ಸೌಂದರ್ಯಾ ಸಾವಿನ ದಿನ ಏನಾಗಿತ್ತು? ಸಂಚು ರೂಪಿಸಿ ವಿಮಾನ ಹಾಳು ಮಾಡಲು ಸಾಧ್ಯವೇ?
ಸೌಂದರ್ಯಾ ಅವರ ನಿಗೂಢ ಸಾವಿನ ಪ್ರಕರಣ ಮತ್ತೆ ಸುದ್ದಿಯಾಗಿದೆ. ಒಬ್ಬ ವ್ಯಕ್ತಿ ಮೋಹನ್ ಬಾಬು ಅವರ ಮೇಲೆ ಆರೋಪ ಹೊರಿಸಿದ್ದಾರೆ. 2004ರಲ್ಲಿ ವಿಮಾನ ಅಪಘಾತದಲ್ಲಿ ನಿಧನರಾದ ಸೌಂದರ್ಯಾ ಅವರ ಸಾವು ಆಕಸ್ಮಿಕವಲ್ಲ ಎಂಬುದು ಆರೋಪ. ಈ ಘಟನೆಯ ಹಿಂದಿನ ಸತ್ಯವೇನು ಎಂಬುದನ್ನು ಈ ಲೇಖನ ಚರ್ಚಿಸುತ್ತದೆ.

ನಟಿ ಸಂದರ್ಯಾ ಸಾವಿನ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ ಎನ್ನಬಹುದು. ಅವರ ಸಾವು ಆಕಸ್ಮಿಕ ಅಲ್ಲವೇ ಅಲ್ಲ ಎಂದು ವ್ಯಕ್ತಿಯೋರ್ವ ದೂರು ದಾಖಲು ಮಾಡಿದ್ದಾನೆ. ಅಲ್ಲದೆ, ಈ ಸಾವಿಗೆ ತೆಲುಗು ನಟ, ನಿರ್ಮಾಪಕ ಮೋಹನ್ ಬಾಬು ಕಾರಣ ಎಂದು ವ್ಯಕ್ತಿಯೋರ್ವ ದೂರು ನೀಡಿದ್ದಾನೆ. ಅಷ್ಟಕ್ಕೂ ಸೌಂದರ್ಯಾ ಸಾಯುವ ದಿನ ಏನಾಗಿತ್ತು? ಅವರನ್ನು ಸಂಚು ರೂಪಿಸಿ ಸಾಯಿಸಲು ಸಾಧ್ಯವೇ ಎನ್ನುವ ಪ್ರಶ್ನೆಗೆ ಉತ್ತರ ಕಂಡುಕೊಳ್ಳುವ ಪ್ರಯತ್ನ ಮಾಡೋಣ.
ಸೌಂದರ್ಯಾ ಅವರು ತೆಲುಗು, ತಮಿಳು, ಕನ್ನಡ, ಹಿಂದಿ ಭಾಷೆಗಳಲ್ಲಿ ಸಿನಿಮಾಗಳನ್ನು ಮಾಡಿ ಗಮನ ಸೆಳೆದಿದ್ದರು. ಆಗಿನ ಕಾಲಕ್ಕೆ ಎಲ್ಲಾ ಭಾಷೆಗಳಲ್ಲೂ ಬೇಡಿಕೆಯ ನಟಿ ಆಗಿದ್ದರು. ಅವರಿಗೆ ರಾಜಕೀಯದಲ್ಲಿ ಆಸಕ್ತಿ ಬೆಳೆಯಿತು. 2004ರಲ್ಲಿ ಬಿಜೆಪಿ ಪಕ್ಷಕ್ಕೆ ಬೆಂಬಲ ಸೂಚಿಸಿದರು. ಆಗಿನ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಪರವಾಗಿ ಪ್ರಚಾರ ಮಾಡುತ್ತಿದ್ದರು.
