AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗುಟ್ಟು-ರಟ್ಟು ಮಾಡಿದ ಸುದೀಪ್, ವರ್ತೂರು ಭಾವುಕ, ಮನೆಯರಿಗೆ ಶಾಕ್

Varthur Santhosh: ಬಿಗ್​ಬಾಸ್ ಮನೆ ಸದಸ್ಯರ ಮುಂದೆ ಗುಟ್ಟೊಂದನ್ನು ಸುದೀಪ್ ರಟ್ಟು ಮಾಡಿದರು. ಸುದೀಪ್ ಮಾತು ಕೇಳಿ ಮನೆ ಸದಸ್ಯರಿಗೆ ಶಾಕ್ ಆದರೆ, ವರ್ತೂರು ಸಂತೋಷ್ ಭಾವುಕರಾದರು.

ಗುಟ್ಟು-ರಟ್ಟು ಮಾಡಿದ ಸುದೀಪ್, ವರ್ತೂರು ಭಾವುಕ, ಮನೆಯರಿಗೆ ಶಾಕ್
ವರ್ತೂರು ಸಂತೋಷ್
ಮಂಜುನಾಥ ಸಿ.
|

Updated on: Jan 27, 2024 | 10:52 PM

Share

ಯಾರೂ ಊಹಿಸದ ರೀತಿಯಲ್ಲಿ ವರ್ತೂರು ಸಂತೋಷ್ (Varthur Santhosh) ಬಿಗ್​ಬಾಸ್ ಕನ್ನಡ ಸೀಸನ್ 10ರ ಫಿನಾಲೆಗೆ ತಲುಪಿದ್ದಾರೆ. ವರ್ತೂರು ಸಂತೋಷ್ ಬಿಗ್​ಬಾಸ್ ಮನೆಗೆ ಬಂದ ಹೊಸದರಲ್ಲಿ ಇವರು ಫಿನಾಲೆಗೆ ತಲುಪುತ್ತಾರೆ ಎಂಬ ನಿರೀಕ್ಷೆ ಮನೆಯಲ್ಲಿದ್ದವರಿಗೂ ಇರಲಿಲ್ಲ, ಪ್ರೇಕ್ಷಕರಲ್ಲೂ ಬಹುಸಂಖ್ಯೆಯ ಜನರಿಗೆ ವರ್ತೂರು ಫಿನಾಲೆಗೆ ಬರುತ್ತಾರೆಂಬ ನಿರೀಕ್ಷೆ ಇರಲಿಲ್ಲ. ಮನೆಯಲ್ಲಿ, ಹೊರಗಡೆ ಹಲವು ಸವಾಲುಗಳನ್ನು ಎದುರಿಸಿ ಕೊನೆಗೂ ವರ್ತೂರು ಸಂತೋಷ್ ಫಿನಾಲೆ ತಲುಪಿದ್ದಾರೆ. ಗೆಲುವಿಗೆ ಹತ್ತಿರದಲ್ಲಿದ್ದಾರೆ.

ಇದೀಗ ಫಿನಾಲೆ ಪ್ರಾರಂಭವಾಗಿದ್ದು, ಫಿನಾಲೆಯ ಮೊದಲ ದಿನ ಕಾರ್ಯಕ್ರಮ ಆರಂಭವಾದ ಕೆಲವೇ ಸಮಯದಲ್ಲಿ ಸುದೀಪ್ ಅವರು ವರ್ತೂರು ಸಂತೋಷ್ ಅವರ ಬಗ್ಗೆ ವಿಷಯವೊಂದನ್ನು ಮನೆಯ ಸದಸ್ಯರಿಗೆ ತಿಳಿಸಿದರು. ಸುದೀಪ್ ಹೇಳಿದ ಸುದ್ದಿ ಕೇಳಿ ಮನೆಯ ಸದಸ್ಯರು ಗಾಬರಿಯಾದರೆ, ವರ್ತೂರು ಸಂತೋಷ್ ಭಾವುಕರಾಗಿ ಕಣ್ಣೀರು ಹಾಕಿದರು. ಸುದೀಪ್ ಹೇಳಿದ ವಿಷಯ, ವರ್ತೂರು ಸಂತು ಜೈಲಿಗೆ ಹೋದ ವಿಷಯ.

