‘ದೇವರು ಇದ್ದಾನೋ ಇಲ್ಲವೋ?’: ಸಮನ್ವಿ ನಿಧನದ ಬಳಿಕ ಸೃಜನ್​ ಲೋಕೇಶ್​ ನೋವಿನ ನುಡಿ

| Updated By: ಮದನ್​ ಕುಮಾರ್​

Updated on: Jan 14, 2022 | 8:29 AM

Samanvi Death: ಸಮನ್ವಿ ನಿಧನಕ್ಕೆ ಕಿರುತೆರೆ ಲೋಕದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಸೃಜನ್​ ಲೋಕೇಶ್​ ಅವರು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ.

‘ದೇವರು ಇದ್ದಾನೋ ಇಲ್ಲವೋ?’: ಸಮನ್ವಿ ನಿಧನದ ಬಳಿಕ ಸೃಜನ್​ ಲೋಕೇಶ್​ ನೋವಿನ ನುಡಿ
ಸಮನ್ವಿ, ಸೃಜನ್ ಲೋಕೇಶ್
Follow us on

ಕನ್ನಡ ಕಿರುತೆರೆ ಪಾಲಿಗೆ ಹೊಸ ವರ್ಷ ಮತ್ತು ಸಂಕ್ರಾಂತಿಯ ಈ ಸಂದರ್ಭದಲ್ಲಿ ಸೂತಕದ ಛಾಯೆ ಆವರಿಸಿದೆ. ಬಾಲ ಕಲಾವಿದೆ, ‘ನನ್ನಮ್ಮ ಸೂಪರ್​ ಸ್ಟಾರ್​’ (Nannamma Superstar) ರಿಲಿಯಾಟಿ ಶೋ ಸ್ಪರ್ಧಿ ಸಮನ್ವಿ (Samanvi) ನಿಧನದಿಂದಾಗಿ ಎಲ್ಲರೂ ಕಣ್ಣೀರು ಹಾಕುತ್ತಿದ್ದಾರೆ. ಪಟಪಟನೆ ಮಾತನಾಡುತ್ತ, ಪ್ರೇಕ್ಷಕರನ್ನು ರಂಜಿಸುತ್ತಿದ್ದ ಈ ಕಂದ ಇನ್ನಿಲ್ಲ ಎಂಬ ಸುದ್ದಿಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸಮನ್ವಿ ನಿಧನಳಾಗಿದ್ದಾಳೆ. ಆಕೆಯ ತಾಯಿ ಅಮೃತಾ ನಾಯ್ಡು (Amrutha Naidu) ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಂಥ ಕರುಣಾಜನಕ ಸ್ಥಿತಿ ಬಗ್ಗೆ ನಟ, ನಿರೂಪಕ ಸೃಜನ್​ ಲೋಕೇಶ್​ (Srujan Lokesh) ಅವರು ಮನನೊಂದು ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ‘ದೇವರು ಇದ್ದಾನೋ ಇಲ್ಲವೋ ಅನ್ನೋ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ’ ಎಂದು ಅವರು ಹೇಳಿದ್ದಾರೆ.

ಸಮನ್ವಿ ನಿಧನಕ್ಕೆ ಕಿರುತೆರೆ ಲೋಕದ ಅನೇಕರು ಕಂಬನಿ ಮಿಡಿಯುತ್ತಿದ್ದಾರೆ. ಸೃಜನ್​ ಲೋಕೇಶ್​ ಅವರು ಸೋಶಿಯಲ್ ಮೀಡಿಯಾ ಮೂಲಕ ಸಂತಾಪ ಸೂಚಿಸಿದ್ದಾರೆ. ‘ದೇವರು ನಿಜವಾಗಿಯೂ ದೇವರಾ? ಅಥವಾ ದೇವರು ಇದ್ದಾನಾ? ಇಲ್ಲ, ದೇವರನ್ನ ನಂಬಲೇಬೇಕಾ? ಈ ಪ್ರಶ್ನೆಗಳು ಆಗಾಗ ಮೂಡಿ ಬರುತ್ತಿವೆ. ಇವತ್ತು ಈ ಘಟನೆಯ ನಂತರ ನಿಜವಾಗಲೂ ದೇವರು ಇದ್ದಾನೋ ಇಲ್ಲವೋ ಅನ್ನೋ ಪ್ರಶ್ನೆ ಮನಸ್ಸಿಗೆ ತುಂಬಾ ಗಾಢವಾಗಿ ಕಾಡುತ್ತಿದೆ. ಪುಟ್ಟ ಕಂದ ಸಮನ್ವಿ ಮಿಸ್ ಯೂ. ನಿನ್ನ ಆತ್ಮಕ್ಕೆ ಶಾಂತಿ ಸಿಗಲಿ’ ಎಂದು ಸೃಜನ್​ ಲೋಕೇಶ್​ ಪೋಸ್ಟ್​ ಮಾಡಿದ್ದಾರೆ.

