ಕ್ರೌರ್ಯದಲ್ಲಿ ಶಾಂತಿ ಇಷ್ಟಪಡುವ ‘ಮದಗಜ’: ಭರ್ಜರಿ ಸೌಂಡ್​ ಮಾಡುತ್ತಿದೆ ಶ್ರೀಮುರಳಿ ಸಿನಿಮಾ ಟ್ರೇಲರ್​

Madagaja Trailer: ‘ಮದಗಜನಿಗೆ ಕ್ರೌರ್ಯದಲ್ಲಿ ಶಾಂತಿ ಇಷ್ಟ, ದ್ವೇಷದಲ್ಲಿ ತಾಳ್ಮೆ ಇಷ್ಟ’ ಎನ್ನುವ ಡೈಲಾಗ್ ಟ್ರೇಲರ್​ನ ಆರಂಭದಲ್ಲೇ ಬರುತ್ತದೆ. ಇದು ಸಾಕಷ್ಟು ಗಮನ ಸೆಳೆಯುತ್ತದೆ.

ಕ್ರೌರ್ಯದಲ್ಲಿ ಶಾಂತಿ ಇಷ್ಟಪಡುವ ‘ಮದಗಜ’: ಭರ್ಜರಿ ಸೌಂಡ್​ ಮಾಡುತ್ತಿದೆ ಶ್ರೀಮುರಳಿ ಸಿನಿಮಾ ಟ್ರೇಲರ್​
ಶ್ರೀಮುರಳಿ
Follow us
| Updated By: ರಾಜೇಶ್ ದುಗ್ಗುಮನೆ

Updated on:Nov 21, 2021 | 1:08 PM

ಇತ್ತೀಚಿನ ವರ್ಷಗಳಲ್ಲಿ ಶ್ರೀಮುರಳಿ (Sri Murali) ಆಯ್ಕೆ ಮಾಡಿಕೊಳ್ಳುವ ಸಿನಿಮಾ ಪ್ಯಾಟರ್ನ್​ ಬದಲಾಗಿದೆ. ಅವರ ಸಿನಿಮಾ ಎಂದರೆ ಆ್ಯಕ್ಷನ್​ಗೆ ಕೊರತೆ ಇರುವುದಿಲ್ಲ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈಗ ಅವರು ನಟಿಸುತ್ತಿರುವ ‘ಮದಗಜ’ (Madagaja) ಸಿನಿಮಾ ಬೆಟ್ಟದಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಇಂದು (ನವೆಂಬರ್​ 19) ರಿಲೀಸ್​ ಆದ ‘ಮದಗಜ’ ಟ್ರೇಲರ್​ (Madagaja Trailer)ಸಿನಿಮಾದ ಮೇಲಿನ ನಿರೀಕ್ಷೆಯನ್ನು ದುಪ್ಪಟ್ಟು ಮಾಡಿದೆ. ಸಿನಿಮಾದಲ್ಲಿ ಆ್ಯಕ್ಷನ್​ಗೆ ಯಾವುದೇ ಕೊರತೆ ಇಲ್ಲ ಎಂಬುದಕ್ಕೆ 2.53 ನಿಮಿಷದ ಟ್ರೇಲರ್​ ಸಾಕ್ಷ್ಯ ನೀಡಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟ್ರೇಲರ್​ ಅನಾವರಣ ಮಾಡಿದರು. 

‘ಮದಗಜನಿಗೆ ಕ್ರೌರ್ಯದಲ್ಲಿ ಶಾಂತಿ ಇಷ್ಟ, ದ್ವೇಷದಲ್ಲಿ ತಾಳ್ಮೆ ಇಷ್ಟ’ ಎನ್ನುವ ಡೈಲಾಗ್ ಟ್ರೇಲರ್​ನ ಆರಂಭದಲ್ಲೇ ಬರುತ್ತದೆ. ಇದು ಸಾಕಷ್ಟು ಗಮನ ಸೆಳೆಯುತ್ತದೆ. ಜಗಪತಿ ಬಾಬು ಟಾಲಿವುಡ್​ನ ಖ್ಯಾತ ಖಳನಟ. ಅವರು ಕೂಡ ಈ ಸಿನಿಮಾದಲ್ಲಿ ಮುಖ್ಯ ವಿಲನ್​ ಆಗಿ ಕಾಣಿಸಿಕೊಂಡಿದ್ದಾರೆ. ಅವರ ಪಾತ್ರ ತುಂಬಾನೇ ರಾ ಆಗಿದೆ. ಕೆಲ ದೃಶ್ಯಗಳು ಮೈ ಜುಮ್​ ಎನಿಸುತ್ತವೆ. ಇನ್ನು, ಮಚ್ಚುಗಳು ಕೂಡ ಟ್ರೇಲರ್​ನಲ್ಲಿ ಝಳಪಿಸಿವೆ.

