ರೇಣುಕಾ ಸ್ವಾಮಿ ಪ್ರಕರಣ: ಚಾರ್ಜ್​ಶೀಟ್​ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ

Renuka Swamy: ರೇಣುಕಾ ಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸುದೀರ್ಘ ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಆರೋಪ ಪಟ್ಟಿಯಲ್ಲಿ ಕನ್ನಡ ಚಿತ್ರರಂಗದ ಇಬ್ಬರು ಜನಪ್ರಿಯ ಹೆಸರು ಸಹ ಉಲ್ಲೇಖವಾಗಿದೆ. ಯಾರು ಆ ಇಬ್ಬರು ನಟಿಯರು?

ರೇಣುಕಾ ಸ್ವಾಮಿ ಪ್ರಕರಣ: ಚಾರ್ಜ್​ಶೀಟ್​ನಲ್ಲಿ ಇಬ್ಬರು ನಟಿಯರ ಹೆಸರು ಉಲ್ಲೇಖ

Updated on: Sep 10, 2024 | 10:45 AM

ರೇಣುಕಾ ಸ್ವಾಮಿ ಕೊಲೆ ಪ್ರಕರಣ ಕುರಿತಂತೆ ಪೊಲೀಸರು ಸುದೀರ್ಘವಾದ ಆರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದಾರೆ. ಆರೋಪ ಪಟ್ಟಿಯನ್ನು ಮಾನ್ಯ ಮಾಡಿರುವ ನ್ಯಾಯಾಲಯ ಆರೋಪಿಗಳ ಪರ ವಕೀಲರ ಅವಗಾಹನೆಗೆ ನೀಡಿದೆ. ರೇಣುಕಾ ಸ್ವಾಮಿ ಕೊಲೆ ಪ್ರಕರಣ ಕುರಿತಾದ ಹಲವು ಆಘಾತಕಾರಿ ವಿಷಯಗಳನ್ನು ಆರೋಪ ಪಟ್ಟಿ ಒಳಗೊಂಡಿದೆ. ಆರೋಪಿಗಳು ಪೊಲೀಸರ ಮುಂದೆ ದಾಖಲಿಸಿರುವ ಸ್ವ ಇಚ್ಛಾ ಹೇಳಿಕೆಯನ್ನು ಸಹ ಆರೋಪ ಪಟ್ಟಿ ಒಳಗೊಂಡಿದೆ. ಅಂದಹಾಗೆ ಆರೋಪ ಪಟ್ಟಿಯಲ್ಲಿ ಇಬ್ಬರು ಕನ್ನಡ ನಟಿಯರ ಹೆಸರಿನ ಉಲ್ಲೇಖವೂ ಇದೆ!

ಪ್ರಕರಣದ 14ನೇ ಆರೋಪಿ ಆಗಿರುವ ಪ್ರದೋಶ್ ದಾಖಲಿಸಿರುವ ಸ್ವ-ಇಚ್ಛಾ ಹೇಳಿಕೆ ಪ್ರಕಾರ, ರೇಣುಕಾ ಸ್ವಾಮಿ ತನ್ನ ನಕಲಿ ಇನ್​ಸ್ಟಾಗ್ರಾಂ ಖಾತೆಯಿಂದ ಕನ್ನಡದ ಇನ್ನಿಬ್ಬರು ನಟಿಯರಿಗೆ ಸಂದೇಶ ಕಳಿಸಿದ್ದನಂತೆ. ರೇಣುಕಾ ಸ್ವಾಮಿಯನ್ನು ಶೆಡ್​ಗೆ ಕರೆತಂದು ಹಲ್ಲೆ ಮಾಡುವ ಸಂದರ್ಭದಲ್ಲಿ 14ನೇ ಆರೋಪಿ ಪ್ರದೋಶ್ ರೇಣುಕಾ ಸ್ವಾಮಿಯ ಮೊಬೈಲ್ ತೆಗೆದುಕೊಂಡು ಅದರಲ್ಲಿ ಆತ ಮಾಡಿರುವ ಸಂದೇಶಗಳನ್ನು ಪರಿಶೀಲನೆ ಮಾಡಿದ್ದನಂತೆ. ಆಗ ರೇಣುಕಾ ಸ್ವಾಮಿ, ತಾನು ಬಳಸುತ್ತಿದ್ದ ಗೌತಮ್ ಕೆಎಸ್ ಹೆಸರಿನ ನಕಲಿ ಖಾತೆಯಿಂದ ನಟಿಯರಾದ ರಾಗಿಣಿ ದ್ವಿವೇದಿ ಹಾಗೂ ಶುಭ ಪೂಂಜಾ ಅವರಿಗೂ ಸಹ ಅಶ್ಲೀಲ ಸಂದೇಶ ಕಳಿಸಿದ್ದ ಎಂದು ಪ್ರದೋಶ್, ದರ್ಶನ್​ಗೆ ತಿಳಿಸಿದನಂತೆ. ಹೀಗೆಂದು ಪ್ರದೋಶ್ ತನ್ನ ಸ್ವ ಇಚ್ಛಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:ದರ್ಶನ್ ಅಲ್ಲ, ರೇಣುಕಾ ಸ್ವಾಮಿ ಕೊಲೆಯಲ್ಲಿ ಪ್ರಮುಖ ಪಾತ್ರ ಇವನದ್ದೇ..

