Lockdown Stories : ಚಲನಾಮೃತ ; ‘ನನ್ನ ವ್ಯಾಪಾರದ ಅದೃಷ್ಟ 2019ರಲ್ಲಿತ್ತು!

Online Selling : ವಿಜಯಪುರದಲ್ಲಿರುವ ಸರೋಜಿನಿ ಹೋಮ್​ ಮೇಡ್ ಫುಡ್​ ಪ್ರಾಡಕ್ಟ್ಸ್​ನ ಸರೋಜಿನಿ ಅವರಾದಿ ಅವರಿಗೆ ಇಷ್ಟು ವರ್ಷ ನೇರ ವ್ಯಾಪಾರ ಕೈಹಿಡಿಯದಿದ್ದರೂ ಆನ್​ಲೈನ್​ ಮೂಲಕ ಅವರ ವ್ಯಾಪಾರ ಕುದುರುತ್ತಾ ಬಂದಿದ್ದು ಹೇಗೆ?

Lockdown Stories : ಚಲನಾಮೃತ ; ‘ನನ್ನ ವ್ಯಾಪಾರದ ಅದೃಷ್ಟ 2019ರಲ್ಲಿತ್ತು!
ಸರೋಜಿನಿ ಅವರಾದಿ
Follow us
|

Updated on:Jun 19, 2021 | 6:32 PM

ಅನಿವಾರ್ಯವೆಂಬ ಹಾವು ಕಾಲಬುಡಕ್ಕೇ ಬಂದಾಗ ಯಾರೂ ಚಲನಶೀಲರಾಗಿಬಿಡುತ್ತಾರೆ. ಆಗ ಮುಂದಿನ ಏರುಇಳಿವಿನ ಹಾದಿ ಅವರಲ್ಲಿ ಮತ್ತಷ್ಟು ಶಕ್ತಿಯನ್ನೂ ಸಂಕಲ್ಪವನ್ನೂ ಹೂಡುತ್ತಾ ಬರುತ್ತದೆ. ಬರುಬರುತ್ತ ಅದು ಅವರನ್ನು ಮತ್ತೊಂದು ಸ್ತರದಲ್ಲಿ ಯೋಚಿಸಿ, ತೊಡಗಿಕೊಳ್ಳುವಂತೆ ಪ್ರೇರೇಪಿಸುತ್ತಾ ಪಾಯಾ ಗಟ್ಟಿಮಾಡುತ್ತದೆ. ಅಲ್ಲಿಗೆ ಅವರು ಅರಿವಿಲ್ಲದೆಯೇ ಅಷ್ಟುದಿನ ಕಟ್ಟಿಕೊಂಡ ಗೋಡೆಯನ್ನು ಹಾರಿಯಾಗಿರುತ್ತದೆ. ಇದಕ್ಕೆ ತಾಜಾ ಉದಾಹರಣೆಯೇ ಆನ್​ಲೈನ್​ ಮಾರುಕಟ್ಟೆ ಸಂಸ್ಕೃತಿ. ಲಾಕ್​ಡೌನ್ ಶುರುವಾಗುತ್ತಿದ್ದಂತೆ ವೃತ್ತಿ, ಆಸಕ್ತಿ, ಕೌಶಲಗಳು ಆನ್​ಲೈನ್​ ಮೂಲಕ ವಾಣಿಜ್ಯ ಸ್ವರೂಪ ಪಡೆದುಕೊಳ್ಳುತ್ತಾ ಬಂದವು. ಫೇಸ್​ಬುಕ್​ ಅಕೌಂಟ್​ಗಳು ಪುಟಗಳಾದವು. ವಾಟ್ಸಪ್, ಬಿಝಿನೆಸ್ ನಂಬರುಗಳಾದವು. ​ಫೇಸ್​ಬುಕ್​ ಗ್ರೂಪ್​ಗಳು, ತಮ್ಮ ಸದಸ್ಯರನ್ನು ಹೆಚ್ಚು ವೃತ್ತಿಪರರನ್ನಾಗಿಸಲು ಪ್ರಯತ್ನಿಸಿದವು. ಸ್ವಂತ ವೆಬ್​, ಆ್ಯಪ್​ಗಳು ಹುಟ್ಟಿಕೊಂಡು ಪ್ರತ್ಯೇಕ ವಹಿವಾಟುತಾಣಗಳೇ ನಿರ್ಮಾಣಗೊಂಡವು. ಕೊರೊನಾದಿಂದಾಗಿ ಸಾವುನೋವು ಸಂಕಷ್ಟಗಳ ಮಧ್ಯೆಯೇ ಹಳ್ಳಿಹಳ್ಳಿಗಳೂ ಆನ್​ಲೈನ್​ ಭಾಷೆಯನ್ನು ಉಸಿರಾಡುತ್ತ ನಗರಗಳಿಗೆ ತಮ್ಮ ಸೊಗಡನ್ನು ಪಸರಿಸಿದವು. ಪರಿಣಾಮವಾಗಿ ಸಣ್ಣ ಪುಟ್ಟ ಉದ್ಯಮಗಳು ಕಣ್ಣುಬಿಟ್ಟುಕೊಂಡವು. ಗೃಹಕೈಗಾರಿಕೋದ್ಯಮ ಮತ್ತು ದೇಸೀ ಮಾರುಕಟ್ಟೆ ತನ್ನ ವ್ಯಾಪ್ತಿಯನ್ನು ಹಿಗ್ಗಿಸಿಕೊಂಡವು. ಗ್ರಾಹಕರೂ ಈ ಆನ್​ಲೈನ್ ಸಂತೆಗೆ ಕಣ್ಣನ್ನೂ ಮನಸ್ಸನ್ನೂ ಜೇಬನ್ನು ಬಲುಬೇಗನೇ ಹೊಂದಿಸಿಕೊಂಡುಬಿಟ್ಟರು. 

