ಬಳ್ಳಾರಿಯಲ್ಲಿ ಮತ್ತೊಂದು ಮನಿ ಡಬ್ಲಿಂಗ್ ಸ್ಕ್ಯಾಮ್: ಬರೋಬ್ಬರಿ 50 ಕೋಟಿಗೂ‌ ಹೆಚ್ಚು ವಂಚನೆ!

ಬಳ್ಳಾರಿಯಲ್ಲಿ ಮತ್ತೊಂದು ಮನಿ ಡಬ್ಲಿಂಗ್ ಸ್ಕ್ಯಾಮ್​ ನಡೆದಿದೆ. ಅಮಾಯಕ ಜನರಿಂದ ಕೋಟಿ ಕೋಟಿ ರೂ. ಪಡೆದು ಓರ್ವ ವ್ಯಕ್ತಿ ಪರಾರಿಯಾಗಿದ್ದಾನೆ. ಮನಿ ಡಬ್ಲಿಂಗ್ ಎಂದು ನಂಬಿಸಿ ಜನರನ್ನು ವಂಚಿಸಲಾಗಿದೆ. ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸಿದ್ದಾರೆ. ಇತ್ತ ಹಣ ಕಳೆದುಕೊಂಡ ಜನರು ಕಂಗಾಲಾಗಿದ್ದಾರೆ.

ಬಳ್ಳಾರಿಯಲ್ಲಿ ಮತ್ತೊಂದು ಮನಿ ಡಬ್ಲಿಂಗ್ ಸ್ಕ್ಯಾಮ್: ಬರೋಬ್ಬರಿ 50 ಕೋಟಿಗೂ‌ ಹೆಚ್ಚು ವಂಚನೆ!
ಪೊಲೀಸ್​ ಠಾಣೆ ಮುಂದೆ ಜಮಾಯಿಸಿದ ವಂಚನೆಗೊಳಗಾದ ಜನರು
Edited By:

Updated on: Apr 09, 2025 | 10:27 AM

ಬಳ್ಳಾರಿ, ಏಪ್ರಿಲ್​ 09: ನಗದರಲ್ಲಿ ಮತ್ತೊಂದು ಮನಿ ಡಬ್ಲಿಂಗ್ ಸ್ಕ್ಯಾಮ್ ಪ್ರಕರಣ (Money Doubling Scam) ಬೆಳಕಿಗೆ ಬಂದಿದೆ. ಅಮಾಯಕ ಜನರಿಂದ ಕೋಟ್ಯಂತರ ರೂ ಲೂಟಿ ಮಾಡಿ ಆರೋಪಿ ಪರಾರಿ ಆಗಿರುವಂತಹ ಘಟನೆ ನಗರದಲ್ಲಿ ನಡೆದಿದೆ. ವಿಶ್ವನಾಥ್​​ ಎಂಬಾತನಿಂದ ಜನರಿಗೆ ಮೋಸ (cheating) ಮಾಡಲಾಗಿದೆ. ಕಡಿಮೆ ಹಣ ಕೊಟ್ಟವರಿಗೆ ಕಡಿಮೆ ಬಡ್ಡಿ ಮತ್ತು ಹೆಚ್ಚು ಹಣ ಕೊಟ್ಟವರಿಗೆ ಹೆಚ್ಚು ಬಡ್ಡಿ ಎಂದು ನಂಬಿಸಿ ಮೋಸ ಮಾಡಲಾಗಿದೆ. ಅಂದಾಜು 50 ಕೋಟಿಗೂ‌ ಹೆಚ್ಚು ಹಣ ಪಡೆದು ವಂಚನೆ ಮಾಡಿರುವ ಆರೋಪ‌ ಕೇಳಿಬಂದಿದೆ. ಸದ್ಯ ಬ್ರೂಸ್ ಪೇಟೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ನಮಗೆ ನ್ಯಾಯ ಕೊಡಿಸಿ ಎಂದು ಜನರು ಒತ್ತಾಯಿಸಿದ್ದಾರೆ.

