ಮಗಳ ಸ್ಮಗ್ಲಿಂಗ್ ದಂಧೆ ಬಗ್ಗೆ ನನಗೆ ಗೊತ್ತಿರಲಿಲ್ಲ: ರನ್ಯಾ ತಂದೆ, ಡಿಜಿಪಿ ರಾಮಚಂದ್ರ ರಾವ್ ಪ್ರತಿಕ್ರಿಯೆ

ಐಪಿಎಸ್ ಅಧಿಕಾರಿ, ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಮಗಳು ನಟಿ ರನ್ಯಾ ರಾವ್ ಜೈಲುಪಾಲಾಗಿದ್ದಾರೆ. ವಿದೇಶದಿಂದ ಚಿನ್ನ ಕಳ್ಳ ಸಾಗಣಿಕೆ ಮಾಡಿದ ಆರೋಪದಲ್ಲಿ ಅವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಘಟನೆ ಕುರಿತಂತೆ ರಾಮಚಂದ್ರ ರಾವ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಮಗಳ ಸ್ಮಗ್ಲಿಂಗ್ ದಂಧೆ ಬಗ್ಗೆ ನನಗೆ ಗೊತ್ತಿರಲಿಲ್ಲ: ರನ್ಯಾ ತಂದೆ, ಡಿಜಿಪಿ ರಾಮಚಂದ್ರ ರಾವ್ ಪ್ರತಿಕ್ರಿಯೆ
Ranya Rao

Updated on: Mar 05, 2025 | 10:47 PM

ನಟಿ ರನ್ಯಾ ರಾವ್ ಅವರು ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರಿಂದಾಗಿ ಅವರ ಕುಟುಂಬಕ್ಕೆ ಮುಜುಗರ ಉಂಟಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಮಲಮಗಳಾದ ರನ್ಯಾ ರಾವ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮಗಳ ಬಂಧನದ ಬಗ್ಗೆ ರಾಮಚಂದ್ರ ರಾವ್ ಅವರು ಎಎನ್​ಐ ನ್ಯೂಸ್ ಏಜೆನ್ಸಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮಗೂ ಕೂಡ ಈ ವಿಷಯ ಮಾಧ್ಯಮದ ಮೂಲಕ ತಿಳಿಯಿತು ಎಂದು ಅವರು ಹೇಳಿದ್ದಾರೆ. ಹಲವು ದಿನಗಳಿಂದ ಮಗಳ ಜೊತೆ ತಾವು ಸಂಪರ್ಕದಲ್ಲಿ ಇಲ್ಲ ಎಂದು ರಾಮಚಂದ್ರ ರಾವ್ ಹೇಳಿದ್ದಾರೆ.

‘ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದಾಗ ನನಗೆ ಶಾಕ್ ಆಯಿತು. ಈ ವಿಚಾರದ ಬಗ್ಗೆ ನನಗೆ ತಿಳಿದಿರಲಿಲ್ಲ. ಯಾವುದೇ ತಂದೆಯ ರೀತಿಯಲ್ಲಿ ನನಗೆ ಕೂಡ ಆಘಾತ ಆಯಿತು. ರನ್ಯಾ ನಮ್ಮ ಜೊತೆ ವಾಸ ಮಾಡುತ್ತಿಲ್ಲ. ಗಂಡನ ಜೊತೆ ಅವಳು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾಳೆ’ ಎಂದು ರಾಮಚಂದ್ರ ರಾವ್ ಅವರು ಹೇಳಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ರನ್ಯಾ ವಿವಾಹ ನಡೆದಿತ್ತು.

ಇದನ್ನೂ ಓದಿ
ಅಪ್ಪ ಪೋಲಿಸ್.. ಮಗಳು ಕಳ್ಳಿ.. ನಟಿ ರನ್ಯಾ ಚಿನ್ನದ ರಹಸ್ಯ!
ನಟಿ ರನ್ಯಾ ಚಿನ್ನ ಸ್ಮಗ್ಲಿಂಗ್​ನಲ್ಲಿ ಮಲತಂದೆ ಡಿಜಿಪಿಯ ಕೈವಾಡವೂ ಇತ್ತೇ?
ರನ್ಯಾ ರಾವ್ ಪ್ರಕರಣ, ಚಿನ್ನ, ನಗದು ಸೇರಿ 17.29 ಕೋಟಿ ಪತ್ತೆ
ಚಿನ್ನ ಕಳ್ಳಸಾಗಣೆ: ಮಾರ್ಚ್ 18ರವರೆಗೆ ನಟಿ ರನ್ಯಾ ರಾವ್​ಗೆ ನ್ಯಾಯಾಂಗ ಬಂಧನ

ಮಗಳ ಸಂಸಾರದಲ್ಲಿ ಏನೋ ಸಮಸ್ಯೆ ಉಂಟಾಗಿರಬಹುದು ಎಂದು ರಾಮಚಂದ್ರ ರಾವ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ‘ಕೌಟುಂಬಿಕ ಕಾರಣದಿಂದ ಅವರ ನಡುವೆ ಏನೋ ಸಮಸ್ಯೆ ಆಗಿರಬಹುದು. ಏನೇ ಆದರೂ ಕಾನೂನು ತನ್ನ ಕೆಲಸ ಮಾಡಲಿದೆ. ನನ್ನ ವೃತ್ತಿಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲ. ಹೆಚ್ಚು ಏನೂ ಹೇಳಲು ನಾನು ಇಷ್ಟಪಡಲ್ಲ’ ಎಂದು ರಾಮಚಂದ್ರ ರಾವ್ ಹೇಳಿದ್ದಾರೆ.

ಇದನ್ನೂ ಓದಿ: 4 ತಿಂಗಳ ಹಿಂದೆಯೇ ನಡೆದಿತ್ತು ನಟಿ ರನ್ಯಾ ರಾವ್ ಮದುವೆ; ಬಂಧನದ ಬಳಿಕ ಹಲವು ರಹಸ್ಯ ಬಯಲು

ಘಟನೆಯ ವಿವರ:

ನಟಿ ರನ್ಯಾ ಅವರು ದುಬೈನಿಂದ ಬರುವಾಗ ಅಕ್ರಮವಾಗಿ 14 ಕೆಜಿ ಚಿನ್ನವನ್ನು ಸಾಗಿಸುತ್ತಿದ್ದರು. ಅಧಿಕಾರಿಗಳ ಕಣ್ಣು ತಪ್ಪಿಸಲು ಅವರು ಪ್ರಯತ್ನಿಸಿದ್ದರು. ಆದರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಯಿತು. ಕೆಲವೇ ದಿನಗಳ ಅಂತರದಲ್ಲಿ 10 ಬಾರಿ ರನ್ಯಾ ಅವರು ದುಬೈಗೆ ಪ್ರಯಾಣ ಮಾಡಿದ್ದರು. ಹಾಗಾಗಿ ಅವರ ಚಲನವಲನದ ಮೇಲೆ ಡಿಆರ್​ಐ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಈ ಪ್ರಕರಣದಲ್ಲಿ ಇನ್ನೂ ಅನೇಕರು ಭಾಗಿ ಆಗಿರುವ ಶಂಕೆ ಇದೆ. ರನ್ಯಾ ಅವರ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸಿ ಕೆಲವು ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಕನ್ನಡದ ಮಾಣಿಕ್ಯ, ಪಟಾಕಿ ಸಿನಿಮಾದಲ್ಲಿ ರನ್ಯಾ ಅವರು ನಟಿಸಿದ್ದಾರೆ. ಆ ಬಳಿಕ ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us