ಈಗಿನ ತೆಲಂಗಾಣದ ಕರೀಂನಗರದಲ್ಲಿ ಚುನಾವಣಾ ರ್ಯಾಲಿ ಆಯೋಜನೆ ಆಗಿತ್ತು. ಪ್ರಚಾರ ಸಭೆಯಲ್ಲಿ ಭಾಗವಹಿಸಲು 2004ರ ಜುಲೈ 7ರಂದು ಬೆಂಗಳೂರಿನಿಂದ ಲಘು ವಿಮಾನದಲ್ಲಿ ಪ್ರಯಾಣ ಆರಂಭಿಸಿದರು. ಈ ವಿಮಾನ ಟೇಕ್ಆಫ್ ಆದ ಕೆಲವೇ ನಿಮಿಷಗಳಲ್ಲಿ ಹೊತ್ತಿ ಉರಿಯಿತು. ಈ ವೇಳೆ ಅವರು ನಿಧನ ಹೊಂದಿದರು. ಅವರ ತಮ್ಮ ಅಮರನಾಥ್ ಕೂಡ ನಿಧನರಾದರು.
ದೂರು ನೀಡಿದ ವ್ಯಕ್ತಿ ಹೇಳುವಂತೆ ಮೋಹನ್ ಬಾಬು ಅವರು ಆರು ಎಕರೆ ಜಾಗದ ಕಾರಣಕ್ಕೆ ಸೌಂದರ್ಯಾ ಅವರನ್ನು ಮುಗಿಸಿದರು ಎಂದಿದ್ದಾರೆ. ಹಾಗಾದಲ್ಲಿ ಮೋಹನ್ ಬಾಬು ಅವರು ವಿಮಾನದಲ್ಲಿ ತಾಂತ್ರಿಕ ದೋಷ ಬರುವಂತೆ ಮಾಡಿದ್ದರೇ? ಇದಕ್ಕೆ ಈಗ ಉತ್ತರ ಕಂಡು ಹಿಡಿಯೋದು ಬಲುಕಷ್ಟ.
ಇದನ್ನೂ ಓದಿ: ‘ಸೌಂದರ್ಯಾ ಸಾವು ಆಕಸ್ಮಿಕವಲ್ಲ, ಕೊಲೆ ಮಾಡಿದ್ದು ಮೋಹನ್ ಬಾಬು’; 21 ವರ್ಷಗಳ ಬಳಿಕ ದಾಖಲಾಯ್ತು ದೂರು
ಕನ್ನಡತಿ ಸೌಂದರ್ಯಾ 1992ರಲ್ಲಿ ‘ಬಾ ನನ್ನ ಪ್ರೀತಿಸು’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಬಂದರು. ಸಿನಿಮಾಕ್ಕಾಗಿ ಎಂಬಿಬಿಎಸ್ ಓದನ್ನು ಬಿಟ್ಟರು. ಸಿನಿಮಾಕ್ಕೆ ಕಾಲಿಟ್ಟ ಮೊದಲ ವರ್ಷವೇ ಸತತವಾಗಿ ನಾಲ್ಕು ಸಿನಿಮಾಗಳನ್ನು ಮಾಡಿದರು. ನಂತರ ಹಲವು ವರ್ಷ ಸಿನಿಮಾ ರಂಗದಲ್ಲಿ ಮಿಂಚಿದರು. ಅವರ ನಟನೆಯ ‘ಆಪ್ತಮಿತ್ರ’ ಸಿನಿಮಾದಲ್ಲಿನ ನಾಗವಲ್ಲಿ ಪಾತ್ರ ಈಗಲೂ ಜನ ಮಾನಸದಲ್ಲಿ ಉಳಿದುಕೊಂಡಿದೆ. ಅವರು ಸಾಯುವಾಗ ಅವರಿಗೆ ಕೇವಲ 31 ವರ್ಷ ವಯಸ್ಸು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.