ಹೊಸ ಹೊಸ ಸ್ಕೀಂಗಳ ಮೂಲಕ ಜನರಿಗೆ ಆಮಿಷ 

ವಾಸವಿ ಸ್ವಗೃಹ ಹೋಮ್ ನೀಡ್ಸ್ ಆ್ಯಂಡ್​ ಕನ್ಸಲ್ಟನ್ಸ್​ ಹೆಸರಲ್ಲಿ ವಿಶ್ವನಾಥ್​ ಜನರ ಬಳಿ‌ ಹಣ ಪಡೆದು ವಂಚನೆ ಮಾಡಿದ್ದಾರೆ. ಮೂರು ವರ್ಷದ ಹಿಂದೆ ವಿಶ್ವನಾಥ ಕಿರಾಣಿ ಅಂಗಡಿ ಹಾಕಿದ್ದರು. ಐದು ಸಾವಿರ ರೂ ಕಿರಾಣಿ ಪಡೆದರೆ ಎರಡು ಸಾವಿರ ರೂ ಮೌಲ್ಯದ ಅಡುಗೆ ಎಣ್ಣೆ ಕೊಡುವುದಾಗಿ ಮೊದಲು ಆಮಿಷ ಒಡ್ಡಿದ್ದರಂತೆ. ಹದಿನೈದು ಸಾವಿರ ರೂ ಕೊಟ್ಟರೆ ತಿಂಗಳ ನಂತರ 20 ಸಾವಿರ ರೂ ಕೊಡುವುದಾಗಿ ಮತ್ತು ಲಕ್ಷ ಲಕ್ಷ ಹಣ ಕೊಟ್ಟವರಿಗೆ 40% ಬಡ್ಡಿ ಕೊಡುವುದಾಗಿ ನಂಬಿಸಿ ಮೋಸ ಮಾಡಲಾಗಿದೆ.

ಇದನ್ನೂ ಓದಿ: ದಾಂಡೇಲಿ ಮನೆಯಲ್ಲಿತ್ತು 14 ಕೋಟಿ ರೂ. ನಕಲಿ ನೋಟು: ರಾಶಿ ರಾಶಿ ಕರೆನ್ಸಿ ನೋಡಿ ಪೊಲೀಸರೇ ಶಾಕ್

ಬಳಿಕ ಎರಡು ತಿಂಗಳ ಕಿರಾಣಿ ತೆಗೆದುಕೊಂಡರೆ ಒಂದು ತಿಂಗಳ ಕಿರಾಣಿ ಉಚಿತ ಕೊಟ್ಟಿದ್ದನಂತೆ. ಹೀಗೆ ಮಾಡುತ್ತ ನಿಧಾನಕ್ಕೆ ಜನರ ವಿಶ್ವಾಸ ಗಳಿಸಿದ ವಿಶ್ವನಾಥ್​, ಹಲವು ಸ್ಕೀಂಗಳನ್ನ ನೀಡಿ ಮೊದಲಿಗೆ ಆಮಿಷವೊಡ್ಡಿ ಜನರಿಂದ ಹಣ ವಸೂಲಿ ಮಾಡಿದ್ದಾರೆ. ಕಿರಾಣಿ ಅಂಗಡಿ ಮಾಲೀಕಕನ್ನು ನಂಬಿದ ಜನರು ಒಬ್ಬೊಬ್ಬರು ಮೂರು ಲಕ್ಷ, ಐದು ಲಕ್ಷ ಹೀಗೆ ಹತ್ತು ಲಕ್ಷದವರೆಗೆ ಹಣ ಹೂಡಿಕೆ ಮಾಡಿದ್ದಾರೆ. ಸುಮಾರು 50 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಲಾಗಿದೆ ಎಂದು ಆರೋಪಿಸಲಾಗಿದೆ.

ಇದನ್ನೂ ಓದಿ: ಕೋಟ್ಯಂತರ ರೂ. ದೋಚಿದ್ದವ ಸಿಕ್ಕಿಬಿದ್ದ: ಲಕ್ಕಿ ಭಾಸ್ಕರ್ ಆಗಲು ಹೋದ ಬ್ಯಾಂಕ್​ ಮ್ಯಾನೇಜರ್​ನ ಅನ್​ ಲಕ್ಕಿ ಕಥೆ!

ಸದ್ಯ ವಂಚನೆ ಪ್ರಕರಣ ದಾಖಲಾಗುತ್ತಿದ್ದಂತೆ ಮನೆಗೆ ಬೀಗ ಹಾಕಿ ವಿಶ್ವನಾಥ್ ಪರಾರಿಯಾಗಿದ್ದಾರೆ. ನಮ್ಮ‌ಹಣಕ್ಕೆ ಯಾರು ಗ್ಯಾರಂಟಿ ಅಂತಾ ಜನರು ಅಳಲು ತೊಡಿಕೊಂಡಿದ್ದು, ಬ್ರೂಸ್ ಪೇಟೆ ಪೊಲೀಸ್​ ಠಾಣೆ ಮುಂದೆ ಜಮಾಯಿಸಿದ್ದಾರೆ. ನ್ಯಾಯ ಕೊಡಿಸುವಂತೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Vinayak Badiger
Follow Us