‘ಮಹಿಳೆ ಎಂಬುದು ಪರಿಗಣಿಸಿ ಜಾಮೀನು ನೀಡಿ’: ಪವಿತ್ರಾ ಗೌಡ ಪರ ವಕೀಲರ ಮನವಿ

ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ ಎಂಬ ಕಾರಣಕ್ಕೆ ಚಿತ್ರದುರ್ಗದ ರೇಣುಕಾ ಸ್ವಾಮಿಯನ್ನು ಬೆಂಗಳೂರಿಗೆ ಕರೆಸಿಕೊಂಡು ಕೊಲೆ ಮಾಡಲಾಯಿತು. ಈ ಕೇಸ್​ನಲ್ಲಿ ಪವಿತ್ರಾ ಗೌಡ ಎ1, ದರ್ಶನ್​ ಎ2 ಆಗಿದ್ದು, ಪವಿತ್ರಾ ಈಗ ಜಾಮೀನು ಪಡೆಯಲು ಅರ್ಜಿ ಸಲ್ಲಿಸಿದ್ದಾರೆ. ಆಗಸ್ಟ್​ 28ಕ್ಕೆ ಅವರ ಅರ್ಜಿಯ ವಿಚಾರಣೆ ಮುಂದೂಡಿಕೆ ಆಗಿದೆ. ಆ ಬಗ್ಗೆ ವಿವರ ಇಲ್ಲಿದೆ..

‘ಮಹಿಳೆ ಎಂಬುದು ಪರಿಗಣಿಸಿ ಜಾಮೀನು ನೀಡಿ’: ಪವಿತ್ರಾ ಗೌಡ ಪರ ವಕೀಲರ ಮನವಿ
ರೇಣುಕಾಸ್ವಾಮಿ, ಪವಿತ್ರಾ ಗೌಡ
Edited By:

Updated on: Aug 27, 2024 | 6:23 PM

ರೇಣುಕಾ ಸ್ವಾಮಿ ಕೊಲೆ ಕೇಸ್​ನಲ್ಲಿ ಎ1 ಆಗಿರುವ ಪವಿತ್ರಾ ಗೌಡ ಜಾಮೀನು ಪಡೆಯಲು ಪ್ರಯತ್ನಿಸುತ್ತಿದ್ದಾರೆ. ಅವರ ಜಾಮೀನು ಅರ್ಜಿ ಈಗಾಗಲೇ ಹಲವು ಬಾರಿ ಮುಂದೂಡಲ್ಪಟ್ಟಿದೆ. ಇಂದು (ಆಗಸ್ಟ್​ 27) ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್​​ನಲ್ಲಿ ಪವಿತ್ರಾ ಗೌಡ ಅವರ ಜಾಮೀನು ಅರ್ಜಿಯ ವಿಚಾರಣೆ ಮಾಡಲಾಗಿದೆ. ಆದರೆ ಬುಧವಾರಕ್ಕೆ (ಆ.28) ವಿಚಾರಣೆ ಮುಂದೂಡಿಕೆ ಆಗಿದೆ. ನಾಳೆ ಮಧ್ಯಾಹ್ನ 2.45ಕ್ಕೆ ವಿಚಾರಣೆ ನಡೆಯಲಿದೆ. ಪವಿತ್ರಾ ಗೌಡ, ದರ್ಶನ್​ ಹಾಗೂ ಸಹಚರರ ಮೇಲೆ ಇರುವುದು ಗಂಭೀರ ಆರೋಪ ಆದ್ದರಿಂದ ಹಲವು ಆಯಾಮದಲ್ಲಿ ತನಿಖೆ ಮಾಡಲಾಗಿದೆ.

