ಸುಶಾಂತ್​ ಸಾವಿನ ವಿಚಾರದಲ್ಲಿ ಕಂಗನಾ ರಣಾವತ್​ ಮುಖವಾಡ ಬಯಲು; ತರಾಟೆಗೆ ತೆಗೆದುಕೊಂಡ ನೆಟ್ಟಿಗರು

ಕಂಗನಾ ರಣಾವತ್​ ಅವರಿಗೆ ‘ವರ್ಷದ ಬೂಟಾಟಿಕೆ ವ್ಯಕ್ತಿ’ ಎಂಬ ಪ್ರಶಸ್ತಿ ನೀಡಬೇಕು ಎಂದು ಅನೇಕರು ಕಾಮೆಂಟ್​ ಮಾಡಿದ್ದಾರೆ. ಕಾಂಟ್ರವರ್ಸಿ ಕ್ವೀನ್​ ವಿರುದ್ಧ ಸುಶಾಂತ್​ ಅಭಿಮಾನಿಗಳು ತಿರುಗಿ ಬಿದ್ದಿದ್ದಾರೆ.

ಸುಶಾಂತ್​ ಸಾವಿನ ವಿಚಾರದಲ್ಲಿ ಕಂಗನಾ ರಣಾವತ್​ ಮುಖವಾಡ ಬಯಲು; ತರಾಟೆಗೆ ತೆಗೆದುಕೊಂಡ ನೆಟ್ಟಿಗರು
ಸುಶಾಂತ್​ ಸಿಂಗ್​ ರಜಪೂತ್​ - ಕಂಗನಾ ರಣಾವತ್​

Updated on: Apr 18, 2021 | 9:44 AM

ಇಲ್ಲಸಲ್ಲದ ಎಲ್ಲ ವಿಚಾರಗಳಿಗೆ ತಲೆ ಹಾಕುವುದು ನಟಿ ಕಂಗನಾ ರಣಾವತ್​ ಅವರ ಜಾಯಮಾನ. ಈ ಪ್ರಕ್ರಿಯೆಯಲ್ಲಿ ಅವರು ತಮ್ಮ ಮೇಲೆ ಅನೇಕ ವಿವಾದಗಳನ್ನು ಎಳೆದುಕೊಳ್ಳುತ್ತಾರೆ. ನಟ ಸುಶಾಂತ್​ ಸಿಂಗ್​ ರಜಪೂತ್​​ ನಿಧನರಾದ ಬಳಿಕ ಬಾಲಿವುಡ್​ನ ಅನೇಕರ ಮೇಲೆ ಕಂಗನಾ ಆರೋಪ ಮಾಡಿದ್ದರು. ಈಗ ಅವರು ಮತ್ತೆ ಸುಶಾಂತ್ ಸಾವಿನ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ. ಆದರೆ ಈ ಬಾರಿ ಒಂದು ಎಡವಟ್ಟು ಮಾಡಿಕೊಂಡಿದ್ದಾರೆ. ಅದಕ್ಕಾಗಿ ನೆಟ್ಟಿಗರಿಂದ ತೀವ್ರ ಟೀಕೆಗೆ ಒಳಗಾಗುತ್ತಿದ್ದಾರೆ.

ಸುಶಾಂತ್​ ಅವರದ್ದು ಆತ್ಮಹತ್ಯೆ ಅಲ್ಲ. ಅವರನ್ನು ಪ್ಲ್ಯಾನ್​ ಮಾಡಿ ಕೊಲೆ ಮಾಡಲಾಯಿತು ಎಂದು 2020ರಲ್ಲಿ ಅನೇಕ ಬಾರಿ ಕಂಗನಾ ಹೇಳಿದ್ದರು. ಮಾಧ್ಯಮಗಳ ಮುಂದೆಯೂ ಇದೇ ಹೇಳಿಕೆ ನೀಡಿದ್ದರು. ಆದರೆ ಈಗ ಸುಶಾಂತ್​ ಅವರದ್ದು ಆತ್ಮಹತ್ಯೆ ಎಂಬ ರೀತಿಯಲ್ಲಿ ಟ್ವೀಟ್​ ಮಾಡಿದ್ದಾರೆ. ಅದು ಅನೇಕರ ಕೋಪಕ್ಕೆ ಕಾರಣ ಆಗಿದೆ. ಇತ್ತೀಚೆಗೆ ಕರಣ್​ ಜೋಹರ್​ ಅವರ ಧರ್ಮ ಪ್ರೊಡಕ್ಷನ್ಸ್​ನಿಂದ ಹೊರದಬ್ಬಿಸಿಕೊಂಡ ನಟ ಕಾರ್ತಿಕ್​ ಆರ್ಯನ್​ಗೆ ಸಮಾಧಾನ ಮಾಡುವ ಭರದಲ್ಲಿ ಕಂಗನಾ ಅವರು ಸುಶಾಂತ್​ ಸಾವಿನ ವಿಚಾರವನ್ನು ಎಳೆದು ತಂದಿದ್ದರು.

