ಯಮ ಕರೆದರೂ ಅಮ್ಮನ ಕೆಲಸ ಮಾಡಿ ಹೋಗೋದು ಎಂದಿದ್ದ ದರ್ಶನ್; ಅಂಬಿ ಕುಟುಂಬದ ನಾಮಕರಣ ಶಾಸ್ತ್ರಕ್ಕೆ ಗೈರು
ಅಭಿಷೇಕ್ ಅಂಬರೀಷ್ ಮಗನ ನಾಮಕರಣ ಕಾರ್ಯಕ್ರಮಕ್ಕೆ ದರ್ಶನ್ ಅವರ ಅನುಪಸ್ಥಿತಿಯಿಂದಾಗಿ ಸುಮಲತಾ ಮತ್ತು ದರ್ಶನ್ ನಡುವಿನ ಸಂಬಂಧದ ಬಗ್ಗೆ ಮತ್ತೆ ಚರ್ಚೆಗಳು ಶುರುವಾಗಿವೆ. ಇದಕ್ಕೂ ಮುನ್ನ ದರ್ಶನ್ ಅವರು ಸುಮಲತಾ ಅವರನ್ನು ಮತ್ತು ಅಂಬರೀಷ್ ಕುಟುಂಬದ ಸದಸ್ಯರನ್ನು ಇನ್ಸ್ಟಾಗ್ರಾಮ್ ನಲ್ಲಿ ಅನ್ ಫಾಲೋ ಮಾಡಿದ್ದರು. ಸುಮಲತಾ ಅವರು ಈ ಬಗ್ಗೆ ಸ್ಪಷ್ಟನೆ ನೀಡಿದ್ದರೂ, ದರ್ಶನ್ ಅವರ ಗೈರು ಪ್ರಶ್ನೆಗಳನ್ನು ಹುಟ್ಟುಹಾಕಿದೆ.

‘ನಮ್ಮ ಮನೆಯಲ್ಲಿ ದರ್ಶನ್ ಇಲ್ಲದೆ ಯಾವ ಕಾರ್ಯಕ್ರಮ ನಡೆಯಲ್ಲ’- ಈ ಮಾತನ್ನು ಸುಮಲತಾ ಅಂಬರೀಷ್ ಅವರು ಇತ್ತೀಚೆಗೆ ಹೇಳಿದ್ದರು. ದರ್ಶನ್ (Darshan) ಹಾಗೂ ಸುಮಲತಾ ಮಧ್ಯೆ ಯಾವುದೂ ಸರಿ ಇಲ್ಲ ಎಂಬ ಮಾತುಗಳು ಕೇಳಿ ಬಂದಾಗ ಸುಮಲತಾ ಅವರು ಈ ಹೇಳಿಕೆ ನೀಡಿದ್ದರು. ಆದರೆ, ಸುಮಲತಾ ಮನೆಯ ಪ್ರಮುಖ ಕಾರ್ಯಕ್ರಮಕ್ಕೆ ದರ್ಶನ್ ಗೈರಾಗಿದ್ದಾರೆ. ಇದು ಈಗ ಮತ್ತಷ್ಟು ಚರ್ಚೆಗಳನ್ನು ಹುಟ್ಟುಹಾಕಿದೆ. ನಿಜಕ್ಕೂ ದರ್ಶನ್ ಹಾಗೂ ಸುಮಲತಾ ಮಧ್ಯೆ ಯಾವುದೂ ಸರಿ ಇಲ್ಲವೇ ಎನ್ನುವ ಪ್ರಶ್ನೆ ಮೂಡುವಂತೆ ಆಗಿದೆ.