ಹಾಗಂತ ಇದು ಇಲ್ಲಿಗೇ ನಿಂತಿಲ್ಲ, ನಿಲ್ಲುವುದೂ ಇಲ್ಲ. ಮುಂದೇನು ಎನ್ನುವ ಕುತೂಹಲದ ಕಣ್ಣು ನೆಟ್ಟುಕೊಂಡೇ  ಮಾರುವವರೂ ಇದ್ದಾರೆ ಕೊಳ್ಳುವವರೂ. ಆದರೆ ಆನ್​ಲೈನ್​ ಆಗಲಿ ಆಫ್​ಲೈನ್ ಆಗಲಿ, ಎಡೆಬಿಡದೆ ಶ್ರದ್ಧೆಯಿಂದ ವ್ಯಾಪಾರ ಸೂತ್ರಗಳನ್ನು ನೇಯುತ್ತಿದ್ದರೆ ಮಾತ್ರ ಇಲ್ಲಿ ಬೆಳಕು. ಈ ದೃಷ್ಟಿಕೋನದಲ್ಲಿ ರೂಪಿಸಿದ ಸರಣಿ ‘ಟಿವಿ9 ಕನ್ನಡ ಡಿಜಿಟಲ್ : ಚಲನಾಮೃತ’ ; ಕೊರೊನಾ ಕಾಲದಲ್ಲಿ ಯಾವುದೇ ಕ್ಷೇತ್ರದಲ್ಲಿ ಸ್ವಾವಲಂಬಿಯಾಗಿ ಬದುಕು ಕಟ್ಟಿಕೊಳ್ಳಲು ಪ್ರಯತ್ನಿಸುತ್ತಿರುವವರ ಅನುಭವ ಕಥನಗಳು. ನೀವು ಅಥವಾ ನಿಮ್ಮ ಸುತ್ತಮುತ್ತಲಿನವರು ಈ ಪರಿಧಿಗೆ ಒಳಪಟ್ಟಲ್ಲಿ ನಾಲ್ಕೈದು ಫೋಟೋಗಳೊಂದಿಗೆ ಬರೆದು ಕಳುಹಿಸಿ. ಪದಮಿತಿ ಕನಿಷ್ಟ 800, ಗರಿಷ್ಟ 1,500.  tv9kannadadigital@gmail.com 

* ವಿಜಯಪುರದಲ್ಲಿರುವ ಸರೋಜಿನಿ ಹೋಮ್​ ಮೇಡ್ ಫುಡ್​ ಪ್ರಾಡಕ್ಟ್ಸ್​ನ ಸರೋಜಿನಿ ಅವರಾದಿ ಅವರಿಗೆ ಇಷ್ಟು ವರ್ಷ ನೇರ ವ್ಯಾಪಾರ ಕೈಹಿಡಿಯದಿದ್ದರೂ ಆನ್​ಲೈನ್​ ಮೂಲಕ ಅವರ ವ್ಯಾಪಾರ ಕುದುರುತ್ತಾ ಬಂದಿದ್ದು ಹೇಗೆ? * ನಮ್ಮೂರು ಬಿಜಾಪುರ (ವಿಜಯಪುರ). ಬಿಸಿಲ ನಾಡೆಂದೇ ಪ್ರಸಿದ್ಧ. ಬೇಸಿಗೆ ಬಂತೆಂದರೆ ವರ್ಷಕ್ಕಾಗುವಷ್ಟು ಹಪ್ಪಳ, ಸಂಡಿಗೆ, ಶಾವಿಗೆ, ಒಣಖಾರ, ಮಸಾಲಿಖಾರ, ಅರಿಶಿಣ ಪುಡಿಗಳನ್ನೆಲ್ಲ ಮಾಡುವುದು ಸರ್ವೇ ಸಾಮಾನ್ಯ. ಈ ಪದಾರ್ಥಗಳನ್ನೆಲ್ಲ, ಮದುವೆಯಾಗಿ ಗಂಡನಮನೆಗೆ ಹೋದ ಹೆಣ್ಣುಮಕ್ಕಳು ಹಾಗೂ ಉದ್ಯೋಗಕ್ಕಾಗಿ ಬೇರೆ ಬೇರೆ ಊರುಗಳಲ್ಲಿ, ರಾಜ್ಯಗಳಲ್ಲಿ ಅಷ್ಟೇ ಏಕೆ ವಿದೇಶಗಳಲ್ಲಿರುವ ಗಂಡುಮಕ್ಕಳ ಸಂಸಾರಕ್ಕೆ ಬೇಕಾಗುಷ್ಟು ಸೇರಿಸಿಯೇ ತಯಾರಿಸುವುದು ಬಿಜಾಪುರದ ತಾಯಂದಿರಿಗೆ ಸಂಭ್ರಮದ ಕೆಲಸ.

ಈಗ ಎರಡು ವರ್ಷಗಳ ಹಿಂದೆ ಎಂದರೆ 2019ರ ಏಪ್ರಿಲ್​ನಲ್ಲಿ ನನ್ನ ದೊಡ್ಡ ಮಗಳು ಜಯಲಕ್ಷ್ಮಿ ತನಗೆ ಮಾರಾಟಕ್ಕೆಂದು ಐದು ಕೆಜಿ ಮಸಾಲಿಖಾರ ಬೇಕು ಎಂದಾಗ ನನಗೆ ನಂಬಲು ಆಗಲೇ ಇಲ್ಲ. ತನಗೆ ಇಷ್ಟವಾದದ್ದೆಲ್ಲವನ್ನೂ ತನಗೆ ಬೇಕೆನಿಸಿದವರಿಗೆಲ್ಲ ಹಂಚುವುದರಲ್ಲಿಯೇ ಖುಷಿಪಡುವ ಮಗಳು ಮಾರಾಟದ ಮಾತಾಡಿದರೆ ನಂಬುವುದಾದರೂ ಹೇಗೆ? ಅಂತಃಪುರವೆಂಬ ಫೇಸ್​ಬುಕ್ ಗ್ರೂಪ್​ ನಿರ್ವಹಿಸುತ್ತಿರುವ ನನ್ನ ಮಗಳು ಜಯಲಕ್ಷ್ಮೀ ಅಲ್ಲಿದ್ದ ಕೆಲ ಸಖಿಯರಿಗೆ ಮಸಾಲಿ ಖಾರ, ಅರಿಷಿಣ ಬೇಕು ಎಂದಾಗ ಕಳಿಸಿದೆ. ಅಲ್ಲಿದ್ದವರೆಲ್ಲ ಸರಸ್ವತಿಯ ಪುತ್ರಿಯರೇ. ಅವರ ಅನಿಸಿಕೆಗಳಿಂದ ನನ್ನ ಜನ್ಮ ಸಾರ್ಥಕವಾದಷ್ಟು ಖುಷಿಯಾಯಿತು.

