Yuvarathnaa: ನಾಲ್ಕು ದಿನ ಮೊದಲೇ ಅಬ್ಬರಿಸೋಕೆ ಬಂದ ಯುವರತ್ನ! ಪುನೀತ್ ಚಿತ್ರಕ್ಕೆ ಬುಕ್ಕಿಂಗ್​ ಶುರು

Puneeth Rajkumar: ರಾಜ್ಯದ ಅನೇಕ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಯುವರತ್ನನ ಸ್ವಾಗತಕ್ಕೆ ಅದ್ದೂರಿಯಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮುಂಗಡ ಟಿಕೆಟ್​ ಬುಕ್ಕಿಂಗ್ ಆರಂಭ ಆಗಿರುವುದರಿಂದ ವಾತಾವರಣದ ರಂಗು ಹೆಚ್ಚಿದೆ.

Yuvarathnaa: ನಾಲ್ಕು ದಿನ ಮೊದಲೇ ಅಬ್ಬರಿಸೋಕೆ ಬಂದ ಯುವರತ್ನ! ಪುನೀತ್ ಚಿತ್ರಕ್ಕೆ ಬುಕ್ಕಿಂಗ್​ ಶುರು
ಪುನೀತ್​ ರಾಜ್​ಕುಮಾರ್​ ಯುವರತ್ನ

Updated on: Mar 28, 2021 | 9:45 AM

ಪವರ್​ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಅಭಿಮಾನಿಗಳು ಏ.1ಕ್ಕಾಗಿ ಕಾಯುತ್ತಿದ್ದಾರೆ. ಅಂದು ಬಹುನಿರೀಕ್ಷಿತ ಯುವರತ್ನ ಸಿನಿಮಾ ಬಿಡುಗಡೆ ಆಗಲಿದೆ. ಕೊರೊನಾ, ಲಾಕ್​ಡೌನ್​ ಮುಂತಾದ ವಿಘ್ನಗಳನ್ನು ಕಳೆದುಕೊಂಡು ಬಹುದಿನಗಳ ಬಳಿಕ ದೊಡ್ಡ ಪರದೆ ಮೇಲೆ ಅಪ್ಪು ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಾಗಿ ಈ ಸಿನಿಮಾ ಮೇಲೆ ಭರ್ಜರಿ ನಿರೀಕ್ಷೆ ಇದೆ. ಬಿಡುಗಡೆ ಆಗುವುದಕ್ಕೂ ನಾಲ್ಕು ದಿನ ಮುನ್ನವೇ ಯುವರತ್ನನ ಅಬ್ಬರ ಶುರು ಆಗಿದೆ.

ಮಾ.28ರ ಬೆಳಗ್ಗೆಯೇ ಆನ್​ಲೈನ್​ನಲ್ಲಿ ಮುಂಗಡ ಟಿಕೆಟ್​ ಬುಕ್ಕಿಂಗ್​ ಶುರು ಆಗಿದೆ. ಅಭಿಮಾನಿಗಳು ಫಸ್ಟ್​ ಡೇ ಫಸ್ಟ್​ ಶೋ ನೋಡಬೇಕು ಎಂದು ಕಾದು ಕುಳಿತಿದ್ದು, ಮೊದಲ ದಿನದ ಟಿಕೆಟ್​ ಪಡೆಯಲು ಉತ್ಸುಕರಾಗಿದ್ದಾರೆ. ರಾಜ್ಯದ ಅನೇಕ ಚಿತ್ರಮಂದಿರಗಳು ಮತ್ತು ಮಲ್ಟಿಪ್ಲೆಕ್ಸ್​ಗಳಲ್ಲಿ ಯುವರತ್ನನ ಸ್ವಾಗತಕ್ಕೆ ಅದ್ದೂರಿಯಾಗಿ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಮುಂಗಡ ಟಿಕೆಟ್​ ಬುಕ್ಕಿಂಗ್ ಆರಂಭ ಆಗಿರುವುದರಿಂದ ವಾತಾವರಣದ ರಂಗು ಹೆಚ್ಚಿದೆ.