ಜಾಮೀನು ಪಡೆಯಲು ಪವಿತ್ರಾ ಗೌಡ ಪರವಾಗಿ ಹಿರಿಯ ವಕೀಲರಾದ ಟಾಮಿ ಸೆಬಾಸ್ಟಿಯನ್ ವಾದ ಮಂಡಿಸಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪು ಉಲ್ಲೇಖಿಸಿ ವಕೀಲರು ವಾದ ಮಾಡಿದ್ದಾರೆ. ‘ರೇಣುಕಾಸ್ವಾಮಿ ಕಪಾಳಕ್ಕೆ ಪವಿತ್ರಾ ಹೊಡೆದಿದ್ದಾರೆಂದು ಆರೋಪಿಸಲಾಗಿದೆ. ಆದರೆ ಆಕೆ ಕೊಲೆಯ ಒಳಸಂಚಿನ ಭಾಗ ಎನ್ನಲಾಗುವುದಿಲ್ಲ. ಸಂಪೂರ್ಣ ಕೇಸನ್ನು ಆರೋಪಿಗಳ ಸ್ವಇಚ್ಛಾ ಹೇಳಿಕೆ ಆಧರಿಸಲಾಗಿದೆ. ಯಾವುದೇ ಪ್ರತ್ಯಕ್ಷದರ್ಶಿ ಹೇಳಿಕೆ ದಾಖಲಾಗಿಲ್ಲ. ಕೊಲೆಯ ಸಂಚೇ ಅಥವಾ ಆಕಸ್ಮಿಕ ಸಾವೇ ಎಂಬುದು ನಂತರ ತಿಳಿಯಬೇಕಿದೆ. ತನಿಖೆ ಸಂಪೂರ್ಣವಾಗಿ ಮುಕ್ತಾಯವಾಗಿದೆ. ಮಹಿಳೆ ಎಂಬುದನ್ನು ಪರಿಗಣಿಸಿ ಜಾಮೀನು ನೀಡಬೇಕು’ ಎಂದು ವಕೀಲರು ಮನವಿ ಮಾಡಿದ್ದಾರೆ.

ದರ್ಶನ್​ ಜೊತೆ ಪವಿತ್ರಾ ಗೌಡ ಅವರಿಗೆ ಆಪ್ತ ಒಡನಾಟ ಇದೆ. ದರ್ಶನ್​ ಹಾಗೂ ವಿಜಯಲಕ್ಷ್ಮೀ ಸಂಸಾರದಲ್ಲಿ ಬಿರುಕು ಮೂಡಲು ಪವಿತ್ರಾ ಕಾರಣ ಎಂಬುದನ್ನು ಹೊಸದಾಗಿ ಹೇಳಬೇಕಾಗಿದ್ದಿಲ್ಲ. ಪವಿತ್ರಾಗೆ ಅಶ್ಲೀಲ ಮೆಸೇಜ್​ ಬಂದಿದ್ದರಿಂದಲೇ ದರ್ಶನ್​ ಹಾಗೂ ಡಿ-ಗ್ಯಾಂಗ್​ ಸದಸ್ಯರು ರೇಣುಕಾ ಸ್ವಾಮಿಯನ್ನು ಅಪಹರಿಸಿ ಕೊಂದರು ಎಂಬ ಆರೋಪ ಇದೆ. ದರ್ಶನ್, ಪವಿತ್ರಾ ಗೌಡ ಸೇರಿ ಅನೇಕರು ಈ ಕೇಸ್​ನಲ್ಲಿ ಜೈಲು ಸೇರಿದ್ದಾರೆ.

ಇದನ್ನೂ ಓದಿ: ದರ್ಶನ್​ ರೀತಿ ನಾನು ಕೂಡ ಸಹವಾಸ ದೋಷದಿಂದ ಜೈಲಿಗೆ ಹೋದೆ: ಘಟನೆ ಮೆಲುಕು ಹಾಕಿದ ಸಂಜನಾ

ಈ ಕೇಸ್​ನಲ್ಲಿ ದರ್ಶನ್​ಗೆ ಜಾಮೀನು ಸಿಗುವುದು ಕಷ್ಟ ಆಗಿದೆ. ಇನ್ನೇನು ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಬೇಕು ಎಂಬಷ್ಟರಲ್ಲಿ ಜೈಲಿನಿಂದ ಶಾಕಿಂಗ್​ ಫೋಟೋ ಮತ್ತು ವಿಡಿಯೋಗಳು ಲೀಕ್​ ಆದವು. ಪರಪ್ಪನ ಅಗ್ರಹಾರದ ಜೈಲಿನ ನಿಯಮಗಳನ್ನು ಉಲ್ಲಂಘಿಸಿ, ದರ್ಶನ್​ಗೆ ರಾಜಾತಿಥ್ಯ ನೀಡಲಾಗಿದೆ ಎಂಬುದಕ್ಕೆ ಈ ಫೋಟೋ ಸಾಕ್ಷಿ ಒದಗಿಸಿದೆ. ಈ ಹಿನ್ನೆಲೆಯಲ್ಲಿ ಹೊಸ 3 ಎಫ್​ಐಆರ್​ ದಾಖಲಾಗಿವೆ. ಅವುಗಳಲ್ಲಿ 2ರಲ್ಲಿ ದರ್ಶನ್​ ಎ1 ಆಗಿದ್ದಾರೆ. ಈ ಕಾರಣದಿಂದ ಜಾಮೀನು ಪಡೆಯುವುದು ಅವರಿಗೆ ಇನ್ನಷ್ಟು ಕಷ್ಟ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Loading...
Unable to load recommendations.
Follow Us