ಜೀವ ಕೊಟ್ಟ ‘ಎರಡನೇ ತಾಯಿ’ಯನ್ನು ವೀಕೆಂಡ್ ವಿತ್ ರಮೇಶ್​ನಲ್ಲಿ ಭೇಟಿಯಾದ ಡಾಲಿ

Weekend With Ramesh: ಡಾಲಿ ಧನಂಜಯ್ ಹುಟ್ಟಿ ಭೂಮಿಗೆ ಬರಲು ಮುಖ್ಯ ಕಾರಣರಾದ ಎರಡನೇ ತಾಯಿಯನ್ನು ಮೊದಲ ಬಾರಿಗೆ ವೀಕೆಂಡ್ ವಿತ್ ರಮೇಶ್ ವೇದಿಕೆಯಲ್ಲಿ ಭೇಟಿಯಾದ ಡಾಲಿ ಧನಂಜಯ್!

ಜೀವ ಕೊಟ್ಟ 'ಎರಡನೇ ತಾಯಿ'ಯನ್ನು ವೀಕೆಂಡ್ ವಿತ್ ರಮೇಶ್​ನಲ್ಲಿ ಭೇಟಿಯಾದ ಡಾಲಿ
ಡಾಲಿ ಧನಂಜಯ್
Follow us
|

Updated on: Apr 15, 2023 | 10:48 PM

ಡಾಲಿ ಧನಂಜಯ್ (Daali Dhananjay) ತಮಗೆ ಜೀವ ನೀಡಿದ ಎರಡನೇ ತಾಯಿಯನ್ನು ಇದೇ ಮೊದಲ ಬಾರಿಗೆ ಭೇಟಿ ಮಾಡಿದರು ಅದು ವೀಕೆಂಡ್ ವಿತ್ ರಮೇಶ್ (Weekend With Ramesh)​ ಕಾರ್ಯಕ್ರಮದಲ್ಲಿ. ಡಾಲಿ ಧನಂಜಯ್ ವೀಕೆಂಡ್ ವಿತ್ ರಮೇಶ್ ಸೀಸನ್ ಐದರ ಈ ವಾರದ ಅತಿಥಿಯಾಗಿ ಆಗಮಿಸಿದ್ದರು. ಶೋನಲ್ಲಿ ಅವರ ಹುಟ್ಟಿನ ಬಗ್ಗೆ ಕುತೂಹಲಕರ ಮಾಹಿತಿಯೊಂದು ಬಿಚ್ಚಿಕೊಂಡಿತು. ಮಾತ್ರವಲ್ಲದೆ, ತಮಗೆ ಜೀವ ನೀಡಿದ ‘ಎರಡನೇ ತಾಯಿ’ಯನ್ನು ಮೊದಲ ಬಾರಿಗೆ ಡಾಲಿ ಧನಂಜಯ್ ವೀಕೆಂಡ್ ವಿತ್ ರಮೇಶ್ ವೇದಿಕೆ ಮೇಲೆ ಭೇಟಿಯಾಗಿ ಅವರಿಗೆ ಧನ್ಯವಾದ ಹೇಳಿದರು.

ಡಾಲಿ ಧನಂಜಯ್ ಅವರಿಗೆ ಇಬ್ಬರು ಅಕ್ಕಂದಿರು ಹಾಗೂ ಒಬ್ಬರು ಅಣ್ಣ ಧನಂಜಯ್ ಕೊನೆಯವರು. ತಂದೆ ಶಿಕ್ಷಕರು, ತಾಯಿ ಗೃಹಿಣಿ. ಮೊದಲೆರಡು ಹೆಣ್ಣು ಮಕ್ಕಳು ಮೂರನೇ ಮಗು ಗಂಡು. ಆ ಬಳಿಕ ಮತ್ತೆ ಧನಂಜಯ್ ತಾಯಿ ಗರ್ಭಿಣಿಯಾಗಿದ್ದಾಗ, ಗಂಡು ಮಗನೊಬ್ಬ ಆಗಿದ್ದಾನೆ, ನಮಗೆ ಮೂರೇ ಮಕ್ಕಳು ಸಾಕು ನಾಲ್ಕಾದರೆ ಸರಿಯಾಗಿ ಸವಲತ್ತುಗಳನ್ನು ನೀಡಲಾಗುವುದಿಲ್ಲವೇನೋ ಎಂದು ಅವರ ತಂದೆ ತಮ್ಮ ಪತ್ನಿಗೆ ಗರ್ಭಪಾತ ಮಾಡಿಸಲು ಮುಂದಾಗಿದ್ದರು. ಅಂತೆಯೇ ಅರಸಿಕೆರೆಯ ಆಸ್ಪತ್ರೆಗೆ ಧನಂಜಯ್ ಅವರ ತಾಯಿಯನ್ನು ಕಳಿಸಿದ್ದಾರೆ. ಆಗ ಅಲ್ಲಿ ವೈದ್ಯೆಯಾಗಿದ್ದ ಮಣಿಕರ್ಣಿಕಾ ಎಂಬುವರು ಧನಂಜಯ್ ತಾಯಿ ಹಾಗೂ ತಂದೆಗೆ ಬುದ್ಧಿ ಹೇಳಿ ಈಗ ನಾಲ್ಕು ತಿಂಗಳು ಆಗಿಬಿಟ್ಟಿದೆ ಮಗು ಜನಿಸಿಬಿಡಲಿ ಏನೂ ಆಗುವುದಿಲ್ಲ ಎಲ್ಲ ಒಳ್ಳೆಯದಾಗುತ್ತದೆ ಎಂದು ಬುದ್ಧಿ ಹೇಳಿ ಕಳಿಸಿದರಂತೆ.