ಕಲರ್ಸ್​ ಕನ್ನಡ ವಾಹಿನಿಯಲ್ಲಿ ಇತ್ತೀಚೆಗಷ್ಟೇ ‘ನನ್ನಮ್ಮ ಸೂಪರ್ ಸ್ಟಾರ್’ ರಿಯಾಲಿಟಿ ಶೋ ಆರಂಭಗೊಂಡಿದೆ. ಈ ಕಾರ್ಯಕ್ರಮಕ್ಕೆ 6 ವರ್ಷದ ಸಮನ್ವಿ ಸ್ಪರ್ಧಿಯಾಗಿ ತೆರಳಿದ್ದಳು. ಆಕೆಗೆ ಅನೇಕ ಮಂದಿ ಅಭಿಮಾನಿಗಳಾಗಿದ್ದರು. ಮನರಂಜನಾ ಲೋಕದಲ್ಲಿ ಎತ್ತರಕ್ಕೆ ಬೆಳೆಯಬೇಕಿದ್ದ ಈ ಪುಟ್ಟ ಬಾಲಕಿ ಈಗ ಸಾವಿನ ಮನೆಯ ಹಾದಿ ಹಿಡಿದಿರುವುದು ತೀವ್ರ ನೋವಿನ ಸಂಗತಿ. ಸಮನ್ವಿ ತಾಯಿ ಅಮೃತಾ ನಾಯ್ಡು ಈಗ ನಾಲ್ಕು ತಿಂಗಳ ಗರ್ಭಿಣಿ ಎಂದು ತಿಳಿದು ಬಂದಿದೆ. ಖುಷಿಯ ದಿನಗಳನ್ನು ಎದುರು ನೋಡಬೇಕಿದ್ದ ಅವರ ಬದುಕಿನಲ್ಲಿ ದುರ್ಘಟನೆ ನಡೆದಿದೆ.

ಅಪಘಾತ ನಡೆದಿದ್ದು ಎಲ್ಲಿ?

ಜ.13ರಂದು ಬೆಂಗಳೂರಿನ ಕೋಣನಕುಂಟೆಯ ವಾಜರಹಳ್ಳಿಯಲ್ಲಿ ಸ್ಕೂಟರ್ ಮೇಲೆ ಸಮನ್ವಿ ಹಾಗೂ ಅಮೃತಾ ನಾಯ್ಡು ತೆರಳುತ್ತಿದ್ದರು. ಈ ವೇಳೆ ಸ್ಕೂಟರ್​ಗೆ ಹಿಂದಿನಿಂದ ಲಾರಿ ಬಂದು ಹೊಡೆಯಿತು. ಸ್ಥಳದಲ್ಲೇ ಸಮನ್ವಿ ಮೃತಪಟ್ಟಳು. ಅಮೃತಾ ಅವರಿಗೆ ಗಾಯಗಳಾಗಿದ್ದು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲಾರಿ ಚಾಲಕನನ್ನು ಕುಮಾರಸ್ವಾಮಿ ಲೇಔಟ್​ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೆ.ಎಸ್. ಲೇಔಟ್ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.

ಇದನ್ನೂ ಓದಿ:

Samanvi: ಭೀಕರ ರಸ್ತೆ ಅಪಘಾತದಲ್ಲಿ ಕಿರುತೆರೆ ನಟಿ ಅಮೃತಾ ನಾಯ್ಡು ಮಗಳು ಸಮನ್ವಿ ಸ್ಥಳದಲ್ಲೇ ನಿಧನ

ಅಪಘಾತದಲ್ಲಿ ಸತ್ತ ಅಣ್ಣನ ದೇಹ ನೋಡ್ತಿದ್ದಂತೆ ಆಘಾತಕ್ಕೆ ಹಾರಿ ಹೋಯ್ತು ತಂಗಿಯ ಪ್ರಾಣ ಪಕ್ಷಿ, ಮೈಸೂರಿನಲ್ಲಿ ಮನಕಲಕುವ ಘಟನೆ