ಏ.4ಕ್ಕೆ ಬಿಡುಗಡೆ ಆಗಲಿದೆ ಡಾ. ರಾಜ್ ಮೊಮ್ಮಗನ ‘ನಿಂಬಿಯಾ ಬನಾದ ಮ್ಯಾಗ’ ಸಿನಿಮಾ
ಡಾ. ರಾಜ್ಕುಮಾರ್ ಮೊಮ್ಮಗ ಷಣ್ಮುಖ ಗೋವಿಂದರಾಜ್ ಅವರು ಹೀರೋ ಆಗಿ ನಟಿಸಿರುವ ‘ನಿಂಬಿಯಾ ಬನಾದ ಮ್ಯಾಗ’ ಸಿನಿಮಾ ಏಪ್ರಿಲ್ 4ರಂದು ರಿಲೀಸ್ ಆಗಲಿದೆ. ಈ ಚಿತ್ರದಲ್ಲಿ ಷಣ್ಮುಖ ಅವರಿಗೆ ಜೋಡಿಯಾಗಿ ತನುಶ್ರೀ ಅಭಿನಯಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು.

ಡಾ. ರಾಜ್ಕುಮಾರ್ (Dr Rajkumar) ಅವರ ಇಡೀ ಕುಟುಂಬ ಚಿತ್ರರಂಗದಲ್ಲಿದೆ. ಅವರ ಮಕ್ಕಳು ಹಾಗೂ ಮೊಮ್ಮಕ್ಕಳು ಕೂಡ ಬಣ್ಣದ ಲೋಕದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ಮೊಮ್ಮಕ್ಕಳಾದ ಧನ್ಯಾ ರಾಮ್ಕುಮಾರ್, ಧೀರೆನ್, ಯುವ ರಾಜ್ಕುಮಾರ್, ವಿನಯ್ ರಾಜ್ಕುಮಾರ್ ಬಳಿಕ ಈಗ ಅಣ್ಣಾವ್ರ ಇನ್ನೋರ್ವ ಮೊಮ್ಮಗ ಷಣ್ಮುಖ ಗೋವಿಂದರಾಜ್ (Shanmukha Govindaraj) ಕೂಡ ಹೀರೋ ಆಗಿ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದಾರೆ. ಅವರು ನಟಿಸಿದ ‘ನಿಂಬಿಯಾ ಬನಾದ ಮ್ಯಾಗ’ (Nimbiya Banada Myaga) ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಮಾಡಲಾಯಿತು.
ಷಣ್ಮುಖ ಗೋವಿಂದರಾಜ್ ನಟನೆಯ ‘ನಿಂಬಿಯಾ ಬನಾದ ಮ್ಯಾಗ’ (ಪೇಜ್ 1) ಸಿನಿಮಾದ ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಲಕ್ಷ್ಮೀ, ಗೋವಿಂದರಾಜು, ಎಸ್.ಎ. ಚಿನ್ನೇಗೌಡ, ಪೂರ್ಣಿಮಾ ರಾಮ್ಕುಮಾರ್ ಮುಂತಾದವರು ಆಗಮಿಸಿದ್ದರು. ವಿ. ಮಾದೇಶ್ ಅವರು ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಅಶೋಕ್ ಕಡಬ ಅವರು ನಿರ್ದೇಶನ ಮಾಡಿದ್ದಾರೆ. ಏಪ್ರಿಲ್ 4ರಂದು ‘ನಿಂಬಿಯಾ ಬನಾದ ಮ್ಯಾಗ’ ಸಿನಿಮಾ ಬಿಡುಗಡೆ ಆಗಲಿದೆ. ಟ್ರೇಲರ್ ರಿಲೀಸ್ ನಂತರ ಚಿತ್ರತಂಡದವರು ಮಾಹಿತಿ ಹಂಚಿಕೊಂಡರು.