‘ಕಾರ್ತಿಕ್​ ಸ್ವಂತವಾಗಿ ಇಲ್ಲಿಯವರಗೆ ಬೆಳೆದುಬಂದಿದ್ದಾರೆ. ಅದೇ ರೀತಿ ಅವರು ಮುಂದುವರಿಯಲಿದ್ದಾರೆ. ಕರಣ್​ ಜೋಹರ್​ ಮತ್ತು ಆತನ ನೆಪೋಟಿಸಂ ಗ್ಯಾಂಗ್​ಗೆ ನನ್ನದೊಂದು ಮನವಿ ಏನೆಂದರೆ, ದಯವಿಟ್ಟು ಕಾರ್ತಿಕ್​ರನ್ನು ಬಿಟ್ಟುಬಿಡಿ. ಸುಶಾಂತ್​ ರೀತಿ ಅವರ ಬೆನ್ನುಹತ್ತಬೇಡಿ. ನೇಣು ಹಾಕಿಕೊಳ್ಳುವಂತೆ ಒತ್ತಾಯ ಮಾಡಬೇಡಿ’ ಎಂದು ಕಂಗನಾ ಟ್ವೀಟ್​ ಮಾಡಿದ್ದರು. ಅದೇ ಈಗ ಚೆರ್ಚೆಗೆ ಕಾರಣ ಆಗಿದೆ.

ಕಳೆದ ವರ್ಷ ಸುಶಾಂತ್​ರದ್ದು ಕೊಲೆ ಎಂದು ಹೇಳಿ, ಈಗ ಆತ್ಮಹತ್ಯೆ ಎಂಬರ್ಥದಲ್ಲಿ ಟ್ವೀಟ್​ ಮಾಡಿರುವುದಕ್ಕೆ ಅನೇಕರು ಕಂಗನಾರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರತಿಬಾರಿಯೂ ನಿಮಗೆ ಜನರ ಗಮನ ಸೆಳೆದುಕೊಳ್ಳಲು ಸುಶಾಂತ್​ ಸಿಂಗ್​ ವಿಚಾರವೇ ಬೇಕಾ ಎಂದು ಸುಶಾಂತ್​ ಅಭಿಮಾನಿಗಳು ಕಂಗನಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ಕಂಗನಾರ ಹಳೇ ಟ್ವೀಟ್​ಗಳ ಸ್ಕ್ರೀನ್​ ಶಾಟ್​ ತೆಗೆದು ಈಗ ಜನರು ಮತ್ತೆ ನೆನಪಿಸುತ್ತಿದ್ದಾರೆ. ಕಂಗನಾ ಮಾತು ಬದಲಿಸಿದ್ದಾರೆ ಎಂಬುದನ್ನು ಈ ಮೂಲಕ ನೆಟ್ಟಿಗರು ಒತ್ತಿಹೇಳುತ್ತಿದ್ದಾರೆ.

ಕಂಗನಾಗೆ ‘ವರ್ಷದ ಬೂಟಾಟಿಕೆ ವ್ಯಕ್ತಿ’ ಎಂದು ಪ್ರಶಸ್ತಿ ನೀಡಬೇಕು. ಅವರಿಗೆ ಮರೆವಿನ ಕಾಯಿಲೆ ಇರಬಹುದು ಎಂದು ಹಲವರು ಕಾಮೆಂಟ್​ ಮಾಡಿದ್ದಾರೆ. ‘ನನಗೆ ನಿಜಕ್ಕೂ ನಿರಾಸೆ ಆಗಿದೆ. ಸುಶಾಂತ್​ ಆತ್ಮಹತ್ಯೆ ಮಾಡಿಕೊಂಡಿಲ್ಲ. ನಿಮ್ಮ ಮಾತುಗಳನ್ನು ವಾಪಸ್​ ತೆಗೆದುಕೊಳ್ಳಿ. 10 ತಿಂಗಳಿಂದ ನಾವು ಸುಶಾಂತ್​ ಸಾವಿಗೆ ನ್ಯಾಯ ಕೊಡಿಸಲು ಹೋರಾಡುತ್ತಿರುವುದು ನಿಮಗೆ ಕಾಣುತ್ತಿಲ್ಲವೇ? ನೀವು ಸರಿಯಾಗಿದ್ದಾಗ ನಿಮ್ಮನ್ನು ಬೆಂಬಲಿಸಿದ್ದೇನೆ. ಆದರೆ ಈಗ ನೀವು ತಪ್ಪು ಮಾಡಿದ್ದೀರಿ’ ಎಂದು ಸುಶಾಂತ್​ ಅಭಿಮಾನಿಯೊಬ್ಬರು ಛಾಟಿ ಬೀಸಿದ್ದಾರೆ.

ಇದನ್ನೂ ಓದಿ: ಕಂಗನಾ ರಣಾವತ್​-ತಾಪ್ಸೀ ಪನ್ನು ಈಗ ಫ್ರೆಂಡ್ಸ್​! ಜಗಳ ಅಂತ್ಯ ಆಗಿದ್ದಕ್ಕೆ ಕಾರಣ ಏನು?

ದೊಡ್ಡ ಹೀರೋಗಳು ತಲೆಮರೆಸಿಕೊಂಡಿದ್ದಾರೆ, ಬಾಲಿವುಡ್​ ಉಳಿಯೋದು ನನ್ನಿಂದಲೇ: ಕಂಗನಾ

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us