ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆ.27ಕ್ಕೆ ಮುಂದೂಡಿಕೆ; ಪವಿತ್ರಾ ಗೌಡಗೂ ಸಿಕ್ಕಿಲ್ಲ ಬೇಲ್

| Updated By: ಮದನ್​ ಕುಮಾರ್​

Updated on: Sep 23, 2024 | 4:00 PM

ಜಾಮೀನು ಪಡೆಯಲು ದರ್ಶನ್​ ಮತ್ತು ಪವಿತ್ರಾ ಗೌಡ ಇನ್ನಷ್ಟ ದಿನ ಕಾಯುವುದು ಅನಿವಾರ್ಯ ಆಗಿದೆ. ಅವರಿಬ್ಬರ ಜಾಮೀನು ಅರ್ಜಿ ವಿಚಾರಣೆಯ ದಿನಾಂಕವನ್ನು ಮುಂದೂಡಲಾಗಿದೆ. ಸೆಪ್ಟೆಂಬರ್​ 27ಕ್ಕೆ ದರ್ಶನ್​ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ. ಪವಿತ್ರಾ ಗೌಡ ಜಾಮೀನು ಜಾಮೀನು ಅರ್ಜಿ ವಿಚಾರಣೆ ಸೆ.25ಕ್ಕೆ ಮುಂದೂಡಿಕೆಯಾಗಿದೆ.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಸೆ.27ಕ್ಕೆ ಮುಂದೂಡಿಕೆ; ಪವಿತ್ರಾ ಗೌಡಗೂ ಸಿಕ್ಕಿಲ್ಲ ಬೇಲ್
ಪವಿತ್ರಾ ಗೌಡ, ದರ್ಶನ್​
Follow us on

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿಗಳಾದ ನಟ ದರ್ಶನ್​ ಹಾಗೂ ನಟಿ ಪವಿತ್ರಾ ಗೌಡ ಅವರು ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಆದರೆ ಇದು ಗಂಭೀರ ಪ್ರಕರಣ ಆದ್ದರಿಂದ ಅಷ್ಟು ಸುಲಭಕ್ಕೆ ಜಾಮೀನು ಸಿಗುತ್ತಿಲ್ಲ. ಇತ್ತೀಚೆಗಷ್ಟೇ ದರ್ಶನ್​ ಅವರು ಬೇಲ್​ ಸಲುವಾಗಿ ಅರ್ಜಿ ಸಲ್ಲಿಸಿದ್ದರು. ಅವರ ಜಾಮೀನು ಅರ್ಜಿ ವಿಚಾರಣೆಯನ್ನು ಸೆಪ್ಟೆಂಬರ್​ 27ಕ್ಕೆ ಮುಂದೂಡಲಾಗಿದೆ. ಸದ್ಯ ಅವರು ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿದ್ದಾರೆ. ಎ1 ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ಸೆಪ್ಟೆಂಬರ್​ 25ಕ್ಕೆ ಮುಂದೂಡಿಕೆ ಆಗಿದೆ.

ದರ್ಶನ್ ಮತ್ತು ಪವಿತ್ರಾ ಗೌಡ ಜಾಮೀನಿಗಾಗಿ ಅರ್ಜಿ ಸಲ್ಲಿಸಿರುವ ಹಿನ್ನೆಲೆಯಲ್ಲಿ ಆಕ್ಷೇಪಣೆ ಸಲ್ಲಿಸಲು ಎಸ್​ಪಿಪಿ ಪ್ರಸನ್ನ ಕುಮಾರ್ ಅವರು ಕಾಲಾವಕಾಶ ಕೋರಿದ್ದಾರೆ. ಅದಕ್ಕೆ ನ್ಯಾಯಾಲಯ ಅವಕಾಶ ನೀಡಿದೆ. ವಿಚಾರಣೆಯನ್ನು ಮುಂದೂಡಿ 57ನೇ ಸಿಸಿಹೆಚ್ ನ್ಯಾಯಾಲಯದ ಜಡ್ಜ್ ಜೈಶಂಕರ್ ಆದೇಶ ನೀಡಿದ್ದಾರೆ. ಯಾವಾಗ ಜಾಮೀನು ಸಿಗತ್ತೋ ಎಂಬ ಚಿಂತೆಯಲ್ಲೇ ದರ್ಶನ್​, ಪವಿತ್ರಾ ಗೌಡ ಹಾಗೂ ಇನ್ನಿತರ ಆರೋಪಿಗಳು ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ.

