‘ಬಿಲ್ಲ ರಂಗ ಭಾಷಾ’ ಚಿತ್ರಕ್ಕೆ ಆರಂಭದಲ್ಲೇ ಅಡಚಣೆ; ಸುದೀಪ್-ಡಿಕೆಶಿ ಭೇಟಿಗೆ ಕಾರಣವಾಯ್ತು ಜಾಗದ ವಿವಾದ?
ಕಿಚ್ಚ ಸುದೀಪ್ ಅವರು ತಮ್ಮ ‘ಬಿಲ್ಲ ರಂಗ ಭಾಷಾ’ಚಿತ್ರದ ಸೆಟ್ ನಿರ್ಮಾಣಕ್ಕೆ ಉಂಟಾಗಿರುವ ಭೂ ವಿವಾದದ ಪರಿಹಾರಕ್ಕಾಗಿ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದರು. ಜಮೀನು ಮಾಲೀಕರ ದೂರಿನಿಂದ ಸೆಟ್ ನಿರ್ಮಾಣ ಸ್ಥಗಿತಗೊಂಡಿತ್ತು. ಡಿಕೆಶಿ ಅವರು ಕನಕಪುರಕ್ಕೆ ತೆರಳಿ ಜಮೀನು ಮಾಲೀಕರೊಂದಿಗೆ ಮಾತುಕತೆ ನಡೆಸಿ ವಿವಾದಕ್ಕೆ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದ್ದಾರೆ ಎನ್ನಲಾಗಿದೆ.

ಕಿಚ್ಚ ಸುದೀಪ್ ಅವರು ಫೆಬ್ರವರಿ 6ರಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರನ್ನು ಭೇಟಿ ಮಾಡಿದ್ದಾರೆ. ಈ ಭೇಟಿ ಸಾಕಷ್ಟು ಕುತೂಹಲ ಮೂಡಿಸಿತ್ತು. ‘ವೈಯಕ್ತಿಕ ಕಾರಣಕ್ಕಾಗಿ ಸುದೀಪ್ ನನ್ನನ್ನು ಭೇಟಿ ಮಾಡಿದ್ದರು’ ಎಂದು ಮಾಧ್ಯಮಗಳ ಜೊತೆ ಮಾತನಾಡುವಾಗ ಡಿಕೆ ಶಿವಕುಮಾರ್ ಹೇಳಿದ್ದರು. ಈಗ ಈ ಬಗ್ಗೆ ಪೂರ್ತಿ ವಿವರ ಸಿಕ್ಕಿದೆ. ‘ಬಿಲ್ಲ ರಂಗ ಭಾಷಾ’ ಚಿತ್ರಕ್ಕೆ ಉಂಟಾದ ಜಾಗದ ಸಮಸ್ಯೆಗೆ ಪರಿಹಾರ ಹುಡುಕಿಕೊಂಡು ಸುದೀಪ್ ಅವರು ಡಿಕೆಶಿ ಬಳಿ ತೆರಳಿದ್ದರು.
ಸುದೀಪ್ ಅವರು ‘ಬಿಲ್ಲ ರಂಗ ಬಾಷಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾಗೆ ಅನೂಪ್ ಭಂಡಾರಿ ನಿರ್ದೇಶನ ಮಾಡುತ್ತಿದ್ದಾರೆ. ‘ಮ್ಯಾಕ್ಸ್’ ಯಶಸ್ಸಿನ ಬಳಿಕ ಸೆಟ್ಟೇರುತ್ತಿರುವ ಸಿನಿಮಾ ಇದಾಗಿದೆ. ಈ ಕಾರಣಕ್ಕೂ ನಿರೀಕ್ಷೆ ಹೆಚ್ಚಿದೆ. ಬಿಗ್ ಬಜೆಟ್ನಲ್ಲಿ ಸಿದ್ಧವಾಗುತ್ತಿರುವ ಈ ಚಿತ್ರದ ಬಹುತೇಕ ಶೂಟ್ ಸೆಟ್ನಲ್ಲಿ ನಡೆಯಲಿದೆ. ಹೀಗಾಗಿ. ಕನಕಪುರ ರಸ್ತೆಯ ಬಿಎಂ ಕಾವಲ್ನಲ್ಲಿ ಸೆಟ್ ನಿರ್ಮಾಣಕ್ಕೆ ಚಿತ್ರತಂಡ ಮುಂದಾಗಿತ್ತು. ಆದರೆ ತಮ್ಮ ಜಮೀನಿಗೆ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ ಎಂದು ಜಮೀನು ಮಾಲೀಕ ಎಸ್.ಮಹೇಶ್ ದೂರು ನೀಡಿದ್ದರು.
‘ನನಗೆ ಮಾರಾಟ ಮಾಡಲಾದ 6 ಎಕರೆ ಜಾಗದಲ್ಲಿ ತಂಡದವರು ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಹೀಗಾಗಿ ನನ್ನ ಜಮೀನಿನಲ್ಲಿ ಹಾಕಲಾದ ಶೆಡ್ ತೆರವು ಮಾಡಿ’ ಎಂದು ಮಹೇಶ್ ಬೆಂ. ದಕ್ಷಿಣ ತಹಶಿಲ್ದಾರ್ ಅವರಿಗೆ ದೂರಿನಲ್ಲಿ ಮನವಿ ಮಾಡಿದ್ದರು. ದೂರು ನೀಡಿದ ತಕ್ಷಣವೇ ಸೆಟ್ ನಿರ್ಮಾಣ ಮಾಡದಂತೆ ಸಿನಿಮಾ ತಂಡಕ್ಕೆ ತಹಶೀಲ್ದಾರ್ ಸೂಚನೆ ಕೊಟ್ಟಿದ್ದಾರೆ.
ಇದನ್ನೂ ಓದಿ: ನನಗೆ ತ್ರಿವಿಕ್ರಮ್ ಪರಿಚಯವೇ ಇರಲಿಲ್ಲ: ಆ ಘಟನೆ ನೆನೆದ ಕಿಚ್ಚ ಸುದೀಪ್
ಡಿಕೆಶಿ ಮುಖಾಂತರ ಎಸ್.ಮಹೇಶ್ ಜೊತೆ ಮಾತುಕತೆ ಮಾಡುವಂತೆ ಸುದೀಪ್ ಮನವಿ ಮಾಡಿದ್ದಾರೆ ಎನ್ನಾಗಿದೆ. ಸುದೀಪ್ ಭೇಟಿ ಬಳಿಕ ಕನಕಪುರಕ್ಕೆ ತೆರಳಿ ಡಿಕೆಶಿ ವಾಸ್ತವ್ಯ ಹೂಡಿದ್ದರು. ಎಸ್.ಮಹೇಶ್ ಜೊತೆಗೆ ಮಾತುಕತೆ ಮಾಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.



