ನಟಿ ರನ್ಯಾ ರಾವ್ ಅವರು ಚಿನ್ನ ಕಳ್ಳ ಸಾಗಾಣಿಕೆ ಪ್ರಕರಣದಲ್ಲಿ ಸಿಕ್ಕಿಬಿದ್ದಿದ್ದಾರೆ. ಇದರಿಂದಾಗಿ ಅವರ ಕುಟುಂಬಕ್ಕೆ ಮುಜುಗರ ಉಂಟಾಗಿದೆ. ಹಿರಿಯ ಪೊಲೀಸ್ ಅಧಿಕಾರಿ ಡಿಜಿಪಿ ಕೆ. ರಾಮಚಂದ್ರ ರಾವ್ ಅವರ ಮಲಮಗಳಾದ ರನ್ಯಾ ರಾವ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮಗಳ ಬಂಧನದ ಬಗ್ಗೆ ರಾಮಚಂದ್ರ ರಾವ್ ಅವರು ಎಎನ್ಐ ನ್ಯೂಸ್ ಏಜೆನ್ಸಿಗೆ ಪ್ರತಿಕ್ರಿಯೆ ನೀಡಿದ್ದಾರೆ. ತಮಗೂ ಕೂಡ ಈ ವಿಷಯ ಮಾಧ್ಯಮದ ಮೂಲಕ ತಿಳಿಯಿತು ಎಂದು ಅವರು ಹೇಳಿದ್ದಾರೆ. ಹಲವು ದಿನಗಳಿಂದ ಮಗಳ ಜೊತೆ ತಾವು ಸಂಪರ್ಕದಲ್ಲಿ ಇಲ್ಲ ಎಂದು ರಾಮಚಂದ್ರ ರಾವ್ ಹೇಳಿದ್ದಾರೆ.
‘ಮಾಧ್ಯಮಗಳಲ್ಲಿ ಈ ಸುದ್ದಿ ನೋಡಿದಾಗ ನನಗೆ ಶಾಕ್ ಆಯಿತು. ಈ ವಿಚಾರದ ಬಗ್ಗೆ ನನಗೆ ತಿಳಿದಿರಲಿಲ್ಲ. ಯಾವುದೇ ತಂದೆಯ ರೀತಿಯಲ್ಲಿ ನನಗೆ ಕೂಡ ಆಘಾತ ಆಯಿತು. ರನ್ಯಾ ನಮ್ಮ ಜೊತೆ ವಾಸ ಮಾಡುತ್ತಿಲ್ಲ. ಗಂಡನ ಜೊತೆ ಅವಳು ಪ್ರತ್ಯೇಕವಾಗಿ ವಾಸ ಮಾಡುತ್ತಿದ್ದಾಳೆ’ ಎಂದು ರಾಮಚಂದ್ರ ರಾವ್ ಅವರು ಹೇಳಿದ್ದಾರೆ. ಕೆಲವು ತಿಂಗಳ ಹಿಂದಷ್ಟೇ ರನ್ಯಾ ವಿವಾಹ ನಡೆದಿತ್ತು.
On his daughter Ranya Rao arrested by DRI for allegedly smuggling gold from Dubai, Ramachandra Rao, DGP of Karnataka State Police Housing Corporation says, “I was also shocked and devastated when such an incident came to my notice through the media, I was not aware of any of…
— ANI (@ANI) March 5, 2025
ಮಗಳ ಸಂಸಾರದಲ್ಲಿ ಏನೋ ಸಮಸ್ಯೆ ಉಂಟಾಗಿರಬಹುದು ಎಂದು ರಾಮಚಂದ್ರ ರಾವ್ ಅವರು ಅನುಮಾನ ವ್ಯಕ್ತಪಡಿಸಿದ್ದಾರೆ. ‘ಕೌಟುಂಬಿಕ ಕಾರಣದಿಂದ ಅವರ ನಡುವೆ ಏನೋ ಸಮಸ್ಯೆ ಆಗಿರಬಹುದು. ಏನೇ ಆದರೂ ಕಾನೂನು ತನ್ನ ಕೆಲಸ ಮಾಡಲಿದೆ. ನನ್ನ ವೃತ್ತಿಜೀವನದಲ್ಲಿ ಯಾವುದೇ ಕಪ್ಪು ಚುಕ್ಕಿ ಇಲ್ಲ. ಹೆಚ್ಚು ಏನೂ ಹೇಳಲು ನಾನು ಇಷ್ಟಪಡಲ್ಲ’ ಎಂದು ರಾಮಚಂದ್ರ ರಾವ್ ಹೇಳಿದ್ದಾರೆ.
ಇದನ್ನೂ ಓದಿ: 4 ತಿಂಗಳ ಹಿಂದೆಯೇ ನಡೆದಿತ್ತು ನಟಿ ರನ್ಯಾ ರಾವ್ ಮದುವೆ; ಬಂಧನದ ಬಳಿಕ ಹಲವು ರಹಸ್ಯ ಬಯಲು
ನಟಿ ರನ್ಯಾ ಅವರು ದುಬೈನಿಂದ ಬರುವಾಗ ಅಕ್ರಮವಾಗಿ 14 ಕೆಜಿ ಚಿನ್ನವನ್ನು ಸಾಗಿಸುತ್ತಿದ್ದರು. ಅಧಿಕಾರಿಗಳ ಕಣ್ಣು ತಪ್ಪಿಸಲು ಅವರು ಪ್ರಯತ್ನಿಸಿದ್ದರು. ಆದರೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅವರನ್ನು ಬಂಧಿಸಲಾಯಿತು. ಕೆಲವೇ ದಿನಗಳ ಅಂತರದಲ್ಲಿ 10 ಬಾರಿ ರನ್ಯಾ ಅವರು ದುಬೈಗೆ ಪ್ರಯಾಣ ಮಾಡಿದ್ದರು. ಹಾಗಾಗಿ ಅವರ ಚಲನವಲನದ ಮೇಲೆ ಡಿಆರ್ಐ ಅಧಿಕಾರಿಗಳಿಗೆ ಅನುಮಾನ ಮೂಡಿತ್ತು. ಈ ಪ್ರಕರಣದಲ್ಲಿ ಇನ್ನೂ ಅನೇಕರು ಭಾಗಿ ಆಗಿರುವ ಶಂಕೆ ಇದೆ. ರನ್ಯಾ ಅವರ ಮನೆಯಲ್ಲಿ ಅಧಿಕಾರಿಗಳು ಶೋಧ ನಡೆಸಿ ಕೆಲವು ಸಾಕ್ಷಿಗಳನ್ನು ಸಂಗ್ರಹಿಸಿದ್ದಾರೆ. ಕನ್ನಡದ ಮಾಣಿಕ್ಯ, ಪಟಾಕಿ ಸಿನಿಮಾದಲ್ಲಿ ರನ್ಯಾ ಅವರು ನಟಿಸಿದ್ದಾರೆ. ಆ ಬಳಿಕ ಅವರು ಯಾವುದೇ ಸಿನಿಮಾದಲ್ಲಿ ನಟಿಸಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.