‘ಕೆಜಿಎಫ್’ ಸಿನಿಮಾದಲ್ಲಿ ಗರುಡನಾಗಿ ಕಾಣಿಸಿಕೊಂಡಿದ್ದ ರಾಮಚಂದ್ರ ರಾಜು ಅವರು ‘ಮದಗಜ’ದಲ್ಲಿ ನಟಿಸಿದ್ದಾರೆ. ಅವರ ಪಾತ್ರ ಕೂಡ ತುಂಬಾನೇ ಮಹತ್ವ ಪಡೆದುಕೊಳ್ಳಲಿದೆ ಎಂಬುದು ಮೇಲ್ನೋಟಕ್ಕೆ ಕಂಡು ಬರುತ್ತದೆ. ಅಕ್ಟೋಬರ್​ 29ರಂದು ಪುನೀತ್​ ರಾಜ್​ಕುಮಾರ್​ ನಿಧನ ಹೊಂದಿದ್ದರು. ಅವರನ್ನು ಕಳೆದುಕೊಂಡಿರುವ ನೋವು ಇನ್ನೂ ಮರೆಯಾಗಿಲ್ಲ. ಟ್ರೇಲರ್​ನಲ್ಲಿ ಪುನೀತ್​ ಅವರನ್ನು ನೆನಪಿಸಿಕೊಳ್ಳುವ ಕಾರ್ಯ ಕೂಡ ನಡೆದಿದೆ.

‘ಅಯೋಗ್ಯ’ ಸಿನಿಮಾ ಮೂಲಕ ಖ್ಯಾತಿ ಹೆಚ್ಚಿಸಿಕೊಂಡವರು ನಿರ್ದೇಶಕ ಮಹೇಶ್​ ಕುಮಾರ್​. ಅವರು ‘ಮದಗಜ’ ಸಾಕಷ್ಟು ಶ್ರಮ ವಹಿಸಿರೋದು ಕಂಡು ಬರುತ್ತದೆ. ಪ್ರತಿ ದೃಶ್ಯಗಳನ್ನೂ ಅದ್ದೂರಿಯಾಗಿ ಕಟ್ಟಿ ಕೊಡಲಾಗಿದೆ. ಆಶಿಕಾ ರಂಗನಾಥ್​ ಹೆಚ್ಚಾಗಿ ಕಾಣಿಸಿಕೊಂಡಿಲ್ಲ. ಸಿನಿಮಾಗಳ ಆಯ್ಕೆಯಲ್ಲಿ ಶ್ರೀಮುರಳಿ ಸಖತ್​ ಚ್ಯೂಸಿ ಆಗಿದ್ದಾರೆ. ‘ಭರಾಟೆ’ ಬಳಿಕ ಅವರು ಒಪ್ಪಿಕೊಂಡ ‘ಮದಗಜ’ ಚಿತ್ರ ಸೆಟ್ಟೇರಿದ ದಿನದಿಂದಲೂ ಭಾರಿ ಕ್ರೇಜ್​ ಹುಟ್ಟುಹಾಕಿದೆ. ಈ ಸಿನಿಮಾಗೆ ರವಿ ಬಸ್ರೂರು ಸಂಗೀತ ನಿರ್ದೇಶನ ಮಾಡಿದ್ದಾರೆ.  ಇತ್ತೀಚೆಗೆ ರಿಲೀಸ್​ ಆದ ಸಿನಿಮಾದ ಹಾಡುಗಳು ಭಾರೀ ಸೌಂಡ್​ ಮಾಡಿತ್ತು.

ಇದನ್ನೂ ಓದಿ: ‘ಅಪ್ಪು ಮಾಮನ ನೆನಪಲ್ಲಿ ‘ಮದಗಜ’ ಸಾಂಗ್​ ರಿಲೀಸ್​ ಮಾಡಿದೀವಿ’; ಸುದ್ದಿಗೋಷ್ಠಿಯಲ್ಲಿ ಶ್ರೀಮುರಳಿ ಮಾತು

Published On - 8:09 pm, Fri, 19 November 21