಾಡಬೇಕಾಗುತ್ತದೆ, ಸಾಕಷ್ಟನ್ನು ಸಹಿಸಿಕೊಳ್ಳಬೇಕಾಗುತ್ತದೆ. ಕೆಲವು ಬಾರಿಯಂತೂ ಯಾಕಾದರೂ ಸೆಲೆಬ್ರಿಟಿ ಆದರೋ ಎನ್ನುವಷ್ಟು ಅಭಿಮಾನಿಗಳು ಸೆಲೆಬ್ರಿಟಿಗಳನ್ನು ಗೋಳಾಡಿಸಿಬಿಡುತ್ತಾರೆ. ಇತ್ತೀಚೆಗೆ ನಟ ರಾಮ್ ಚರಣ್ಗೆ ಇದೇ ರೀತಿಯ ಅನುಭವವಾಗಿದೆ.
ನಟ ರಾಮ್ ಚರಣ್, ತಮ್ಮ ಚಿಕ್ಕಪ್ಪ ಪವನ್ ಕಲ್ಯಾಣ್ ಪರವಾಗಿ ಚುನಾವಣೆ ಪ್ರಚಾರ ಮಾಡಲೆಂದು ಪೀಠಾಪುರಂಗೆ ತೆರಳಿದ್ದರು. ಪವನ್ ಕಲ್ಯಾಣ್ ಪರವಾಗಿ ರೋಡ್ ಶೋಗಳಲ್ಲಿ ಭಾಗಿಯಾದರು. ರಾಮ್ ಚರಣ್ ಜೊತೆಗೆ ಅವರ ತಾಯಿ ಸಹ ಪವನ್ ಕಲ್ಯಾಣ್ ಪರವಾಗಿ ಪ್ರಚಾರ ಮಾಡಿದರು. ರಾಮ್ ಚರಣ್, ಪವನ್ ಕಲ್ಯಾಣ್ ಒಟ್ಟಿಗೆ ಬಂದಿದ್ದನ್ನು ನೋಡಲು ಸಾವಿರಾರು ಮಂದಿ ಅಭಿಮಾನಿಗಳು ಪೀಠಾಪುರಂನಲ್ಲಿ ನೆರೆದಿದ್ದರು. ಚುನಾವಣಾ ಪ್ರಚಾರವಾದ್ದರಿಂದ ದೊಡ್ಡ ಮಟ್ಟಿಗಿನ ಪೊಲೀಸ್ ಭದ್ರತೆ ಇನ್ನಿತರೆಗಳು ರಾಮ್ ಚರಣ್ಗೆ ಇರಲಿಲ್ಲ.
ಇದನ್ನೂ ಓದಿ:ಪದ್ಮ ಅವಾರ್ಡ್ ಬಳಿಕ ಔತಣಕೂಟದಲ್ಲಿ ಭಾಗಿ ಆದ ಚಿರಂಜೀವಿ, ರಾಮ್ ಚರಣ್
ರೋಡ್ ಶೋ ಮಾಡುವ ವೇಳೆ ರಾಮ್ ಚರಣ್ ಅನ್ನು ಅಭಿಮಾನಿಗಳು ಮುತ್ತಿಕೊಂಡರು. ಒಂದು ಹಂತದಲ್ಲಂತೂ ರಾಮ್ ಚರಣ್ ಅಭಿಮಾನಿಗಳಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಟ್ಟರು ಸಹ ಅದು ಸಾಧ್ಯವಾಗಲಿಲ್ಲ. ಅಭಿಮಾನಿಗಳು ರಾಮ್ ಚರಣ್ ಅನ್ನು ತಳ್ಳಿದರು, ನೂಕಿದರು, ಅವರ ಶರ್ಟ್ ಅನ್ನು ಹರಿದರು, ಬಲವಂತದಿಂದ ಮುಟ್ಟುವ ಪ್ರಯತ್ನ ಮಾಡಿದರು. ಇಷ್ಟೆಲ್ಲ ಆದರೂ ಸಹ ರಾಮ್ ಚರಣ್ ಏನೂ ಪ್ರತಿಕ್ರಿಯೆ ನೀಡದೆ ಸಹಿಸಿಕೊಂಡು ಕಾರಿನ ಬಳಿ ಹೋಗಿ ಕುಳಿತುಕೊಂಡರು. ಈ ಘಟನೆಯ ಹಲವು ವಿಡಿಯೋಗಳು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
This is bad. Stardom comes with a heavy price and no privacy #RamCharan
— Haricharan Pudipeddi (@pudiharicharan) May 11, 2024
ರಾಮ್ ಚರಣ್ ತಮಗೆ ಬಹಳ ಇಷ್ಟವಾದ ಬ್ರೌನ್ ಬಣ್ಣದ ಚೌಕಳಿ ಶರ್ಟ್ ಅನ್ನು ಧರಿಸಿ ಪೀಠಾಪುರಂಗೆ ಪ್ರಚಾರಕ್ಕೆ ಬಂದಿದ್ದರು. ಆದರೆ ಅಭಿಮಾನಿಗಳು ಎಳೆದಾಡಿ ಆ ಶರ್ಟ್ ಅನ್ನು ಹರಿದು ಹಾಕಿದ್ದಾರೆ. ಈ ವಿಡಿಯೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅಭಿಮಾನಿಗಳು ವರ್ತಿಸಿದ ರೀತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಲಾಗಿದೆ. ಅಲ್ಲದೆ ರಾಮ್ ಚರಣ್ ಅಂಥಹಾ ದೊಡ್ಡ ಸ್ಟಾರ್ಗೆ ಭದ್ರತೆ ಕೊಡದೇ ಇರುವ ಬಗ್ಗೆಯೂ ಟೀಕೆ ವ್ಯಕ್ತವಾಗಿದೆ.
ರಾಮ್ ಚರಣ್ ಚಿಕ್ಕಪ್ಪ ಪವನ್ ಕಲ್ಯಾಣ್, ಪೀಠಾಪುರಂನಿಂದ ಆಂಧ್ರ ಪ್ರದೇಶ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದಾರೆ. ಪವನ್ ಕಲ್ಯಾಣ್ ಪರವಾಗಿ ರಾಮ್ ಚರಣ್ ಹಾಗೂ ಅವರ ತಾಯಿ ಪ್ರಚಾರ ಮಾಡಿದ್ದಾರೆ. ಇನ್ನೂ ಹಲವು ನಾಯಕ ನಟರುಗಳು, ನಾಯಕಿಯರು ಪವನ್ ಕಲ್ಯಾಣ್ ಪರವಾಗಿ ಪ್ರಚಾರಕ್ಕೆ ಪೀಠಾಪುರಂಗೆ ಬರಲಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




