ಟಿ.ಎನ್.​ ಸೀತಾರಾಮ್​ ಮದುವೆಯಲ್ಲೊಂದು ಅಚ್ಚರಿ​ಯ ಪ್ರಸಂಗ; ಆ ಉಡುಗೊರೆಗೆ ಬೆಲೆ ಕಟ್ಟೋಕಾಗಲ್ಲ

ದಶಕಗಳ ಹಿಂದೆ ತಮ್ಮ ಮದುವೆ ನಡೆದ ಸಂದರ್ಭ ಹೇಗಿತ್ತು ಎಂಬುದನ್ನು ನಿರ್ದೇಶಕ ಟಿ.ಎನ್​. ಸೀತಾರಾಮ್​ ವಿವರಿಸಿದ್ದಾರೆ. ಅಂದಿನ ಪರಿಸ್ಥಿತಿಯನ್ನು ಅವರು ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ.

ಟಿ.ಎನ್.​ ಸೀತಾರಾಮ್​ ಮದುವೆಯಲ್ಲೊಂದು ಅಚ್ಚರಿ​ಯ ಪ್ರಸಂಗ; ಆ ಉಡುಗೊರೆಗೆ ಬೆಲೆ ಕಟ್ಟೋಕಾಗಲ್ಲ
ಟಿ.ಎನ್.​ ಸೀತಾರಾಮ್​ ಮದುವೆಯಲ್ಲೊಂದು ಅಚ್ಚರಿ​ಯ ಪ್ರಸಂಗ
Edited By:

Updated on: Aug 28, 2021 | 5:32 PM

ಕನ್ನಡ ಕಿರುತೆರೆ ಲೋಕದ ಜನಪ್ರಿಯ ನಿರ್ದೇಶಕ ಟಿ.ಎನ್​. ಸೀತಾರಾಮ್​ ಅವರು ಒಂದು ಇಂಟರೆಸ್ಟಿಂಗ್ ಘಟನೆಯನ್ನು ಹಂಚಿಕೊಂಡಿದ್ದಾರೆ. ಇದು ಯಾವುದೇ ಸೀರಿಯಲ್​ ಕಥೆಗೂ ಕಮ್ಮಿಯೇನಿಲ್ಲ. ಆದರೆ ಇದು ರೀಲ್​ ಅಲ್ಲ. ಅಪ್ಪಟ ರಿಯಲ್​. ದಶಕಗಳ ಹಿಂದೆ ತಮ್ಮ ಮದುವೆ ನಡೆದ ಸಂದರ್ಭ ಹೇಗಿತ್ತು ಎಂಬುದನ್ನು ಸೀತಾರಾಮ್​ ವಿವರಿಸಿದ್ದಾರೆ. ಅಂದಿನ ಪರಿಸ್ಥಿತಿಯನ್ನು ಅವರು ಎಳೆಎಳೆಯಾಗಿ ಕಟ್ಟಿಕೊಟ್ಟಿದ್ದಾರೆ. ಒಂದು ಅಪರೂಪದ ಸಂಗತಿಯನ್ನು ತಮ್ಮ ಫೇಸ್​ಬುಕ್​ ಖಾತೆಯಲ್ಲಿ ಅವರ ಹಂಚಿಕೊಂಡಿದ್ದಾರೆ. ಅವರ ಪೋಸ್ಟ್​ ಹೀಗಿದೆ..

