ಶೂಟಿಂಗ್ ವೇಳೆ ಲೈಟ್ ಮ್ಯಾನ್ ಸಾವು; ನಿರ್ದೇಶಕ ಯೋಗರಾಜ್ ಭಟ್ ಮೇಲೆ ಎಫ್​ಐಆರ್

| Updated By: ಮದನ್​ ಕುಮಾರ್​

Updated on: Sep 05, 2024 | 10:13 PM

ಕಳೆದ ಕೆಲವು ದಿನಗಳಿಂದ ‘ಮನದ ಕಡಲು’ ಸಿನಿಮಾದ ಶೂಟಿಂಗ್ ಮಾಡಲಾಗುತ್ತಿತ್ತು. 30 ಅಡಿ ಎತ್ತರದಲ್ಲಿದ್ದ ಲೈಟ್​ ಬಿಚ್ಚುವ ಸಂದರ್ಭದಲ್ಲಿ ಲೈಟ್​ ಮ್ಯಾನ್​ ಮೋಹನ್​ ಕುಮಾರ್​ ಎಂಬುವವರು ಕೆಳಗೆ ಬಿದ್ದು ಪ್ರಾಣ ಬಿಟ್ಟಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಿರ್ದೇಶಕ ಯೋಗರಾಜ್​ ಭಟ್​ ಹಾಗೂ ಇತರರ ಮೇಲೆ ಎಫ್​ಐಆರ್​ ದಾಖಲು ಮಾಡಲಾಗಿದೆ.

ಶೂಟಿಂಗ್ ವೇಳೆ ಲೈಟ್ ಮ್ಯಾನ್ ಸಾವು; ನಿರ್ದೇಶಕ ಯೋಗರಾಜ್ ಭಟ್ ಮೇಲೆ ಎಫ್​ಐಆರ್
ಯೋಗರಾಜ್​ ಭಟ್​,
Follow us on

‘ಮನದ ಕಡಲು’ ಸಿನಿಮಾದ ಶೂಟಿಂಗ್​ ವೇಳೆ ದುರ್ಘಟನೆ ಸಂಭವಿಸಿದೆ. 30 ಅಡಿ ಮೇಲಿಂದ ಬಿದ್ದ ಲೈಟ್ ಮ್ಯಾನ್ ನಿಧನರಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಯೋಗರಾಜ್ ಭಟ್ ಸೇರಿ ಚಿತ್ರತಂಡದ ಕೆಲವರ ಮೇಲೆ ಎಫ್​ಐಆರ್​ ದಾಖಲಾಗಿದೆ. ಬೆಂಗಳೂರು ಉತ್ತರ ತಾಲೂಕಿನ ಅಡಕಮಾರನಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳದೇ ಇದ್ದಿದ್ದರಿಂದ ‘ಮನದ ಕಡಲು’ ಚಿತ್ರದ ನಿರ್ದೇಶಕ ಯೋಗರಾಜ್ ಭಟ್, ನಿರ್ಮಾಪಕ ಅಡಕಮಾರನಹಳ್ಳಿಯ ಈ.ಕೆ. ಕೃಷ್ಣಪ್ಪ, ಮಾನೇಜರ್ ಸುರೇಶ್, ಅಸಿಸ್ಟೆಂಟ್ ಮ್ಯಾನೇಜರ್ ಮನೋಹರ್ ಮೇಲೆ ದೂರು ದಾಖಲಾಗಿದೆ.

