ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆ; ದಾಸನಿಗೆ ಮತ್ತೆ ನಿರಾಸೆ

ಜಾಮೀನು ಪಡೆದು ಹೊರಗೆ ಬರಬೇಕು ಎಂದು ಕಾಯುತ್ತಿರುವ ನಟ ದರ್ಶನ್​ಗೆ ಮತ್ತೆ ನಿರಾಸೆ ಆಗಿದೆ. ಜಾಮೀನು ಅರ್ಜಿ ವಿಚಾರಣೆಯನ್ನು ಮುಂದಕ್ಕೆ ಹಾಕಲಾಗಿದೆ. ಅಕ್ಟೋಬರ್​ 4ರಂದು ಜಾಮೀನು ಅರ್ಜಿಯ ವಿಚಾರಣೆ ನಡೆಯಲಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆಗಿರುವ ದರ್ಶನ್​ ಅವರು ಬಳ್ಳಾರಿ ಜೈಲಿನಲ್ಲಿ ದಿನ ಕಳೆಯುತ್ತಿದ್ದಾರೆ.

ದರ್ಶನ್ ಜಾಮೀನು ಅರ್ಜಿ ವಿಚಾರಣೆ ಅ.4ಕ್ಕೆ ಮುಂದೂಡಿಕೆ; ದಾಸನಿಗೆ ಮತ್ತೆ ನಿರಾಸೆ
ದರ್ಶನ್​
Follow us
| Updated By: ಮದನ್​ ಕುಮಾರ್​

Updated on:Sep 30, 2024 | 3:25 PM

ಆದಷ್ಟು ಬೇಗ ದರ್ಶನ್​ ಅವರಿಗೆ ಜಾಮೀನು ಸಿಗಲಿ ಅಂತ ಫ್ಯಾನ್ಸ್​ ಬಯಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಬಳ್ಳಾರಿ ಜೈಲಿನಲ್ಲಿ ಕಂಬಿ ಎಣಿಸುತ್ತಿರುವ ದರ್ಶನ್​ಗೆ ಇಂದು (ಸೆಪ್ಟೆಂಬರ್​ 30) ಬೇಲ್​ ಸಿಗಬಹುದು ಎಂದು ಆಪ್ತರು ನಿರೀಕ್ಷಿಸಿದ್ದರು. ಆದರೆ ಅವರ ಜಾಮೀನು ಅರ್ಜಿ ವಿಚಾರಣೆ ದಿನಾಂಕವನ್ನು ಮುಂದೂಡಲಾಗಿದೆ. ಅಕ್ಟೋಬರ್​ 4ರಂದು ಬೇಲ್​ ಅರ್ಜಿ ವಿಚಾರಣೆ ನಡೆಯಲಿದೆ. ವಾದ ಮಂಡನೆಗೆ ಕಾಲಾವಕಾಶ ಬೇಕು ಎಂದು ದರ್ಶನ್​ ಪರ ವಕೀಲರು ಮನವಿ ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ಅರ್ಜಿ ವಿಚಾರಣೆಯನ್ನು ಮುಂದೂಡಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆ ಅಂತ್ಯವಾಗಿದೆ. ಚಾರ್ಜ್​ಶೀಟ್​ ಸಲ್ಲಿಕೆ ಆದ ಬಳಿಕ ಜಾಮೀನಿಗಾಗಿ ಅರ್ಜಿ ಸಲ್ಲಿಸಲಾಯಿತು. ಕೇಸ್​ಗೆ ಸಂಬಂಧಿಸಿದಂತೆ ಕೆಲವು ಅನುಮಾನಗಳು ಇದ್ದಿದ್ದರಿಂದ ದರ್ಶನ್ ಪರ ವಕೀಲರು ಬಳ್ಳಾರಿ ಜೈಲಿಗೆ ಭೇಟಿ ನೀಡಿ ಮಾತುಕಥೆ ನಡೆಸಿ ಬಂದಿದ್ದರು. ಈಗ ವಾದಮಂಡನೆಗೆ ಕಾಲಾವಕಾಶ ಬೇಕು ಎಂದು ದರ್ಶನ್ ಪರ ವಕೀಲ ಸುನೀಲ್ ಅವರು ಕೋರಿದ್ದಾರೆ.

