
ಸಿನಿಮಾ ಬಿಡುಗಡೆಯ ಸಂದರ್ಭದಲ್ಲಿ ನಟ-ನಟಿಯರು ಮತ್ತು ಇಡೀ ಚಿತ್ರತಂಡದವರು ಬಹಳ ಎಚ್ಚರಿಕೆಯಿಂದ ಇರಲು ಪ್ರಯತ್ನಿಸುತ್ತಾರೆ. ಯಾಕೆಂದರೆ, ಅಪ್ಪಿ-ತಪ್ಪಿ ಸಿನಿಮಾ ಹೊರತಾಗಿ ಏನಾದರೂ ಬೇರೆ ವಿಚಾರದ ಬಗ್ಗೆ ಹೇಳಿಕೆ ನೀಡಿದರೆ ಕಿರಿಕ್ ಆಗುವ ಸಾಧ್ಯತೆ ದಟ್ಟವಾಗಿರುತ್ತದೆ. ಒಂದು ವೇಳೆ ವಿವಾದ ಹುಟ್ಟಿಕೊಂಡರೆ ಅದು ಸಿನಿಮಾ ಕಲೆಕ್ಷನ್ ಮೇಲೆ ಪರಿಣಾಮ ಬೀರುತ್ತದೆ. ಈಗ ನಟಿ ಸಾಯಿ ಪಲ್ಲವಿ (Sai Pallavi) ಅವರಿಗೆ ಅಂಥದ್ದೇ ಪರಿಸ್ಥಿತಿ ಎದುರಾಗಿದೆ. ಸಾಮಾನ್ಯವಾಗಿ ಅವರು ವಿವಾದಗಳಿಂದ ದೂರ ಇರಲು ಬಯಸುತ್ತಾರೆ. ಆದರೂ ಕೂಡ ಈಗ ಅವರು ಕಾಶ್ಮೀರಿ ಪಂಡಿತರ ಹತ್ಯೆ ಕುರಿತು ನೀಡಿದ ಹೇಳಿಕೆಯಿಂದ ವಿವಾದ ಹುಟ್ಟಿಕೊಂಡಿದೆ. ಇದು ಅವರ ‘ವಿರಾಟ ಪರ್ವಂ’ (Virata Parvam) ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ಮೇಲೆ ಪರಿಣಾಮ ಬೀರಬಹುದು. ಈ ಸಿನಿಮಾಗೆ ರಾಣಾ ದಗ್ಗುಬಾಟಿ (Rana Daggubati) ಹೀರೋ. ಹಾಗಾಗಿ ಸಾಯಿ ಪಲ್ಲವಿಯ ಹೇಳಿಕೆಯಿಂದ ಅವರಿಗೂ ಬಿಸಿ ಮುಟ್ಟುವ ಸಾಧ್ಯತೆ ಇದೆ.
ಸಾಯಿ ಪಲ್ಲವಿ ಹೇಳಿಕೆ ಏನು?
‘ಆ ಕಾಲದಲ್ಲಿ ಕಾಶ್ಮೀರಿ ಪಂಡಿತರನ್ನು ಹೇಗೆ ಹತ್ಯೆ ಮಾಡಲಾಯಿತು ಎಂದು ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾದಲ್ಲಿ ತೋರಿಸಲಾಗಿದೆ. ಅದನ್ನು ನೀವು ಒಂದು ಧಾರ್ಮಿಕ ಸಂಘರ್ಷ ಎಂದು ನೋಡುವುದಾದರೆ, ಇತ್ತೀಚೆಗೆ ಗೋವು ಸಾಗಿಸುತ್ತಿದ್ದ ಒಬ್ಬ ಮುಸ್ಲಿಂ ಡ್ರೈವರ್ ಮೇಲೆ ಹಲ್ಲೆ ಮಾಡಲಾಯಿತು ಹಾಗೂ ಜೈ ಶ್ರೀರಾಮ್ ಎಂದು ಹೇಳುವಂತೆ ಬಲವಂತ ಮಾಡಲಾಯಿತು. ಈ ಎರಡು ಘಟನೆಗಳ ನಡುವೆ ವ್ಯತ್ಯಾಸ ಎಲ್ಲಿದೆ? ನಾವು ಒಳ್ಳೆಯ ಮನುಷ್ಯರಾಗಿರಬೇಕು’ ಎಂದು ಸಾಯಿ ಪಲ್ಲವಿ ಹೇಳಿದ್ದಾರೆ. ಈ ಹೇಳಿಕೆಗೆ ಅನೇಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.
ಇಂದು (ಜೂನ್ 17) ‘ವಿರಾಟ ಪರ್ವಂ’ ರಿಲೀಸ್:
ರಾಣಾ ದಗ್ಗುಬಾಟಿ ನಟಿಸಿರುವ ‘ವಿರಾಟ ಪರ್ವಂ’ ಸಿನಿಮಾ ಇಂದು ರಿಲೀಸ್ ಆಗುತ್ತಿದೆ. ನಕ್ಸಲೈಟ್ ಪಾತ್ರದಲ್ಲಿ ಅವರು ಕಾಣಿಸಿಕೊಂಡಿದ್ದಾರೆ. ನೈಜ ಘಟನೆಗಳನ್ನು ಆಧರಿಸಿ ಈ ಸಿನಿಮಾ ಮೂಡಿಬಂದಿದೆ. ಟ್ರೇಲರ್ಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಆದರೆ ಇದೇ ಸಮಯಕ್ಕೆ ಸರಿಯಾಗಿ ಸಾಯಿ ಪಲ್ಲವಿ ಅವರು ಕಾಶ್ಮೀರಿ ಪಂಡಿತರ ಹತ್ಯೆ ಬಗ್ಗೆ ನೀಡಿರುವ ಹೇಳಿಕೆಯು ವಿವಾದದ ಸ್ವರೂಪ ಪಡೆದುಕೊಂಡಿದೆ. ಹಾಗಾಗಿ ಒಂದಷ್ಟು ಜನರು ‘ವಿರಾಟ ಪರ್ವಂ’ ಚಿತ್ರವನ್ನು ಬಹಿಷ್ಕರಿಸುವ ಸಾಧ್ಯತೆ ಇದೆ. ಇದರಿಂದ ರಾಣಾ ದಗ್ಗುಬಾಟಿಗೆ ನಷ್ಟ ಆಗಲಿದೆ.
ಬೆಂಬಲ ನೀಡಿದ ನಟಿ ರಮ್ಯಾ:
ಸಾಯಿ ಪಲ್ಲವಿಯ ಹೇಳಿಕೆ ಕುರಿತು ಪ್ರಕಟ ಆಗಿರುವ ಒಂದು ವರದಿಯನ್ನು ನಟಿ ರಮ್ಯಾ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ‘ಶೋಷಣೆಗೆ ಒಳಗಾದವರನ್ನು ರಕ್ಷಿಸಬೇಕು’ ಎಂದು ಸಾಯಿ ಪಲ್ಲವಿ ಹೇಳಿರುವ ಮಾತನ್ನು ರಮ್ಯಾ ಪುನಃ ಬರೆದುಕೊಂಡಿದ್ದಾರೆ. ಸತ್ಯ ನುಡಿಯುವ ಧೈರ್ಯ ತೋರಿದ್ದಕ್ಕೆ ತಮ್ಮ ಪ್ರಶಂಸೆ ಇದೆ ಎಂಬರ್ಥದಲ್ಲಿ ಅವರು ಟ್ವೀಟ್ ಮಾಡಿದ್ದಾರೆ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.