ಮುಂದಿನ ವರ್ಷದಿಂದ ಬಿಗ್ ಬಾಸ್ ಅಗ್ನಿಪರೀಕ್ಷೆ ಬೇಡ; ನೇರವಾಗಿ ಹೇಳಿದ ಸುದೀಪ್
ಬಿಗ್ ಬಾಸ್ ಕನ್ನಡ 13ರ ವೀಕೆಂಡ್ನಲ್ಲಿ ಕಿಚ್ಚ ಸುದೀಪ್ ಕೋಪಗೊಂಡಿದ್ದಾರೆ. ಮಂಜು, ಕಿರಣ್, ಧನುಷ್ ಹಾಗೂ ಲಿಖಿತ್ ಮಾಡಿದ ತಪ್ಪುಗಳಿಂದ ಬೇಸತ್ತ ಸುದೀಪ್, ಮುಂದಿನ ಸೀಸನ್ನಿಂದ ಕಾಮನ್ ಮ್ಯಾನ್ ಆಯ್ಕೆ ಮಾಡುವ ಅಗ್ನಿಪರೀಕ್ಷೆ ಪ್ರಕ್ರಿಯೆಯೇ ಬೇಡ ಎಂದು ಕಲರ್ಸ್ ಕನ್ನಡ ವಾಹಿನಿಗೆ ಖಡಕ್ ಆಗಿ ಮನವಿ ಮಾಡಿದ್ದಾರೆ.

ಮುಖ್ಯಾಂಶಗಳು
- ಕಾಮನ್ ಮ್ಯಾನ್ ಎಂಟ್ರಿಗೆ ಬ್ರೇಕ್ ಹಾಕ್ತಾರಾ ಸುದೀಪ್?
- ಕಲರ್ಸ್ ಕನ್ನಡಕ್ಕೆ ನೇರ ಮನವಿ
- ನಾಲ್ವರ ತಪ್ಪಿಗೆ ಇಡೀ ಕಾಮನರ್ಸ್ ವರ್ಗಕ್ಕೆ ಶಿಕ್ಷೆ
‘ಬಿಗ್ ಬಾಸ್ ಕನ್ನಡ ಸೀಸನ್ 13’ರ ವೀಕೆಂಡ್ ಪಂಚಾಯ್ತಿಯಲ್ಲಿ ಈ ಬಾರಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ತೀವ್ರ ಕೋಪ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಶೋನಲ್ಲಿ ಎಂದೂ ಕಾಣಿಸದ ರೀತಿಯಲ್ಲಿ ಸುದೀಪ್ ತಮ್ಮ ನಿಯಂತ್ರಣ ಕಳೆದುಕೊಂಡು ಗರಂ ಆಗಿದ್ದು, ಆಯೋಜಕರಾದ ಕಲರ್ಸ್ ಕನ್ನಡ ವಾಹಿನಿಗೆ ನೇರವಾಗಿಯೇ ಖಡಕ್ ಸವಾಲೊಂದನ್ನು ಎಸೆದಿದ್ದಾರೆ.
ಈ ಬಾರಿಯ ಸೀಸನ್ನಲ್ಲಿ ‘ಅಗ್ನಿಪರೀಕ್ಷೆ’ ಎಂಬ ವಿಶೇಷ ಆಯ್ಕೆ ಪ್ರಕ್ರಿಯೆಯ ಮೂಲಕ ಕಾಮನ್ ಮ್ಯಾನ್ಗಳನ್ನು ಕರೆಸಲಾಗಿತ್ತು. ಈ ಕೋಟಾದಲ್ಲಿ ಮನೆಗೆ ಎಂಟ್ರಿ ಕೊಟ್ಟಿದ್ದ ಮಂಜು, ಕಿರಣ್, ಧನುಷ್ ಹಾಗೂ ಲಿಖಿತ್ ಎಂಬ ನಾಲ್ವರು ಸ್ಪರ್ಧಿಗಳ ನಡೆ-ನುಡಿ ಪ್ರೇಕ್ಷಕರ ತಾಳ್ಮೆ ಕೆರಳಿಸಿದೆ. ಇವರ ಸರಣಿ ತಪ್ಪುಗಳು, ಅನಗತ್ಯ ಜಗಳ ಮತ್ತು ಬೇಜವಾಬ್ದಾರಿ ಆಟದ ಶೈಲಿ ಇಡೀ ಶೋ ಹಾಗೂ ವೀಕ್ಷಕರಿಗೆ ಹಿಂಸೆಯಾಗಿ ಪರಿಣಮಿಸಿದೆ.
ಕಾಮನರ್ಸ್ಗಳ ಈ ಅತಿಯಾದ ವರ್ತನೆಯಿಂದ ತೀವ್ರ ಬೇಸತ್ತ ಸುದೀಪ್, ‘ಮುಂದಿನ ವರ್ಷದಿಂದ ಸಾಮಾನ್ಯ ಸ್ಪರ್ಧಿಗಳನ್ನು ಆಯ್ಕೆ ಮಾಡುವ ಇಂಥ ‘ಅಗ್ನಿಪರೀಕ್ಷೆ’ ಅಥವಾ ಕಾಮನರ್ಸ್ ಕಾನ್ಸೆಪ್ಟ್ ಇಡುವ ಸಾಹಸವೇ ಬೇಡ’ ಎಂದು ಕಲರ್ಸ್ ಕನ್ನಡ ವಾಹಿನಿಗೆ ನೇರವಾಗಿಯೇ ಮನವಿ ಮಾಡಿದ್ದಾರೆ. ಈ ಬಾರಿಯ ಕಾಮನ್ ಮ್ಯಾನ್ ಸ್ಪರ್ಧಿಗಳು ಆಟದ ಘನತೆ ಹಾಗೂ ವೀಕ್ಷಕರ ಭಾವನೆಗಳಿಗೆ ಧಕ್ಕೆ ತಂದಿರುವುದೇ ಸುದೀಪ್ ಅವರ ಈ ಕಠಿಣ ನಿಲುವಿಗೆ ಮುಖ್ಯ ಕಾರಣವಾಗಿದೆ.
ಇದನ್ನೂ ಓದಿ: ಕ್ಯಾಪ್ಟನ್ ಆದ ಸಂಗೀತಾಗೆ ಕಿಚ್ಚ ಸುದೀಪ್ ಕ್ಲಾಸ್; ಮಾಡಿದ ತಪ್ಪೇನು? ‘ಮುಂದಿನ ವರ್ಷ ಕಾಮನ್ ಮ್ಯಾನ್ ಅವರನ್ನು ಬಿಗ್ ಬಾಸ್ ಮನೆಗೆ ಅವಕಾಶ ಕೊಡಲಿಲ್ಲ ಎಂದರೆ ಅದಕ್ಕೆ ನಾಲ್ಕು ಕಾರಣ. ಆ ನಾಲ್ಕು ಕಾರಣಗಳು ಮಂಜು, ಕಿರಣ್, ಧನುಷ್ ಹಾಗೂ ಲಿಖಿತ್’ ಎಂದು ಸುದೀಪ್ ಹೇಳಿದರು. ಈ ವೇಳೆ ನಾಲ್ಕು ಕಾಮನರ್ಗಳ ಮುಖ ಪೆಚ್ಚಾಯ್ತು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published On - 10:38 pm, Sat, 19 September 26




