Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬಳ್ಳಾರಿ ಜೈಲಿನಿಂದ ಹೊರಬಂದ ದರ್ಶನ್: ಪತ್ನಿ ಜತೆ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣ

131 ದಿನಗಳ ಕಾಲ ಜೈಲಿನಲ್ಲಿದ್ದ ದರ್ಶನ್​ಗೆ ಇಂದು (ಅಕ್ಟೋಬರ್​ 30) ಜಾಮೀನಿನ ಮೇಲೆ ಬಿಡುಗಡೆ ಭಾಗ್ಯ ಸಿಕ್ಕಿದೆ. ಜೈಲಿನ ಪ್ರಕ್ರಿಯೆಗಳು ಮುಗಿದಿದ್ದು, ಬಳ್ಳಾರಿ ಕೇಂದ್ರ ಕಾರಾಗೃಹದಿಂದ ಅವರು ಹೊರಬಂದಿದ್ದಾರೆ. ಪತ್ನಿ ವಿಜಯಲಕ್ಷ್ಮಿ ತಂದಿದ್ದ ಐಷಾರಾಮಿ ಕಾರಿನಲ್ಲಿ ದರ್ಶನ್ ಅವರು ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅವರಿಗೆ ಸರ್ಜರಿ ನಡೆಯಲಿದೆ.

ಬಳ್ಳಾರಿ ಜೈಲಿನಿಂದ ಹೊರಬಂದ ದರ್ಶನ್: ಪತ್ನಿ ಜತೆ ಕಾರಿನಲ್ಲಿ ಬೆಂಗಳೂರಿಗೆ ಪ್ರಯಾಣ
ದರ್ಶನ್
Follow us
ಮದನ್​ ಕುಮಾರ್​
|

Updated on: Oct 30, 2024 | 6:26 PM

ರೇಣುಕಾ ಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಅವರಿಗೆ ಮಧ್ಯಂತರ ಜಾಮೀನು ಸಿಕ್ಕಿದೆ. ಅನಾರೋಗ್ಯದ ಕಾರಣದಿಂದ ಅವರು ಜಾಮೀನು ಪಡೆದಿದ್ದಾರೆ. 4 ತಿಂಗಳಿಂದ ಜೈಲಿನಲ್ಲಿ ಕಂಬಿ ಎಣಿಸಿದ್ದ ದರ್ಶನ್ ಅವರಿಗೆ ಈಗ ತಾತ್ಕಾಲಿಕ ರಿಲೀಫ್ ಸಿಕ್ಕಿದೆ. ದರ್ಶನ್​ಗೆ ಕರ್ನಾಟಕ ಹೈಕೋರ್ಟ್​ ಜಾಮೀನು ನೀಡಿದ್ದು, ಬಳ್ಳಾರಿ ಜೈಲಿನಿಂದ ಅವರು ಹೊರಗೆ ಬಂದಿದ್ದಾರೆ. ಬಳ್ಳಾರಿಗೆ ತೆರಳಿರುವ ವಿಜಯಲಕ್ಷ್ಮಿ ಅವರು ಪತಿಯನ್ನು ಬೆಂಗಳೂರಿಗೆ ಕರೆತರುತ್ತಿದ್ದಾರೆ. ಐಷಾರಾಮಿ ಕಾರಿನಲ್ಲಿ ದರ್ಶನ್ ಹಾಗೂ ವಿಜಯಲಕ್ಷ್ಮಿ ಬೆಂಗಳೂರಿಗೆ ಪ್ರಯಾಣ ಮಾಡುತ್ತಿದ್ದಾರೆ.

ಚಾರ್ಜ್​ಶೀಟ್​ ಸಲ್ಲಿಕೆ ಆದ ಬಳಿಕ ದರ್ಶನ್ ಅವರು ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದರು. ಮೊದಲ ಬಾರಿ ವಿಚಾರಣೆ ನಡೆದಾಗ ಅವರ ಅರ್ಜಿ ವಜಾ ಆಗಿತ್ತು. ಆದರೆ ಇತ್ತೀಚೆಗೆ ಅನಾರೋಗ್ಯದ ಕಾರಣ ನೀಡಿ ಅವರು ಹೈಕೋರ್ಟ್​ನಲ್ಲಿ ಜಾಮೀನು ಅರ್ಜಿ ಸಲ್ಲಿಸಿದರು. ಹಿರಿಯ ವಕೀಲ ಸಿ.ವಿ. ನಾಗೇಶ್ ಅವರು ದರ್ಶನ್ ಪರ ವಾದ ಮಾಡಿದರು. ಇಂದು (ಅ.30) ಜಾಮೀನು ಸಿಕ್ಕಿದ್ದು, ದರ್ಶನ್ ಆಪ್ತರಿಗೆ, ಅಭಿಮಾನಿಗಳಿಗೆ ಬಹಳ ಖುಷಿ ಆಗಿದೆ.

ಕೋರ್ಟ್ ಆದೇಶದ ಪ್ರತಿಯನ್ನು ದರ್ಶನ್ ಅವರ ಸಂಬಂಧಿ ಸುಶಾಂತ್ ನಾಯ್ಡು ಅವರು ಬಳ್ಳಾರಿ ಜೈಲಿಗೆ ತಂದಿದ್ದರು. ಜೈಲು ಅಧೀಕ್ಷಕಿ ಲತಾಗೆ ಅವರಿಗೆ ಆದೇಶದ ಪ್ರತಿ ನೀಡಲಾಯಿತು. ಈ ಪ್ರಕ್ರಿಯೆ ನಡೆಯುವಾಗ ಜೈಲಿನ ಹೊರಗೆ ಕಾರಿನಲ್ಲಿ ಕುಳಿತು ವಿಜಯಲಕ್ಷ್ಮಿ ಅವರು ದರ್ಶನ್​ಗಾಗಿ ಕಾಯುತ್ತಿದ್ದರು. ದರ್ಶನ್ ಹೊರಬರುತ್ತಿರುವ ಹಿನ್ನೆಲೆಯಲ್ಲಿ ಅನೇಕ ಅಭಿಮಾನಿಗಳು ಜೈಲಿನ ಮುಂಭಾಗ ಜಮಾಯಿಸಿದ್ದರು. ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ.

ಇದನ್ನೂ ಓದಿ: ದರ್ಶನ್ ಜಾಮೀನು ಪಡೆದ ಬಳಿಕ ಬಳ್ಳಾರಿ ದುರ್ಗಾದೇವಿಗೆ ಪೂಜೆ ಸಲ್ಲಿಸಿದ ವಿಜಯಲಕ್ಷ್ಮಿ

ಬೆನ್ನು ನೋವಿನ ಕಾರಣದಿಂದ ದರ್ಶನ್ ಅವರಿಗೆ ಸರ್ಜರಿಯ ಅವಶ್ಯಕತೆ ಇದೆ ಎಂದು ವೈದ್ಯರು ಸಲಹೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಚಿಕಿತ್ಸೆ ಪಡೆಯಬೇಕಿದೆ. ವಿಚಾರಣಾಧೀನ ಖೈದಿಗೆ ಚಿಕಿತ್ಸೆ ಪಡೆಯುವ ಅವಕಾಶ ಇದೆ. ಹಾಗಾಗಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಲು ದರ್ಶನ್ ನಿರ್ಧರಿಸಿದ್ದಾರೆ. ಒಂದು ದಿನ ಮನೆಯಲ್ಲಿ ಇದ್ದು, ನಂತರ ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಇದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.