ದುನಿಯಾ ವಿಜಯ್-ನಾಗರತ್ನ ಕಾನೂನು ಸಮರ: ಈವರೆಗೆ ಏನೇನಾಯ್ತು? ಇಲ್ಲಿದೆ ಮಾಹಿತಿ
ನಟ 'ದುನಿಯಾ' ವಿಜಯ್ ಹಾಗೂ ನಾಗರತ್ನ ನಡುವೆ 2013ರಿಂದ ನಡೆಯುತ್ತಿದ್ದ ದಶಕದ ಕಾನೂನು ಸಮರಕ್ಕೆ ಹೈಕೋರ್ಟ್ ತೆರೆ ಎಳೆದಿದೆ. 2024ರ ಕೌಟುಂಬಿಕ ಕೋರ್ಟ್ ಆದೇಶವನ್ನು ಬದಿಗೊತ್ತಿದ ಹೈಕೋರ್ಟ್, ವಿಚ್ಛೇದನ ಮಂಜೂರು ಮಾಡಿದ್ದು, ಪತ್ನಿಗೆ ₹2 ಕೋಟಿ ಜೀವನಾಂಶ ಪಾವತಿಸಲು ದುನಿಯಾ ವಿಜಯ್ಗೆ ಆದೇಶಿಸಿದೆ.

ಮುಖ್ಯಾಂಶಗಳು
- 13 ವರ್ಷಗಳ ಕಾನೂನು ಹೋರಾಟಕ್ಕೆ ಕ್ಲೈಮ್ಯಾಕ್ಸ್
- 'ದುನಿಯಾ' ವಿಜಯ್-ನಾಗರತ್ನ ವಿಚ್ಛೇದನ
- 2024ರ ಶಾಕ್ಗೆ ಹೈಕೋರ್ಟ್ನಲ್ಲಿ ರಿಲೀಫ್
ಕನ್ನಡದ ನಟ ದುನಿಯಾ ವಿಜಯ್ (Duniya Vijay) ಹಾಗೂ ನಾಗರತ್ನ ನಡುವಿನ ದಶಕಕ್ಕೂ ಹೆಚ್ಚು ಕಾಲ ನಡೆದ ಕಾನೂನು ಹೋರಾಟ ಕೊನೆಗೂ ತಾರ್ಕಿಕ ಅಂತ್ಯ ಸಿಕ್ಕಿದೆ. ಹೈಕೋರ್ಟ್ ವಿಭಾಗೀಯ ಪೀಠವು ಈ ದಂಪತಿಯ ಸುದೀರ್ಘ ವೈವಾಹಿಕ ವಿವಾದವನ್ನು ಆಲಿಸಿ, ವಿಚ್ಛೇದನ ಮಂಜೂರು ಮಾಡಿ ಮಹತ್ವದ ತೀರ್ಪು ನೀಡಿದೆ. ಈ ಇಬ್ಬರ ಮಧ್ಯೆ ನಡೆದ ಕಾನೂನು ಸಮರದ ಬಗ್ಗೆ ಇಲ್ಲಿದೆ ವಿವರ.
1999ರಲ್ಲಿ ವಿಜಯ್ ಹಾಗೂ ನಾಗರತ್ನ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಇವರ ಸಂಸಾರದಲ್ಲಿ ಮನಸ್ತಾಪಗಳು ಉಂಟಾಗಿ, ವಿಜಯ್ ಅವರು 2013ರಲ್ಲಿ ಮೊದಲ ಬಾರಿಗೆ ವಿಚ್ಛೇದನ ಕೋರಿ ನ್ಯಾಯಾಲಯದ ಬಾಗಿಲು ತಟ್ಟಿದ್ದರು. ಆದರೆ 2014ರಲ್ಲಿ ದಂಪತಿ ಸಂಧಾನದ ಹಾದಿ ತುಳಿದು, ವಿಚ್ಛೇದನ ಅರ್ಜಿಯನ್ನು ಹಿಂಪಡೆದಿದ್ದರು. ಆ ಬಳಿಕ 2018ರಲ್ಲಿ ಮಾನಸಿಕ ಕ್ರೌರ್ಯದ ಆಧಾರದ ಮೇಲೆ ವಿಜಯ್ ಮತ್ತೆ ಕೌಟುಂಬಿಕ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಿದ್ದರು.
ಈ ಕಾನೂನು ಹೋರಾಟಕ್ಕೆ 2024ರಲ್ಲಿ ದೊಡ್ಡ ತಿರುವು ಸಿಕ್ಕಿತ್ತು. ಬೆಂಗಳೂರಿನ ಶಾಂತಿನಗರದ ಕೌಟುಂಬಿಕ ನ್ಯಾಯಾಲಯವು ನಾಗರತ್ನ ವಿರುದ್ಧ ವಿಜಯ್ ಹೊರಿಸಿದ್ದ ಕ್ರೌರ್ಯದ ಆರೋಪಗಳು ಸಾಬೀತಾಗಿಲ್ಲ ಎಂದು ಹೇಳಿ, ವಿಚ್ಛೇದನ ಅರ್ಜಿಯನ್ನು ವಜಾಗೊಳಿಸಿ ವಿಜಯ್ಗೆ ಬಿಗ್ ಶಾಕ್ ನೀಡಿತ್ತು. ಕೌಟುಂಬಿಕ ನ್ಯಾಯಾಲಯದ ಈ ತೀರ್ಪನ್ನು ಸವಾಲು ಮಾಡಿ ವಿಜಯ್ ಹೈಕೋರ್ಟ್ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಕಾಣೆಯಾದ ಈ ಮಗನನ್ನು ಹುಡುಕಿಕೊಡಿ: ದುನಿಯಾ ವಿಜಯ್ ಮನವಿ
ಇದೀಗ ಮೇಲ್ಮನವಿಯ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ. ಸಿಂಗ್ ಹಾಗೂ ನ್ಯಾಯಮೂರ್ತಿ ಹೆಚ್. ಶಾಂತಿಭೂಷಣ್ ಅವರಿದ್ದ ಹೈಕೋರ್ಟ್ ವಿಭಾಗೀಯ ಪೀಠವು ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಬದಿಗೊತ್ತಿ, ವಿಚ್ಛೇದನವನ್ನು ಮಂಜೂರು ಮಾಡಿದೆ. ಆರಂಭದಲ್ಲಿ ನಾಗರತ್ನ ಅವರು 10 ಕೋಟಿ ರೂಪಾಯಿ ಜೀವನಾಂಶಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ, ಪತ್ನಿ ಹಾಗೂ ಮೂವರು ಮಕ್ಕಳ ಭವಿಷ್ಯ ಮತ್ತು ವಿಜಯ್ ಅವರ ಪ್ರಸ್ತುತ ಆರ್ಥಿಕ ಸ್ಥಿತಿಯನ್ನು ಪರಿಗಣಿಸಿ ಹೈಕೋರ್ಟ್ 2 ಕೋಟಿ ರೂಪಾಯಿ ಜೀವನಾಂಶ ನಿಗದಿಪಡಿಸಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