ವೈದ್ಯೆ ಮಣಿಕರ್ಣಿಕಾ ಅವರ ಮಾತು ಕೇಳಿ ಗರ್ಭಪಾತ ಮಾಡಿಸುವ ಯೋಚನೆ ಕೈಬಿಟ್ಟು ಮಗುವನ್ನು ಭೂಮಿಗೆ ತಂದಿದ್ದಾರೆ ದಂಪತಿ. ಆ ಮಗುವಿನ ಪ್ರಸವವನ್ನು ಮಾಡಿಸಿದ್ದು ಸಹ ಅದೇ ವೈದ್ಯೆ ಮಣಿಕರ್ಣಿಕಾ. ತಂದೆ-ತಾಯಿ ಬೇಡ ಅಂದುಕೊಂಡಿದ್ದ ಆ ಮಗುವೇ ಮುಂದೆ ಬೆಳೆದು ಧನಂಜಯ್ ಆಗಿದ್ದು.

ವೀಕೆಂಡ್ ವಿತ್ ರಮೇಶ್​ನಲ್ಲಿ ಧನಂಜಯ್ ಜನಿಸಿದ ಆಸ್ಪತ್ರೆ, ಆಗ ಅಲ್ಲಿದ್ದ ಶುಶ್ರೂಶಕಿಯರನ್ನೆಲ್ಲ ತೋರಿಸಿ ಅವರು ಧನಂಜಯ್ ಬಗ್ಗೆ ಮಾತನಾಡಿದರು. ಆದರೆ ವೈದ್ಯೆ ಮಣಿಕರ್ಣಿಕಾ ಎಲ್ಲಿದ್ದಾರೆಂದು ತಮಗೆ ಗೊತ್ತಿಲ್ಲವೆಂದು ಶುಶ್ರೂಶಕಿಯರು ಹೇಳಿದರು. ಆದರೆ ವೀಕೆಂಡ್ ವಿತ್ ರಮೇಶ್ ತಂಡವು ಹಲವು ಪ್ರಯಾಸಗಳನ್ನು ಪಟ್ಟು ವೈದ್ಯೆ ಮಣಿಕರ್ಣಿಕಾ ಅವರನ್ನು ಶೋಗೆ ಕರೆತಂದಿತು.

ಇದನ್ನೂ ಓದಿ: Hoysala: ಶಿವಣ್ಣ ನಟಿಸಿದ್ದ ಆ ಪೊಲೀಸ್ ಪಾತ್ರದಲ್ಲಿ ನಟಿಸುವಾಸೆ: ಡಾಲಿ ಧನಂಜಯ್

ತಾವು ಭೂಮಿಗೆ ಬರಲು ಕಾರಣರಾದ ವೈದ್ಯೆಯನ್ನು ಅದೇ ಮೊದಲ ಬಾರಿಗೆ ನೋಡಿದ ಧನಂಜಯ್, ಇವರು ನನಗೆ ಎರಡನೇ ತಾಯಿ, ನೀವು ಇಲ್ಲದೇ ಹೋಗಿದ್ದರೆ ನಾನು ತುಂಬಾ ಜನರ ಪ್ರೀತಿಯನ್ನು ಕಳೆದುಕೊಂಡು ಬಿಡುತ್ತಿದ್ದೆ, ನಿಮಗೆ ಎಷ್ಟು ಧನ್ಯವಾದ ಹೇಳಿದರೂ ಸಾಲದು ಎಂದು ವೈದ್ಯೆಗೆ ಕೈಮುಗಿದರು. ನನಗೆ ಜೀವ ಕೊಟ್ಟವರು ಇವರು, ಇವರ ಹೆಸರು ಸಹ ನನಗೆ ಗೊತ್ತಿರಲಿಲ್ಲ. ಇದೇ ಮೊದಲ ಬಾರಿ ನೋಡುತ್ತಿದ್ದೇನೆ, ಇದನ್ನು ಸಾಧ್ಯವಾಗಿಸಿದ ನಿಮಗೆ ಧನ್ಯವಾದ ಎಂದು ನಿರೂಪಕ ರಮೇಶ್ ಹಾಗೂ ವೀಕೆಂಡ್ ವಿತ್ ರಮೇಶ್ ತಂಡಕ್ಕೆ ಧನ್ಯವಾದ ಹೇಳಿದರು. ವೈದ್ಯೆ ಮಣಿಕರ್ಣಿಕಾ ಸಹ ಅಂದು ಧನಂಜಯ್​ರ ತಾಯಿ-ತಂದೆಗೆ ಹೇಳಿದ ಮಾತುಗಳನ್ನು ಮತ್ತೊಮ್ಮೆ ನೆನಪು ಮಾಡಿಕೊಂಡರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