ಚಿಕ್ಕವಳಿದ್ದಾಗಿನಿಂದಲೂ ನನಗೆ ಆದರ್ಶದ ಹುಚ್ಚು ಹಂಬಲ. ದೇಶಕ್ಕಾಗಿ ಗಡಿಯಲ್ಲಿ ಹೋರಾಡದಿದ್ದರೂ ಇದ್ದ ಮನೆಯೊಳಗೇ ನಮ್ಮ ಸಂಸಾರಕ್ಕಾಗಿ ಏನಾದರೂ ಮಾಡುವ ಆಶೆ. ಹೀಗಾಗಿ ಲಿಂಬೆಹಣ್ಣು, ಹಸಿಮೆಣಸಿನಕಾಯಿ ಉಪ್ಪಿನಕಾಯಿಗಳನ್ನು ಮನೆಯಲ್ಲಿಯೇ ತಯಾರಿಸಿ ಮಾರಾಟ ಮಾಡಲು ಪ್ರಯತ್ನಿಸಿದ್ದೆ. ಆದರೆ ನನಗೆ ವ್ಯಾಪಾರ ಮಾಡಲು ಬರಲೇ ಇಲ್ಲ. ವ್ಯಾಪಾರವೂ ಒಂದು ಕಲೆ. ಯಾವುದೇ ಕ್ರಿಯಾಶೀಲ ಹೆಣ್ಣುಮಗಳು ದಣಿವು ಕಾಣಲಾರಳು. ಆದರೆ ಅದಕ್ಕೆ ತಕ್ಕ ಪ್ರತಿಫಲ ಬೇಕಷ್ಟೆ.

ಹೆಣ್ಣುಮಕ್ಕಳಿಗಾಗಿಯೇ ಪ್ರಾರಂಭವಾದ ‘ಧೃತಿ ಮಹಿಳಾ ಮಾರುಕಟ್ಟೆ’ ಯ ಮೂಲಕ ಮಸಾಲಿಖಾರ, ಸೇಂಗಾ ಚಟ್ನಿಪುಡಿಯ ಘಮಲು ಬೇರೆ ರಾಜ್ಯಗಳಲ್ಲದೇ ವಿದೇಶಕ್ಕೂ ಹರಡಿದ್ದು, ಹಾರುವ ಹಕ್ಕಿಗೆ ರೆಕ್ಕೆ ಬಂದಂತಾಗಿದೆ. ಇದಕ್ಕಿಂತಲೂ ಮೊದಲು ನಮ್ಮ ಫೇಸ್​ಬುಕ್​ನಲ್ಲಿ ‘ಸರೋಜಿನಿ ಹೋಮ್ ಮೇಡ್ ಫುಡ್ ಪ್ರಾಡಕ್ಟ್ಸ್’ ಪೇಜಿನ ಮೂಲಕ ಮಾರಾಟ ಪ್ರಾರಂಭಿಸಿದ್ದೆವು. ಅಲ್ಲಿಯೂ ಗ್ರಾಹಕರಿದ್ದಾರೆ. ನಮ್ಮ ಪದಾರ್ಥಗಳ ತಯಾರಿಕೆಯಲ್ಲಿ ಮೊದಲ ಆದ್ಯತೆ ಸ್ವಚ್ಛತೆಗೆ. ಮೆಣಸಿನಕಾಯಿ ಮೊದಲ್ಗೊಂಡು ಉಳಿದ ಎಲ್ಲಾ ಮಸಾಲೆ ಸಾಮಾನುಗಳನ್ನೆಲ್ಲ ಸ್ವಚ್ಛ ಮಾಡಿ ಹದವರಿತು ಹುರಿಯುವುದೇ ಒಂದು ಹಂತವಾದರೆ, ಬೆಳ್ಳುಳ್ಳಿ ಪಳಕುಗಳನ್ನೆಲ್ಲ ಸುಲಿದು, ಈರುಳ್ಳಿ ಖೊಬ್ರಿಗಳನ್ನೆಲ್ಲ ಹೆಚ್ಚಿ ಹುರಿಯುವುದು ಒಂದು ಹಂತ. ಇವನ್ನೆಲ್ಲ ಕುಟ್ಟುವ ಗಿರಣಿಗಳಿದ್ದಲ್ಲಿಗೆ ತೆಗೆದುಕೊಂಡು ಹೋಗಿ ಕುಟ್ಟಿಸುವುದೊಂದು ಪ್ರಕ್ರಿಯೆ. ಕುಟ್ಟುವ ಮಶಿನ್ ಕೊಳ್ಳುವ ಯೋಚನೆ ಸದ್ಯಕ್ಕಿಲ್ಲವಾದ್ದರಿಂದ ಇದೆಲ್ಲ ಅನಿವಾರ್ಯವೇ. ಬ್ಯಾಡಗಿಖಾರ ಹಾಗೂ ಗುಂಟೂರುಖಾರಗಳನ್ನು ಕೂಡ ಕುಟ್ಟಿ ಪುಡಿ ಮಾಡುವುದರಿಂದಲೇ ನಮ್ಮ ಗ್ರಾಹಕ ಬಂಧುಗಳು ಹೆಚ್ಚು ಹೆಚ್ಚು ಇಷ್ಟಪಡುವುದು. ಕಚ್ಚಾವಸ್ತುಗಳ ಆಯ್ಕೆಯಲ್ಲಿಯೂ ಗುಣಮಟ್ಟಕ್ಕೆ ಪ್ರಾಧ್ಯಾನ್ಯ. ಯಾವ ಹಂತದಲ್ಲಿಯೂ ನಡೆಯುತ್ತದೆ ಎಂಬ ಉಡಾಫೆಯಾಗಲಿ, ಕಾಂಪ್ರಮೈಸ್ ಆಗಲಿ ಇಲ್ಲವೇ ಇಲ್ಲ. ಸೇಂಗಾ ಚಟ್ನಿ ತಯಾರಿಸುವಾಗಲೂ ಅಷ್ಟೇ. ಹದವಾಗಿ ಹುರಿದ, ಕಹಿ ಇಲ್ಲದ ಸೇಂಗಾವನ್ನು ಕಲ್ಲು ಕಸರಿಲ್ಲದಂತೆ ಆರಿಸಿ ಸ್ವಚ್ಚ ಮಾಡಿ, ಪಳಕು ಮಾಡಿಯೇ ಚಟ್ನಿಪುಡಿ ಮಾಡುವುದು. ಇವೆಲ್ಲವನ್ನೂ ಮಶಿನ್ ಇದ್ದಲ್ಲಿಯೇ ಹೋಗಿ ಮಾಡಿಸಿಕೊಂಡು ಬರುವುದರಲ್ಲಿ, ಆಳಿನ ಸಂಬಳ, ಮಶಿನ್ ಖರ್ಚು, ವೇಸ್ಟೇಜ್, ಹೋಗಿ ಬರುವುದರ ಖರ್ಚೆಲ್ಲಾ ಸೇರಿ ಒಮ್ಮೊಮ್ಮೆ ಯೋಚಿಸುವಂತಾಗುತ್ತದೆ.

