
ತೂಕ ಇಳಿಸಿಕೊಳ್ಳಬೇಕು, ರಕ್ತದಲ್ಲಿನ ಸಕ್ಕರೆ ಪ್ರಮಾಣವನ್ನು ನಿಯಂತ್ರಣದಲ್ಲಿಡಬೇಕು ಎನ್ನುವವರು ಯಾವ ರೀತಿಯ ಆಹಾರ ಸೇವನೆ ಮಾಡಬೇಕು ಎಂಬ ಗೊಂದಲದಲ್ಲಿರುತ್ತಾರೆ. ಅಂತವರಿಗೆ ಕಡಿಮೆ ಕ್ಯಾಲೊರಿ ಮತ್ತು ಹೆಚ್ಚಿನ ನೀರಿನ ಅಂಶ ಹೊಂದಿರುವ ಸೌತೆಕಾಯಿ ಉತ್ತಮ ಆಯ್ಕೆ. ಆದರೆ ಇದು ಮಧುಮೇಹವನ್ನು ಗುಣಪಡಿಸುವ ಆಹಾರವಲ್ಲ. ಸಮತೋಲಿತ ಆಹಾರದ ಭಾಗವಾಗಿ ಸೇವಿಸಿದರೆ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಸಹಾಯ ಮಾಡಬಹುದು. ಹಾಗಾದರೆ ಇದು ಶುಗರ್ ನಿಯಂತ್ರಣದಲ್ಲಿಡಲು ಹೇಗೆ ಸಹಾಯ ಮಾಡುತ್ತದೆ, ತೂಕ ಇಳಿಸಿಕೊಳ್ಳಲು ಸಹಕಾರಿಯೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.
ಸೌತೆಕಾಯಿಯಲ್ಲಿ ನೀರು, ಫೈಬರ್, ವಿಟಮಿನ್ ಕೆ, ವಿಟಮಿನ್ ಸಿ, ಪೊಟ್ಯಾಸಿಯಂ ಮತ್ತು ಇತರ ಪೋಷಕಾಂಶಗಳು ಕಂಡುಬರುತ್ತವೆ. ಇದರಲ್ಲಿರುವ ಫೈಬರ್ ಜೀರ್ಣಕ್ರಿಯೆಗೆ ಸಹಾಯ ಮಾಡುವುದರ ಜೊತೆಗೆ ಊಟದ ನಂತರ ರಕ್ತದಲ್ಲಿನ ಸಕ್ಕರೆ ವೇಗವಾಗಿ ಏರದಂತೆ ಸಹಾಯ ಮಾಡಬಹುದು. ಆದರೆ ಸೌತೆಕಾಯಿ ತಿನ್ನುವುದರಿಂದ ಇನ್ಸುಲಿನ್ ಉತ್ಪಾದನೆ ಹೆಚ್ಚುತ್ತದೆ ಅಥವಾ ಮಧುಮೇಹ ನಿಯಂತ್ರಣಕ್ಕೆ ಬರುತ್ತದೆ ಎಂದು ಖಚಿತವಾಗಿ ಹೇಳಲು ಸಾಕಷ್ಟು ಪುರಾವೆಗಳಿಲ್ಲ. ಹೀಗಾಗಿ ಮಧುಮೇಹದ ಔಷಧಿ ಅಥವಾ ವೈದ್ಯರ ಸಲಹೆಯನ್ನು ಇದರ ಬದಲಿಗೆ ಬಳಸಬಾರದು.
ಇದನ್ನೂ ಓದಿ: ಬೆಂಡೆಕಾಯಿ ಎಲ್ಲರಿಗೂ ಒಳ್ಳೆಯದಲ್ಲವೇ? ಈ ಔಷಧಿ ಸೇವಿಸುವವರು ತಿಳಿಯಬೇಕಾದ ವಿಷಯಗಳು!
ಸೌತೆಕಾಯಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ಕ್ಯಾಲೊರಿ ಕಡಿಮೆ ಇರುತ್ತದೆ. ಆದ್ದರಿಂದ ಚಿಪ್ಸ್, ಕರಿದ ತಿಂಡಿ ಅಥವಾ ಹೆಚ್ಚಿನ ಕ್ಯಾಲೊರಿ ಸ್ನ್ಯಾಕ್ಗಳ ಬದಲಿಗೆ ಸೌತೆಕಾಯಿಯನ್ನು ಸೇವಿಸುವುದು ಒಟ್ಟು ಕ್ಯಾಲೊರಿ ಸೇವನೆಯನ್ನು ಕಡಿಮೆ ಮಾಡಲು ಸಹಾಯ ಮಾಡಬಹುದು. ಆದರೆ ಸೌತೆಕಾಯಿ ಮಾತ್ರ ತಿಂದರೆ ತೂಕ ಕಡಿಮೆಯಾಗುವುದಿಲ್ಲ. ಒಟ್ಟಾರೆ ಆಹಾರ ಪದ್ಧತಿ ಮತ್ತು ದೈಹಿಕ ಚಟುವಟಿಕೆಯೂ ಬಹಳ ಮುಖ್ಯ.
ಗಮನಿಸಿ: ಸೌತೆಕಾಯಿ ಆರೋಗ್ಯಕರ ಆಹಾರವಾದರೂ ಯಾವುದೇ ಕಾಯಿಲೆಗೆ ಏಕೈಕ ಪರಿಹಾರವಲ್ಲ. ಮಧುಮೇಹ ಇರುವವರು ತಮ್ಮ ಔಷಧಿ, ಆಹಾರ ಮತ್ತು ವೈದ್ಯರ ಸಲಹೆಯನ್ನು ಮುಂದುವರಿಸಬೇಕು.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