AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Bhargavi Narayan: ನೇತ್ರ, ದೇಹದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ ಭಾರ್ಗವಿ ನಾರಾಯಣ್

Bhargavi Narayan funeral: ಹಿರಿಯ ನಟಿ, ರಂಗಕರ್ಮಿ ಭಾರ್ಗವಿ ನಾರಾಯಣ್ ಸೋಮವಾರ ನಿಧನರಾಗಿದ್ದರು. ಅವರ ಇಚ್ಛೆಯಂತೆ ನೇತ್ರ ಹಾಗೂ ದೇಹದಾನ ಮಾಡಲು ಕುಟುಂಬದವರು ತೀರ್ಮಾನಿಸಿದ್ದಾರೆ.

Bhargavi Narayan: ನೇತ್ರ, ದೇಹದಾನದ ಮೂಲಕ ಸಾವಿನಲ್ಲೂ ಸಾರ್ಥಕತೆ ಮೆರೆದ ಹಿರಿಯ ನಟಿ ಭಾರ್ಗವಿ ನಾರಾಯಣ್
ಹಿರಿಯ ನಟಿ ಭಾರ್ಗವಿ ನಾರಾಯಣ್
TV9 Web
| Edited By: |

Updated on: Feb 15, 2022 | 12:13 PM

Share

ಬೆಂಗಳೂರು: ಹಿರಿಯ ನಟಿ, ರಂಗಕರ್ಮಿ ಭಾರ್ಗವಿ ನಾರಾಯಣ್ (Bhargavi Narayan) ಅವರು ಕಳೆದ ರಾತ್ರಿ (ಫೆಬ್ರವರಿ 14) ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 84 ವರ್ಷ ವಯಸ್ಸಾಗಿತ್ತು. ಕಿರುತೆರೆ ಹಾಗೂ ಹಿರಿತೆರೆಯಲ್ಲಿ ನಟಿಸಿದ್ದ ಭಾರ್ಗವಿ ನಾರಾಯಣ್ ತಮ್ಮ ಪಾತ್ರಪೋಷಣೆಯಿಂದ ಅಪಾರ ಅಭಿಮಾನಿ ಬಳಗ ಸಂಪಾದಿಸಿದ್ದರು. ರಂಗಕರ್ಮಿಯಾಗಿಯೂ ಅವರು ಗುರುತಿಸಿಕೊಂಡಿದ್ದರು. ಇದೀಗ ಭಾರ್ಗವಿ ನಾರಾಯಣ್ ಅವರ ಇಚ್ಚೆಯಂತೆ ನೇತ್ರದಾನ ಹಾಗೂ ದೇಹದಾನ ಮಾಡಲು ಕುಟುಂಬದವರು ನಿರ್ಧರಿಸಿದ್ದಾರೆ. ಈಗಾಗಲೇ ಕಣ್ಣುಗಳನ್ನು ದಾನ ಮಾಡಲಾಗಿದ್ದು, ಖಾಸಗಿ ಆಸ್ಪತ್ರೆಗೆ ದೇಹದಾನ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮಾದರಿ ಕಾರ್ಯದ ಮೂಲಕ ಭಾರ್ಗವಿ ಅವರು ಸಾವಿನಲ್ಲೂ ಸಾರ್ಥಕತೆ ಮೆರೆದಿದ್ದಾರೆ.

ನೇತ್ರ, ದೇಹದಾನದ ಕುರಿತು ಬೆಂಗಳೂರು ಆಕಾಶವಾಣಿ ಹಂಚಿಕೊಂಡಿರುವ ಟ್ವೀಟ್ ಇಲ್ಲಿದೆ:

ಭಾರ್ಗವಿ ನಾರಾಯಣ್ ಅವರದ್ದು ಕಲಾ ಕುಟುಂಬ. ಯಾವುದೇ ಪಾತ್ರ ಕೊಟ್ಟರೂ ಅದನ್ನು ಅನಾಯಾಸವಾಗಿ ನಿರ್ವಹಿಸುತ್ತಿದ್ದರು. ಭಾರ್ಗವಿ ಅವರ ಪತಿ ನಾರಾಯಣ್ ಅವರು ಮೇಕಪ್​ ಆರ್ಟಿಸ್ಟ್ ಆಗಿದ್ದರು. ಅವರನ್ನು ಮೇಕಪ್ ನಾಣಿ ಎಂದೇ ಗುರುತಿಸಲಾಗುತ್ತಿತ್ತು. ಭಾರ್ಗವಿ ನಾರಾಯಣ್ ಅವರ ಪುತ್ರ ಪ್ರಕಾಶ್ ಬೆಳವಾಡಿ ರಂಗಭೂಮಿ ಹಾಗೂ ಕಿರುತೆರೆಯಲ್ಲಿ ದೊಡ್ಡ ಹೆಸರು. ಕನ್ನಡ, ಹಿಂದಿ ಸೇರಿದಂತೆ ವಿವಿಧ ಚಿತ್ರರಂಗಗಳಲ್ಲಿ ಅವರು ಗುರುತಿಸಿಕೊಂಡಿದ್ದಾರೆ. ಭಾರ್ಗವಿ ಪುತ್ರಿ ಸುಧಾ ಬೆಳವಾಡಿ ಕೂಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸುಧಾ ಮಗಳು ಸಂಯುಕ್ತಾ ಹೊರನಾಡು ಅವರು ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುತ್ತಿದ್ದಾರೆ.

ಭಾರ್ಗವಿ ಅವರು 1960ರ ಸಮಯದಲ್ಲೇ ಚಿತ್ರರಂಗಕ್ಕೆ ಕಾಲಿಟ್ಟವರು. ‘ಪ್ರೊ. ಹುಚ್ಚುರಾಯ’ ಚಿತ್ರದಲ್ಲಿ ಅವರು ಪೋಷಕ ಪಾತ್ರ ಮಾಡಿದ್ದರು. ಈ ಚಿತ್ರಕ್ಕೆ ಅವರಿಗೆ ಅತ್ಯುತ್ತಮ ಪೋಷಕ ನಟಿ ರಾಜ್ಯ ಪ್ರಶಸ್ತಿ ಸಿಕ್ಕಿತ್ತು. ಇದಲ್ಲದೆ, ಹಲವು ಪ್ರಶಸ್ತಿಗಳು ಅವರಿಗೆ ಲಭಿಸಿವೆ. 2012ರಲ್ಲಿ ‘ನಾನು, ಭಾರ್ಗವಿ’ ಎಂಬ ಅವರ ಆತ್ಮಕಥನ ಬಿಡುಗಡೆ ಆಗಿತ್ತು. ಇದಕ್ಕೆ ಕರ್ನಾಟಕ ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತ್ತು.

ಭಾರ್ಗವಿ ನಾರಾಯಣ್ ಅವರ ನಿಧನಕ್ಕೆ ಗಣ್ಯರು, ಅಭಿಮಾನಿಗಳು ಕಂಬನಿ ಮಿಡಿದಿದ್ದು ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಹಿರಿಯ ಕಲಾವಿದೆಯನ್ನು ಕಳೆದುಕೊಂಡು ಕನ್ನಡ ಚಿತ್ರರಂಗ, ರಂಗಭೂಮಿ ಬಡವಾಗಿದೆ.

ಇದನ್ನೂ ಓದಿ:

ಸಿನಿಮಾ-ರಂಗಭೂಮಿಯ ಹಿರಿಯ ಕಲಾವಿದೆ ಭಾರ್ಗವಿ ನಾರಾಯಣ್​ ಫೋಟೋ ಗ್ಯಾಲರಿ

ಭಾರ್ಗವಿ ಮೇಡಂ ಆಗಿದ್ದವರು ನಂತರ ನನ್ನ ನಿಜವಾದ ಅಮ್ಮನೇ ಆಗಿಬಿಟ್ಟಿದ್ದರು: ವಿದ್ಯಾ ಮೂರ್ತಿ ಮನದಾಳದ ಮಾತು