ಇದನ್ನೂ ಓದಿ: ಬುದ್ಧಿವಾದ ಹೇಳಿದ್ದಕ್ಕೆ ಕತ್ತುಕೊಯ್ದು ಪರಾರಿಯಾದ ದರ್ಶನ್ ಅಭಿಮಾನಿಗಳು

ಸೆಷನ್ಸ್​ ನ್ಯಾಯಾಲಯದಲ್ಲೇ ದರ್ಶನ್​ಗೆ ಜಾಮೀನು ಸಿಗಲಿದೆ ಎಂದು ದರ್ಶನ್​ ಪರ ವಕೀಲರು ಇತ್ತೀಚೆಗೆ ಭರವಸೆ ವ್ಯಕ್ತಪಡಿಸಿದ್ದರು. ಒಂದು ವೇಳೆ ಸೆಷನ್ಸ್​ ಕೋರ್ಟ್​ನಲ್ಲಿ ಬೇಲ್ ಸಿಗದಿದ್ದರೆ ಹೈಕೋರ್ಟ್​​ಗೆ ಅರ್ಜಿ ಸಲ್ಲಿಸಲಾಗುವುದು. ದರ್ಶನ್​ಗೆ ಜಾಮೀನು ಕೊಡಿಸಲು ಪತ್ನಿ ವಿಜಯಲಕ್ಷ್ಮಿ ಅವರು ಕಷ್ಟಪಡುತ್ತಿದ್ದಾರೆ. ದರ್ಶನ್​ ನಟಿಸಬೇಕಿದ್ದ ಸಿನಿಮಾಗಳ ಕೆಲಸಗಳು ನಿಂತಲ್ಲೇ ನಿಂತಿವೆ. ಇತ್ತೀಚೆಗೆ ‘ಡೆವಿಲ್​: ದಿ ಹೀರೋ’ ಸಿನಿಮಾ ತಂಡದವರು ಬಳ್ಳಾರಿ ಜೈಲಿಗೆ ಹೋಗಿ ಬಂದಿದ್ದರು.

ಇದನ್ನೂ ಓದಿ: ದರ್ಶನ್​ಗೆ ಜಾಮೀನು ಕೊಡಬೇಕು ಎಂದು ಕೋರಲು ವಕೀಲರು ನೀಡಿದ ಕಾರಣಗಳೇನು?

ಇದೇ ಪ್ರಕರಣದಲ್ಲಿ ಆರೋಪಿಗಳಾದ ಕೇಶವಮೂರ್ತಿ, ಕಾರ್ತಿಕ್ ಹಾಗೂ ನಿಖಿಲ್ ನಾಯಕ್ ತುಮಕೂರು ಜೈಲಿನಲ್ಲಿ ಇದ್ದಾರೆ. ಈ ಮೂವರಿಗೆ ಒಂದು ವಾರದ ಹಿಂದೆಯೇ ಜಾಮೀನು ನೀಡಲಾಗಿತ್ತು. ಆದರೆ ಇಷ್ಟು ದಿನ ಕಳೆದರೂ ಬಿಡುಗಡೆ ಭಾಗ್ಯ ಸಿಕ್ಕಿಲ್ಲ. ಜಾಮೀನಿಗೆ ಸಂಬಂಧಿಸಿದ ಕಾನೂನು ಪ್ರಕ್ರಿಯೆ ಮುಗಿಯದ ಹಿನ್ನೆಲೆಯಲ್ಲಿ ಈ ಮೂವರು ಇನ್ನೂ ಕೂಡ ಜೈಲಿನಲ್ಲೇ ಕಾಲ ಕಳೆಯುತ್ತಿದ್ದಾರೆ. ಬಿಡುಗಡೆ ಮಾಡಲು ಶ್ಯೂರಿಟಿ ಸಮಸ್ಯೆ ಆಗುತ್ತಿದೆ ಎನ್ನಲಾಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 3:13 pm, Mon, 30 September 24