ಇನ್ನು ಈ ಬಗ್ಗೆ ಟಿವಿ9ಗೆ ಪ್ರತಿಕ್ರಿಯೆ ನೀಡಿರುವ ನಟಿ ರಾಗಿಣಿ ದ್ವಿವೇದಿ, ‘ನನ್ನ ಸಾಮಾಜಿಕ ಜಾಲತಾಣ ಖಾತೆಗಳನ್ನು ಏಜೆನ್ಸಿಯವರು ಹ್ಯಾಂಡಲ್ ಮಾಡುತ್ತಾರೆ. ಹಾಗಾಗಿ ನನಗೆ ಯಾರು ಸಂದೇಶ ಕಳಿಸಿದ್ದಾರೆ, ಇಲ್ಲ ಎಂಬ ವಿಷಯ ನನಗೆ ತಿಳಿದು ಬಂದಿಲ್ಲ‘ ಎಂದಿದ್ದಾರೆ. ಇನ್ನು ನಟಿ ಶುಭಾ ಪೂಂಜಾ ಸಹ ಪ್ರತಿಕ್ರಿಯೆ ನೀಡಿದ್ದು, ‘ನನಗೆ ಗೌತಮ್ ಅನ್ನುವ ಹೆಸರಿನಲ್ಲಿ ಯಾವುದೇ ರೀತಿಯ ಮೇಸೆಜ್ ಬಂದಿಲ್ಲ, ಸುಖಾ ಸುಮ್ಮನೆ ನನ್ನ ಹೆಸರು ಯಾಕೆ ಪ್ರದೋಷ್ ಹೇಳಿದ್ದಾರೆ ನನಗೆ ಗೊತ್ತಿಲ್ಲ’ ಎಂದು ಶುಭಾ ಪೂಂಜಾ ಹೇಳಿದ್ದಾರೆ.

ಅಸಲಿಗೆ ರೇಣುಕಾ ಸ್ವಾಮಿ ಕೊಲೆ ನಡೆದು ಪ್ರಕರಣ ಹೊರಬಿದ್ದಾದ ಬಳಿಕ ಕೆಲವು ನಟಿಯರು ತಮಗೆ ‘ಗೌತಮ್’ ಹೆಸರಿನ ಖಾತೆಯಿಂದ ಇನ್​ಸ್ಟಾಗ್ರಾಂನಲ್ಲಿ ಅಶ್ಲೀಲ ಸಂದೇಶ ಬಂದಿದ್ದಾಗಿ ಹೇಳಿಕೊಂಡಿದ್ದರು. ತಾವು ಆ ಖಾತೆಯನ್ನು ಬ್ಲಾಕ್ ಮಾಡಿದ್ದಾಗಿಯೂ ಹೇಳಿಕೊಂಡಿದ್ದರು. ರೇಣುಕಾ ಸ್ವಾಮಿ ತನ್ನ ನಕಲಿ ಖಾತೆಯಿಂದ ಪವಿತ್ರಾ ಗೌಡಗೆ ಅಶ್ಲೀಲ ಸಂದೇಶ ಕಳಿಸಿದ್ದ, ಅದೇ ಕಾರಣಕ್ಕೆ ಆತನನ್ನು ಚಿತ್ರದುರ್ಗದಿಂದ ಅಪಹರಿಸಿಕೊಂಡು ಬೆಂಗಳೂರಿಗೆ ಕರೆತಂದು ದರ್ಶನ್ ಹಾಗೂ ಇತರರು ಸೇರಿ ಚೆನ್ನಾಗಿ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಪ್ರಕರಣದಲ್ಲಿ 17 ಆರೋಪಿಗಳನ್ನು ಬಂಧಿಸಲಾಗಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us