ನಟ ದರ್ಶನ್ ಅವರು ಇನ್ಸ್ಟಾಗ್ರಾಮ್ನಲ್ಲಿ ಸುಮಲತಾ ಸೇರಿದಂತೆ ಕೆಲವೇ ಕೆಲವರನ್ನು ಫಾಲೋ ಮಾಡುತ್ತಿದ್ದರು. ಈ ಪೈಕಿ ಅಂಬರೀಷ್ ಕುಟುಂಬದ ಸುಮಲತಾ, ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಇದ್ದರು. ಎಲ್ಲರನ್ನೂ ದರ್ಶನ್ ಅನ್ಫಾಲೋ ಮಾಡಿದ್ದರು. ದರ್ಶನ್ ಅವರ ಈ ನಡೆ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ಇದೇ ಸಂದರ್ಭದಲ್ಲಿ ಸುಮಲತಾ ಅವರು ಮಾರ್ಮಿಕ ಪೋಸ್ಟ್ಗಳನ್ನು ಮಾಡಿದರು. ಈ ಎರಡೂ ಬೆಳವಣಿಗೆ ಮಧ್ಯೆ ಲಿಂಕ್ ಮಾಡಲಾಯಿತು. ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಸುಮಲತಾ ಅವರು, ‘ನನ್ನ ಕೊನೇ ಉಸಿರು ಇರುವವರೆಗೂ ದರ್ಶನ್ ನನ್ನ ಮಗನೇ. ನಮ್ಮ ಮನೆಯಲ್ಲಿ ದರ್ಶನ್ ಇಲ್ಲದೆ ಯಾವ ಕಾರ್ಯಕ್ರಮ ನಡೆಯಲ್ಲ’ ಎಂದು ಹೇಳಿದ್ದರು.
ಈಗ ಸುಮಲತಾ ಮನೆಯಲ್ಲಿ ಪ್ರಮುಖ ಕಾರ್ಯಕ್ರಮ ನಡೆದಿದೆ. ಅದುವೇ ಅಭಿಷೇಕ್ ಅಂಬರೀಷ್ ಮಗನಿಗೆ ನಾಮಕರಣ ಶಾಸ್ತ್ರ. ಬೆಂಗಳೂರಿನ ಖಾಸಗಿ ಹೋಟೆಲ್ ಒಂದರಲ್ಲಿ ಈ ಶಾಸ್ತ್ರ ನೆರವೇರಿದೆ. ಇದಕ್ಕೆ ಸುದೀಪ್ ಸೇರಿದಂತೆ ಅನೇಕ ಗಣ್ಯರು ಆಗಮಿಸಿದ್ದರು. ಆದರೆ ದರ್ಶನ್ ಮಾತ್ರ ಗೈರಾಗಿದ್ದಾರೆ.
ಇದನ್ನೂ ಓದಿ: ‘ಅಪ್ಪು’ ಸಿನಿಮಾಗೆ ದರ್ಶನ್ ಅಭಿಮಾನಿ ಬೆಂಬಲ; ವಿಶೇಷ ಕಲಾಕೃತಿ ತಂದ ಫ್ಯಾನ್
ಸುಮಲತಾ ಅವರು ನಡೆಸಿದ ಬೆಂಬಲಿಗರ ಸಭೆಯಲ್ಲಿ ಭಾಗಿಯಾಗುವುದಕ್ಕೋಸ್ಕರ ದರ್ಶನ್ ತಮ್ಮ ಆಪರೇಷನ್ನೇ ಮುಂದಕ್ಕೆ ಹಾಕಿಕೊಂಡಿದ್ದರು. ‘ಯಮ ಕರೆದರೆ ಅಮ್ಮನ ಒಂದು ಕೆಲಸ ಇದೆ ಮುಗಿಸಿ ಬರ್ತೀನಿ ಎಂದು ಹೇಳುತ್ತೇನೆ’ ಎಂದು ದರ್ಶನ್ ಹೇಳಿದ್ದರು. ಹೀಗೆಲ್ಲ ಇದ್ದರೂ ದರ್ಶನ್ ಬರದೇ ಇದ್ದಿದ್ದು ಏಕೆ ಎನ್ನುವ ಪ್ರಶ್ನೆ ಹುಟ್ಟಿಕೊಂಡಿದೆ. ಅಭಿಷೇಕ್ ಮಗನಿಗೆ ರಾಣಾ ಅಮರ್ ಅಂಬರೀಷ್ ಎಂದು ಹೆಸರು ಇಡಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:13 am, Mon, 17 March 25