Bigg Boss Kannada: ‘ಡ್ರೋನ್​ ಪ್ರತಾಪ್​ ಹೀರೋ, ವಿನಯ್​ ಗೌಡ ವಿಲನ್​’; ಸ್ಪರ್ಧಿಗಳ ವರ್ತನೆ ಬಗ್ಗೆ ಮುಲಾಜಿಲ್ಲದೇ ಮಾತಾಡಿದ ಸುದೀಪ್​

Vinay Gowda: ಬಿಗ್​ ಬಾಸ್​ ಕಾರ್ಯಕ್ರಮದಲ್ಲಿ ಹಲವು ಪ್ರಮುಖ ಘಟನೆಗಳಿಗೆ 4ನೇ ವಾರ ಸಾಕ್ಷಿ ಆಯಿತು. ವಿನಯ್​ ಗೌಡ ಅವರ ವರ್ತನೆ ಬಗ್ಗೆ ವೀಕೆಂಡ್​ ಸಂಚಿಕೆಯಲ್ಲಿ ಟೀಕೆ ಎದುರಾಯಿತು. ಹಾಗೆಯೇ, ಡ್ರೋನ್​ ಪ್ರತಾಪ್​ ಅವರ ನಡೆಯ ಬಗ್ಗೆ ಕಿಚ್ಚ ಸುದೀಪ್​ ಕಡೆಯಿಂದ ಮೆಚ್ಚುಗೆ ಸಿಕ್ಕಿತು. ಈ ಎಲ್ಲ ಘಟನೆಗಳ ಬಗ್ಗೆ ಇಲ್ಲಿದೆ ವಿವರ..

Bigg Boss Kannada: ‘ಡ್ರೋನ್​ ಪ್ರತಾಪ್​ ಹೀರೋ, ವಿನಯ್​ ಗೌಡ ವಿಲನ್​’; ಸ್ಪರ್ಧಿಗಳ ವರ್ತನೆ ಬಗ್ಗೆ ಮುಲಾಜಿಲ್ಲದೇ ಮಾತಾಡಿದ ಸುದೀಪ್​
ವಿನಯ್​ ಗೌಡ, ಡ್ರೋನ್​ ಪ್ರತಾಪ್​

Updated on: Nov 05, 2023 | 7:33 AM

‘ಬಿಗ್​ ಬಾಸ್ ಕನ್ನಡ ಸೀಸನ್​ 10’ ಶೋ ಈಗ ನಾಲ್ಕು ವಾರಗಳನ್ನು ಪೂರೈಸಿದೆ. ನಾಲ್ಕನೇ ವಾರದಲ್ಲಿ ಎಲ್ಲ ಸ್ಪರ್ಧಿಗಳ ನಡುವೆ ಪೈಪೋಟಿ ಜೋರಾಗಿತ್ತು. ಆಟಕ್ಕಿಂತಲೂ ತಂತ್ರಗಾರಿಕೆಯೇ ಹೆಚ್ಚಾಗಿತ್ತು. ಟಾಸ್ಕ್​ಗಿಂತಲೂ ಮಾತಿನ ಭರಾಟೆಯೇ ಜಾಸ್ತಿ ಆಗಿತ್ತು. ವಿನಯ್​ ಗೌಡ (Vinay Gowda), ತುಕಾಲಿ ಸಂತೋಷ್​ ಮುಂತಾದವರು ಆಡಿದ ಮಾತುಗಳು ಸಾಕಷ್ಟು ಚರ್ಚೆ ಹುಟ್ಟುಹಾಕಿದ್ದವು. ಆ ಎಲ್ಲ ವಿಚಾರಗಳ ಬಗ್ಗೆ ವಾರದ ಪಂಚಾಯ್ತಿಯಲ್ಲಿ ಕಿಚ್ಚ ಸುದೀಪ್​ ಅವರು ಕ್ಲಾಸ್​ ತೆಗೆದುಕೊಂಡಿದ್ದಾರೆ. 4ನೇ ವಾರದಲ್ಲಿ ಡ್ರೋನ್​ ಪ್ರತಾಪ್ (Drone Prathap)​ ನಡೆದುಕೊಂಡ ರೀತಿಗೆ ಸುದೀಪ್​ ಮೆಚ್ಚುಗೆ ಸೂಚಿಸಿದ್ದಾರೆ. ವಿನಯ್​ ಗೌಡ ಅವರ ವರ್ತನೆಯನ್ನು ಸುದೀಪ್​ (Kichcha Sudeep) ಖಂಡಿಸಿದ್ದಾರೆ.

ಬಿಗ್​ ಬಾಸ್​ ಮನೆಯಲ್ಲಿ ನಾಲ್ಕನೇ ವಾರ ಎರಡು ಪ್ರಮುಖ ಘಟನೆಗಳು ನಡೆದವು. ನಾಮಿನೇಷನ್​ ವಿಚಾರದಲ್ಲಿ ಡ್ರೋನ್​ ಪ್ರತಾಪ್​ ಅವರು ಹೆಚ್ಚು ಅಧಿಕಾರ ಪಡೆದುಕೊಂಡರು. ಅವರಿಗೆ ಸಿಕ್ಕ ಎಲ್ಲ ನಾಮಿನೇಷನ್​ ಪಾಸ್​ಗಳನ್ನು ಮಹಿಳೆಯರಿಗೆ ನೀಡುವ ಮೂಲಕ ಅವರು ಅನೇಕರ ಮನ ಗೆದ್ದರು. ಮಹಿಳೆಯರು ಮುಂದೆ ಬರಲಿ ಎಂಬುದು ಅವರ ಆಶಯ ಆಗಿತ್ತು. ಪ್ರತಾಪ್​ ಅವರ ಈ ಗುಣವನ್ನು ಸುದೀಪ್​ ಮೆಚ್ಚಿಕೊಂಡಿದ್ದಾರೆ. ಈ ರೀತಿ ಮಾಡಿದ್ದಕ್ಕಾಗಿ ಡ್ರೋನ್​ ಪ್ರತಾಪ್​ ಅವರನ್ನು ಹೀರೋ ಎಂದು ಸುದೀಪ್​ ಕರೆದಿದ್ದಾರೆ.