ನಿರ್ದೇಶಕ ಸಂತೋಷ್​ ಆನಂದ್​ರಾಮ್​ ಮತ್ತು ನಟ ಪುನೀತ್​ ರಾಜ್​ಕುಮಾರ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ಈ ಸಿನಿಮಾ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಹೆಚ್ಚಲು ಹಲವು ಕಾರಣಗಳಿವೆ. ಬಹು ವರ್ಷಗಳ ಬಳಿಕ ಪುನೀತ್ ರಾಜ್​ಕುಮಾರ್​ ಅವರು ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಹಾಗಂತ ಇಡೀ ಸಿನಿಮಾದಲ್ಲಿ ಅವರು ಅದೊಂದೇ ಗೆಟಪ್​ನಲ್ಲಿ ಇರುವುದಿಲ್ಲ. ಅವರ ಪಾತ್ರಕ್ಕೆ ಬೇರೆ ಬೇರೆ ಶೇಡ್​ಗಳು ಇವೆ ಎಂಬುದು ಕೂಡ ಟ್ರೇಲರ್​ ಮೂಲಕ ಗೊತ್ತಾಗಿದೆ.

ಸ್ಯಾಂಡಲ್​ವುಡ್​ನಲ್ಲಿ ಸಂತೋಷ್​ ಆನಂದ್​ರಾಮ್​ ಅವರು ಭರವಸೆಯ ನಿರ್ದೇಶಕ ಎನಿಸಿಕೊಂಡಿದ್ದಾರೆ. ಮಿಸ್ಟರ್​ ಆ್ಯಂಡ್​ ಮಿಸಸ್​ ರಾಮಾಚಾರಿ, ರಾಜಕುಮಾರ್​ ಮೂಲಕ ಅವರು ಬ್ಲಾಕ್​ಬಸ್ಟರ್​ ಹಿಟ್​ ನೀಡಿದ್ದರು. ಈಗ ಹ್ಯಾಟ್ರಿಕ್​ ಬಾರಿಸುವ ನಿರೀಕ್ಷೆಯಲ್ಲಿದ್ದಾರೆ. ರಾಜಕುಮಾರ ಬಳಿಕ ಪುನೀತ್​ ಜೊತೆ ಅವರು ಎರಡನೇ ಬಾರಿ ಕೈ ಜೋಡಿಸಿರುವುದರಿಂದ ಈ ಚಿತ್ರದ ಮೇಲೆ ಹೈಪ್​ ಸೃಷ್ಟಿ ಆಗಿದೆ. ಪುನೀತ್​ ರಾಜ್​ಕುಮಾರ್​ ಅವರಿಗೆ ಜೋಡಿಯಾಗಿ ಸಾಯೇಷಾ ನಟಿಸಿದ್ದಾರೆ.

ಈಗಾಗಲೇ ಬಿಡುಗಡೆ ಆಗಿರುವ ಹಾಡುಗಳು ಮತ್ತು ಟ್ರೇಲರ್​ ಅಪ್ಪು ಅಭಿಮಾನಿಗಳನ್ನು ಖುಷಿಪಡಿಸಿವೆ. ಪವರ್ ಆಫ್​ ಯೂತ್​ ಪ್ರೋಮೋ ಸಾಂಗ್​ನಲ್ಲಿ ಪುನೀತ್​ ಮಾಡಿರುವ ಡ್ಯಾನ್ಸ್​ಗೆ ಫ್ಯಾನ್ಸ್​ ಫಿದಾ ಆಗಿದ್ದಾರೆ. ಸೋನು ಗೌಡ, ಡಾಲಿ ಧನಂಜಯ​, ಪ್ರಕಾಶ್​ ರೈ, ದಿಗಂತ್​, ಸಾಯಿ ಕುಮಾರ್​ ಮುಂತಾದವರು ಕೂಡ ಚಿತ್ರದಲ್ಲಿ ಪ್ರಮುಖ ಪಾತ್ರಗಳನ್ನು ನಿಭಾಯಿಸಿದ್ದಾರೆ. ಪ್ರತಿಷ್ಠಿತ ಹೊಂಬಾಳೆ ಫಿಲ್ಸ್ಮ್​ ಬ್ಯಾನರ್​ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.

ಇದನ್ನೂ ಓದಿ: ತೆಲುಗು ಸ್ಟಾರ್​ ನಟನ ಎದುರು ಪುನೀತ್​ ಬಾಕ್ಸ್​ ಆಫೀಸ್​ ವಾರ್​! ಯುವರತ್ನ ಚಿತ್ರದ ಎದುರಾಳಿ ಯಾರು?

Published On - 9:45 am, Sun, 28 March 21

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us