
ನಟಿ ಶಿಲ್ಪಾ ಶೆಟ್ಟಿ (Shilpa Shetty) ಬಹುಭಾಷಾ ನಟಿ. ಅವರಿಗೆ ಕನ್ನಡ ಚಿತ್ರರಂಗದ ಬಗ್ಗೆ ವಿಶೇಷ ಪ್ರೀತಿ ಇದೆ. ಅವರು ಹಿಂದಿ ನಟಿ ಆದರೂ ಕರ್ನಾಟಕಕ್ಕೆ ಆಗಾಗ ಬರುತ್ತಾರೆ. ದಕ್ಷಿಣ ಕನ್ನಡದ ದೇವಾಲಯಗಳಿಗೆ ಭೇಟಿ ನೀಡುತ್ತಾರೆ. ಅವರು ಕನ್ನಡ ಸಿನಿಮಾ ಮಾಡಲು ಕಾರಣ ಏನು ಎಂಬುದನ್ನು ಅವರು ಈ ಮೊದಲು ವಿವರಿಸಿದ್ದರು. ಆ ಬಗ್ಗೆ ಇಲ್ಲಿದೆ ಮಾಹಿತಿ. ರವಿಚಂದ್ರನ್ ಅವರು ಶಿಲ್ಪಾನ ಕನ್ನಡಕ್ಕೆ ಕರೆತಂದಿದ್ದರು. ಆ ಬಳಿಕ ಕನ್ನಡದಲ್ಲಿ ಕೆಲವು ಸಿನಿಮಾ ಮಾಡಿದರು.
ಶಿಲ್ಪಾ ಶೆಟ್ಟಿ ಅವರಿಗೆ ಇಂದು (ಜೂನ್ 8) ಜನ್ಮದಿನ. ಅವರಿಗೆ ಮಂಗಳೂರು ಹಿನ್ನೆಲೆ ಇದೆ. ಅವರ ಕುಟುಂಬ ತುಳು ಕುಟುಂಬ. ಈ ಕಾರಣಕ್ಕೆ ಅವರು ತುಳುವನ್ನು ಮಾತನಾಡ ಬಲ್ಲರು. ಅವರಿಗೆ ಕನ್ನಡ ಸಿನಿಮಾ ಮಾಡಬೇಕು ಎನ್ನುವ ಆಸೆ ಇತ್ತು. ಇದಕ್ಕೆ ರವಿಚಂದ್ರನ್ ಅವಕಾಶ ಮಾಡಿಕೊಟ್ಟರು. ರವಿಚಂದ್ರನ್ ನಿರ್ದೇಶನ ಮಾಡಿದ ‘ಪ್ರೀತ್ಸೋದ್ ತಪ್ಪಾ’ ಸಿನಿಮಾದಲ್ಲಿ ಕ್ರೇಜಿ ಸ್ಟಾರ್ ಜೊತೆಯೇ ನಟಿಸಿದರು. ಈ ಮೊದಲು ಕನ್ನಡ ಸಿನಿಮಾ ಬಗ್ಗೆ ಶಿಲ್ಪಾ ಮಾತನಾಡಿದ್ದರು.
‘ನಾನು ಕರ್ನಾಟಕ ಹುಡುಗಿ ಎಂದು ಹೇಳಲು ಹೆಮ್ಮೆ ಇದೆ. ನಾನು ಹುಟ್ಟಿ-ಬೆಳೆದಿದ್ದು ಮುಂಬೈನಲ್ಲಿ. ನನಗೆ ಬೆಂಗಳೂರ ಜೊತೆ ಒಳ್ಳೆಯ ಕನೆಕ್ಷನ್ ಇದೆ. ನಾನು ಕನ್ನಡ ಸಿನಿಮಾ ಮಾಡಿದೆ. ಇದಕ್ಕೆ ಕಾರಣ ನಾನು ಆ ಕನೆಕ್ಷನ್ ಇಟ್ಟುಕೊಳ್ಳಬೇಕಿತ್ತು. ಕನ್ನಡದವರು ತಮ್ಮ ಬಗ್ಗೆ ಹೆಮ್ಮೆ ಪಟ್ಟುಕೊಳ್ಳಬೇಕು’ ಎಂದು ಶಿಲ್ಪಾ ಶೆಟ್ಟಿ ಅವರು ಹೇಳಿದ್ದರು.
‘ಪ್ರೀತ್ಸೋದ್ ತಪ್ಪಾ’ ಬಳಿಕ ರವಿಚಂದ್ರನ್ ಜೊತೆ ‘ಓಡೋಗೋಣ ಬಾ’ ಸಿನಿಮಾ ಮಾಡಿದರು. ಆ ಬಳಿಕ ಕನ್ನಡದಲ್ಲಿ ಉಪೇಂದ್ರ ಜೊತೆ ‘ಆಟೋ ಶಂಕರ್’ ಸಿನಿಮಾ ಮಾಡಿದರು. ಸದ್ಯ ‘ಕೆಡಿ’ ಚಿತ್ರದಲ್ಲಿ ಶಿಲ್ಪಾ ಅವರು ವಿಶೇಷ ಪಾತ್ರ ಮಾಡುತ್ತಿದ್ದಾರೆ. ಅವರು ವಿಶೇಷ ಹಾಡಿನಲ್ಲಿ ಕೂಡ ಕಾಣಿಸಿಕೊಳ್ಳಲಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಶಿಲ್ಪಾ ಶೆಟ್ಟಿ ಧರಿಸಿರುವ ಈ ಚಾಕಲೇಟ್ ಬಣ್ಣದ ಬಟ್ಟೆಯ ಬೆಲೆ ಎಷ್ಟು ಲಕ್ಷ?
ಸದ್ಯ ಶಿಲ್ಪಾ ಶೆಟ್ಟಿ ಅವರು ಅಷ್ಟಾಗಿ ಸಿನಿಮಾ ಮಾಡುತ್ತಿಲ್ಲ. ಆಗಾಗ ರಿಯಾಲಿಟಿ ಶೋಗಳಲ್ಲಿ ಜಡ್ಜ್ ಸ್ಥಾನದಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಕಾರಣಕ್ಕೂ ಅವರು ಸಾಕಷ್ಟು ಇಷ್ಟ ಆಗುತ್ತಾರೆ. ಅವರು ತಮ್ಮ ಜ್ಞಾನವನ್ನು, ಅನುಭವವನ್ನು ಧಾರೆ ಎರೆಯುತ್ತಾರೆ. ಶಿಲ್ಪಾ ಶೆಟ್ಟಿ ಅವರ ಪತಿ ರಾಜ್ ಕುಂದ್ರಾ ವಿವಾದದ ಮೂಲಕ ಆಗಾಗ ಸುದ್ದಿ ಆಗುತ್ತಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 6:30 am, Sun, 8 June 25