‘ಮಾನಸಿಕ ನೆಮ್ಮದಿ ನೀಡಿದ್ದು ವಿಜಯ್’; ರಶ್ಮಿಕಾ ಮಂದಣ್ಣ ಮನದಾಳದ ಮಾತು
ವಿಜಯ್ ದೇವರಕೊಂಡ ಹುಟ್ಟುಹಬ್ಬದ ಸಂದರ್ಭದಲ್ಲಿ ರಶ್ಮಿಕಾ ಮಂದಣ್ಣ ಅವರ ಹಳೆಯ ಹೇಳಿಕೆಯೊಂದು ಮತ್ತೆ ವೈರಲ್ ಆಗಿದೆ. ಹಿಂದಿನ ಸಂಬಂಧದಲ್ಲಿನ ಸಂಕಷ್ಟದ ಸಮಯದಲ್ಲಿ ವಿಜಯ್ ತಮಗೆ ಮಾನಸಿಕ ನೆಮ್ಮದಿ ನೀಡಿದ್ದಾರೆ ಎಂದು ರಶ್ಮಿಕಾ ಸ್ಮರಿಸಿದ್ದಾರೆ. ಸಂತೋಷ ಮತ್ತು ಶಾಂತಿ ನೀಡುವ ವ್ಯಕ್ತಿ ಜೊತೆ ಇರುವುದು ಮುಖ್ಯ ಎಂದಿರುವ ರಶ್ಮಿಕಾ, ವಿಜಯ್ ತಮ್ಮ ಜೀವನದಲ್ಲಿ ಎಷ್ಟು ವಿಶೇಷ ಎಂಬುದನ್ನು ವಿವರಿಸಿದ್ದಾರೆ.

ಟಾಲಿವುಡ್ ಖ್ಯಾತ ನಟ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ (Rashmika Mandanna) ಪ್ರೀತಿಸಿ ಮದುವೆ ಆದರು. ಇಬ್ಬರೂ ಹಾಯಾಗಿ ಸಂಸಾರ ನಡೆಸಿಕೊಂಡು ಹೋಗುತ್ತಿದ್ದಾರೆ. ಇಂದು (ಮೇ 9) ವಿಜಯ್ ತಮ್ಮ 37ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಈ ಬಾರಿಯ ಜನ್ಮದಿನ ಅವರಿಗೆ ಬಹಳ ವಿಶೇಷ. ಏಕೆಂದರೆ ವಿವಾಹದ ಬಳಿಕ ಅವರು ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬ. ಇಬ್ಬರೂ ವಿಶೇಷ ಸ್ಥಳಕ್ಕೆ ತೆರಳಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ ಎನ್ನಲಾಗಿದೆ. ಈ ಮಧ್ಯೆ ರಶ್ಮಿಕಾ ಅವರ ಹಳೆಯ ಹೇಳಿಕೆ ಒಂದು ವೈರಲ್ ಆಗಿದೆ.
ಈ ಮೊದಲು ನೀಡಿದ ಸಂದರ್ಶನವೊಂದರಲ್ಲಿ ರಶ್ಮಿಕಾ ತಮ್ಮ ಕಹಿ ನೆನಪುಗಳ ಬಗ್ಗೆ ಮಾತನಾಡಿದ್ದರು. ಹಿಂದಿನ ಸಂಬಂಧವೊಂದರಲ್ಲಿ ತಾವು ಅನುಭವಿಸಿದ ಸಂಕಷ್ಟವನ್ನು ರಶ್ಮಿಕಾ ಸ್ಮರಿಸಿದ್ದರು. ಆ ಸಮಯದಲ್ಲಿ ತಮಗೆ ಮಾನಸಿಕ ನೆಮ್ಮದಿ ನೀಡಿದ್ದು ವಿಜಯ್ ಎಂದು ರಶ್ಮಿಕಾ ಹೇಳಿಕೊಂಡಿದ್ದರು. ಈ ಕಾರಣಕ್ಕೆ ರಶ್ಮಿಕಾಗೆ ವಿಜಯ್ ತುಂಬಾನೇ ಸ್ಪೆಷಲ್.
‘ಯಾರೂ ಕೂಡ ಇಷ್ಟವಿಲ್ಲದ ಅಥವಾ ಒತ್ತಡದ ಸಂಬಂಧದಲ್ಲಿ ಬಲವಂತವಾಗಿ ಮುಂದುವರಿಯಬಾರದು. ಜೀವನದಲ್ಲಿ ಶಾಂತಿ ಮತ್ತು ಸಂತೋಷವನ್ನು ತರುವಂತಹ ವ್ಯಕ್ತಿಯೊಂದಿಗೆ ಇರುವುದು ಎಷ್ಟು ಮುಖ್ಯ ಎಂಬುದನ್ನು ನಾನು ಈಗ ಅರಿತುಕೊಂಡಿದ್ದೇನೆ’ ಎಂದು ರಶ್ಮಿಕಾ ಹೇಳಿದ್ದರು.
‘ಗರ್ಲ್ಫ್ರೆಂಡ್’ ಸಿನಿಮಾ ವೇದಿಕೆ ಮೇಲೆ ವಿಜಯ್ ಬಗ್ಗೆ ಮಾತನಾಡಿದ್ದ ರಶ್ಮಿಕಾ, ‘ಈ ಸಿನಿಮಾದ ಆರಂಭದಿಂದಲೂ ನೀನು ನನ್ನ ಜೊತೆಗಿದ್ದೆ. ಪ್ರತಿಯೊಬ್ಬರ ಜೀವನದಲ್ಲೂ ಒಬ್ಬ ವಿಜಯ್ ದೇವರಕೊಂಡ ಇರಲಿ ಎಂದು ನಾನು ಹಾರೈಸುತ್ತೇನೆ, ಏಕೆಂದರೆ ಅಂತಹ ವ್ಯಕ್ತಿ ಸಿಗುವುದು ಒಂದು ಆಶೀರ್ವಾದ’ ಎಂದು ಭಾವುಕರಾಗಿದ್ದರು.
ಇದನ್ನೂ ಓದಿ: ವಿಜಯ್ ದೇವರಕೊಂಡಗೆ ನಾಯಕಿಯಾಗಿ ಬರುತ್ತಿದ್ದಾರೆ ಬಾಲಿವುಡ್ನ ಸ್ಟಾರ್ ನಟಿ
‘ಗೀತ ಗೋವಿಂದಂ’ ಮತ್ತು ‘ಡಿಯರ್ ಕಾಮ್ರೆಡ್’ ಚಿತ್ರಗಳ ಮೂಲಕ ಬೆಳ್ಳಿತೆರೆಯಲ್ಲಿ ಮೋಡಿ ಮಾಡಿದ್ದ ಈ ಜೋಡಿ, ನಿಜ ಜೀವನದಲ್ಲೂ ಉತ್ತಮ ಸ್ನೇಹಿತರಾಗಿದ್ದರು. ಡೇಟಿಂಗ್ ವದಂತಿಗಳನ್ನು ‘ಕ್ಯೂಟ್’ ಎಂದು ಕರೆಯುತ್ತಿದ್ದ ರಶ್ಮಿಕಾ, ವಿಜಯ್ ಅವರ ಪ್ರಾಮಾಣಿಕತೆಯನ್ನು ಯಾವಾಗಲೂ ಗೌರವಿಸುತ್ತಿದ್ದರು.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