lockdown stories

ಮಸಾಲೆ ಪದಾರ್ಥಗಳು

ಗಿರಣಿಯಲ್ಲಿ ತಯಾರಿಸಿ ಮನೆಗೆ ತಂದ ಪುಡಿಗಳನ್ನೆಲ್ಲ ಕಾಲುಕೇಜಿ, ಅರ್ಧ ಕೆಜಿ, ಒಂದು ಕೆಜಿ ಪ್ಯಾಕೆಟುಗಳನ್ನು ಮಾಡಿ, ಗಟ್ಟಿಯಾದ ರಟ್ಟಿನ ಡಬ್ಬಿಗಳಲ್ಲಿ ತುಂಬಿ, ಮತ್ತೆ ಆ ಡಬ್ಬಿಗಳಿಗೆಲ್ಲ ಪ್ಲಾಸ್ಟಿಕ್ ಹೊದಿಕೆಗಳನ್ನ ಹಾಕಿ ಸೀಲ್ ಮಾಡಿ, ವಿಳಾಸ ಬರೆದು, ತೂಕಕ್ಕಿಷ್ಟು ದುಡ್ಡು ಎಂದು ತೆತ್ತು ಬೆಂಗಳೂರಿಗೆ ಕಳಿಸುವಲ್ಲಿ, ‘ಸಾಕಪ್ಪಾ ಸಾಕು ಇನ್ಮುಂದೆ ಮಾಡುವುದೇ ಬೇಡ’ ಎಂದೆನಿಸಿದ್ದೂ ಇದೆ. ಆದರೆ ಇದೆಲ್ಲ ಹೆರಿಗೆ ನೋವಿನ ವೈರಾಗ್ಯದಂತೆ ಅಷ್ಟೆ.

