AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಿರ್ದೇಶಕನ ಕಿಡ್ನಾಪ್, ಹಲ್ಲೆ: ‘ಭೀಮ’ ಚಿತ್ರ ನಟಿ ಸೇರಿ 11 ಜನ ಜೈಲುಪಾಲು

ಸಿನಿಮಾ ನಿರ್ದೇಶಕನೊಬ್ಬನನ್ನು ಕಿಡ್ನಾಪ್ ‌ಮಾಡಿ ಮನಬಂದಂತೆ ಹಲ್ಲೆ ಮಾಡಿ ಆತನ‌ ಬಳಿ ಇದ್ದ ಚಿನ್ನಾಭರಣ, ಹಣ ದೋಚಿದ್ದ ಹನ್ನೊಂದು ಜನರ ಗ್ಯಾಂಗ್ ಅನ್ನು ಆಡುಗೋಡಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ದುನಿಯಾ ವಿಜಯ್ ಅಭಿನಯದ ‘ಭೀಮ’‌ ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯಾ ಸೇರಿ ಹನ್ನೊಂದು ಜನರನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

ನಿರ್ದೇಶಕನ ಕಿಡ್ನಾಪ್, ಹಲ್ಲೆ: ‘ಭೀಮ’ ಚಿತ್ರ ನಟಿ ಸೇರಿ 11 ಜನ ಜೈಲುಪಾಲು
Aishwarya, Anish
ಪ್ರಜ್ವಲ್​ ಕುಮಾರ್ ಎನ್​ ವೈ
| Edited By: |

Updated on: Feb 26, 2026 | 6:32 PM

Share

ಅವ್ರೆಲ್ಲಾ ಕನ್ನಡ ಚಿತ್ರರಂಗದಲ್ಲಿ ಬೆಳೆಯಬೇಕು ಅಂದುಕೊಂಡಿದ್ದವರು. ಕಿರುಚಿತ್ರ, ಇವೆಂಟ್​ಗಳು ಮಾಡಿ ಒಂದು ಹಂತಕ್ಕೆ ಬಂದಿದ್ದರು. ಒಟಿಟಿಗೆ ಸಿನಿಮಾ ಮಾಡುವ ಹಂತಕ್ಕೂ ಬಂದಿದ್ದರು. ಒಂದು ಹೊಸ‌ ಸಿನಿಮಾವನ್ನೂ ಶುರು ಮಾಡಿದ್ರು. ಅದನ್ನು ಮುಗಿಸಿದ್ರೆ ಪ್ರೊಮೋಷನ್, ಥಿಯೇಟರ್, ಜನ ಅಂತಾ ಓಡಾಡ್ಬೇಕಿತ್ತು. ಆದರೆ ಈಗ ತಾವು ಮಾಡಿದ ತಪ್ಪಿಗೆ ಜೈಲು ಸೇರಿದ್ದಾರೆ. ಸಣ್ಣ ಕಿರಿಕ್​ನಿಂದ ತಮ್ಮದೇ ತಂಡದ ಡೈರೆಕ್ಟರ್​ನ ಕಿಡ್ನಾಪ್ (Kidnap) ಮಾಡಿ ಪರಪ್ಪನ ಅಗ್ರಹಾರ ಜೈಲುಪಾಲಾಗಿದ್ದಾರೆ. ದುನಿಯಾ ವಿಜಯ್ ಅಭಿನಯದ ‘ಭೀಮ’ (Bheema) ಸಿನಿಮಾದಲ್ಲಿ ನಟಿಸಿದ್ದ ನಟಿಯೋರ್ವಳು ಸೇರಿ 11 ಜನರನ್ನ ಪೊಲೀಸರು ಬಂಧಿಸಿದ್ದಾರೆ.

ಅಂದ್ಹಾಗೆ, ಈ ಗ್ಯಾಂಗ್​ನಿಂದ ಕಿಡ್ನಾಪ್ ಆಗಿದ್ದ ನಿರ್ದೇಶಕನ ಹೆಸರು ಅನೀಶ್. ‘ಭರವಸೆಯೇ ಜೀವನ’ ಎಂಬ ಶಾರ್ಟ್ ಮೂವಿ ಮಾಡಿದ್ದ. ಆದರೆ ಅದು ಎಲ್ಲಿಯೂ ರಿಲೀಸ್ ಆಗಿಲ್ಲ. ಈ ಅನೀಶ್ ಶಾರ್ಟ್ ಮೂವಿಗಳನ್ನ ನಿರ್ದೇಶನ ಮಾಡುವಾಗ ಈತನ‌ ಜೊತೆ ಒಂದು ತಂಡವೂ ಇತ್ತು. ಇವೆಂಟ್​​ಗಳನ್ನ ನಡೆಸುತಿದ್ದ ಆಶೀರ್ವಾದ್ ಎಂಬಾತ ಹಾಗೂ ದುನಿಯಾ ವಿಜಯ್ ಅವರ ‘ಭೀಮಾ’ ಸಿನಿಮಾದಲ್ಲಿ ನಟಿಸಿದ್ದ ಐಶ್ವರ್ಯ ಎಂಬಾಕೆ ಸೇರಿ 11 ಜನ ಒಂದು ತಂಡ ಆಗಿದ್ದರು.