ಇದನ್ನೂ ಓದಿ: ಬಿಗ್​ ಬಾಸ್ ಶೋನಲ್ಲಿ ಇಂಟರೆಸ್ಟಿಂಗ್​ ಸ್ಪರ್ಧಿ ಆಗಿರುವ ಡ್ರೋನ್​ ಪ್ರತಾಪ್​

ಇನ್ನೊಂದು ಕಡೆ ವಿಲನ್​ ಆಗಿದ್ದು ವಿನಯ್​ ಗೌಡ. 4ನೇ ವಾರದಲ್ಲಿ ಮಹಿಳೆಯರಿಗೆ ಅಗೌರವ ತೋರುವ ರೀತಿಯಲ್ಲಿ ವಿನಯ್​ ಗೌಡ ನಡೆದುಕೊಂಡರು. ಅವರ ಮಾತು ಮಿತಿ ಮೀರಿತ್ತು. ಬಳೆ ವಿಚಾರ ಇಟ್ಟುಕೊಂಡು ಅವರು ಮಹಿಳೆಯರನ್ನು ಹಂಗಿಸುವ ರೀತಿಯಲ್ಲಿ ಮಾತನಾಡಿದ್ದರು. ಅದರಿಂದಾಗಿ ಸೋಶಿಯಲ್​ ಮೀಡಿಯಾದಲ್ಲಿ ಭಾರಿ ಟೀಕೆ ವ್ಯಕ್ತವಾಗಿತ್ತು. ಒಟ್ಟಾರೆಯಾಗಿ ಮಹಿಳೆಯರಿಗೆ ಅಗೌರವ ತೋರಿಸಿದ್ದಕ್ಕಾಗಿ 4ನೇ ವಾರದಲ್ಲಿ ವಿನಯ್​ ಗೌಡ ವಿಲನ್​ ಆಗಿದ್ದಾರೆ ಎಂದರು ಸುದೀಪ್​. ಈ ಎಲ್ಲ ಸ್ಪರ್ಧಿಗಳ ವರ್ತನೆ ಬಗ್ಗೆ ಸುದೀಪ್​ ಅವರು ಮುಲಾಜಿಲ್ಲದೇ ಮಾತನಾಡಿದ್ದಾರೆ.

ಇದನ್ನೂ ಓದಿ: ಹಾದಿ ತಪ್ಪಿದ ಆನೆ, ಹುಲಿಗಳಿಗೆ ಪಂಚ್ ಕೊಟ್ಟ ಕಿಚ್ಚ; ಸುದೀಪ್​​ಗೆ ವೀಕ್ಷಕರ ಸೆಲ್ಯೂಟ್

ಕಿಚ್ಚ ಸುದೀಪ್​ ಅವರು ಮೊದಲ ಸೀಸನ್​ನಿಂದಲೂ ಬಿಗ್​ ಬಾಸ್​ ಶೋ ನಿರೂಪಣೆ ಮಾಡುತ್ತಾ ಬಂದಿದ್ದಾರೆ. ಅವರಿಗೆ ಈ ಕೆಲಸದಲ್ಲಿ ಸಖತ್​ ಅನುಭವ ಇದೆ. ಎಂಥದ್ದೇ ಸ್ಪರ್ಧಿಗಳು ಬಂದರೂ ಅವರನ್ನು ಸುದೀಪ್​ ಮ್ಯಾನೇಜ್​ ಮಾಡುತ್ತಾರೆ. ಸ್ಪರ್ಧಿಗಳು ಹಾದಿ ತಪ್ಪಿದಾಗ ಅವರ ಕಿವಿಹಿಂಡುವ ಕೆಲಸ ಖಂಡಿತಾ ಆಗುತ್ತದೆ. 10ನೇ ಸೀಸನ್​ನಲ್ಲಿ ಅತಿಯಾಗಿ ಆರ್ಭಟಿಸಿದ ವಿನಯ್​ ಗೌಡ ಅವರಿಗೆ ಕಿಚ್ಚ ಕ್ಲಾಸ್​ ತೆಗೆದುಕೊಂಡಿದ್ದಾರೆ. ಧೈರ್ಯವಾಗಿ ಆಟ ಆಡಿದ ಸಂಗೀತಾ ಶೃಂಗೇರಿ ಅವರನ್ನು ಸುದೀಪ್​ ಪ್ರಶಂಸಿಸಿದ್ದಾರೆ. ‘ಕಲರ್ಸ್​ ಕನ್ನಡ’ದಲ್ಲಿ ಬಿಗ್​ ಬಾಸ್​ ಸಂಚಿಕೆ ಪ್ರತಿ ರಾತ್ರಿ 9.30ಕ್ಕೆ ಪ್ರಸಾರ ಆಗುತ್ತದೆ. ‘ಜಿಯೋ ಸಿನಿಮಾ’ ಮೂಲಕ ದಿನದ 24 ಗಂಟೆಯೂ ಲೈವ್​ ನೋಡುವ ಅವಕಾಶ ಇದೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Madan Kumar

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More
Follow Us