ಇಲ್ಲಿನ ಬಾಕ್ಸುಗಳು ಬೆಂಗಳೂರು ತಲುಪಿಯಾದ ನಂತರ ಅವನ್ನೆಲ್ಲ ಮನೆಗೆ ತೆಗೆದುಕೊಂಡು ಹೋಗುವುದು, ಗ್ರಾಹಕರ ಬೇಡಿಕೆಗನುಗುಣವಾಗಿ ಆ ಪ್ಯಾಕೆಟ್ಟುಗಳನ್ನೆಲ್ಲ ವಿಂಗಡಿಸಿ, ಸಂಬಂಧಪಟ್ಟವರಿಗೆ ತಲುಪುವವರೆಗೆ ಹಾಳಾಗದಂತೆ ಬೇರೆ ಬೇರೆಯದೇ ರೀತಿಯ ಕವರ್ಸ್ ಬಳಸಿ ಪ್ಯಾಕ್ ಮಾಡಿ, ಸರಿಯಾದ ವಿಳಾಸ ನಮೂದಿಸಿಯಾದ ಮೇಲೆ ಪೋಸ್ಟ್ ಆಫೀಸಿಗೆ ಹೋಗಿ ಪಾರ್ಸಲ್ ಕಳಿಸಿದ ಮೇಲೆ, ಅವು ಗ್ರಾಹಕರಿಗೆ ಸರಿಯಾಗಿ ತಲುಪಿದವೋ ಇಲ್ಲವೋ ಎಂದು ವಿಚಾರಿಸುವುದರ ಜೊತೆಗೆ, ನಮ್ಮ ಪದಾರ್ಥಗಳು ಅವರಿಗೆ ಇಷ್ಟವಾದವೋ ಹೇಗೆ ಎಂಬಲ್ಲಿಯವರೆಗೂ ನಮ್ಮ ಹಾಗೂ ಗ್ರಾಹಕರ ನಡುವೆ ನೇರ ಸಂಪರ್ಕ ಇದ್ದೇ ಇರುತ್ತದೆ. ನಮಗೆ ಗ್ರಾಹಕರ ಅಭಿಪ್ರಾಯ ಹಾಗೂ ಅವರ ಅನಿಸಿಕೆಯೇ ಬಹಳ ಮುಖ್ಯ. ಹೀಗಾಗಿ ನಮ್ಮೆಲ್ಲ ಗ್ರಾಹಕರೊಂದಿಗಿನ ಬಾಂಧವ್ಯ ಗಟ್ಟಿಯಾಗುತ್ತಲೇ ಸಾಗಿದೆ. ಇದು ನನ್ನೊಬ್ಬಳಿಂದಲೇ ಆಗುವ ಕೆಲಸವಲ್ಲ. ಇದಕ್ಕೆ ನನ್ನ ಮನೆಮಂದಿಯ ಸಹಕಾರ ತುಂಬ ಇದೆ. ಅವರೆಲ್ಲರೂ ಸಂತೋಷದಿಂದಲೇ ನನಗೆ ಸಹಕರಿಸುತ್ತಿರುವುದು ನಾನು ಎಷ್ಟಾದರೂ ಬೇಡಿಕೆಯನ್ನು ಪೂರೈಸಬಲ್ಲೆ ಎಂಬ ಆತ್ಮವಿಶ್ವಾಸದ ಹೆಜ್ಜೆಗಳನ್ನಿಡಲು ಸಹಕಾರಿಯಾಗಿದೆ. ಹಾಗೂ ಬರುವ ನಾಳೆಗಳನ್ನೆಲ್ಲ ಉತ್ತುಂಗಕ್ಕೇರುವ ಮೆಟ್ಟಿಲುಗಳನ್ನಾಗಿ ಬಳಸಿಕೊಳ್ಳುವ ಆಶೆ. ಇದಕ್ಕೆಲ್ಲ ನಮ್ಮ ಗ್ರಾಹಕ ಬಂಧುಗಳ ಪ್ರೀತಿ ವಿಶ್ವಾಸ ಕಾರಣ. ಅವು ಹೀಗೇ ನಿರಂತವಾಗಿ ಇರಲಿ.

ಇದನ್ನೂ ಓದಿ : Lockdown Stories : ಚಲನಾಮೃತ ; ಅಂದು ಕಾಲು ಕಿತ್ತಿಟ್ಟಿದ್ದಕ್ಕೇ ಇಂದು ‘ಮಣ್ಣಿ’ಯೆಂಬ ಅಮೃತ ಕೈಹಿಡಿದಿದ್ದು

Published On - 6:30 pm, Sat, 19 June 21