ಮನೆಯ ಸದಸ್ಯರಿಗೆಲ್ಲ ಒಂದು ವಿಷಯ ನಾನು ಹೇಳಲೇ ಬೇಕು. ವರ್ತೂರು ಸಂತೋಷ್ ಅವರು ಒಂದು ವಾರ ಹೊರಗೆ ಹೋಗಿ ಬಂದರು. ಅವರು ಸಾಕಷ್ಟು ನೋವನ್ನು ಹೊರಗೆ ಅನುಭವಿಸಿದರು. ಅವರು ಅನುಭವಿಸಿರುವ ನೋವು ಊಹಿಸಲು ಸಾಧ್ಯವಿಲ್ಲ. ವರ್ತೂರು ಇಲ್ಲಿಗೆ ಬಂದಾಗ ಅವರು ಒಂದು ಚೈನ್ ಹಾಕಿಕೊಂಡು ಬಂದಿದ್ದರು. ಆ ಚೈನ್ ನಲ್ಲಿ ಒಂದು ಪೆಂಡೆಂಟ್ ಇತ್ತು, ಆ ಪೆಂಡೆಂಟ್ ಧರಿಸುವುದು ಕಾನೂನು ಪ್ರಕಾರ ತಪ್ಪಾಗಿತ್ತು. ಅದು ಅವರಿಗೆ ಸಹ ಗೊತ್ತಿರಲಿಲ್ಲ. ಆ ಕಾರಣಕ್ಕೆ ಅವರಿಗೆ ಒಂದು ಬುಲಾವ್ ಬಂತು ಅದರಂತೆ ಅವರು ಹೊರಗೆ ಹೋಗಬೇಕಾಯ್ತು. ಅವರು ಒಂದು ವಾರ ಜೈಲು ವಾಸ ಮುಗಿಸಿ ಹೊರಗೆ ಬಂದರು’ ಎಂದರು.

ಇದನ್ನೂ ಓದಿ:ಬಿಗ್​ ಬಾಸ್​ ಫಿನಾಲೆ ಆರಂಭದಲ್ಲೇ ವರ್ತೂರು ಸಂತೋಷ್​, ಡ್ರೋನ್​ ಪ್ರತಾಪ್​ ಮನೆಯವರ ಕಣ್ಣೀರು

ಸುದೀಪ್ ಅವರ ಮಾತು ಕೇಳಿ ಮನೆಯ ಸದಸ್ಯರೆಲ್ಲ ಶಾಕ್ ಆದರು. ಮಾತು ಮುಂದುವರೆಸಿದ ಸುದೀಪ್, ‘ಅವರು ಯಾರನ್ನೂ ಭೇಟಿಯಾಗದೆ ಮತ್ತೆ ಬಿಗ್​ಬಾಸ್ ಮನೆಗೆ ಬಂದರು. ನಾವು ಸಹ ಷರತ್ತು ಹಾಕಿದ್ದೆವು, ಹೊರಗೆ ನಡೆದ ಘಟನೆಯನ್ನು ಒಳಗೆ ಹೇಳಬಾರದು ಎಂದು. ಅಂತೆಯೇ ಅವರು ಇಷ್ಟು ದಿನಗಳ ವರೆಗೆ ಆ ವಿಷಯವನ್ನು ಯಾರೊಟ್ಟಿಗೆ ಹೇಳಿಕೊಳ್ಳದೆ ಇಲ್ಲಿವರೆಗೆ ಬಂದಿದ್ದಾರೆ. ಅವರು ಮರಳಿ ಮನೆಗೆ ಬಂದಾಗಲೇ ಅವರ ಸಹಿಷ್ಣುತೆ, ಅವರ ಮನೋಭಾವದ ಬಗ್ಗೆ ನಮಗೆ ಹೆಮ್ಮೆಯಾಗಿತ್ತು. ಅದೇ ಕಾರಣಕ್ಕೆ ಅವರು ಮನೆಯಿಂದ ಹೋಗುವೆ ಎಂದಾಗ ನಾನು ಅಷ್ಟು ಬಲವಂತ ಮಾಡಿ ಅವರನ್ನು ಉಳಿಸಿಕೊಳ್ಳುವ ಪ್ರಯತ್ನ ಮಾಡಿದ್ದು’ ಎಂದರು.

ಸುದೀಪ್ ಅವರ ಮಾತುಗಳನ್ನು ಕೇಳಿ ವರ್ತೂರು ಸಂತೋಷ್ ಕಣ್ಣೀರು ಹಾಕಿದರು. ಹೊರಗೆ ಕೂತಿದ್ದ ಅವರ ತಾಯಿಯೂ ಸಹ ಕಣ್ಣೀರು ಹಾಕಿದರು. ವರ್ತೂರು ಸಂತೋಷ್ ಮಾತನಾಡಿ, ನಾನು ಇಲ್ಲಿಯವರೆಗೆ ಬರತ್ತೀನಿ ಎಂದುಕೊಂಡಿರಲಿಲ್ಲ, ನನಗೆ ಜನಗಳ ಪ್ರೀತಿ ಇಷ್ಟು ದೊಡ್ಡ ಮಟ್ಟದಲ್ಲಿ ದೊರಕುತ್ತದೆ ಎಂಬ ನಿರೀಕ್ಷೆಯೂ ಇರಲಿಲ್ಲ. ಇದೆಲ್ಲ ಸಾಧ್ಯವಾಗಿದ್ದು ನಿಮ್ಮಿಂದ, ಬಿಗ್​ಬಾಸ್ ವೇದಿಕೆಯಿಂದ. ಇದಕ್ಕೆ ನಾನು ಸದಾ ಚಿರಋಣಿ ಎಂದರು ವರ್ತೂರು ಸಂತೋಷ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