‘ಇಂದಿನಂತೆ ಅಂದೂ ಹೀಗೇ. ಬೆಳಗ್ಗಿನ ವೇಳೆಗೆ ಬರೀ ಮೋಡ‌. ಹತ್ತು ಗಂಟೆಯ ವೇಳೆಗೆ ಮೋಡಗಳು ಚೆದುರಿ ಶುಭ್ರ ಆಕಾಶವಾಯಿತು. ಬೆಂಗಳೂರು ನಗರಕ್ಕೆ ಸೇರಿರಲಿಲ್ಲ ಆಗ. ಜಯನಗರದ ಕಾಂಪ್ಲೆಕ್ಸ್​ನಿಂದ ಎಷ್ಟೋ ಮೈಲಿ. ನಿರ್ಜನ ಪ್ರದೇಶದ ದೇವಸ್ಥಾನ. ನರಸಿಂಹ ಎಂದು ನನ್ನ ಸ್ನೇಹಿತ. ನಂತರ ಚಿತ್ರ ಸಾಹಿತಿಯಾದ. ಅವನೊಂದು ಸರಕು ಸಾಗಣೆಯ ವ್ಯಾನ್ ಇಟ್ಟಿದ್ದ. ಗೌರಿಬಿದನೂರಿನಿಂದ ರಾಮನಗರಕ್ಕೆ ರೇಷ್ಮೆಗೂಡು ಸಾಗಿಸುವ ವ್ಯಾನ್. ಅದರಲ್ಲಿ ನಮ್ಮನ್ನೆಲ್ಲಾ ಅಲ್ಲಿ ಬಿಟ್ಟು ರಾಮನಗರಕ್ಕೆ ಹೊರಟು ಹೋಗಿದ್ದ. ಮದುವೆಗೆ ಇರು ಅಂದರೆ ಇರಲಿಲ್ಲ’ ಎಂಬು ಬರಹ ಆರಂಭಿಸಿದ್ದಾರೆ ಸೀತಾರಾಮ್​.

‘ಇನ್ನು ಮದುವೆ ಆಗಲಾರೆ ಎಂಬ ಎಷ್ಟೋ ದಿನದ ನಿಲುವು ಬದಲಾದ ದಿನ. ಹೆಚ್ಚು ಜನಗಳಿಲ್ಲದ ದೂರದ ಜಾಗದಲ್ಲಿ ಮದುವೆಯಾಗಬೇಕು. ಸೂಟು, ಬೂಟು ಉಂಗುರ, ಯಾವ ಆಡಂಬರವೂ ಇರಬಾರದು. ಮದುವೆಗೆ ಹೆಚ್ಚು ಜನ ಬರಬಾರದು. ಮದುವೆ ಅತಿ ಸರಳವಾಗಿ ನಡೆಯಬೇಕು ಎಂಬುದಷ್ಟೇ ನನ್ನ ಆಗ್ರಹವಾಗಿತ್ತು‌. ಅವರ ಕಡೆಯವರಿಗೆ ಒಳಗೊಳಗೇ ಸ್ವಲ್ಪ ದಿಗಿಲು. ಜನ ಬರಬಾರದು, ದೂರದ ಜಾಗದಲ್ಲಿ ಸರಳವಾಗಿ ಮಾಡಬೇಕು ಎಂದರೆ ಯಾವುದೋ ಸಂಗತಿ ಮುಚ್ಚಿಟ್ಟುಕೊಳ್ಳಲು ಇರಬಹುದೇ ಎಂಬ ಸಣ್ಣ ಅನುಮಾನ ಅವರಿಗೆ. ನನ್ನ ಜೇಬಿನಲ್ಲಿ ಇಡಿಯ ಖರ್ಚಿಗೆ ಉಳಿದಿದ್ದುದು ಐನೂರ ಎಪ್ಪತ್ತು ರೂಪಾಯಿ. ವಧುವನ್ನೂ ಕರೆದುಕೊಂಡು ಊರು ತಲುಪುವುದು ಹೇಗೆಂಬ ಚಿಂತೆ. ಮದುವೆಯ ಸಡಗರದಲ್ಲೂ ಆತಂಕದಲ್ಲಿ ಇದ್ದೆ’ ಎಂದು ಸೀತಾರಾಮ್​ ವಿವರಿಸಿದ್ದಾರೆ.

