Darshan on PAN India Cinema: ನಾವು ಕರ್ನಾಟಕ ಜನತೆಗಾಗಿ ಸಿನಿಮಾ ಮಾಡೋದು, ಪ್ಯಾನ್ ಇಂಡಿಯಾಗಾಗಿ ಅಲ್ಲ; ದರ್ಶನ್ ಟಾಂಗ್ ಕೊಟ್ರಾ?
ದರ್ಶನ್ ಅವರು ತಮ್ಮ ಆಪ್ತ ಧನ್ವೀರ್ ನಟನೆಯ ‘ವಾಮನ’ ಚಿತ್ರವನ್ನು ವೀಕ್ಷಿಸಿ ಪ್ರಶಂಸಿಸಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡುತ್ತಾ, ‘ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡುವುದಿಲ್ಲ, ಕರ್ನಾಟಕದ ಜನರಿಗಾಗಿ ಸಿನಿಮಾ ಮಾಡುತ್ತೇವೆ’ ಎಂದು ಹೇಳಿದ್ದಾರೆ. ಈ ಹೇಳಿಕೆಯು ಕನ್ನಡ ಚಿತ್ರರಂಗದಲ್ಲಿ ಚರ್ಚೆಗೆ ಕಾರಣವಾಗಿದೆ .

ನಟ ದರ್ಶನ್ ಆಪ್ತ ಧನ್ವೀರ್ ನಟನೆಯ ‘ವಾಮನ’ ಸಿನಿಮಾ (Vamana Movie) ಇಂದು (ಏಪ್ರಿಲ್ 10) ರಿಲೀಸ್ ಆಗಿದೆ. ಒಂದು ದಿನ ಮುಂಚಿತವಾಗಿ ಅಂದರೆ ಏಪ್ರಿಲ್ 9ರಂದು ದರ್ಶನ್ ಅವರಿಗಾಗಿ ಈ ಚಿತ್ರದ ವಿಶೇಷ ಶೋನ ಆಯೋಜನೆ ಮಾಡಲಾಗಿತ್ತು. ದರ್ಶನ್ ಅವರು ಈ ಚಿತ್ರ ವೀಕ್ಷಿಸಿ ಹೊಗಳಿದ್ದಾರೆ. ಆ ಬಳಿಕ ಮಾತನಾಡಿ, ‘ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿಲ್ಲ, ನಾವು ಮಾಡ್ತಿರೋದು ಕನ್ನಡದ ಜನತೆಗಾಗಿ’ ಎಂದು ಹೇಳಿಕೊಂಡಿದ್ದಾರೆ. ಅವರ ಈ ಹೇಳಿಕೆ ಚರ್ಚೆ ಹುಟ್ಟು ಹಾಕಿದೆ.
‘ವಾಮನ’ ಸಿನಿಮಾ ವೀಕ್ಷಿಸಿದ ಬಳಿಕ ಮಾಧ್ಯಮಗಳ ಜೊತೆ ದರ್ಶನ್ ಅವರು ಮಾತನಾಡಿದ್ದಾರೆ. ‘ವಾಮನ’ ಸಿನಿಮಾನ ವೀಕ್ಷಣೆ ಮಾಡಿ ಎಂದು ಅವರು ಕೋರಿಕೊಂಡಿದ್ದಾರೆ. ‘ಧನ್ವೀರ್ ಹೈಟ್ ಇದಾನೆ. ಎತ್ತರ ಇರುವವರಿಗೆ ಸಾಮಾನ್ಯವಾಗಿ ಮೇಲ್ಭಾಗ ಸಣ್ಣ ಇರುತ್ತದೆ, ಕಾಲು ಉದ್ದ ಇರುತ್ತದೆ. ಅವನು ಸಿನಿಮಾದಲ್ಲಿ ಕಾಲನ್ನು ಚೆನ್ನಾಗಿ ಬಳಕೆ ಮಾಡಿಕೊಂಡಿದ್ದಾನೆ’ ಎಂದು ದರ್ಶನ್ ಹೇಳಿದರು. ಅಂದರೆ ಫೈಟ್ ದೃಶ್ಯಗಳಲ್ಲಿ ಕಾಲಿನ ಬಳಕೆ ಆಗಿದೆ ಎಂಬುದು ಅವರು ಮಾತಿನ ಅರ್ಥ.
‘ನಾವು ಬೇರೆ ಭಾಷೆ ಸಿನಿಮಾ ಮಾಡ್ತಿಲ್ಲ ಅಥವಾ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಾ ಇಲ್ಲ. ಕರ್ನಾಟಕದ ಜನತೆಗೆ, ಇಲ್ಲಿರೋರಿಗೆ, ಇಲ್ಲಿನ ಸಿನಿಮಾಗಳನ್ನೇ ಮಾಡ್ತಿರೋದು. ಅದನ್ನು ವೀಕ್ಷಿಸಿ’ ಎಂದು ದರ್ಶನ್ ಅವರು ಕೋರಿಕೊಂಡಿದ್ದಾರೆ.
ಇದನ್ನೂ ಓದಿ: ಬೆನ್ನು ನೋವಿದ್ದರೂ ಕುಂಟುತ್ತಾ ಬಂದು ‘ವಾಮನ’ ಸಿನಿಮಾ ನೋಡಿದ ದರ್ಶನ್
ದರ್ಶನ್ ಅವರು ‘ನಾವು ಯಾವುದೋ ಪ್ಯಾನ್ ಇಂಡಿಯಾ ಸಿನಿಮಾ ಮಾಡ್ತಿಲ್ಲ’ ಎಂಬ ಹೇಳಿಕೆ ಚರ್ಚೆ ಹುಟ್ಟುಹಾಕಿದೆ. ಅವರು ಯಾರಿಗಾದರೂ ಟಾಂಗ್ ಕೊಡೋಕೆ ಹೀಗೆ ಹೇಳಿದರಾ ಎಂಬ ಪ್ರಶ್ನೆ ಮೂಡೋದು ಸಹಜ. ಆದರೆ, ಹಾಗಲ್ಲ. ದರ್ಶನ್ ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ಪರಭಾಷೆ ಸಿನಿಮಾಗಳನ್ನು ಮಾಡೋದೆ ಇಲ್ಲ ಎಂದು ಯಾವಾಗಲೋ ಶಪಥ ಮಾಡಿಯಾಗಿದೆ. ಅದೇ ರೀತಿ ಅವರು ಯಾವುದನ್ನೂ ಪ್ಯಾನ್ ಇಂಡಿಯಾ ಸಿನಿಮಾಗಳನ್ನು ಮಾಡಿಲ್ಲ. ಕನ್ನಡದ ಜನತೆಗಾಗಿ ತಾವು ಸಿನಿಮಾ ಮಾಡೋದು ಎಂದು ಹೇಳಿಕೊಳ್ಳುತ್ತಾ ಬಂದಿದ್ದಾರೆ. ಈ ಕಾರಣಕ್ಕೆ ದರ್ಶನ್ ಅವರು ಈ ರೀತಿ ಹೇಳಿರಬಹುದು ಎಂದು ಅನೇಕರು ಊಹಿಸಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 7:00 am, Thu, 10 April 25