ಎಲ್ಲರಿಗೂ ಸಿನಿಮಾ ಮಾಡಬೇಕು. ಸ್ಟ್ಯಾಂಡ್ ಆಗಬೇಕು ಅನ್ನೋ ಛಲ ಹೊಂದಿದ್ದರು. ಎಲ್ಲರದ್ದೂ ಒಂದೇ ಕನಸಾಗಿರೋದ್ರಿಂದ ಕೈ ಜೋಡಿಸಿದ್ರು. ಹೊಸ ಸಿನಿಮಾ ಮಾಡೋಕೆ ತಯಾರಿ ಮಾಡಿದ್ರು. ‘ಜೀವನದ ಭಾಷೆ’ ಎಂಬ ಸಿನಿಮಾವನ್ನ ಕೂಡ ಶುರು ಮಾಡಿದ್ರು. ಸಿನಿಮಾಗೆ ಆಶೀರ್ವಾದ್ ಐದು ಲಕ್ಷ ಹಣವನ್ನೂ ಹೂಡಿಕೆ ಮಾಡಿದ್ದ. ಆ್ಯಕ್ಟಿಂಗ್ ಇಷ್ಟ ಅಂತಾ ಹೂಡಿಕೆ ಅಷ್ಟೆ ಅಲ್ಲಾ ನಂಗೆ ಕ್ಯಾರೆಕ್ಟರ್ ಬೇಕು ಅಂತಾ ಆಶೀರ್ವಾದ್ ತಿಳಿಸಿದ್ದ. ಸಿನಿಮಾವನ್ನು ಒಟಿಟಿಗೆ ರಿಲೀಸ್ ಮಾಡಬೇಕು ಅಂತಾ ಪ್ಲಾನ್ ಮಾಡಿದ್ರು. ಆದ್ರೆ ಇದ್ದಕ್ಕಿದ್ದಹಾಗೆ ಸಿನಿಮಾ ಸ್ಟಾಪ್ ಆಗಿತ್ತು. ಅಲ್ಲಿಂದಲೇ ಎಲ್ಲರ ಮಧ್ಯೆ ಕಿರಿಕ್ ಶುರುವಾಗಿತ್ತು.

ಸಿನಿಮಾ ನಿಂತಿದ್ದು ಎಲ್ಲರಿಗೂ ಬೇಸರ ತಂದಿತ್ತು. ಸಿನಿಮಾ ಸ್ಟಾಪ್ ಹಿನ್ನೆಲೆಯಲ್ಲಿ ಬೆಂಗಳೂರು ಬಿಟ್ಟ ನಿರ್ದೇಶಕ ಅನೀಶ್ ಮುಂಬೈಗೆ ಶಿಫ್ಟ್ ಆಗಿದ್ದ. ಇತ್ತ ಕ್ಯಾರೆಕ್ಟರ್ ಸಿಗಲಿಲ್ಲ, ಸಿನಿಮಾ ಕೂಡ ಮುಗಿಸಲಿಲ್ಲ. ಹಣವೂ ವಾಪಸ್ಸು ಕೊಟ್ಟಿಲ್ಲಾ ಅಂತಾ ಅನೀಶ್ ಮೇಲೆ ಆಶೀರ್ವಾದ್ ಕೋಪಗೊಂಡಿದ್ದ. ಎಲ್ಲರಿಗೂ ಅರ್ಧಕ್ಕೆ ಕೈ ಕೊಟ್ಟು ಮುಂಬೈಗೆ ಶಿಫ್ಟ್ ಆದ್ನಲ್ಲ ಅಂತಾ ಸಿಟ್ಟಾಗಿದ್ರು. ಹೇಗಾದ್ರು ಮಾಡಿ ವಾಪಸ್ ಕರೆಸ್ಬೇಕು ಅಂತಾ ಕಾಯ್ತಿದ್ರು.