‘ಮದುವೆಗೆ ಹೆಚ್ಚು ಜನ ಬರಬಾರದೆಂಬ ಆಶಯವಿದ್ದರೂ ಹತ್ತಿರದ ಜನ ಬಂದಿದ್ದರು. ಅಂದು ಬರಿಯ ಗೆಳೆಯರಾಗಿದ್ದು ನಂತರದ ದಿನಗಳಲ್ಲಿ ಎಂ.ಎಲ್.ಎ, ಮಂತ್ರಿಗಳಾದವರು, ಸಿನಿಮಾ ನಟರಾದವರು, ಖ್ಯಾತ ಪತ್ರಕರ್ತರು, ಮುಂತಾದ ಕೆಲವು ಜನಬಂದಿದ್ದರು. ದುಡ್ಡು ಕಡಿಮೆಯಾದರೆ ತಾನು ಸ್ವಲ್ಪ ಕೊಡುತ್ತೇನೆಂದು ಗೆಳೆಯ ಕಿಟ್ಟಿ ಧೈರ್ಯ ಹೇಳುತ್ತಿದ್ದರು. ಮಧ್ಯಾಹ್ನ ಸರಳ ಊಟದ ನಂತರ ನರಸಿಂಹ ರಾಮನಗರದಿಂದ ವ್ಯಾನ್ ತಂದರು. ಅದರಲ್ಲಿ ಎಲ್ಲರೂ ಗೌರಿಬಿದನೂರಿಗೆ ವಾಪಸ್. ನಾನು ಗೀತಾ ಮಾತ್ರ ಮಲ್ಲೇಶ್ವರದಲ್ಲಿದ್ದ ಕಿಟ್ಟಿ ಮನೆಗೆ ಬಂದೆವು’ ಎಂದಿದ್ದಾರೆ ಸೀತಾರಾಮ್​.

‘ಉಡುಗೊರೆ ಬೇಡವೆಂದರೂ ಕೆಲವರು ಕವರುಗಳನ್ನು ಜೇಬಿಗೆ ತುರುಕಿದ್ದರು. ಅದರಲ್ಲಿ ಒಂದು ಕವರಿನಲ್ಲಿ ಒಂದು ಸಾವಿರವಿತ್ತು. ಇಂದಿನ ಐವತ್ತು ಸಾವಿರಕ್ಕೆ ಸಮ. ಯಾರು ಕೊಟ್ಟರೆಂದು ಬರೆದಿರಲಿಲ್ಲ. ಬಹಳ ದಿನ ಯಾರು ಕೊಟ್ಟಿರಬಹುದೆಂದು ತಲೆ ಕೆಡಿಸಿಕೊಂಡು, ವಾಪಸ್ ಕೊಡಬೇಕಾಗಬಹುದೆಂದು ಹೆದರಿ ಹಾಗೇ ಗೌರಿಬಿದನೂರಿನ ದೇವರ ಮನೆಯಲ್ಲಿ ಇಟ್ಟಿದ್ದೆ. ಮತ್ತೆ ಹುಟ್ಟಿದರೆ ಬದಲಾಯಿಸದೆ ಇಟ್ಟುಕೊಳ್ಳ ಬಯಸುವ ಪುಟಗಳಲ್ಲಿ ಇದೂ ಒಂದು’ ಎಂದು ಸೀತಾರಾಮ್​ ಈ ಹಳೇ ಘಟನೆಯನ್ನು ಮೆಲುಕು ಹಾಕಿದ್ದಾರೆ.

ಇದನ್ನೂ ಓದಿ:

TN Seetharam: ‘ಮತ್ತೆ ಮನ್ವಂತರ’ ಧಾರವಾಹಿಯ ಚಿತ್ರೀಕರಣ ಪ್ರಾರಂಭದ ದಿನಾಂಕ ತಿಳಿಸಿದ ನಿರ್ದೇಶಕ ಟಿ.ಎನ್.ಸೀತಾರಾಮ್

23 ವರ್ಷವಾದರೂ ಮಾಸದ ‘ಮಾಯಾಮೃಗ’ ಹಾಡು ಕಂಪೋಸ್​ ಆಗಿದ್ದು ಲಂಚ್​ ಬ್ರೇಕ್​ನ​ ಕೆಲವೇ ನಿಮಿಷಗಳಲ್ಲಿ; ಇಲ್ಲಿದೆ ಇಂಟರೆಸ್ಟಿಂಗ್​ ಮಾಹಿತಿ

Web contact

TV9 Kannada

Read More
Follow Us