ಶಿವರಾಜ್ ಕುಮಾರ್ ಚುನಾವಣೆ ಪ್ರಚಾರ ಕುರಿತು ಸಂಬರ್ಗಿ ವ್ಯಂಗ್ಯ, ಮಾತು ವಾಪಸ್ ತೆಗೊಳ್ಳಿ ಎಂದ ಶಿವಣ್ಣ

|

Updated on: May 06, 2023 | 5:41 PM

Shiva Rajkumar: ಶಿವರಾಜ್ ಕುಮಾರ್ ಚುನಾವಣೆ ಪ್ರಚಾರದ ಬಗ್ಗೆ ಕೀಳು ಅಭಿರುಚಿಯ ಪೋಸ್ಟ್ ಅನ್ನು ಮಾಜಿ ಬಿಗ್​ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ ಹಂಚಿಕೊಂಡಿದ್ದರು. ಈ ಬಗ್ಗೆ ಶಿವಣ್ಣ ಪ್ರತಿಕ್ರಿಯಿಸಿದ್ದಾರೆ.

ಶಿವರಾಜ್ ಕುಮಾರ್ ಚುನಾವಣೆ ಪ್ರಚಾರ ಕುರಿತು ಸಂಬರ್ಗಿ ವ್ಯಂಗ್ಯ, ಮಾತು ವಾಪಸ್ ತೆಗೊಳ್ಳಿ ಎಂದ ಶಿವಣ್ಣ
ಶಿವಣ್ಣ-ಪ್ರಶಾಂತ್ ಸಂಬರ್ಗಿ
Follow us on

ಮಾಜಿ ಬಿಗ್​ಬಾಸ್ ಸ್ಪರ್ಧಿ ಪ್ರಶಾಂತ್ ಸಂಬರ್ಗಿ (Prashanth Sambargi) ಬಿಜೆಪಿ ಬೆಂಬಲಿಗರಾಗಿದ್ದು, ಸದಾ ಸಾಮಾಜಿಕ ಜಾಲತಾಣದಲ್ಲಿ (Social Media) ಕಾಂಗ್ರೆಸ್ ವಿರುದ್ಧ ಟೀಕೆ, ವ್ಯಂಗ್ಯಗಳನ್ನು ಮಾಡುತ್ತಾ ಪೋಸ್ಟ್​ಗಳನ್ನು ಹಾಕುತ್ತಿರುತ್ತಾರೆ. ಎದುರಾಳಿಗಳನ್ನು ಟೀಕಿಸಲು ವ್ಯಂಗ್ಯ, ಹೀಗಳೆಯುವ ಪೋಸ್ಟ್​ಗಳನ್ನೇ ಹೆಚ್ಚಾಗಿ ಬಳಸುತ್ತಾ ಬಂದಿದ್ದಾರೆ ಪ್ರಶಾಂತ್ ಸಂಬರ್ಗಿ. ಇತ್ತೀಚೆಗಷ್ಟೆ ಸುದೀಪ್ ಅವರು ತಾವು ಬಿಜೆಪಿ ಪರ ಪ್ರಚಾರ ಮಾಡುತ್ತಿರುವುದಾಗಿ ಘೋಷಿಸಿದಾಗ ಹೊಗಳಿದ್ದ ಸಂಬರ್ಗಿ, ಇದೀಗ ಶಿವರಾಜ್ ಕುಮಾರ್ (Shiva Rajkumar) ಕಾಂಗ್ರೆಸ್ ಪರ ಪ್ರಚಾರ ಮಾಡುತ್ತಿರುವುದನ್ನು ಟೀಕಿಸಿದ್ದು, ಶಿವಣ್ಣ ಹಣ ಪಡೆದು ಪ್ರಚಾರ ಮಾಡುತ್ತಿದ್ದಾರೆ ಎಂದಿದ್ದಾರೆ, ಮಾತ್ರವಲ್ಲದೆ ಅವಾಚ್ಯ ಅರ್ಥ ಹೊಮ್ಮಿಸುವ ಪದದ ಬಳಕೆಯನ್ನೂ ಮಾಡಿದ್ದಾರೆ.

