ಎದೆ ನೋವಿನ ಬಗ್ಗೆ ದಿಲೀಪ್ ರಾಜ್ಗೆ ಮೊದಲೇ ಸಿಕ್ಕಿತ್ತು ಸೂಚನೆ?
ನಟ, ನಿರ್ಮಾಪಕ ದಿಲೀಪ್ ರಾಜ್ ಮೇ 13ರಂದು ಹೃದಯಾಘಾತದಿಂದ ನಿಧನರಾಗಿದ್ದು ಅಭಿಮಾನಿಗಳಿಗೆ ಆಘಾತ ತಂದಿದೆ. ನಟಿ ಅಭಿನಯ ಅವರು ದಿಲೀಪ್ ರಾಜ್ ಆರೋಗ್ಯದ ಬಗ್ಗೆ ಪ್ರಮುಖ ಮಾಹಿತಿ ನೀಡಿದ್ದು, ಅವರಿಗೆ ಬೆಳಗಿನ ಜಾವ ಫುಲ್ ಬಾಡಿ ಚೆಕಪ್ ಮಾಡಿಸಿಕೊಳ್ಳುವ ಯೋಚನೆ ಇತ್ತು. ನೋವು ಎಂದು ಹೇಳುತ್ತಿದ್ದ ದಿಲೀಪ್ ರಾಜ್ ವೈದ್ಯರ ಅಪಾಯಿಂಟ್ಮೆಂಟ್ ಪಡೆದಿದ್ದರೂ ಆಸ್ಪತ್ರೆಗೆ ಹೋಗುವ ಮುನ್ನವೇ ಇಹಲೋಕ ತ್ಯಜಿಸಿದರು.

ನಟ ದಿಲೀಪ್ ರಾಜ್ ಅವರು ಮೇ 13ರಂದು ನಿಧನ ಹೊಂದಿದ್ದಾರೆ. ಅವರಿಗೆ ಹೃದಯಾಘಾತ ಸಂಭವಿಸಿತು. ಮುಂಜಾನೆಯೇ ಅವರು ತೀರಿ ಹೋದರು. ಹೃದಯಾಘಾತದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗ ದಿಲೀಪ್ ರಾಜ್ ಸಾವಿನ ಬಗ್ಗೆ ಒಂದು ಪ್ರಮುಖ ಅಪ್ಡೇಟ್ ಸಿಕ್ಕಿದೆ. ಕಿರುತೆರೆ ನಟಿ ಅಭಿನಯ ಅವರು ಒಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.
ದಿಲೀಪ್ ರಾಜ್ ನಟಿಸಿದ್ದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ದಿಲೀಪ್ ರಾಜ್ ಅವರೇ ಇದನ್ನು ನಿರ್ಮಿಸಿದ್ದರು. 2021ರ ಆಗಸ್ಟ್ 9ರಂದು ಆರಂಭ ಆಗಿ, 2024ರ ಮಾರ್ಚ್ 14ರಂದು ಧಾರಾವಾಹಿ ಕೊನೆಗೊಂಡಿತು. ಈ ಧಾರಾವಾಹಿಯಲ್ಲಿ ಅಭಿನಯ ಅವರು ನಟಿಸಿದ್ದರು. ಅವರು ಕೌಸಲ್ಯ ಹೆಸರಿನ ಪಾತ್ರ ಮಾಡಿದ್ದರು. ದಿಲೀಪ್ ಅಂತಿಮ ದರ್ಶನ ಪಡೆದು ಅಭಿನಯ ಮಾತನಾಡಿದರು.
‘ನನಗೆ ಹಿಟ್ಲರ್ ಕಲ್ಯಾಣದಲ್ಲಿ ಒಳ್ಳೆಯ ಪಾತ್ರ ನೀಡಿದ್ದ. ಆ ಬಳಿಕ ಬ್ರಹ್ಮಗಂಟು ಧಾರಾವಾಹಿಯಲ್ಲಿ ಅವಕಾಶ ಕೊಟ್ಟಿದ್ದ. ಸೆಟ್ಗೆ ಬರೋದೆ ಇಲ್ವಲ್ಲ ಎಂದರೆ ನೀವು ಚೆನ್ನಾಗಿ ಮಾಡಿಕೊಂಡು ಹೋಗ್ತೀರಾ ಬಿಡಿ ಎಂದು ಹೇಳುತ್ತಿದ್ದ. ನಟನೆಯನ್ನು ಹೊಗಳುತ್ತಿದ್ದ. ದೇವರು ಇಷ್ಟು ನಿಷ್ಠುರ ಆಗಬಾರದಿತ್ತು’ ಎಂದಿದ್ದಾರೆ ಅಭಿನಯ.
‘ವರ್ಕ್ ಪ್ರೆಷರೋ ಏನೋ ಗೊತ್ತಿಲ್ಲ, ನೋವು ಎಂದು ಹೇಳುತ್ತಿದ್ದನಂತೆ. ಹೀಗಾಗಿ, ಬೆಳಿಗ್ಗೆ 8 ಗಂಟೆಗೆ ಫುಲ್ ಬಾಡಿ ಚೆಕಪ್ ಮಾಡಿಸಿಕೊಳ್ಳುವ ಆಲೋಚನೆಯೂ ಅವನಿಗೆ ಇತ್ತು. ಇದಕ್ಕಾಗಿ ವೈದ್ಯರ ಅಪಾಯಿಂಟ್ಮೆಂಟ್ ತೆಗೆದುಕೊಂಡಿದ್ದ. ಆದರೆ ಅವನೇ ಹೋಗಿಬಿಟ್ಟ’ ಎಂದು ಅಭಿನಯ ಹೇಳಿದ್ದಾರೆ.
ಇದನ್ನೂ ಓದಿ: ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ
ನಟ ದಿಲೀಪ್ ರಾಜ್ ಅವರ ನಿಧನದ ಸುದ್ದಿ ವರ ಅಭಿಮಾನಿಗಳಿಗೆ ಆಘಾತ ತಂದಿದೆ. ಅವರು ಹಿರಿತೆರೆ ಹಾಗೂ ಕಿರುತೆರೆ ಮೂಲಕ ಮನೆಮಾತಾಗಿದ್ದಾರೆ. ನಟನೆಯ ಜೊತೆಗೆ ಯಶಸ್ವಿ ನಿರ್ಮಾಪಕರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