ಇತ್ತೀಚೆಗಷ್ಟೇ ರೇಣುಕಾ ಸ್ವಾಮಿ ಕೊಲೆ ಕೇಸ್​ನ ತನಿಖೆ ಅಂತ್ಯವಾಗಿದ್ದು, ಚಾರ್ಜ್​ಶೀಟ್​ ಕೂಡ ಸಲ್ಲಿಕೆ ಆಗಿದೆ. ಈ ಚಾರ್ಜ್​ಶೀಟ್​ನಲ್ಲಿ ಶಾಕಿಂಗ್​ ಅಂಶಗಳು ಬಹಿರಂಗ ಆಗಿವೆ. ರೇಣುಕಾ ಸ್ವಾಮಿಯ ಕೊಲೆ ನಡೆದಿದ್ದು ಹೇಗೆ, ಯಾರೆಲ್ಲ ಭಾಗಿಯಾಗಿದ್ದರು ಎಂಬಿತ್ಯಾದಿ ವಿವರಗಳು ಚಾರ್ಜ್​ಶೀಟ್​ನಲ್ಲಿ ಇವೆ. ಚಾರ್ಜ್​ಶೀಟ್​ ಸಲ್ಲಿಕೆ ಬಳಿಕ ದರ್ಶನ್​ ಹಾಗೂ ಇತರ ಆರೋಪಿಗಳು ಜಾಮೀನಿಗಾಗಿ ಅರ್ಜಿ ಸಲ್ಲಿಸಿದರು.

ಇದನ್ನೂ ಓದಿ: ‘ದುರ್ವರ್ತನೆ ಬೇಡ’; ಜೈಲಲ್ಲಿರುವ ಆರೋಪಿ ದರ್ಶನ್​ಗೆ ಪತ್ರ ಬರೆದು ವಕೀಲರ ನೀತಿಪಾಠ

ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ಇದ್ದಾಗ ದರ್ಶನ್​ ಅವರು ರಾಜಾತಿಥ್ಯ ಪಡೆದಿದ್ದರು. ಜೈಲಿನ ನಿಯಮಗಳನ್ನ ಉಲ್ಲಂಘನೆ ಮಾಡಿದ್ದಕ್ಕೆ ಸಾಕ್ಷಿ ಎಂಬಂತೆ ಕೆಲವು ಫೋಟೋ ಮತ್ತು ವಿಡಿಯೋಗಳು ಬಹಿರಂಗ ಆಗಿದ್ದವು. ಅವರು ಪ್ರಭಾವಿ ವ್ಯಕ್ತಿ ಆಗಿದ್ದರಿಂದ ಜೈಲಿನೊಳಗೆ ಇದ್ದಾಗಲೇ ಈ ಅಕ್ರಮಗಳನ್ನು ಎಸಗಿದರು. ಬಳಿಕ ಅವರನ್ನು ಬಳ್ಳಾರಿ ಜೈಲಿಗೆ ಶಿಫ್ಟ್​ ಮಾಡಲಾಯಿತು. ಒಂದು ವೇಳೆ ಜಾಮೀನು ಸಿಕ್ಕರೆ ಅವರು ತಮ್ಮ ಪ್ರಭಾವ ಬಳಸಿ ಸಾಕ್ಷಿನಾಶಕ್ಕೆ ಪ್ರಯತ್ನಿಸಬಹುದು. ಈ ಹಿನ್ನೆಲೆಯಲ್ಲಿ ಅವರ ಜಾಮೀನು ಅರ್ಜಿ ವಜಾಗೊಂಡರೂ ಅಚ್ಚರಿ ಇಲ್ಲ.

ಎ16 ಕೇಶವಮೂರ್ತಿಗೆ ಜಾಮೀನು:

ರೇಣುಕಾ ಸ್ವಾಮಿ ಹತ್ಯೆ ಪ್ರಕರಣದಲ್ಲಿ ಎ16 ಆಗಿರುವ ಕೇಶವಮೂರ್ತಿಗೆ ಜಾಮೀನು ಮಂಜೂರು ಮಾಡಲಾಗಿದೆ. ಹೈಕೋರ್ಟ್​ನಿಂದ ಕೇಶವಮೂರ್ತಿಗೆ ಜಾಮೀನು ನೀಡಲಾಗಿದೆ. ತುಮಕೂರು ಜೈಲಿನಲ್ಲಿರುವ 16ನೇ ಆರೋಪಿ ಕೇಶವಮೂರ್ತಿಗೆ ಸದ್ಯಕ್ಕೆ ರಿಲೀಫ್​ ಸಿಕ್ಕಿದೆ. ಇನ್ನುಳಿದ ಆರೋಪಿಗಳು ಜಾಮೀನು ಪಡೆಯಲು ಯತ್ನಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.