ಶಿವಣ್ಣನ ಚುನಾವಣಾ ಪ್ರಚಾರದ ಬಗ್ಗೆ ಪೋಸ್ಟ್ ಮಾಡಿರುವ ಪ್ರಶಾಂತ್ ಸಂಬರ್ಗಿ, ”ಶಿವಣ್ಣ ಯಾವತ್ತೂ ಸ್ಕ್ರಿಪ್ಟ್ ಕೇಳೋದೆ ಇಲ್ಲ ಪೇಮೆಂಟ್ ಅಷ್ಟೆ ಮುಖ್ಯ. ಒಪ್ಪಿಕೊಂಡ ಪಾತ್ರ ಮಾಡ್ತಾರೆ. ತುಂಬಾ ಎಮೋಷನಲ್ ಜೀವಿ ನಮ್ಮ ಶಿವಣ್ಣ. ಸಿನಿಮಾ ಫ್ಲಾಪ್ ಆದರೂ ಅವರು ಕೇಳೊಲ್ಲ. ಮತ್ತೆ ಪೇಮೆಂಟ್ ತಗೋಂದು ಇನ್ನೊಂದು ಸಿನಿಮಾ ಸೈನ್ ಮಾಡ್ತಾರೆ. ರಾಜಕೀಯದಲ್ಲೂ ಅದೇ ಸೂತ್ರ ಬಳಸುತ್ತಿದ್ದಾರೆ. ಕ್ಯಾಂಡಿಡೇಟ್ ಗೆದ್ರೆ ಏನು ಸೋತ್ರೆ ಏನು, ಎಲ್ಲಾ ಒಂದೇ, ಪ್ಯಾಕೆಟ್ ಬಂತಾ? ಸರಿ ಆಲ್​ರೈಟ್ ಮುಂದಕ್ಕೆ ಹೋಗೋಣ” ಎಂಬ ಕೀಳು ಅಭಿರುಚಿಯ ಪೋಸ್ಟ್ ಅನ್ನು ಪ್ರಶಾಂತ್ ಸಂಬರ್ಗಿ ಹಂಚಿಕೊಂಡಿದ್ದರು. ಇದೇ ಪೋಸ್ಟ್​ನಲ್ಲಿ ಅವಾಚ್ಯ ಅರ್ಥ ಹೊಮ್ಮುವ ಪದದ ಬಳಕೆಯನ್ನೂ ಮಾಡಿದ್ದಾರೆ.

