ರಸ್ತೆ ಅಪಘಾತದಲ್ಲಿ ಇಂಡಿಯನ್ ಐಡಲ್ ವಿನ್ನರ್ ಪವನ್ದೀಪ್ ರಾಜನ್ಗೆ ಗಂಭೀರ ಗಾಯ
ರಾಷ್ಟ್ರೀಯ ಹೆದ್ದಾರಿ 9ರಲ್ಲಿ ಸಿಂಗರ್ ಪವನ್ದೀಪ್ ರಾಜನ್ ಅವರು ಚಲಿಸುತ್ತಿದ್ದ ಕಾರು ಅಪಘಾತಕ್ಕೆ ಈಡಾಗಿದೆ. ಈ ಅಪಘಾತದಲ್ಲಿ ಪವನ್ದೀಪ್ ಹಾಗೂ ಇನ್ನಿಬ್ಬರು ತೀವ್ರವಾಗಿ ಗಾಯಗೊಂಡಿದ್ದಾರೆ. ಖಾಸಗಿ ಆಸ್ಪತ್ರೆಯಲ್ಲಿ ಪವನ್ದೀಪ್ ರಾಜನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸದ್ಯ ಅವರು ತೀವ್ರ ನಿಗಾ ಘಟಕದಲ್ಲಿ ಇದ್ದಾರೆ.

‘ಇಂಡಿಯನ್ ಐಡಲ್ 12’ ರಿಯಾಲಿಟಿ ಶೋ ವಿನ್ನರ್ (Indian Idol Winner), ಗಾಯಕ ಪವನ್ದೀಪ್ ರಾಜನ್ ಅವರು ರಸ್ತೆ ಅಪಘಾತದಲ್ಲಿ (Pawandeep Rajan Accident) ತೀವ್ರವಾಗಿ ಗಾಯಗೊಂಡಿದ್ದಾರೆ. ಅವರು ಚಲಿಸುತ್ತಿದ್ದ ಕಾರು ರಾತ್ರಿ 2 ಗಂಟೆ ಸುಮಾರಿಗೆ ನಿಂತಿದ್ದ ಟ್ರಕ್ಗೆ ಹೋಗಿ ಡಿಕ್ಕಿ ಹೊಡೆದಿದೆ. ಈ ಘಟನೆಯಲ್ಲಿ ಪವನ್ದೀಪ್ ರಾಜನ್ (Pawandeep Rajan) ಅವರ ಕಾಲು, ತಲೆ ಮತ್ತು ಪಕ್ಕೆಲುಬಿಗೆ ಗಂಭೀರ ಗಾಯಗಳಾಗಿವೆ ಎಂದು ಮಾಧ್ಯಮಗಳಲ್ಲಿ ವರದಿ ಆಗಿದೆ. ಈಗ ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಅವರ ಪರಿಸ್ಥಿತಿ ಗಂಭೀರವಾಗಿದೆ ಎಂದು ತಿಳಿದು ಅಭಿಮಾನಿಗಳಲ್ಲಿ ಆತಂಕ ಆಗಿದೆ.
ಪವನ್ದೀಪ್ ರಾಜನ್ ಅವರು ಆಸ್ಪತ್ರೆಯಲ್ಲಿ ಮಲಗಿರುವ ಫೋಟೋ ಕೂಡ ವೈರಲ್ ಆಗಿದೆ. ಅದನ್ನು ನೋಡಿದ ಅಭಿಮಾನಿಗಳಿಗೆ ಚಿಂತೆ ಹೆಚ್ಚಾಗಿದೆ. ಪವನ್ದೀಪ್ ಅವರು ಮೂಲತಃ ಉತ್ತರಕಾಂಡದವರು. ಅಲ್ಲಿಂದ ಅವರು ನೋಯ್ಡಾಗೆ ಪ್ರಯಾಣ ಮಾಡುತ್ತಿದ್ದರು. ಕಾರ್ಯಕ್ರಮವೊಂದರ ಸಲುವಾಗಿ ತೆರಳುವಾಗ ಮಧ್ಯರಾತ್ರಿ ಅಪಘಾತ ಸಂಭವಿಸಿದೆ.
ಪವನ್ದೀಪ್ ರಾಜನ್ ಪ್ರಯಾಣಿಸುತ್ತಿದ್ದ ಕಾರಿನಲ್ಲಿ ಸ್ನೇಹಿತ ಅಜಯ್ ಮೆಹ್ರಾ ಮತ್ತು ಚಾಲಕ ರಾಹುಲ್ ಸಿಂಗ್ ಇದ್ದರು. ಎಂಜಿ ಹೆಕ್ಟರ್ ಕಾರಿನಲ್ಲಿ ಅವರು ಪ್ರಯಾಣ ಮಾಡುತ್ತಿದ್ದರು. ಕಾರು ಓಡಿಸುವಾಗ ಚಾಲಕ ರಾಹುಲ್ ಸಿಂಗ್ ನಿದ್ರೆಗೆ ಜಾರಿದ್ದರಿಂದಲೇ ಈ ಅಪಘಾತ ಸಂಭವಿಸಿದೆ ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಮೂವರ ಹೆಲ್ತ್ ಅಪ್ಡೇಟ್ಗಾಗಿ ನಿರೀಕ್ಷಿಸಲಾಗುತ್ತಿದೆ.
ಇದನ್ನೂ ಓದಿ: ಅಪಘಾತದ ಬಳಿಕ ಬದಲಾಯಿತು ನಾನಿ ಬದುಕು; ಅಂದು ಆಗಿದ್ದೇನು?
ಅಪಘಾತ ನಡೆದ ಕೂಡಲೇ ಜನರು ಜಮಾಯಿಸಿದರು. ಸ್ಥಳೀಯ ಪೊಲೀಸರು ಕೂಡ ತಕ್ಷಣಕ್ಕೆ ಆಗಮಿಸಿದರು. ಮೊದಲಿಗೆ ಪ್ರಥಮ ಚಿಕಿತ್ಸೆ ಕೊಡಿಸುವ ಸಲುವಾಗಿ ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡ ಹೋಗಲಾಯಿತು. ಆದರೆ ಗಂಭೀರ ಗಾಯಗಳು ಆಗಿರುವುದರಿಂದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಐಸಿಯುನಲ್ಲಿ ಪವನ್ದೀಪ್ ರಾಜನ್ ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ಅಪಘಾತಕ್ಕೆ ಒಳಗಾದ ಟ್ರಕ್ ಮತ್ತು ಕಾರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಹೆಚ್ಚಿನ ತನಿಖೆ ಮಾಡಲಾಗುತ್ತಿದೆ. ಪವನ್ದೀಪ್ ಅವರಿಗೆ ಹೆಚ್ಚು ಗಾಯ ಆಗಿದ್ದರಿಂದ ಕೆಲವು ಶಸ್ತ್ರ ಚಿಕಿತ್ಸೆ ಮಾಡಲು ವೈದ್ಯರು ನಿರ್ಧರಿಸಿದ್ದಾರೆ ಎನ್ನಲಾಗಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.