ಇದೇ ಸಮಯಕ್ಕೆ ನಟಿ ಐಶ್ವರ್ಯಾಗೆ ಕಾಲ್ ಮಾಡಿದ್ದ ಅನೀಶ್, ‘ನನ್ನ ಕಾರೊಂದಿದೆ, ಅದನ್ನ ಸೇಲ್ ಮಾಡಬೇಕು’ ಅಂತ ಹೇಳಿದ್ದ. ಈ ವಿಚಾರ ಎಲ್ಲರಿಗೂ ಮುಟ್ಟಿತ್ತು. ಇದೇ ಟೈಮು ಅಂತ ಎಲ್ಲರೂ ಸೇರಿ ಪ್ಲಾನ್ ಮಾಡಿದ್ರು. ಐಶ್ವರ್ಯಾ ಮೂಲಕ ಅನೀಶ್​ಗೆ ಕರೆ ಮಾಡಿಸಿ ಕಾರು ಮಾರಾಟ ಮಾಡಿಸೋದಾಗಿ ಬೆಂಗಳೂರಿಗೆ ಕರೆಸಿದ್ದರು. ಕಳೆದ 9ನೇ ತಾರೀಕು ಆಡುಗೋಡಿ ಠಾಣೆ ವ್ಯಾಪ್ತಿಯ ಒಂದು ಜಾಗಕ್ಕೆ ಕರೆಸಿದ್ದ ಆರೋಪಿಗಳು ಆತನನ್ನ ಕಿಡ್ನಾಪ್ ಮಾಡಿದ್ರು.

ಇದನ್ನೂ ಓದಿ: ಕನ್ನಡ ಚಿತ್ರರಂಗದಲ್ಲಿ ಯಾರಿಗೆ ಸಿಕ್ಕಿದೆ ರಶ್ಮಿಕಾ-ವಿಜಯ್ ಮದುವೆ ಆಹ್ವಾನ?

ಕಾರಿನಲ್ಲಿ ಅನೀಶ್​ನ ಕಿಡ್ನಾಪ್ ಮಾಡಿದ್ದ ಗ್ಯಾಂಗ್ ಸೀದಾ ನಗರದ ಹೊರ ವಲಯಕ್ಕೆ ಕರೆದೊಯ್ದು ಅಲ್ಲೊಂದು ರೂಮ್​ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದ್ರು. ಹಾಕಿ ಸ್ಟಿಕ್, ಕ್ರಿಕೆಟ್ ಸ್ಟಂಪ್​ ನಿಂದ ಹಲ್ಲೆ ಮಾಡಿ ಅನೀಶ್ ಮೈಮೆಲಿದ್ದ ಚಿನ್ನಾಭರಣ ಹಾಗೂ ಹಣ ದೋಚಿದ್ರು. ನಂತರ ಮತ್ತೆ ಕಾರಿಗೆ ಹತ್ತಿಸಿ ತುಮಕೂರಿನ ಮಧುಗಿರಿ ಬೆಟ್ಟದ ಬಳಿಯ ಖಾಲಿ ಜಾಗವೊಂದಕ್ಕೆ ಕರೆದೊಯ್ದು ಅಲ್ಲಿ ಕೂಡ ಹಲ್ಲೆ ಮಾಡಿ ಬಿಟ್ಟೋಗಿದ್ರು. ನಂತರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಅನೀಶ್​ನ ವೈದ್ಯರು ಪ್ರಶ್ನೆ ಮಾಡಿದಾಗ ವಿಚಾರ‌ ಬೆಳಕಿಗೆ ಬಂದಿದೆ. ಕೂಡಲೇ ಡಾಕ್ಟರ್ ಆಡುಗೋಡಿ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡ ಆಡುಗೋಡಿ ಪೊಲೀಸರು ನಟಿ ಐಶ್ವರ್ಯಾ, ನಟ ಆಶೀರ್ವಾದ್ ಸೇರಿ ಗ್ಯಾಂಗ್​ನ ಹನ್ನೊಂದು ಜನರನ್ನ ಅರೆಸ್ಟ್ ಮಾಡಿದ್ದಾರೆ. ಕೃತ್ಯಕ್ಕೆ ಬಳಸಿದ್ದ ಸ್ಟಿಕ್​ಗಳು, ಕಾರು ಹಾಗೂ ದೋಚಿದ್ದ ಹಣ, ಚಿನ್ನಾಭರಣ ವಶಕ್ಕೆ ಪಡೆದು 11 ಜನರನ್ನು ಜೈಲಿಗೆ ಕಳಿಸಿದ್ದಾರೆ. ಸದ್ಯ ತನಿಖೆ ಮುಂದುವರೆದಿದ್ದು ಆರೋಪಿಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us