ಬಳ್ಳಾರಿ ಗಲಾಟೆ ಪ್ರಕರಣದ ಬಗ್ಗೆ ಪರಮೇಶ್ವರ್ ಬಿಗ್ ಅಪ್ಡೇಟ್: ಕೇಸ್ ತನಿಖೆ ಸಿಐಡಿಗೆ?
ಬ್ಯಾನರ್ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದಿದ್ದ ಗಲಾಟೆ ಪ್ರಕರಣದ ತನಿಖೆ ಬಗ್ಗೆ ಗೃಹ ಸಚಿವ ಜಿ. ಪರಮೇಶ್ವರ್ ಅಪ್ಡೇಟ್ ಕೊಟ್ಟಿದ್ದಾರೆ. ಮುಖ್ಯಮಂತ್ರಿಗಳ ಜೊತೆ ಪ್ರಕರಣದ ಬಗ್ಗೆ ಚರ್ಚೆ ನಡೆಸಿ, ಅಗತ್ಯಬಿದ್ರೆ ತನಿಖೆಯನ್ನು ಸಿಐಡಿಗೆ ಕೊಡುತ್ತೇವೆ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ ಬ್ಯಾನರ್ ಗಲಾಟೆ ವೇಳೆ ಸತೀಶ್ ರೆಡ್ಡಿ ಖಾಸಗಿ ಗನ್ಮ್ಯಾನ್ ರಿವಾಲ್ವರ್ನಿಂದಲೇ ಗುಂಡು ಹಾರಿರೋದು ದೃಢಪಟ್ಟಿದೆ ಎನ್ನಲಾಗಿದೆ.

ಬೆಂಗಳೂರು, ಜನವರಿ 04: ಬ್ಯಾನರ್ ವಿಚಾರವಾಗಿ ಬಳ್ಳಾರಿಯಲ್ಲಿ ನಡೆದಿದ್ದ ಗಲಾಟೆ ವೇಳೆ ಕಾಂಗ್ರೆಸ್ ಕಾರ್ಯಕರ್ತ ಮೃತಪಟ್ಟಿದ್ದ ಪ್ರಕರಣದ ತನಿಖೆ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಅಪ್ಡೇಟ್ ನೀಡಿದ್ದಾರೆ. ಕೇಸ್ ತನಿಖೆ ಸಿಐಡಿಗೆ ವಹಿಸುವ ವಿಚಾರ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಜೊತೆ ಮಾತನಾಡ್ತೇನೆ. ಅಗತ್ಯಬಿದ್ದರೆ ಸಿಐಡಿಗೆ ಕೊಡುತ್ತೇವೆ ಎಂದು ತಿಳಿಸಿದ್ದಾರೆ.
ಪೊಲೀಸರ ಗನ್ ಹಾಗೂ ರಿವಾಲ್ವರ್ನಿಂದ ಫೈರಿಂಗ್ ಆಗಿಲ್ಲ, ಖಾಸಗಿ ಗನ್ನಿಂದ ಫೈರಿಂಗ್ ಆಗಿದ್ದೆಂದು ಎಡಿಜಿಪಿ ದೃಢಪಡಿಸಿದ್ದಾರೆ. ಕಾನೂನು ಚೌಕಟ್ಟಿನಲ್ಲಿ ಆರೋಪಿಗಳನ್ನು ಬಂಧಿಸ್ತೇವೆ. ಹತ್ಯೆಗೆ ಪೆಟ್ರೋಲ್ ಬಾಂಬ್ ಬಳಕೆ ಮಾಡಿದ್ದಾರೆಂಬ ಆರೋಪವೂ ಇದ್ದು,ತನಿಖೆ ಆದಮೇಲೆ ಅದೆಲ್ಲ ಗೊತ್ತಾಗುತ್ತೆ ಎಂದು ಗೃಹ ಸಚಿವರು ಹೇಳಿದ್ದೇರಾ. ತಮಗೆ ಮತ್ತು ತಮ್ಮ ಕುಟುಂಬಕ್ಕೆ ಭದ್ರತೆ ಕೋರಿ ಸಿಎಂ, ಗೃಹ ಸಚಿವರಿಗೆ ಶಾಸಕ ಜನಾರ್ದನರೆಡ್ಡಿ ಪತ್ರ ಬರೆದ ವಿಚಾರ ಸಂಬಂಧವೂ ಪ್ರತಿಕ್ರಿಯಿಸಿದ ಪರಮೆಶ್ವರ್, ಶಾಸಕರ ಲೆಟರ್ ನನಗೆ ಇನ್ನೂ ತಲುಪಿಲ್ಲ. ಪತ್ರ ಬಂದ ಮೇಲೆ ಕ್ರಮ ತೆಗೆದುಕೊಳ್ಳುತ್ತೇನೆ ಎಂದಿದ್ದಾರೆ. ಜನಾರ್ದನ ರೆಡ್ಡಿ ಬಳ್ಳಾರಿಗೆ ವಾಪಸಾದ ಮೇಲೆ ಗಲಾಟೆ ಎಂಬ ವಿಚಾರ ಕಾಕತಾಳೀಯವೋ ಏನೋ ಗೊತ್ತಿಲ್ಲ, ಆದರೆ ಅವರು ಬಂದ ಮೇಲೆ ಕಲಹ ಆಗಿರೋದು ನಿಜ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಬಳ್ಳಾರಿ ಬ್ಯಾನರ್ ಗಲಾಟೆಗೆ ಸ್ಫೋಟಕ ತಿರುವು: ರಾಜಶೇಖರ್ಗೆ ತಗುಲಿದ್ದ ಬುಲೆಟ್ ಸತ್ಯ ರಿವೀಲ್
ಬ್ಯಾನರ್ ಗಲಾಟೆ ವೇಳೆ ಸತೀಶ್ ರೆಡ್ಡಿ ಖಾಸಗಿ ಗನ್ಮ್ಯಾನ್ ಗುರುಚರಣ್ ಸಿಂಗ್ ಬಂದೂಕಿನಿಂದ ಹಾರಿದ್ದ ಬುಲೆಟ್ ತಗುಲಿ ಕಾಂಗ್ರೆಸ್ ಕಾರ್ಯಕರ್ತ ರಾಜಶೇಖರ್ ಸಾವನ್ನಪ್ಪಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ. ಟಿವಿ9ಗೆ ಈ ಬಗ್ಗೆ ಪೊಲೀಸ್ ಮೂಲಗಳಿಂದ ಮಾಹಿತಿ ದೊರೆತಿದೆ. ರಾಜಶೇಖರ ಬೆನ್ನು ಹೊಕ್ಕು ಎದಿಯಿಂದ ಆಚೆ ಬಂದಿದ್ದ ಗುಂಡನ್ನು ಪೋಸ್ಟ್ ಮಾರ್ಟಮ್ ವೇಳೆ ಹೊರ ತೆಗೆಯಲಾಗಿದೆ. ಹೊರ ತೆಗೆದ ಬುಲೆಟ್ನ ಫಾರೆನ್ಸಿಕ್ ಲ್ಯಾಬ್ ಗೆ ಪರಿಶೀಲನೆಗೆ ಕಳುಹಿಸಲಾಗಿದ್ದು, ದೊರೆತಿರೋದು 12 ಎಂಎಂ ಸಿಂಗಲ್ಬೋರ್ ಗುಂಡು ಎಂಬುದು ದೃಢಪಟ್ಟಿದೆ. ಕೇವಲ ನಾಲ್ಕೈದು ಅಡಿ ದೂರದಲ್ಲಿ ಗುಂಡುಹಾರಿದ ಹಿನ್ನೆಲೆ ಓರ್ವ ಮಾತ್ರ ಸಾವನ್ನಪ್ಪಿದ್ದಾನೆ. ಯಾಕೆಂದ್ರೆ ಈ ಸಿಂಗಲ್ಬೋರ್ ಬುಲೆಟ್ ಹಾರಿದ ಬಳಿಕ ಸ್ಪ್ರೆಡ್ ಆಗೋ ವಿಶೇಷತೆ ಹೊಂದಿದೆ. ಬುಲೆಟ್ ಹತ್ತು ಅಡಿಗಿಂತ ದೂರ ಹಾರಿದ್ರೇ ಬುಲೆಟ್ ಸ್ಪ್ರೆಡ್ ಆಗಿ ಇನ್ನಷ್ಟು ಜನರ ಪ್ರಾಣಕ್ಕೆ ಕುತ್ತು ತರುವ ಸಾಧ್ಯತೆ ಇತ್ತು ಎನ್ನಲಾಗಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 12:27 pm, Sun, 4 January 26