‘ಇದು ನಾನು ನಾಯಕನಾಗಿ ನಟಿಸಿದ ಮೊದಲ ಸಿನಿಮಾ’ ಎಂದು ಷಣ್ಮುಖ ಅವರು ಮಾತು ಆರಂಭಿಸಿದರು. ‘ಮಲೆನಾಡಿನ ಮಡಿಲಲ್ಲಿ ನಡೆಯುವ ಸುಂದರ ದೃಶ್ಯ ಕಾವ್ಯ. ತಾಯಿ-ಮಗನ ಬಾಂಧವ್ಯದ ಕಥೆ ಈ ಸಿನಿಮಾದಲ್ಲಿದೆ. ಎಲ್ಲರ ಸಹಕಾರದಿಂದ ನಮ್ಮ ಸಿನಿಮಾ ಚೆನ್ನಾಗಿ ಮೂಡಿಬಂದಿದೆ. ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ರಾಘವೇಂದ್ರ ರಾಜ್ಕುಮಾರ್, ಮಂಗಳಾ ರಾಘವೇಂದ್ರ ರಾಜ್ಕುಮಾರ್, ಅಶ್ವಿನಿ ಪುನೀತ್ ರಾಜ್ಕುಮಾರ್, ಶ್ರೀಮುರಳಿ ಸೇರಿದಂತೆ ನಮ್ಮ ಕುಟುಂಬದ ಸದಸ್ಯರೆಲ್ಲರೂ ಈ ಸಿನಿಮಾಗೆ ಶುಭ ಕೋರಿದ್ದಾರೆ. ಎಲ್ಲರಿಗೂ ಧನ್ಯವಾದ’ ಎಂದು ಷಣ್ಮುಖ ಹೇಳಿದರು.
‘ನಿಂಬಿಯಾ ಬನಾದ ಮ್ಯಾಗ’ ಸಿನಿಮಾದ ಕಥೆ ಏನು ಎಂಬುದರ ಬಗ್ಗೆ ಟ್ರೇಲರ್ನಲ್ಲಿ ಸುಳಿವು ನೀಡಲಾಗಿದೆ. ಆ ಬಗ್ಗೆ ನಿರ್ದೇಶಕ ಅಶೋಕ್ ಕಡಬ ಅವರು ಮಾತನಾಡಿದರು. ‘ಮಲೆನಾಡಿನ ಹಳ್ಳಿಯಲ್ಲಿ ನಾಲ್ಕು ವರ್ಷದ ಮಗು ಕಾಣೆ ಆಗುತ್ತದೆ. ಇಂದಲ್ಲ ನಾಳೆ ಮಗ ಬಂದೇ ಬರುತ್ತಾನೆ ಎಂದು ಆ ತಾಯಿ 25 ವರ್ಷ ಕಾಯುತ್ತಾಳೆ. ಒಂದಿನ ಆತ ವಾಪಸ್ ಬರುತ್ತಾನೆ. ಮುಂದೆ ಏನಾಗುತ್ತದೆ ಎಂಬುದೇ ಸಿನಿಮಾ ಕಥೆ. ಈ ಸಿನಿಮಾಗೆ ಎರಡನೇ ಭಾಗ ಕೂಡ ಬರಲಿದೆ’ ಎಂದು ಅವರು ಹೇಳಿದರು.
ಇದನ್ನೂ ಓದಿ: ‘ಓಂ’ ಚಿತ್ರಕ್ಕೆ ಬರಲಿದೆ ಸೀಕ್ವೆಲ್; ಭರ್ಜರಿ ಅಪ್ಡೇಟ್ ಕೊಟ್ಟ ಉಪೇಂದ್ರ-ಶಿವಣ್ಣ
ತನುಶ್ರೀ ಅವರು ಈ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಸುನಾದ್ ರಾಜ್, ಸಂಗೀತಾ, ಸಂದೀಪ್ ಮಲಾನಿ ಕೂಡ ಪಾತ್ರವರ್ಗದಲ್ಲಿ ಇದ್ದಾರೆ. ಆರೋನ್ ಕಾರ್ತಿಕ್ ಅವರು ಈ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಪಳನಿ ಡಿ. ಸೇನಾಪತಿ ಅವರ ಹಿನ್ನೆಲೆ ಸಂಗೀತ ಈ ಚಿತ್ರಕ್ಕಿದೆ. ಸಿದ್ದು ಕಾಂಚನಹಳ್ಳಿ ಅವರು ಛಾಯಾಗ್ರಹಣ ಮಾಡಿದ್ದಾರೆ. ರವಿತೇಜ ಅವರು ಸಂಕಲನ, ಮದನ್ ಹರಿಣಿ ಅವರು ನೃತ್ಯ ನಿರ್ದೇಶನದ ಜವಾಬ್ದಾರಿ ನಿಭಾಯಿಸಿದ್ದಾರೆ. ಏಪ್ರಿಲ್ 4ರಂದು ಈ ಸಿನಿಮಾ ಬಿಡುಗಡೆ ಆಗಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.