ಇಂದು (ಮೇ 06) ಹುಬ್ಬಳ್ಳಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಜಗದೀಶ್ ಶೆಟ್ಟರ್ ಪರವಾಗಿ ಚುನಾವಣಾ ಪ್ರಚಾರ ನಡೆಸಿದ ನಟ ಶಿವರಾಜ್ ಕುಮಾರ್ ಅವರಿಗೆ ಮಾಧ್ಯಮಗಳು ಪ್ರಶಾಂತ್ ಸಂಬರ್ಗಿಯ ಪೋಸ್ಟ್​​ ಬಗ್ಗೆ ತಿಳಿಸಿದರು. ಇದಕ್ಕೆ ತಮಾಷೆಯಾಗಿ ಪ್ರತಿಕ್ರಿಯಿಸಿದ ಶಿವಣ್ಣ, ”ನಮಗೆ ಹಣ ಮುಖ್ಯಾನಾ? ಹೌದಾ, ನಮ್ಮ ಹತ್ರ ದುಡ್ಡಿಲ್ವ? ಎಂದು ತಮಾಷೆಯಾಗಿ ಪ್ರಶ್ನಿಸಿದ ಶಿವಣ್ಣ, ಬಳಿಕ, ”ಆ ಮಾತು ವಾಪಸ್ ತಗೊಳ್ಳಿ, ಸಿನಿಮಾ ಜಾಸ್ತಿ ಇದೆ ಎಂಬ ಕಾರಣಕ್ಕೆ ಬೇರೆ ಥರ ಮಾತನಾಡುವುದಲ್ಲ. ನಾನು ಹಣ ಪಡೆದು ಯಾರಿಗಾಗಿಯೂ ಇಲ್ಲಿ ಬಂದಿಲ್ಲ. ನನ್ನ ಹೃದಯದಿಂದ ಬಂದಿದ್ದೀನಿ, ಒಬ್ಬ ಮನುಷ್ಯನಾಗಿ ಬಂದಿದ್ದೀನಿ. ವ್ಯಾಪಾರಕ್ಕಾಗಿ ಬಂದಿಲ್ಲ. ಪ್ರೀತಿ-ವಿಶ್ವಾಸಕ್ಕಾಗಿ ಬಂದಿದ್ದೀನಿ. ಬೇರೆ ಯಾರನ್ನೂ ಟೀಕೆ ಮಾಡಲು ನಾನು ಬಂದಿಲ್ಲ. ನಾನು ಇಂದು ಜಗದೀಶ್ ಶೆಟ್ಟರ್ ಅವರ ಬಗ್ಗೆ ಮಾತನಾಡೋಕೆ ಬಂದಿದ್ದೀನಿ. ಅವರ ಬಗ್ಗೆ ಮಾತನಾಡುತ್ತೀನಿ. ಬೇರೆಯವರ ಬಗ್ಗೆ ನಾನು ಟೀಕೆ ಮಾಡುವುದಿಲ್ಲ, ಎಂದಾದರೂ ಬೇರೆಯವರ ಬಗ್ಗೆ ಟೀಕೆ ಮಾಡಿದ್ದೀನಾ? ತಿಳಿಸಿ” ಎಂದು ಪ್ರಶ್ನೆ ಮಾಡಿದರು.

ಇದನ್ನೂ ಓದಿ:ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಸೇರ್ಪಡೆ ಹಿನ್ನೆಲೆ, ರಾಜ್​ಕುಮಾರ್ ಮೆಚ್ಚಿನ ರಾಜಕಾರಣಿಯ ನೆನೆದ ಚಿನ್ನೇಗೌಡ್ರು

ಶಿವಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಹೆದರಿ ಪ್ರಶಾಂತ್ ಸಂಬರ್ಗಿ, ತಾವು ಶಿವರಾಜ್ ಕುಮಾರ್ ಬಗ್ಗೆ ಹಂಚಿಕೊಂಡಿದ್ದ ಕಳಪೆ ಅಭಿರುಚಿಯ ಪೋಸ್ಟ್ ಅನ್ನು ಡಿಲೀಟ್ ಮಾಡಿದ್ದಾರೆ. ಪ್ರಶಾಂತ್ ಸಂಬರ್ಗಿ ಹೀಗೆ ಇತರರ ಬಗ್ಗೆ ವ್ಯಂಗ್ಯವಾಗಿ, ಅಗೌರವದಿಂದ ಟ್ವೀಟ್ ಮಾಡಿ ಆ ನಂತರ ಡಿಲೀಟ್ ಮಾಡಿರುವುದು ಇದು ಮೊದಲೇನೂ ಅಲ್ಲ. ಈ ಹಿಂದೆ ಮಾಜಿ ಪ್ರಧಾನಿ ದೇವೇಗೌಡ ಅವರ ಬಗ್ಗೆ ಅಗೌರವದ, ಕಳಪೆ ಅಭಿರುಚಿಯ ಟ್ವೀಟ್ ಮಾಡಿದ್ದರು ಅವರ ವಿರುದ್ಧ ದೂರು ದಾಖಲಾದ ಬಳಿಕ ಡಿಲೀಟ್ ಮಾಡಿ ಕ್ಷಮೆ ಸಹ ಕೇಳಿದರು. ಜಮೀರ್ ಅಹ್ಮದ್ ವಿರುದ್ಧವೂ ಹಿಂದೊಮ್ಮೆ ಟ್ವೀಟ್ ಮಾಡಿ, ಮಾನನಷ್ಟ ಮೊಕದ್ದಮೆ ಎದುರಿಸುತ್ತಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On - 5:17 pm, Sat, 6 May 23