ಕಳೆದ 15 ದಿನಗಳಿಂದ ಅಡಕಮಾರನಹಳ್ಳಿಯ ವಿ.ಆರ್.ಎಲ್. ಗೋಡೌನ್​ನಲ್ಲಿ ‘ಮನದ ಕಡಲು’ ಸಿನಿಮಾದ ಚಿತ್ರೀಕರಣ ನಡೆಯುತ್ತಿತ್ತು. ಮಂಗಳವಾರ ಸಂಜೆ 5.10ರ ವೇಳೆಗೆ ಲೈಟ್ ಮ್ಯಾನ್ ಮೋಹನ್ ಕುಮಾರ್ ಬಿದ್ದು ಸಾವನ್ನಪ್ಪಿದ್ದಾರೆ. 30 ಅಡಿ ಎತ್ತರದ ಅಲ್ಯುಮಿನಿಯಂ ರೊಸ್ಟ್ರಮ್ ಮೇಲೆ ಹತ್ತಿ ಲೈಟ್ ಬಿಚ್ಚುತ್ತಿದ್ದ ಮೋಹನ್​ ಅಲ್ಲಿಂದ ಬಿದ್ದರು.

ಶೂಟಿಂಗ್ ಸೆಟ್​ನಲ್ಲಿ ಕೆಲಸ ಮಾಡುತ್ತಿದ್ದ ಮೋಹನ್ ಕುಮಾರ್​ಗೆ ಸುರಕ್ಷತಾ ಸಾಧನಗಳನ್ನು ಕೊಡದೇ ಕೆಲಸ ಮಾಡಿಸುತ್ತಿದ್ದರು ಎಂಬ ಆರೋಪ ಚಿತ್ರತಂಡದ ಮೇಲೆ ಬಂದಿದೆ. ಮೋಹನ್ ಕುಮಾರ್ ಮೇಲಿಂದ ಕೆಳಕ್ಕೆ ಬಿದ್ದಾಗ ತಲೆಗೆ ಏಟಾಗಿ ತೀವ್ರ ರಕ್ತಸ್ರಾವ ಆಯಿತು. ಬಳಿಕ ಅವರನ್ನು ಗೊರಗುಂಟೆಪಾಳ್ಯದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ಅವರು ಕೊನೆಯುಸಿರೆಳೆದರು. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ: 45 ಕೋಟಿ ರೂ. ಬಜೆಟ್​ನ ಸಿನಿಮಾದ ಕಲೆಕ್ಷನ್ ಬರೀ 45 ಸಾವಿರ ರೂ; ಅತಿ ದೊಡ್ಡ ಫ್ಲಾಪ್

ಚಿತ್ರೀಕರಣದ ಸ್ಥಳದಲ್ಲಿ ಎಷ್ಟು ಎಚ್ಚರಿಕೆ ವಹಿಸಿದರೂ ಸಾಲದು. ಈ ಹಿಂದೆ ಕೂಡ ಕೆಲವು ಸಿನಿಮಾಗಳ ಶೂಟಿಂಗ್​ ವೇಳೆ ಅವಘಡಗಳು ಸಂಭವಿಸಿದ್ದವು. ಅಜಯ್​ ರಾವ್​ ನಟನೆಯ ‘ಲವ್​ ಯೂ ರಚ್ಚು’ ಸಿನಿಮಾದ ಚಿತ್ರೀಕರಣದ ಸಂದರ್ಭದಲ್ಲಿ ವಿದ್ಯುತ್​ ಸ್ಪರ್ಶದಿಂದ ಫೈಟರ್​ ವಿವೇಕ್​ ಎಂಬುವವರು ಸಾವನ್ನಪ್ಪಿದ್ದರು. ‘ಮಾಸ್ತಿ ಗುಡಿ’ ಚಿತ್ರೀಕರಣದ ವೇಳೆ ಉದಯ್​ ಮತ್ತು ಅನಿಲ್​ ಅವರು ತಿಪ್ಪಗೊಂಡನಹಳ್ಳಿ ಕೆರೆಯಲ್ಲಿ ಮುಳುಗಿ ಪ್ರಾಣಬಿಟ್ಟಿದ್ದರು. ಈಗ ಮತ್ತೊಂದು ಸಿನಿಮಾದ ಶೂಟಿಂಗ್​ ವೇಳೆ ಕಾರ್ಮಿಕ ಸಾವಿಗೆ ಈಡಾಗಿರುವುದು ನೋವಿನ ಸಂಗತಿ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.